ಇತಿಹಾಸ ಎಂದೂ ಮರೆಯದ ಕ್ರಾಂತಿಕಾರಿ ಯೋಧ ಶಾಹೀದ್ ಮಂಗಲ್ ಪಾಂಡೆಯ ನೆನಪಿಸಿಕೊಂಡು:
ಭಾರತ ಇಂದು ಅಸಂಖ್ಯಾತ ಹೋರಾಟ, ಅಪರಿಮಿತ ತ್ಯಾಗ ಬಲಿದಾನಗಳ ಪರಿಣಾಮವಾಗಿ 74ನೇ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದೆ. ಸ್ವಾತಂತ್ರ್ಯಕ್ಕಾಗಿ ಅಸಂಖ್ಯಾತ ಬಲಿದಾನಗಳು, ಹೋರಾಟಗಳು ನಡೆದಿವೆ. ಪ್ರತಿ ಹೋರಾಟವು ಒಂದೊಂದು ಘಟನೆಗಳಿಗೆ ಸಾಕ್ಷಿಯಾಗಿವೆ.
ಅನೇಕ ಸ್ವಾತಂತ್ರ್ಯ ಹೋರಾಟಗಾರರು ದೇಶಕ್ಕಾಗಿ ಹೋರಾಡಿ ತಮ್ಮ ಪ್ರಾಣ ತ್ಯಾಗಗೈದಿದ್ದಾರೆ. ಅವರಲ್ಲಿ ಒಬ್ಬ ಹುತಾತ್ಮ ಯೋಧ ಮಂಗಲ್ ಪಾಂಡೆ.
ಭಾರತದ ಸ್ವಾತಂತ್ರ್ಯ ಹೋರಾಟದ ಮೊದಲ ಸಂಗ್ರಾಮವೆಂದು 1857 ನೇ ಸಿಪಾಯಿದಂಗೆಯನ್ನು ಪರಿಗಣಿಸಲಾಗುತ್ತದೆ. ಇದು ಬ್ರಿಟೀಷರ ವಿರುದ್ಧ ಮೊದಲ ಬಾರಿಗೆ ದೇಶದಾದ್ಯಂತ ಹೋರಾಡಲು ಪ್ರೇರಣೆಯಾಯಿತು.

ವ್ಯಾಪಾರಕ್ಕಾಗಿ ಈಸ್ಟ್ ಇಂಡಿಯಾ ಕಂಪನಿಯ ಹೆಸರಿನಲ್ಲಿ ಭಾರತಕ್ಕೆ ಬಂದಿದ್ದ ಬ್ರಿಟೀಷರು 1857ರ ವೇಳೆಗೆ ಭಾರತವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿದ್ದರು. 1857ರ ಮೊದಲ ಸ್ವಾತಂತ್ರ್ಯ ಹೋರಾಟಗಾರ ಮತ್ತು ಹುತಾತ್ಮರಾಗಿ ಮಂಗಲ್ ಪಾಂಡೆಯ ಹೆಸರು ಭಾರತೀಯ ಇತಿಹಾಸದಲ್ಲಿ ಅಜರಾಮರವಾಗಿದೆ.
ಅವರು ಶಾಹೀದ್ ಮಂಗಲ್ ಪಾಂಡೆ ಎಂಬ ಹೆಸರಿನಿಂದ ಜನಮಾನಸದಲ್ಲಿ ನೆಲೆಸಿದ್ದಾರೆ.
ಮಂಗಲ್ ಪಾಂಡೆ ಜುಲೈ 19, 1827ರಂದು ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ನಾಗ್ವಾ ಗ್ರಾಮದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು.
ಮಂಗಲ್ ಪಾಂಡೆ ತನ್ನ 22 ನೇ ವರ್ಷದಲ್ಲಿ ಬ್ರಿಟಿಷ್ ಮಿಲಿಟರಿ ಕಂಟೋನ್ಮೆಂಟ್ನಲ್ಲಿ 34 ನೇ ಬಂಗಾಳ ಸ್ಥಳೀಯ ಕಾಲಾಳುಪಡೆಯ 1446 ಕಾಲಾಳುಪಡೆ ಸೈನಿಕರಾಗಿ ಸೇರಿದರು. ಮಂಗಲ್ ಪಾಂಡೆ ಒಬ್ಬ ನಿಜವಾದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು ಮತ್ತು ಭಾರತೀಯ ಸ್ವಾತಂತ್ರ್ಯದ ಮೊದಲ ಹೋರಾಟಕ್ಕೆ ಕಿಡಿ ಹಚ್ಚಿದರು. ಬ್ರಿಟಿಷ್ ಸೈನ್ಯದಲ್ಲಿ
ಮೇ 10, 1857ರಂದು ಭಾರತೀಯ ಸೈನಿಕರು ಸಾಮೂಹಿಕ ದಂಗೆ ಏಳಲು ಮಂಗಲ್ ಪಾಂಡೆ ಕಾರಣಿಕರ್ತರಾದರು. ಇದನ್ನು ಬ್ರಿಟಿಷರು ಸಿಪಾಯಿ ದಂಗೆ -1857 ಎಂದು ಕರೆದರು.

1853 ಎನ್ಫೀಲ್ಡ್ ರೈಫಲ್ಡ್ ಮಸ್ಕೆಟ್ ಬಂದೂಕಿಗೆ ಹೊಸ ಗುಂಡನ್ನು ಲೋಡ್ ಮಾಡಲು ಸೈನಿಕರು ಕ್ಯಾಟ್ರಿಡ್ಜ್ ಅನ್ನು ಬಾಯಿಯಿಂದ ಕಚ್ಚಿ ತೆರೆದು ಗನ್ಪೌಡರ್ ಅನ್ನು ಸುರಿಯಬೇಕಾಗಿತ್ತು. ಇದು ಸಿಪಾಯಿ ದಂಗೆಗೆ ಮುಖ್ಯ ಕಾರಣವಾಗಿತ್ತು. ಬುಲೆಟ್ ಕಾರ್ಟ್ರಿಜ್ ಗೆ ಹಸು ಮತ್ತು ಹಂದಿಯ ಕೊಬ್ಬನ್ನು ಸವರಲಾಗಿದೆ ಎಂದು ವ್ಯಾಪಕ ವದಂತಿ ಹರಡಿ ಸೇನೆಯಲ್ಲಿದ್ದ ಹಿಂದು ಮತ್ತು ಮುಸ್ಲಿಂ ಸೈನಿಕರು ಉದ್ರಿಕ್ತರಾಗಿದ್ದರು. ಹಸು ಹಿಂದುಗಳಿಗೆ ಪೂಜನೀಯವಾಗಿದ್ದರೆ, ಹಂದಿ ಎಂದರೆ ಮುಸ್ಲಿಮರಿಗೆ ವರ್ಜ್ಯ. ತಮ್ಮ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಸಿಪಾಯಿಗಳು ಆ ಕೆಲಸವನ್ನು ನಿರಾಕರಿಸಿದರು. ಇದು ಭಾರತೀಯ ಸೈನಿಕರ ಸಾಮೂಹಿಕ ದಂಗೆಗೆ ಕಾರಣವಾಯಿತು.
ಸಾಮೂಹಿಕ ದಂಗೆ ಬ್ರಿಟಿಷ್ ಅಧಿಕಾರಿಗಳ ಮೇಲೆ ದಾಳಿ ಮಾಡಲು ಪಾಂಡೆಯನ್ನು ಪ್ರೇರೇಪಿಸಿತು. ಬ್ರಿಟಿಷ್ ಅಧಿಕಾರಿ ಮೇಜರ್ ಹ್ಯೂಸನ್ ಮತ್ತು ಲೆಫ್ಟಿನಂಟ್ ಭಾಘ್ ಮೇಲೆ ಮಂಗಲ್ ಪಾಂಡೆ, 1857, ಮಾರ್ಚ್ 29 ರಂದು ಗುಂಡಿನ ದಾಳಿ ನಡೆಸಿ ಅವರಿಬ್ಬರನ್ನೂ ನೆಲಕ್ಕುರುಳಿಸಿದ್ದರು. ಪರಿಣಾಮವಾಗಿ ಮಂಗಲ್ ಪಾಂಡೆಯವರನ್ನು ಬ್ರಿಟಿಷ್ ಸೇನೆ ಬಂಧಿಸಿತು. ಈ ಸಂದರ್ಭದಲ್ಲಿ ಲಕ್ಷಾಂತರ ಭಾರತೀಯರ ಹೃದಯದಲ್ಲಿ ರಾಷ್ಟ್ರೀಯತೆಯ ಜ್ವಾಲೆಯನ್ನು ಬೆಳಗಿಸಲು ಮಂಗಲ್ ಪಾಂಡೆ ಆತ್ಮಾರ್ಪಣೆ ಮಾಡಿಕೊಳ್ಳುವುದಕ್ಕೆ ನಡೆಸಿದ ಪ್ರಯತ್ನವೂ ವಿಫಲವಾಗಿತ್ತು. ಗಾಯಗೊಂಡಿದ್ದ ಮಂಗಲ್ ಪಾಂಡೆಯವರನ್ನು ಬ್ರಿಟೀಶ್ ಸರ್ಕಾರದ ಆದೇಶದ ಮೇರೆಗೆ ಏಪ್ರಿಲ್ 8 1857ರಂದು ಬ್ಯಾರಕ್ಪುರ(ಕೋಲ್ಕತ್ತ)ದಲ್ಲಿ ಗಲ್ಲಿಗೇರಿಸಲಾಯಿತು.

ಇಂದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಹೋರಾಟದ ಕಾರಣದಿಂದಾಗಿ ನಮ್ಮ ದೇಶ ಸ್ವಾತಂತ್ರ್ಯವಾಗಿದೆ. ದೇಶವನ್ನು ಪ್ರಗತಿಯತ್ತ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮುಂದಿದೆ. ನಾವು ಜವಾಬ್ದಾರಿಯುತ ಮತ್ತು ಸುಶಿಕ್ಷಿತ ನಾಗರಿಕರು ಎಂದು ಎನಿಸಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮಂಗಲ ಪಾಂಡೆಯವರಂತ ಅಸಂಖ್ಯಾತ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳ ನಿಸ್ವಾರ್ಥ ಹೋರಾಟ ನಮ್ಮ ಪೀಳಿಗೆಯ ಮಕ್ಕಳಿಗೆ ಮಾದರಿಯಾಗಬೇಕು.








