ಭಾರತದ ಪವಿತ್ರ ಅಗ್ನಿಶಿಲೆ ಉರಿದು ಬೂದಿಯಾಗಿ 5 ವರ್ಷ ಕಳೆದಿದೆ; ಆದರೆ ಸಾವಿರ ವರ್ಷ ಕಳೆದರೂ ಸಾವಿರದ ಸಂತ ಕಲಾಂ ಮಾಸ್ತರ್ ಸದಾ ಅಜರಾಮರ:
ಇಂದು ನಮ್ಮ ದೇಶ ಕಂಡ ಅತ್ಯುತ್ತಮ ಕನಸುಗಾರ, 2020 ಇಂಡಿಯಾ ಸೂಪರ್ ಪವರ್ ಚಿಂತಕ, ಮಾಜಿ ರಾಷ್ಟ್ರಪತಿ, ಹೆಮ್ಮೆಯ ಭಾರತಿಸುತ ವಿಜ್ಞಾನ ಡಾ. ಎ.ಪಿ.ಜಿ ಅಬ್ದುಲ್ ಕಲಾಂ ಮೇಸ್ಟ್ರ ಜನ್ಮದಿನ.
ನಾವು ಇತಿಹಾಸದಲ್ಲಿ ಶಾಶ್ವತವಾಗಿ ನೆನಪಿನಲ್ಲಿ ಉಳಿಸಿಕೊಳ್ಳಬೇಕಾದ ಹೆಸರು ಕಲಾಂ ಮಾಸ್ತರ್ ರದ್ದು.
ನಮ್ಮ ಸದಾ ಪ್ರೀತಿಯ ಸದಾ ಹಸನ್ಮುಖಿ ಸರಳ ಜೀವನ ಉನ್ನತ ಚಿಂತನೆಗ ಜೀವಂತ ಉದಾಹರಣೆಯಾಗಿ ಬದುಕಿದ ಮಗುವಿನ ಮನಸಿನ ಕಲಾಂ ಅಜ್ಜನ ನೂರಾರ ಪ್ರೇರಣಾದಾಯಕ ಸಂಗತಿಗಳನ್ನು ನಮ್ಮ ಮುಂದಿನ ಪೀಳಿಗೆಯ ಮಕ್ಕಳಿಗೆ ತಿಳಿಸಿಕೊಡುವ ಅಗತ್ಯವಿದೆ.
ಇದನ್ನೂ ಓದಿ : ಇಂದು ವಿಶ್ವ ವಿದ್ಯಾರ್ಥಿ ದಿನ – ವಿದ್ಯಾರ್ಥಿಗಳ ಸ್ಫೂರ್ತಿಯ ಮೂಲ ಕಲಾಂ ಮೇಷ್ಟ್ರು ಅವರ ಜನ್ಮದಿನ

ಕಲಾಂ ನಮ್ಮ ನಡುವೆ ಚಿನ್ಮಯಿ ಸ್ವರೂಪಿಯಾಗಿ ಸಕಾರಾತ್ಮಾಕ ಮತ್ತು ಧನಾತ್ಮಕ ಚಿಂತನೆಗಳ ಮೂಲಕ ಬದುಕಿದ್ದರು. ಧರ್ಮ ಜಾತಿಗಳನ್ನು ಮೀರಿ ಸಮಸ್ತ ಭಾರತೀಯರ ಗೌರವ, ಹೆಮ್ಮೆ, ಅಭಿಮಾನ ಮತ್ತು ಒಲವನ್ನು ದೋಚಿಕೊಂಡರು.
ಅವರು ದೈಹಿಕವಾಗಿ ಅಗಲಿದಾಗ ಇಡೀ ರಾಷ್ಟ್ರಕ್ಕೆ ಸೂತಕ ಕವಿದಿತ್ತು. ತಾಯಿ ಭಾರತಿಯ ಒಕ್ಕಲಿನ ಮಡಿಲ ಮಕ್ಕಳು ಕಣ್ಣೀರಿಟ್ಟಿದ್ದರು. ಇದಲ್ಲವೇ ಸಾರ್ಥಕ ಬದುಕು? ಇವರನ್ನು ತಾನೇ ಆದರ್ಶ ಎಂದು ಪರಿಗಣಿಸಬೇಕಾಗಿದ್ದು.
ಭಾರತದ ಮಿಸೈಲ್ ಮ್ಯಾನ್ ಡಾ. ಎ.ಪಿ.ಜೆ ಅಬ್ದುಲ್ ಕಲಾಂ, ಶಿಕ್ಷಕರಾದರು, ವಿಜ್ಞಾನಿಯಾದರು, ದೇಶದ ಭದ್ರತಾ ಚಿಂತಕರಾದರು, ಬರಹಗಾರರಾದರು, ವಾಗ್ಮಿಯಾಗಿ ನೂರಾರು ವೇದಿಕೆಗಳಲ್ಲಿ ಮಾತಾಡಿ ಮನ ಗೆದ್ದರು, ಏರೋ ಸ್ಪೇಸ್ ಎಂಜಿನಿಯರ್ ಆದರು, ಪೀಪಲ್ಸ್ ಪ್ರೆಸಿಡೆಂಟ್ ಎಂದು ಕರೆಸಿಕೊಂಡರು, ಭಾರತ ರತ್ನವೇ ಆದರು.
ಆದರೆ ನಮ್ಮ ಪಾಲಿಗೆ ಅವರು ನಮ್ಮ ದೊಡ್ಡ ಭಾರತೀಯ ಕುಟುಂಬದ ಲವಲವಿಕೆಯ ನಲ್ಮೆಯ ಹಿರಿಯಜ್ಜನಾದರು.
ಕನಸು ಕಾಣಬೇಕು ಆದರೆ ನಾನಿಲ್ಲಿ ಹೇಳುವ ಕನಸು ಕಾಣಲು ನೀವು ಮಲಗಬೇಕು ಎಂದಲ್ಲ. ನಾನು ಹೇಳುವ ಕನಸುಗಳು ನಿಮ್ಮನ್ನು ಮಲಗಲೇ ಬಿಡುವುದಿಲ್ಲ ಎಂದವರು ಕಲಾಂ.
ತಮಿಳುನಾಡಿನ ರಾಮೇಶ್ವರಂ ಧನುಷ್ಕೋಟಿಯಲ್ಲಿ 7 ಮಕ್ಕಳ ತುಂಬು ಕುಟುಂಬದಲ್ಲಿ ಜನಿಸಿದ ಕಲಾಂರ ತಂದೆಯ ಆದಾಯದ ಮೂಲ ಒಂದು ಬೋಟ್.
ರಾಮೇಶ್ವರಂನ ಬೀದಿಗಳಲ್ಲಿ ದಿನಪತ್ರಿಕೆ ಹಂಚುತ್ತಲೇ ಕನಸು ಕಾಣಲು ಪ್ರಾರಂಭಿಸಿದ ಬಾಲಕ ಕಲಾಂ.
ರಾಮೇಶ್ವರಂ ದೇಗುಲದ ಗಂಟೆ ಸದ್ದು, ಅರ್ಚಕರ ವೇದ ಮಂತ್ರಗಳ ಉಚ್ಛಾರಣೆಗಳನ್ನು ಕೇಳುತ್ತಲೇ ಬೆಳೆದ ಕಲಾಂ ಮುಂದೊಂದು ದಿನ ಈ ದೇಶದ ಸಹಬಾಳ್ವೆಯ ಸಾಮರಸ್ಯದ ಸಹಜೀವನದ ಅಂಬಾಸಡರ್ ಆಗುತ್ತಾರೆ ಎನ್ನುವ ಕಲ್ಪನೆ ಯಾರಗಾದರೂ ಇತ್ತಾ?
ಅಬ್ದುಲ್ ಕಲಾಂ ಇಂಡಿಯನ್ ಏರ್ ಫೋರ್ಸ್ ನಲ್ಲಿ ಪೈಲೆಟ್ ಆಗುವ ಕನಸು ಕಂಡಿದ್ದರು. ಆದರೆ ಅಲ್ಲಿದ್ದ ಅವಕಾಶಗಳು ಕೇವಲ 8 ಸ್ಥಾನಗಳಿಗೆ ಮಾತ್ರವೇ ಆಗಿತ್ತು. ದುರದೃಷ್ಟವೋ ಅದೃಷ್ಟವೋ ಕಲಾಂ ಸಾಬ್ 9 ನೇ ರ್ಯಾಂಕ್ ಬಂದು ಆ ಅವಕಾಶ ತಪ್ಪಸಿಕೊಂಡರು.
ಬೇರೆ ಯಾರಾದರೂ ಆಗಿದ್ದರೇ ಇದೊಂದು ಘಟನೆಯಿಂದ ಮತ್ತಷ್ಟು ವ್ಯಾಕುಲರಾಗುತ್ತಿದ್ದರು. ಆದರೆ ಹುಟ್ಟಿನಿಂದಲೇ ಧನಾತ್ಮಕ ಚಿಂತನೆ ರೂಡಿಸಿಕೊಂಡಿದ್ದ ಕಲಾಂ ಸರ್ ಮತ್ತಷ್ಟು ಹೆಚ್ಚು ಕನಸು ಕಾಣತೊಡಗಿದರು.
ಅದರ ಫಲಶೃತಿಯೇ ಜಗತ್ತಿನ 40 ದೊಡ್ಡ ದೊಡ್ಡ ವಿಶ್ವವಿದ್ಯಾನಿಲಯಗಳು ಅವರಿಗೆ ಡಾಕ್ಟರೇಟ್ ಪ್ರಧಾನ ಮಾಡುವ ಮಹತ್ಸಾಧನೆ ಮಾಡಿದರು.
ಜನವರಿ 2015ರಲ್ಲಿ ಅವರ ಜನ್ಮದಿನವಾದ ಅಕ್ಟೋಬರ್ 15ರಂದು ವಿಶ್ವ ವಿದ್ಯಾರ್ಥಿ ದಿನವೆಂದಾಗಿ ಆಚರಿಸಬೇಕು ಎಂದು ಯುನೆಸ್ಕೋ ಘೋಷಿಸಿತು. ಇದಲ್ಲವೇ ಸಾಧನೆ?
ಕಲಾಂ ಸಾಹಿತ್ಯ ಪ್ರೇಮದ ಬಗ್ಗೆ ಬಹಳಷ್ಟು ಜನರಿಗೆ ಗೊತ್ತಿಲ್ಲ. ಅವರು ಇಂಗ್ಲೀಷ್ ನಲ್ಲಿ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ.
ಅವರ ವಿಂಗ್ಸ್ ಆಫ್ ಫೈರ್, ಇಗ್ನೈಟೆಡ್ ಮೈಂಡ್ಸ್, ಇನ್ಸ್ಪೈರಿಂಗ್ ಥಾಟ್ಸ್, ಟರ್ನಿಂಗ್ ಪಾಯಿಂಟ್ ಮುಂತಾದವುಗಳು ವಿದ್ಯಾರ್ಥಿಗಳ ಖಾಸಗಿ ಗ್ರಂಥಾಲಯಗಳಲ್ಲಿ ಇರಲೇಬೇಕಾದ ಪುಸ್ತಕಗಳು.
ಆದರೆ ಕಲಾಂ ತಮಿಳು ಭಾಷೆಯಲ್ಲಿ ನೂರಾರು ಕವಿತೆಗಳನ್ನು ಬರೆದಿದ್ದಾರೆ. ಕಲಾಂ ಮಾಸ್ಟರ್ ರ ಇನ್ನೊಂದು ನೆಚ್ಚಿನ ಹವ್ಯಾಸವಿತ್ತು; ಅದು ರುದ್ರವೀಣೆಯನ್ನು ನುಡಿಸುವುದು.
ನಾಸಾದ ಜೆಪಿಎಲ್ ಅಥವಾ ಜೆಟ್ ಪ್ರೊಪಲ್ಷನ್ ಲ್ಯಾಬ್ರೋಟರಿ 2017ರಲ್ಲಿ ಒಂದು ಹೊಸ ರೇಡಿಯೇಷನ್ ರೆಸಿಸ್ಟೆನ್ಸ್ ಬ್ಯಾಕ್ಟೀರಿಯಾವನ್ನು ಸಂಶೋಧಿಸಿತು.
ಅದಕ್ಕೆ ನಾಸಾದ ಆ ವಿಭಾಗ ಕೊಟ್ಟ ಹೆಸರೇನು ಗೊತ್ತೇ? ‘Solibacillus Kalamii’ ಸೋಲಿಬಸಿಲಸ್ ಕಲಾಮಿ. ಕಲಾಂ ಗೌರವಾರ್ಥ. ಇದು ಡಾ. ಅಬ್ದುಲ್ ಕಲಾಂ ಸಾಧನಾಶ್ರೇಯ.
ಬ್ಯಾಲಿಸ್ಟಿಕ್ ಮಿಸೈಲ್ ಮತ್ತು ಲಾಂಚ್ ವೆಹಿಕಲ್ ತಂತ್ರಜ್ಞಾನದಲ್ಲಿ ದಣಿವರೆಯದ ದುಡಿದಿದ್ದರಿಂದಲೇ ಕಲಾಂಜಿಗೆ ಮಿಸೈಲ್ ಮ್ಯಾನ್ ಎನ್ನುವ ಹೆಸರು ಬಂದಿತು.
ಕಾರಣ ಕಲಾಂ ಭಾರತದ ಮೊತ್ತಮೊದಲ ಸ್ಯಾಟಲೈಟ್ ಲಾಂಚಿಂಗ್ ವೆಹಿಜಲ್ (SLV-III) ನಿರ್ಮಾಣದ ಹಿಂದಿನ ಥಿಂಕ್ ಟ್ಯಾಂಕ್ ಆಗಿದ್ದರು.
ಭಾರತದ ಮೊದಲ ಉಪಗ್ರಹ ರೋಹಿಣಿಯ ಪ್ರಾಜೆಕ್ಟ್ ಮ್ಯಾನೇಜರ್ ಆಗಿದ್ದವರು ಕಲಾಂ ಸಾಬ್. ಡಿ.ಆರ್.ಡಿ.ಒ ದಲ್ಲಿ ಕಲಾ ಮಾಸ್ತರ್ ಇಂಟಿಗ್ರೇಟೆಡ್ ಗೈಡೆಡ್ ಮಿಸೈಲ್ ಡೆವಲಪ್ಮೆಂಟ್ ಪ್ರೋಗ್ರಾಂ ನ ಮುಖ್ಯಸ್ಥರಾಗಿದ್ದರು.
ಅವರು ಕಂಡು ಹಿಡಿದ 5 ಮಿಸೈಲ್ ಗಳಿಗೆ ನಾಗ್, ಆಕಾಶ್, ತ್ರಿಶೂಲ್, ಅಗ್ನಿ, ಪೃಥ್ವಿ ಎಂದು ಹೆಸರಿಟ್ಟರು. ಅದರಲ್ಲೂ ಪೃಥ್ವಿ ಮತ್ತು ಅಗ್ನಿ ಸಂಶೋಧನೆಯ ಬೆನ್ನೆಲುಬಾಗಿದ್ದವರು ಅವರು.
ರಷ್ಯಾ ಮತ್ತು ಭಾರತದ ನಡುವೆ ಬ್ರಹ್ಮೋಸ್ ಏರೋಸ್ಪೇಸ್ ನಿರ್ಮಾಣದಲ್ಲಿ ಹಗಲು ರಾತ್ರಿ ದುಡಿದವರು ಕಲಾಂ ಜಿ. ಭಾರತಕ್ಕೊಂದು ಪರಮಾಣು ಭದ್ರತೆ ತಂದುಕೊಟ್ಟ 1998ರ ಪೋಕರಣ್-2 ನ್ಯೂಕ್ಲಿಯರ್ ಪರೀಕ್ಷೆಯ ಸಂಪೂರ್ಣ ಶ್ರೇಯ ಕಲಾಂ ಅಜ್ಜಾಗೆ ಸಲ್ಲಬೇಕು.
ಈ ಅಣ್ವಸ್ತ್ರ ಪರೀಕ್ಷೆ ಹಿಂದೆ ಕಲಾಂ ಶ್ರದ್ಧೇ ಮತ್ತು ಶ್ರಮಗಳನ್ನು ವಿವರಿಸಲು ಮತ್ತೊಂದು ದೊಡ್ಡ ಅಂಕಣ ಬರೆಯಬೇಕಾದೀತು. ಮಾನವೀಯತೆಯನ್ನೇ ನಿಜವಾದ ಧರ್ಮ ಎಂದು ಭಾವಿಸಿ ಬದುಕಿದ ಕಲಾಂ ಸರ್, ದಯೆಯೆ ಅದರ ಮೂಲಸ್ಥಾಯಿ ಎಂದು ನಂಬಿದ್ದವರು.
ಹಾಗಾಗಿಯೇ ಅವರು ರಾಷ್ಟ್ರಪತಿಯಾಗಿದ್ದಾಗ ಅಪರಾಧಿಗಳಿಗೆ ಗಲ್ಲು ಶಿಕ್ಷೆಯ ಬದಲು ಜೀವಾವಧಿ ಶಿಕ್ಷೆ ನೀಡಬೇಕು ಎನ್ನುವ ವಾದದ ಸಮರ್ಥಕರಾಗಿದ್ದರು.
ಮೇ 27, 2015 ಅಖಂಡ ಭಾರತ ಕುಲಕೋಟಿಗೆ ಆಘಾತ ತಂದ ದಿನ. ವಿಶ್ವ ವಿದ್ಯಾರ್ಥಿ ದಿನ ಘೋಷಣೆಯಾಗಿ ಕಲಾಂ ಮಾಸ್ಟರ್ ಮೊದಲ ವಿಜ್ಞಾನ ದಿನವನ್ನು ಉದ್ಘಾಟಿಸಲು ಶಿಲ್ಲಾಂಗ್ ತೆರಳಿದ್ದರು.
ಅದೇ ಕೊನೆ ವೇದಿಕೆಯಲ್ಲಿ ಕುಸಿದು ಬಿದ್ದ ನಮ್ಮ ಪ್ರೀತಿಯ ಕಲಾಂ ಮತ್ತೆ ಮೇಲೆ ಏಳಲೇ ಇಲ್ಲ. ಭಾರತದ ಪರಮ ಪವಿತ್ರ ಅಗ್ನಿಶಿಲೆಯೊಂದು ಚಲನೆ ನಿಲ್ಲಿಸಿ ಅಚೇತನಗೊಂಡಿತು.
ಆದರೆ ಕಲಾಂ ಚಿಂತನೆಗಳಿಗೆ, ಕನಸುಗಳಿಗೆ ಅವರೊಳಗಿನ ಸಾವಿರಾರು ಧನಾತ್ಮಕ ಚಿಂತನೆಗಳಿಗೆ ಸಾವುಂಟೆ. ಕಲಾಂ ಇನ್ನು ಸಾವಿರ ವರ್ಷವಾದರೂ ಸಾವಿಲ್ಲದೇ ಅಜರಾಮರವಾಗಿ ಬದುಕುವ ಸಾವಿರದ ಸಂತ. ಹ್ಯಾಪಿ ಬರ್ತ್ ಡೇ ಕಲಾಂ ಮೇಸ್ಟ್ರೇ..
-ವಿಭಾ (ವಿಶ್ವಾಸ್ ಭಾರದ್ವಾಜ್)
ಮಾರ್ಜಾಲ ಮಂಥನ ಕಾಲಂ
*
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








