ವಿಜಯಪುರ: ಮಾಲಿನ್ಯ ಹಾಗೂ ಉಸಿರಾಟದ ಸಮಸ್ಯೆ ಹೆಚ್ಚಳವಾಗುವ ಆತಂಕದ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ವೇಳೆ ಪಟಾಕಿ ಸುಡುವುದನ್ನು ಬ್ಯಾನ್ ಮಾಡಿರುವ ರಾಜ್ಯ ಬಿಜೆಪಿ ಸರ್ಕಾರ ಹಾಗೂ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಕ್ರಮವನ್ನು ಸ್ವಪಕ್ಷದವರೇ ಆದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತರಾಟೆಗೆ ತೆಗೆದುಕೊಂಡಿದ್ದಾರೆ
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಯತ್ನಾಳ್, ಸಿಎಂಗೆ ಹೇಳುತ್ತೇನೆ ತಕ್ಷಣ ಪಟಾಕಿ ನಿಷೇಧ ಹಿಂಪಡೆಯಬೇಕು. ಕೇವಲ ಹಿಂದೂಗಳ ಹಬ್ಬಕ್ಕೆ ಶಾಸ್ತ್ರ ಹೇಳಬೇಡಿ. ವರ್ಷಕ್ಕೊಮ್ಮೆ ಬರುವ ಹಿಂದೂಗಳ ಭಾವನೆಗಳಿವು. ಹಿಂದೂಗಳ ಹಬ್ಬಕ್ಕೆ ಯಾಕೆ ಈ ಮಾತು. ಅಮೀರ್ ಖಾನ್ ನಾಗರಹಾವಿಗೆ ಯಾಕೆ ಹಾಲು ಎರೆಯುತ್ತೀರಿ ಎನ್ನುತ್ತಾರೆ. ಅಂಥವರನ್ನು ಪ್ರಶ್ನಿಸಬೇಕು, ಹೀಗಾಗಿ ತಕ್ಷಣ ಪಟಾಕ್ ಬ್ಯಾನ್ ವಾಪಸ್ ಪಡೆಯುವಂತೆ ತಾಕೀತು ಮಾಡಿದ್ದಾರೆ.
ದೀಪಾವಳಿ ಸಿಹಿಯಾಗುತ್ತೋ ಕಹಿಯಾಗುತ್ತೋ: ಯತ್ನಾಳ್ ಮಾತಿನ ಮರ್ಮವೇನು..!
ದೀಪಾವಳಿ ತಮ್ಮ ಪಾಲಿಗೆ ಸಿಹಿಯಾಗುತ್ತೋ ಕಹಿಯಾಗುತ್ತೊ ದೇವರಿಗೆ ಗೊತ್ತು, ನ.25ರವರೆಗೆ ಕಾಯಿರಿ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೀಡಿರುವ ಹೇಳಿಕೆ ಹಲವು ಪ್ರಶ್ನೆಗಳನ್ನು ಎತ್ತಿದೆ.
ದೀಪಾವಳಿ ಯಾರ ಪಾಲಿಗೆ ಸಿಹಿಯಾಗುತ್ತೆ, ಅದು ತಮಗೆ ಸಚಿವರಾಗುವ ಅವಕಾಶದ ವಿಚಾರವೋ ಅಥವಾ ನಾಯಕತ್ವದ ಬದಲಾವಣೆಯ ಮೂಲಕ ಸಿಎಂ ಯಡಿಯೂರಪ್ಪ ಪಾಲಿಗೆ ಕಹಿಯಾಗುತ್ತೋ ಅಥವಾ ಕಾಂಗ್ರೆಸ್ ನಾಯಕರ ಪಾಲಿಗೆ ಮುಂದಿನ ದಿನಗಳಲ್ಲಿ ಸಂಕಷ್ಟಗಳು ಎದುರಾಗುತ್ತೋ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ನನಗೆ ಮಂತ್ರಿ ಸ್ಥಾನ ಬೇಡವೇ ಬೇಡ..!
ಒಂದೇ ಪಕ್ಷದಲ್ಲಿ ಕೆಲವೊಂದು ಸಮಸ್ಯೆಗಳಿರುತ್ತವೆ. ನಾನು ಸಚಿವನಾಗಲು ಎಂದೂ ಬೇಡಿಕೆ ಇಟ್ಟಿಲ್ಲ. ನನಗೆ ಮಂತ್ರಿ ಸ್ಥಾನವೂ ಬೇಡವೇ ಬೇಡ, ನಾನು ಸಚಿವನಾಗುವುದೇ ಇಲ್ಲ ಎಂದು ಯತ್ನಾಳ್ ಹೇಳಿದ್ದಾರೆ.
ಸಚಿವ ವಿ. ಸೋಮಣ್ಣ ಮೂಲಕ ಸಿಎಂ ಸಂದೇಶ ಕಳುಹಿಸಿದ್ದಾರೆ. ಬೆಂಗಳೂರು ಮಾದರಿಯಲ್ಲಿ ಭೀಮಾ ಪ್ರವಾಹ ಸಂತ್ರಸ್ತರಿಗೂ 25 ಸಾವಿರ ರೂ. ಪರಿಹಾರ ನೀಡುವುದಾಗಿ ಹೇಳಿದ್ದಾರೆ. ನಾನು ವೈಯಕ್ತಿಕವಾಗಿ ಏನನ್ನೂ ಕೇಳಿಲ್ಲ.
ಈ ಭಾಗದ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಮಾಡಿ ಕೊಡುವುದಾಗಿ ಸಿಎಂ ಹೇಳಿ ಕಳಿಸಿದ್ದಾರೆ. ಕೆಲಸ ಮಾಡುವವರಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಸಿಎಂ ಮಂಗಳೂರು ಕಾರ್ಯಕಾರಿಣಿಯಲ್ಲಿ ಹೇಳಿದ್ದಾರೆ.
ನನಗೆ ಹೆಚ್ಚಿನ ಅನುದಾನ ಸಿಗಲಿದೆ ಎಂದು ಯತ್ನಾಳ್ ತಿಳಿಸಿದ್ದಾರೆ.
ವಿನಯ್ ಕುಲಕರ್ಣಿ ಪ್ರಕರಣದಲ್ಲಿ ಪ್ರಧಾನಿ ಹಸ್ತಕ್ಷೇಪ ಮಾಡಿಲ್ಲ
ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಸಿಬಿಐನಿಂದ ಬಂಧನಕ್ಕೊಳಗಾಗಿರುವ ವಿನಯ್ ಕುಲಕರ್ಣಿ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಹಸ್ತಕ್ಷೇಪ ಮಾಡಿಲ್ಲ. ಆ ವಿಷಯ ಕೋರ್ಟಿನಲ್ಲಿದೆ. ಸಿಬಿಐ ತನಿಖೆ ನಡೆಸುತ್ತಿದೆ.
ಸಿಬಿಐ ಮೇಲೆ ನಮಗೆ ವಿಶ್ವಾಸವಿದೆ. ನಿಷ್ಪಕ್ಷಪಾತವಾಗಿ ಅವರು ತನಿಖೆ ಮಾಡುತ್ತಾರೆ. ಅಲ್ಲಿ ಯಾವುದೇ ರಾಗ, ದ್ವೇಷ ಇರುವುದಿಲ್ಲ. ಅದರಲ್ಲಿ ಪ್ರಧಾನಿ ಹಸ್ತಕ್ಷೇಪ ಮಾಡಿಲ್ಲ. ಕೇಂದ್ರ ಸರಕಾರ ಹಸ್ತಕ್ಷೇಪ ಮಾಡಿಲ್ಲ. ಕೇಂದ್ರ ಸಚಿವರು ಹಸ್ತಕ್ಷೇಪ ಮಾಡಿದ್ದಾರೆ ಎಂಬ ಆರೋಪಗಳು ಸುಳ್ಳಿನಿಂದ ಕೂಡಿವೆ. ಸಂಪೂರ್ಣ ತನಿಖೆಯಾಗಿ ನ್ಯಾಯ ಹೊರ ಬರಲಿದೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿನಯ ಕುಲಕರ್ಣಿ ಪರ ಪಂಚಮಸಾಲಿ ಸ್ವಾಮೀಜಿಗಳ ಬ್ಯಾಟಿಂಗ್ ವಿಚಾರದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಅವರು ಧರ್ಮದ ಸ್ವಾಮೀಜಿಗಳು ಎಂದ ಯತ್ನಾಳ್, ದೇಶದಲ್ಲಿ ನಡೆದ ಎಲ್ಲ ಚುನಾವಣೆ, ಬೈ ಎಲೆಕ್ಷನ್ ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ, ದೇಶದ ಚಾಣಕ್ಯ ಅಮಿತ್ ಶಾ, ಜೆ. ಪಿ. ನಡ್ಡಾ, ಆಯಾ ರಾಜ್ಯಗಳ ಸಿಎಂ, ರಾಜ್ಯಾಧ್ಯಕ್ಷರು, ಬಿಜೆಪಿ ಕಾರ್ಯಕರ್ತರು ಕಾರಣ ಎಂದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel