ಟ್ರಬಲ್ ಶೂಟರ್ ಎಂದು ಕರೆಸಿಕೊಳ್ಳುವ ಡಿ.ಕೆ ಶಿವಕುಮಾರ ಕಾಂಗ್ರೆಸ್ ಪಾಲಿನ ಆಪತ್ಬಾಂಧವ. ಯಾಕೆಂದರೆ ಕಾಂಗ್ರೆಸ್ ಹೈಕಮಾಂಡ್ ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ಡಿಕೆಶಿ ಹೈಕಮಾಂಡ್ ಗೆ ತಮ್ಮ ನಿಷ್ಠೆ ತೋರಿದ್ದಾರೆ. ಪಕ್ಷ ವಹಿಸಿದ ಕೆಲಸವನ್ನು ಕಾಯ, ವಾಚಾ, ಮನಸಾ ಮಾಡಿದ್ದಾರೆ. ಹೈಕಮಾಂಡ್ ಗೆ ಕರ್ನಾಟಕದ ಬಲಗೈ ಬಂಟನ ರೀತಿಯಲ್ಲಿ ಗುರುತಿಸಿಕೊಂಡಿದ್ದಾರೆ. ರಾಜ್ಯದಲ್ಲಿ ಎಸ್. ಎಂ. ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಮಹಾರಾಷ್ಟ್ರದಲ್ಲಿ ದಿ. ವಿಲಾಸ್ ರಾವ್ ದೇಶಮುಖ್ ಸರ್ಕಾರವಿತ್ತು. ಆ ವೇಳೆ ಬಹುಮತ ಸಾಬೀತು ಪಡಿಸುವ ವೇಳೆ ಶಾಸಕರನ್ನು ಉಳಿಸಿಕೊಳ್ಳಲು ದೇಶಮುಖ್ ಕೃಷ್ಣ ಸಹಾಯ ಕೋರಿದ್ದಾಗ ಕೃಷ್ಣ ಸಂಪುಟ ಸದಸ್ಯರಾಗಿದ್ದ ಶಿವಕುಮಾರ್, ಮಹಾರಾಷ್ಟ್ರ ಕಾಂಗ್ರೆಸ್ ಶಾಸಕರನ್ನು ಬೆಂಗಳೂರಿಗೆ ಕರೆತಂದು ರೆಸಾರ್ಟ್ ನಲ್ಲಿ ಉಳಿಸಿಕೊಂಡು ವಾಪಸ್ ಕಳುಹಿಸಿದ್ದರು. ಅಂದು ವಿಲಾಸರಾವ್ ದೇಶಮುಖ್ ಸರ್ಕಾರ ವಿಶ್ವಾಸಮತವನ್ನು ಗೆದ್ದಿತ್ತು. 
2017 ರಲ್ಲಿ ಗುಜರಾತ್ ನ ಕಾಂಗ್ರೆಸ್ ಸರ್ಕಾರವನ್ನು ಉಳಿಸಲು ಅಲ್ಲಿಯ ಶಾಸಕರನ್ನು ಕರೆ ತಂದು ಈಗಲ್ ಟನ್ ರೆಸಾರ್ಟ್ ನಲ್ಲಿ ಉಳಿಸಿದ್ದರು. ಈ ವೇಳೆ ಶಾಸಕರ ಉಳಿದಿದ್ದ ಹೊಟೇಲ್ ಮೇಲೆ ಐಟಿ ದಾಳಿ ನಡೆದಿತ್ತು. ಇದಾದ ಬಳಿಕ ಹವಾಲ ದಂಧೆ ಆರೋಪ ಎದುರಿಸಿದ್ದರು. ಇಡಿಯಿಂದ ಡಿಕೆಶಿ ಸೇರಿದಂತೆ ಅವರ ಕುಟುಂಬದವರಿಗೂ ವಿಚಾರಣೆ ನೆಪದಲ್ಲಿ ಬಂದ ಸಂಕಷ್ಟಗಳನ್ನು ಎದುರಿಸಿದ್ದರು. ಇದಕ್ಕೂ ಮೊದಲು ಬಿಜೆಪಿಗೆ ಬರುವಂತೆ ಆಹ್ವಾನ ಬಂದಿದ್ದರು ಸಹ ಕಾಂಗ್ರೆಸ್ ಬಿಟ್ಟು ಹೋಗುವ ಪ್ಲ್ಯಾನ್ ಮಾಡಲಿಲ್ಲ. ಸದಾ ನಾನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಎಂದು ಹೇಳಿಕೊಂಡು ಹೈಕಮಾಂಡ್ ನೀಡಿದ ಕೆಲಸ ಮಾಡುತ್ತಾ ಬಂದಿದ್ದಾರೆ. ಇಷ್ಟೇಲ್ಲಾ ಸಂಕಷ್ಟ ಬಂದರು ಪಕ್ಷ ನಿಷ್ಠೆ ಮಾತ್ರ ಡಿಕೆಶಿ ಮರೆಯಲಿಲ್ಲ. ಇದರ ನಡುವೆ ಡಿಕೆಶಿ ಬಳ್ಳಾರಿ ಬೈ ಎಲೆಕ್ಷನ್ ನಲ್ಲಿ ವಿ,ಎಸ್ ಉಗ್ರಪ್ಪರನ್ನು ಗೆಲ್ಲಿಸಿಕೊಂಡು ಬಂದು ತನ್ನ ತಾಕತ್ತು ಪ್ರದರ್ಶನ ಮಾಡಿದ್ದರು. ಜೊತೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನ ಮೈತ್ರಿ ಸರ್ಕಾರವನ್ನು ಉಳಿಸಲು ಸಾಕಷ್ಟು ಪ್ರಯತ್ನ ಮಾಡಿದ್ದರು. ಸರ್ಕಾರ ಉರುಳಿಸಲು 15 ಶಾಸಕರು ಮುಂಬೈನಲ್ಲಿ ಬೀಡು ಬಿಟ್ಟಿದ್ದರು. ಆಗ ಡಿಕೆಶಿ ಕೆಲ ಸಚಿವರೊಂದಿಗೆ ಮುಂಬೈನಿಂದ ಶಾಸಕರನ್ನು ಕರೆ ತರುವ ಪ್ರಯತ್ನ ನಡೆಸಿದ್ದರು. ಮಳೆ, ಗಾಳಿ , ಬಿಸಿಲು ಎನ್ನದೆ ಪಕ್ಷದ ಕೆಲಸ ಮಾಡಿದರು. ಇಡಿ ವಿಚಾರಣೆ ಸಮಯದಲ್ಲಿ ಸಾಕಷ್ಟು ಮಾನಸಿಕ ಒತ್ತಡಗಳು ಡಿಕೆಶಿ ಗೆ ಎದುರಾದವು. ಅಲ್ಲದೆ 52 ದಿನಗಳ ಕಾಲ ಸೆರೆಮನೆವಾಸ ಅನುಭವಿಸಿ ಹೊರ ಬಂದರು. ಐಟಿ ದಾಳಿಗೆ ಭಯಗೊಂಡ ಕೆಲ ಶಾಸಕರು ಬಿಜೆಪಿ ಪಕ್ಷ ಸೇರಿದ್ದಾರೆ ಎನ್ನುವ ಮಾತಿದೆ. ಆದರೆ ಡಿಕೆಶಿಗೆ ಇಷ್ಟೆಲ್ಲ ಸಂಕಷ್ಟ ಎದುರಾದರು ಪಕ್ಷನಿಷ್ಠೆ ಎಳ್ಳಷ್ಟು ಕಡಿಮೆ ಆಗಲಿಲ್ಲ. 
ಇದಲ್ಲದೆ ಸದ್ಯ ಸೋತು ಸುಣ್ಣವಾಗಿರುವ ಕಾಂಗ್ರೆಸ್ ಗೆ ಚೈತನ್ಯ ನೀಡುವ ಚರಿಷ್ಮಾ ಡಿ.ಕೆ ಶಿವಕುಮಾರ್ ಅವರಿಗಿದೆ. ರಾಜ್ಯಾದ್ಯಂತ ಸುತ್ತಿ ಸಮರ್ಥವಾಗಿ ಪಕ್ಷ ಸಂಘಟನೆ ಮಾಡುವ ಶಕ್ತಿ. ಸಿದ್ದರಾಮಯ್ಯ ಅವರ ಹಿಡಿತದಿಂದ ಪಕ್ಷವನ್ನು ಹೊರತರುವ ಸಾಮರ್ಥ್ಯ. ಹಲವು ಬಣಗಳಾಗಿರುವ ಪಕ್ಷವನ್ನು ಒಗ್ಗೂಡಿಸಬಲ್ಲ ಚಾಣಕ್ಯತನ. ಸಂಪನ್ಮೂಲ ಮತ್ತು ವರ್ಚಸ್ವಿ ನಾಯಕ ಡಿಕೆಶಿ. ಪಕ್ಷವನ್ನು ಮುನ್ನಡೆಸಲು ಬೇಕಾದ ವರ್ಚಸ್ಸು ಮತ್ತು ಸಂಪನ್ಮೂಲ ಡಿಕೆಶಿ ಬಳಿ ಹೇರಳವಾಗಿದೆ. ಯಾವುದೇ ಸವಾಲನ್ನು ಲೀಲಾಜಾಲವಾಗಿ ಸ್ವೀಕರಿಸುವ ಡಿಕೆಶಿ ಕಷ್ಟಕಾಲದಲ್ಲಿ ಪಕ್ಷವನ್ನು ಸಮರ್ಥವಾಗಿ ಸಂಘಟಿಸುವ ಶಕ್ತಿ, ಚಾಣಕ್ಷತನವಿದೆ. ಅಷ್ಟೇ ಅಲ್ಲದೇ, ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿರುವ ಡಿಕೆಶಿಗೆ ಅಪಾರ ಪ್ರಮಾಣದ ಬೆಂಬಲಿಗರೂ ಇದ್ದಾರೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಈ ಬಂಟನಿಗೆ ಹೈಕಮಾಂಡ್ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವ ಮೂಲಕ ತನ್ನ ಋಣ ಸಂದಾಯದ ಭಾರವನ್ನು ಇಳಿಸಿಕೊಳ್ಳುವ ಪ್ರಯತ್ನ ಮಾಡಿಕೊಂಡಿದೆ.








