ಥೀಮ್ಗೆ ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಮ್ ಕಿರೀಟ..!
ಆಸ್ಟ್ರೀಯದ ಡಾಮಿನಿಕ್ ಥೀಮ್ ಅವರು ಚೊಚ್ಚಲ ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. 2020ರ ಯುಎಸ್ ಓಪನ್ ಟೆನಿಸ್ ಟೂರ್ನಿಯ ಫೈನಲ್ ನಲ್ಲಿ ಡಾಮಿನಿಕ್ ಥೀಮ್ ಅವರು ಜರ್ಮನಿಯ ಅಲೆಕ್ಸಾಂಡರ್ ಝಿವೆರೆವ್ ವಿರುದ್ಧ ಪ್ರಯಾಸದ ಜಯ ಸಾಧಿಸಿದ್ರು. ಮೊದಲ ಎರಡು ಸೆಟ್ ಗಳನ್ನು ಸೋತಿದ್ದ ಡಾಮಿನಿಕ್ ಥೀಮ್ ನಂತರದ ಎರಡು ಸೆಟ್ ಗಳನ್ನು ಸುಲಭವಾಗಿ ಗೆದ್ದುಕೊಂಡ್ರು. ಆದ್ರೆ ಅಂತಿಮ ಸೆಟ್ ನಲ್ಲಿ ಅಲೆಕ್ಸಾಂಡರ್ ಅವರು ದಿಟ್ಟ ಹೋರಾಟವನ್ನು ನೀಡಿದ್ರು. ಆದ್ರೂ ಡಾಮಿನಿಕ್ ಅವರ ಅದ್ಭುತ ಆಟದಿಂದ ಅಲೆಕ್ಸಾಂಡರ್ ಅವರು ತಲೆಬಾಗಲೇಬೇಕಾಯ್ತು.
ಇಂಗ್ಲೆಂಡ್ ಗೆ ಜಯ
ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 24 ರನ್ ಗಳಿಂದ ಜಯ ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿ 1-1ರಿಂದ ಸಮಬಲಗೊಂಡಿದೆ. ಮ್ಯಾಂಚೆಸ್ಟರ್ ನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ 231 ರನ್ ಗಳ ಸವಾಲಿಗೆ ಪ್ರತ್ಯುತ್ತರ ನೀಡಿದ ಆಸ್ಟ್ರೇಲಿಯಾ 207 ರನ್ ಗಳಿಗೆ ಸರ್ವಪತನಗೊಂಡು 24 ರನ್ ಗಳಿಂದ ಸೋಲು ಅನುಭವಿಸಿತ್ತು.
ರಾಯಲ್ಸ್ ಗೆ ವಾರ್ನ್ ಮೆಂಟರ್
ಆಸ್ಟ್ರೇಲಿಯಾದ ಮಾಜಿ ಸ್ಪಿನ್ ಮಾಂತ್ರಿಕ ಹಾಗೂ ರಾಜಸ್ತಾನ ರಾಯಲ್ಸ್ ತಂಡದ ಮಾಜಿ ಕೋಚ್ ಕಮ್ ನಾಯಕ ಶೇನ್ ವಾರ್ನ್ ಅವರು ಮತ್ತೆ ರಾಜಸ್ತಾನ ರಾಯಲ್ಸ್ ತಂಡವನ್ನು ಸೇರಿಕೊಂಡಿದ್ದಾರೆ. ಶೇನ್ ವಾರ್ನ್ ಅವರು ರಾಯಲ್ಸ್ ತಂಡದ ಮೆಂಟರ್ ಆಗಿ ಆಯ್ಕೆಯಾಗಿದ್ದಾರೆ. 2008ರ ಮೊದಲ ಐಪಿಎಲ್ ನಲ್ಲಿ ಶೇನ್ ವಾರ್ನ್ ಅವರು ರಾಜಸ್ತಾನ ರಾಯಲ್ಸ್ ತಂಡದ ನಾಯಕ ಹಾಗೂ ಕೋಚ್ ಆಗಿ ಚೊಚ್ಚಲ ಬಾರಿ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಆರಂಭದ ಪಂದ್ಯಗಳಿಗೆ ಗಾಯಕ್ವಾಡ್ ಅಲಭ್ಯ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯುವ ಬ್ಯಾಟ್ಸ್ ಮೆನ್ ರುತುರಾಜ್ ಗಾಯಕ್ವಾಡ್ ಈ ಬಾರಿಯ ಐಪಿಎಲ್ ಟೂರ್ನಿಯ ಆರಂಭದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿರುವ ರುತುರಾಜ್ ಗಾಯಕ್ವಾಡ್ ಇನ್ನೂ ಎರಡು ಪರೀಕ್ಷೆಗೆ ಒಳಪಡಬೇಕಿದೆ. ಭಾನುವಾರ ಮೊದಲ ಪರೀಕ್ಷೆ ನಡೆದಿದ್ದು, ಸೋಮವಾರ ಇನ್ನೊಂದು ಪರೀಕ್ಷೆ ನಡೆಯಲಿದೆ. ಹೀಗಾಗಿ ರುತುರಾಜ್ ಅವರು ಉದ್ಘಾಟನಾ ಪಂದ್ಯ ಸೇರಿದಂತೆ ಆರಂಭದ ಪಂದ್ಯಗಳಿಂದ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.
ನೆಟ್ಸ್ ನಲ್ಲಿ ಕಿಂಗ್ಸ್ ಘರ್ಜನೆ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮತ್ತು ಆರಂಭಿಕ ಬ್ಯಾಟ್ಸ್ ಮ್ಯಾನ್ ಶೇನ್ ವಾಟ್ಸನ್ ನೆಟ್ಸ್ನಲ್ಲಿ ಅಭ್ಯಾಸ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ತಂಡದಲ್ಲಿ ಇಬ್ಬರು ಆಟಗಾರಿಗೆ ಮತ್ತು 11 ಮಂದಿ ಸಹಾಯ ಸಿಬ್ಬಂದಿಗೆ ಕೊರೊನಾ ಪಾಸಿಟಿವ್ ಬಂದ ಕಾರಣ ಚೆನ್ನೈ ತಂಡ ಸ್ವಲ್ಪ ತಡವಾಗಿ ಅಭ್ಯಾಸವನ್ನು ಆರಂಭ ಮಾಡಿತ್ತು. ಸದ್ಯ ನಿರಂತರ ಅಭ್ಯಾಸದಲ್ಲಿ ನಿರತವಾಗಿರುವ ಧೋನಿ ನೇತೃತ್ವದ ಸಿಎಸ್ ಕೆ ತಂಡ, ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರ ಮಾರ್ಗದರ್ಶನದಲ್ಲಿ ಯುಇಎಯ ಐಸಿಸಿ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದೆ.
ನಿಷೇಧ ಮುಕ್ತನಾದ ಶ್ರೀಶಾಂತ್
ಸ್ಪಾಟ್ ಫಿಕ್ಸಿಂಗ್ ಪ್ರಕರಣದಲ್ಲಿ 7 ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದ ಭಾರತ ತಂಡದ ವೇಗಿ ಶ್ರೀಶಾಂತ್ ಅವರ ನಿಷೇಧದ ಅವಧಿ ಭಾನುವಾರಕ್ಕೆ ಮುಕ್ತಾಯಗೊಂಡಿದೆ. 2013ರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ಶ್ರೀಶಾಂತ್ ಸ್ಪಾಟ್ ಫಿಕ್ಸಿಂಗ್ ನಲ್ಲಿ ಸಿಕ್ಕಿಬಿದ್ದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮೇಲೆ ಬಿಸಿಸಿಐ 7 ವರ್ಷಗಳ ಕಾಲ ಎಲ್ಲಾ ಮಾದರಿಯ ಕ್ರಿಕೆಟ್ ನಿಂದ ನಿಷೇಧಿಸಿತ್ತು. ಇದೀಗ ನಿಷೇಧ ಮುಕ್ತರಾಗಿರುವ ಅವರು ಕೇರಳ ತಂಡದ ಪರ ದೇಶಿ ಕ್ರಿಕೆಟ್ ಗೆ ಮರಳುವ ಆಲೋಚನೆಯಲ್ಲಿದ್ದಾರೆ.








