ಬೆಂಗಳೂರು : ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕುಟುಂಬದ ಭ್ರಷ್ಟಾಚಾರವನ್ನು ಮರೆಮಾಚಲು ಡಿಕೆಶಿವಕುಮಾರ್ ಅವರ ಮನೆ ಮೇಲೆ ಸಿಬಿಐ ದಾಳಿ ನಡೆಸಿದೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಡಿಕೆಶಿ ಮನೆ ಮೇಲೆ ಸಿಬಿಐ ಅಧಿಕಾರಿಗಳ ರೈಡ್ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮನೆಯ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿರೋದು ರಾಜಕೀಯ ದುರುದ್ದೇಶದಿಂದ ಕೂಡಿದೆ. ಸಿಎಂ ಕುಟುಂಬದ ಭ್ರಷ್ಟಾಚಾರವನ್ನು ಮರೆ ಮಾಚಲು ಇಂತಹ ದಾಳಿ ಮಾಡ್ತಿದ್ದಾರೆ. ಸಿಎಂ ಕುಟುಂಬದ ಭ್ರಷ್ಟಾಚಾರದ ಬಗ್ಗೆ ಸಿಬಿಐ, ಐಟಿ ಯಾಕೆ ಪ್ರಕರಣ ದಾಖಲಿಸಿಲ್ಲ. ಸುಮೋಟು ಅಡಿ ದಾಖಲಿಸಿ ತನಿಖೆ ಮಾಡುತ್ತಿಲ್ಲ. ನಾವು ಇದನ್ನೇ ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತೇವೆ. ಸೋಮವಾರ ಏನಾಗಿದೆ ಎಂದು ರಾಜ್ಯದ ಜನ ನೋಡಿದ್ದಾರೆ. ಬಿಜೆಪಿಯವರು ಯಾವ ಹಗರಣ ಮಾಡಿದರೂ ಏನು ಆಗಲ್ಲ ಎಂದರು.
ಉಪಚುನಾವಣೆ ಹಿನ್ನೆಲೆ ಈ ದಾಳಿ ನಡೆಯಿತಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್ ಖರ್ಗೆ, ಚುನಾವಣೆ ಹತ್ತಿರಬಂದಾಗ ಇಂತಹ ದಾಳಿಗಳು ನಡೆಯುತ್ತಲೇ ಇವೆ. ವಿಪಕ್ಷಗಳ ಎಲ್ಲಿ ಪ್ರಶ್ನೆ ಮಾಡ್ತಾರೋ ಅಲ್ಲಿ ದಾಳಿ ನಡೆಯುತ್ತಿವೆ. ರಾಜ್ಯದಲ್ಲಿ ಡಿಕೆಶಿವಕುಮಾರ್ ಅವರು ಕಾಂಗ್ರೆಸ್ ಅಧ್ಯಕ್ಷರಾದ ನಂತರ ಇದು ಹೆಚ್ಚಾಗಿದೆ ಎಂದರು.