ಪುಣೆ: ದೇಶದ ಯುವಜನತೆಗೆ ಸ್ವಾತಂತ್ರ್ಯದ ನಿಜವಾದ ಅರ್ಥ ಮತ್ತು ಅದರೊಂದಿಗೆ ಬರುವ ಜವಾಬ್ದಾರಿಯ ಬಗ್ಗೆ ರಾಷ್ಟ್ರೀಯ ಭದ್ರತಾ ಸಲಹೆಗಾರ (ಎನ್ಎಸ್ಎ) ಅಜಿತ್ ದೋವಲ್ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಸ್ವಾತಂತ್ರ್ಯ ಎಂದರೆ ಒಬ್ಬರು ಬಯಸಿದ್ದನ್ನು ಮಾಡುವ ಅನಿಯಂತ್ರಿತ ಹಕ್ಕು ಎಂದು ಭಾವಿಸುವುದು ತಪ್ಪು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಪುಣೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಸೇವೆಗೆ ನೀಡಿದ ಕೊಡುಗೆಗಾಗಿ ಪ್ರತಿಷ್ಠಿತ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡಿದರು. ಸ್ವಾತಂತ್ರ್ಯ ಹೋರಾಟಗಾರ ಬಾಲಗಂಗಾಧರ ತಿಲಕ್ ಅವರ ಪುಣ್ಯತಿಥಿಯ ಸಂದರ್ಭದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ದೋವಲ್ ಅವರ ಮಾತುಗಳು ಇತ್ತೀಚಿನ ನೀಟ್ ಪರೀಕ್ಷಾ ಅಕ್ರಮದ ವಿರುದ್ಧದ ವಿದ್ಯಾರ್ಥಿಗಳ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಹೆಚ್ಚಿನ ಮಹತ್ವ ಪಡೆದುಕೊಂಡಿವೆ.
ಹಕ್ಕುಗಳ ಜೊತೆ ಕರ್ತವ್ಯ ಪ್ರಜ್ಞೆ ಇರಲಿ
ಇಂದಿನ ಯುವ ಪೀಳಿಗೆ ಭಾರತ ಯಾವಾಗಲೂ ಈಗಿನಂತೆಯೇ ಸುಭದ್ರವಾಗಿದೆ ಎಂದು ಭಾವಿಸಿರಬಹುದು. ಆದರೆ ಈ ಸ್ವಾತಂತ್ರ್ಯದ ಹಿಂದೆ ಲಕ್ಷಾಂತರ ಜನರ ತ್ಯಾಗವಿದೆ. ಸ್ವಾತಂತ್ರ್ಯ ಎಂದರೆ ಕೇವಲ ತಮಗೆ ಅನಿಸಿದ್ದನ್ನು ಮಾಡುವ ಹಕ್ಕು ಎಂದು ಯುವಕರು ತಪ್ಪಾಗಿ ಭಾವಿಸುತ್ತಿದ್ದಾರೆ. ಆದರೆ ಸ್ವಾತಂತ್ರ್ಯವು ಸಮಾಜ ಮತ್ತು ರಾಷ್ಟ್ರದ ಕಡೆಗೆ ಹೊಂದಿರುವ ಜವಾಬ್ದಾರಿಗಳೊಂದಿಗೆ ಬೆಸೆದುಕೊಂಡಿದೆ ಎಂಬುದನ್ನು ಅವರು ಮರೆಯಬಾರದು ಎಂದು ದೋವಲ್ ಕಿವಿಮಾತು ಹೇಳಿದರು.
ದೇಶಾದ್ಯಂತ ನಡೆಯುತ್ತಿರುವ ವಿವಿಧ ಪ್ರತಿಭಟನೆಗಳನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, ಪ್ರಜಾಪ್ರಭುತ್ವ ನೀಡಿದ ಸ್ವಾತಂತ್ರ್ಯಗಳು ರಾಷ್ಟ್ರೀಯ ಕರ್ತವ್ಯದ ಪ್ರಜ್ಞೆಯೊಂದಿಗೆ ಇರಬೇಕು. ರಾಷ್ಟ್ರ ನಿರ್ಮಾಣದ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು. ಲೋಕಮಾನ್ಯ ತಿಲಕರ ಜೀವನ ಮತ್ತು ಅವರು ಭಾರತದ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಿದ ರೀತಿಯಿಂದ ಇಂದಿನ ಯುವಕರು ಸ್ಫೂರ್ತಿ ಪಡೆಯಬೇಕು ಎಂದು ಕರೆ ನೀಡಿದರು.
ಪ್ರತಿಯೊಬ್ಬ ಭಾರತೀಯರು, ವಿಶೇಷವಾಗಿ ಯುವಕರು ಭಾರತಕ್ಕಾಗಿ ತಿಲಕರು ಹೊಂದಿದ್ದ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಬೇಕು. ಸ್ವಾತಂತ್ರ್ಯದ ದುರುಪಯೋಗವಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಅಜಿತ್ ದೋವಲ್ ಪ್ರತಿಪಾದಿಸಿದರು.







