ಬೆಂಗಳೂರು : ರಾಜ್ಯದಲ್ಲಿ ಉಪ ಚುನಾವಣಾ ಕಣ ರಂಗೇರುತ್ತಿದ್ದು, ಅಭ್ಯರ್ಥಿಗಳ ಆಯ್ಕೆ ರಾಜಕೀಯ ಪಕ್ಷಗಳಿಗೆ ತಲೆನೋವು ಉಂಟು ಮಾಡಿದೆ.
ಆರ್.ಆರ್.ನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಮುನಿರತ್ನ ಅಖಾಡಕ್ಕೆ ಇಳಿಯುವ ಎಲ್ಲಾ ಸಾಧ್ಯತೆಗಳಿವೆ. ಆದ್ರೆ ಕಾಂಗ್ರೆಸ್ ಈವರೆಗೂ ಅಭ್ಯರ್ಥಿ ಹೆಸರನ್ನು ಫೈನಲ್ ಮಾಡಿಲ್ಲ.
ಕಾಂಗ್ರೆಸ್ ನಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿ ಇದ್ದರೂ, ಬಿಜೆಪಿಗೆ ಟಕ್ಕರ್ ಕೊಟ್ಟು ಗೆಲ್ಲುವ ಕುದುರೆ ಹುಡುಕಾಟದಲ್ಲಿ ಕೈ ಕಲಿಗಳಿದ್ದಾರೆ.
ಅದರಲ್ಲೂ ಡಿ.ಕೆ ಶಿವಕುಮಾರ್ ಅವರಿಗೆ ಈ ಚುನಾವಣೆ ಪ್ರತಿಷ್ಠೆಯ ಪ್ರಶ್ನೆ ಕೂಡ ಹೌದು.
ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಬಂದಿರುವ ಮೊದಲ ಚುನಾವಣೆ ಇದಾಗಿದ್ದು, ಅವರು ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಲೇಬೇಕಾದ ಒತ್ತಡದಲ್ಲಿದ್ದಾರೆ.
ಇದನ್ನೂ ಓದಿ : ನಾನೇ ಆರ್.ಆರ್.ನಗರ ಚುನಾವಣಾ ಅಭ್ಯರ್ಥಿ : ಡಿ.ಕೆ.ಸುರೇಶ್
ಹೀಗಾಗಿ ಸಂಸದ ಡಿ.ಕೆ ಸುರೇಶ್ ಆರ್ ಆರ್ ನಗರದಲ್ಲೇ ಕಾಲ ಕಳೆಯುತ್ತಾ ಕಾರ್ಯಕರ್ತರನ್ನು ಒಗ್ಗೂಡಿಸುತ್ತಿದ್ದಾರೆ.
ಕಾಂಗ್ರೆಸ್ ನಿಂದ ಅಚ್ಚರಿ ಅಭ್ಯರ್ಥಿ..?
ಶತಾಯಗತಾಯ ಆರ್ ಆರ್ ನಗರದಲ್ಲಿ ಕಾಂಗ್ರೆಸ್ ಬಾವುಟ ಹಾರಿಸಲೇ ಬೇಕೆಂದು ಪಣತೊಟ್ಟಿರುವ ಡಿ.ಕೆ ಬ್ರದರ್ಸ್, ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಬಿಜೆಪಿ ನಾಯಕ, ಮಾಜಿ ಸಿಎಂ ಎಸ್ ಎಂ ಕೃಷ್ಣ ಮೊಮ್ಮಗ, ಕಾಫಿ ಡೇ ಸಿದ್ಧಾರ್ಥ ಅವರ ಪುತ್ರ ಮತ್ತು ಡಿ.ಕೆ ಶಿವಕುಮಾರ್ ಅವರ ಭಾವೀ ಅಳಿಯ ಅಮತ್ರ್ಯ ಸುಬ್ರಮಣ್ಯ ಹೆಗ್ಡೆ ಅವರನ್ನು ಕಣಕ್ಕಿಳಿಸಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದ್ರೆ ಇದಕ್ಕೆ ಅಮತ್ರ್ಯ ಅವರ ಕುಟುಂಬದವರು ಹಿಂದೇಟು ಹಾಕುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಒಂದು ವೇಳೆ ಅವರ ಮನವೊಲಿಕೆ ಯಶಸ್ವಿಯಾದರೆ ಅಮತ್ರ್ಯ ಅವರೇ ಕಾಂಗ್ರೆಸ್ ಅಭ್ಯರ್ಥಿಯಾಗುವ ಸಾಧ್ಯತೆಗಳಿವೆ.








