ಕೋವಿಡ್-19 ನಡುವೆ ಕ್ಷಯರೋಗಿಗಳ ಅಪಾಯದ ಪ್ರಮಾಣದಲ್ಲಿ ಹೆಚ್ಚಳ
ಹೊಸದಿಲ್ಲಿ, ಸೆಪ್ಟೆಂಬರ್13: ಒಂದೆಡೆ ಕೊರೋನವೈರಸ್ ಸೋಂಕು ಭಾರತವೂ ಸೇರಿದಂತೆ ಪ್ರಪಂಚದಾದ್ಯಂತ ಹೆಚ್ಚುತ್ತಿದ್ದರೆ, ಮತ್ತೊಂದು ಕಡೆಯಲ್ಲಿ ಆರೋಗ್ಯ ವಿಪತ್ತು ಮೌನವಾಗಿ ತೆರೆದುಕೊಳ್ಳುತ್ತಿದೆ.
ವಿಶ್ವದಲ್ಲಿ ಕಟ್ಟುನಿಟ್ಟಾದ ಲಾಕ್ಡೌನ್ ಜಾರಿಯಾದ ಬಳಿಕ ಜನರು ಮನೆಯಿಂದ ಹೊರಗೆ ಬರಲು ಭಯಪಡುತ್ತಿದ್ದಾರೆ. ತಮ್ಮ ವಾಡಿಕೆಯ ಆರೋಗ್ಯ ತಪಾಸಣೆಯನ್ನು ಮಾಡಿಸಿಕೊಳ್ಳುತ್ತಿಲ್ಲ. ಇದರಿಂದಾಗಿ ಒಂದು ದಶಲಕ್ಷಕ್ಕೂ ಹೆಚ್ಚು ಮಕ್ಕಳು ರೋಗನಿರೋಧಕ ಶಕ್ತಿಯನ್ನು ಕಳೆದುಕೊಂಡಿದ್ದಾರೆ ಮತ್ತು ಆಸ್ಪತ್ರೆಯಲ್ಲಿ ಜನನ ಪ್ರಮಾಣ ತೀವ್ರ ಕುಸಿತವನ್ನು ತೋರಿಸಿವೆ. ಇದು ಅನೇಕ ಮಹಿಳೆಯರು ಮನೆಯಲ್ಲೇ ಅಸುರಕ್ಷಿತ ಹೆರಿಗೆ ಮಾಡಿಸಿಕೊಂಡಿರಬಹುದು ಎಂದು ಸೂಚಿಸುತ್ತದೆ. ಕ್ಯಾನ್ಸರ್ ಹೊರರೋಗಿಗಳ ಆರೋಗ್ಯ ತಪಾಸಣೆ ಪ್ರಮಾಣ ಕೂಡ ಫೆಬ್ರವರಿ ಮಟ್ಟದಿಂದ 80% ನಷ್ಟು ಕುಸಿದಿದೆ ಎಂದು ಸರ್ಕಾರದ ಇತ್ತೀಚಿನ ಡೇಟಾ ತೋರಿಸುತ್ತದೆ.
ಆದರೆ ಅತಿದೊಡ್ಡ ಅಪಾಯ ಎದುರಾಗಿರುವುದು ಕ್ಷಯರೋಗದಿಂದ ಬಳಲುತ್ತಿರುವ ರೋಗಿಗಳಿಗೆ. ಭಾರತ ಕ್ಷಯರೋಗದೊಂದಿಗೆ ದೀರ್ಘಕಾಲದಿಂದ ಹೋರಾಟ ನಡೆಸುತ್ತಿದೆ.
ದೇಶದಲ್ಲಿ ಪ್ರಸ್ತುತ 2.7 ಮಿಲಿಯನ್ ಟಿಬಿ ರೋಗಿಗಳಿದ್ದಾರೆ, ಇದು ವಿಶ್ವದಲ್ಲೇ ಹೆಚ್ಚು ಮತ್ತು ಈ ರೋಗವು ಪ್ರತಿವರ್ಷ ಅಂದಾಜು 421,000 ಭಾರತೀಯರನ್ನು ಬಲಿ ತೆಗೆದುಕೊಳ್ಳುತ್ತದೆ. ಆರೈಕೆಯ ಪ್ರಸ್ತುತ ಅಂತರವು 2025 ರ ವೇಳೆಗೆ ಹೆಚ್ಚುವರಿ 6.3 ಮಿಲಿಯನ್ ಪ್ರಕರಣಗಳು ಮತ್ತು ಕ್ಷಯರೋಗದಿಂದ 1.4 ಮಿಲಿಯನ್ ಸಾವಿಗೆ ಕಾರಣವಾಗಬಹುದು ಎಂದು ಮುಂಬೈನ ಪಿ ಡಿ ಹಿಂದೂಜಾ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಶ್ವಾಸಕೋಶಶಾಸ್ತ್ರಜ್ಞ ಜರೀರ್ ಉಡ್ವಾಡಿಯಾ ನಡೆಸಿದ ಅಧ್ಯಯನದ ಪ್ರಕಾರ ಹೇಳಿದ್ದಾರೆ.
ಬೇರೆ ಯಾವುದೇ ಚಿಕಿತ್ಸೆಗೆ ಕೆಲವು ದಿನಗಳನ್ನು ತೆಗೆದುಕೊಂಡರೆ ತೊಂದರೆಯಾಗದಿರಬಹುದು, ಆದರೆ ಟಿಬಿ ಚಿಕಿತ್ಸೆಯಲ್ಲಿನ ಅಂತರವು ಪ್ರತಿರೋಧವನ್ನು ಹೆಚ್ಚಿಸುತ್ತದೆ ಎಂದು ಉಡ್ವಾಡಿಯಾ ಹೇಳಿದ್ದಾರೆ
ಕ್ಷಯರೋಗವನ್ನು ನಿಯಂತ್ರಿಸುವಲ್ಲಿನ ವೈಫಲ್ಯವು ಭಾರತದಲ್ಲಿ ಅದೆಷ್ಟೋ ವರ್ಷಗಳಿಂದ ಬಾಧಿಸುತ್ತಿದೆ. ಒಟ್ಟು ದೇಶೀಯ ಉತ್ಪನ್ನದ ಕೇವಲ 1.28% ಅನ್ನು ಸಾರ್ವಜನಿಕ ಆರೋಗ್ಯಕ್ಕಾಗಿ ಖರ್ಚು ಮಾಡುತ್ತದೆ. ನಮ್ಮ ಆರೋಗ್ಯ ಮೂಲಸೌಕರ್ಯಗಳ ಕೊರತೆಯ ನಡುವೆಯೇ ನಾವು ಕೋವಿಡ್ ಪ್ರಕರಣಗಳನ್ನು ಎದುರಿಸಬೇಕಾಗಿದೆ. ಭಾರತವು ಈಗ ವಿಶ್ವದಲ್ಲೇ ಎರಡನೇ ಅತಿ ಹೆಚ್ಚು ಕೋವಿಡ್ -19 ಸೋಂಕು ಪ್ರಕರಣಗಳನ್ನು ಹೊಂದಿದೆ.








