ಬೆಂಗಳೂರು: ದೀಪಾವಳಿ ಹಬ್ಬದ ಸಂಭ್ರಮ, ವೀಕೆಂಡ್ ಶಾಪಿಂಗ್ಗೆ ಕಾಟ ಕೊಟ್ಟಿರುವ ಮಳೆರಾಯ, ಇನ್ನೂ ಮೂರು ದಿನ ರಾಜ್ಯಾದ್ಯಂತ ಭಾರೀ ಮಳೆ ಸಾಧ್ಯತೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ಶುಕ್ರವಾರ ರಾಜಧಾನಿ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದಿತ್ತು. ಶನಿವಾರವಾದ ನಿನ್ನೆ ದೀಪಾವಳಿ ಹಬ್ಬದ ಸಂಭ್ರಮಕ್ಕೆ ವರುಣ ಅಡ್ಡಿಪಡಿಸುವ ಎಲ್ಲಾ ಸಾಧ್ಯತೆ ದಟ್ಟವಾಗಿತ್ತು. ಬೆಳಿಗ್ಗೆ ನಗರದ ಕೆಲವು ಭಾಗಳಲ್ಲಿ ತುಂತುರು ಮಳೆ ಸುರಿಯಿತಾದರೂ ಮಧ್ಯಾಹ್ನ ನಂತರ ಮಳೆ ಬಾರದ ಹಿನ್ನೆಲೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಕಳೆಗಟ್ಟಿತ್ತು.
ರಾಜ್ಯ ಸರ್ಕಾರ ಗ್ರೀನ್ ಪಟಾಕಿ ಹೊಡೆದು ಹಬ್ಬ ಆಚರಿಸಿ ಎಂದು ಆದೇಶ ಮಾಡಿದ್ದರೂ ಕಿವಿಗೆ ಹಾಕಿಕೊಳ್ಳದ ಜನ ಭರ್ಜರಿಯಾಗಿಯೇ ನಿಷೇಧಿತ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.
ಭಾನುವಾರವೂ ಸಹ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲು ಭರ್ಜರಿ ಸಿದ್ದತೆ ಮಾಡಿಕೊಂಡಿದ್ದರು. ಆದರೆ, ಸಂಜೆಯಾಗುತ್ತಿದ್ದಂತೆ ನಗರದಲ್ಲಿ ಭಾರಿ ಮಳೆಯಾದ್ದರಿಂದ ದೀಪಾವಳಿ ಸಂಭ್ರಮಕ್ಕೆ ಅಡ್ಡಿಯಾಗಿದೆ. ಮನೆ ಮುಂದೆ ರಂಗೋಲಿ ಬಿಡಿಸಿ, ದೀಪ ಹಚ್ಚಿ, ಪಟಾಕಿ ಹೊಡೆಯಲು ಸಿದ್ಧತೆ ಮಾಡಿಕೊಂಡಿದ್ದವರಿಗೆ ಮಳೆ ಅಡ್ಡಿಪಡಿಸಿದೆ.
ಭಾನುವಾರವಾದ ಇಂದು ಸಂಜೆ 5 ಗಂಟೆಯಿಂದ ಮಳೆ ಆರಂಭವಾಗಿ ಸತತವಾಗಿ ಒಂದು ಗಂಟೆಯವರೆಗೆ ಸುರಿಯಿತು. ಇದರಿಂದ ವಾಹನ ಸವಾರರು ಪರದಾಟ ನಡೆಸಿದ್ದರೆ, ಸಂಜೆ ನಂತರ ಮನೆಯಿಂದ ಹೊರಗೆ ಹೋಗಲು ಪ್ಲಾನ್ ಹಾಕಿದ್ದವರಿಗೆ ವರುಣ ಬ್ರೇಕ್ ಹಾಕಿದ್ದಾನೆ. ಭಾರಿ ಮಳೆಯ ಪರಿಣಾಮ ಮಳೆಯಲ್ಲಿ ಸಿಲುಕಿಕೊಂಡ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ಭಾರಿ ತೊಂದರೆ ಅನುಭವಿಸಿದರು.
ಭಾರಿ ಮಳೆಯಾದರೂ ಪಟಾಕಿ ಸಿಡಿಸುವವರ ಸಂಖ್ಯೆ ಕಡಿಮೆಯಾಗಲಿಲ್ಲ. ಸಂಜೆ 7 ಗಂಟೆ ನಂತರ ಮಳೆ ಬಿಡುವು ಕೊಟ್ಟಿದ್ದರಿಂದ ಮತ್ತೆ ರಾಜಧಾನಿಯಲ್ಲಿ ಪಟಾಕಿ ಅಬ್ಬರ ಜೋರಾಗಿದೆ.
ದಕ್ಷಿಣ ಒಳನಾಡಿನಲ್ಲಿ ಗುಡುಗು ಮಿಂಚು ಸಹಿತ ಮಳೆಯಾದರೆ ಕರಾವಳಿ ಹಾಗೂ ಉತ್ತರ ಒಳನಾಡಿನಲ್ಲಿ ಒಣಹವೆ ಮುಂದುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಪೆಸಿಪಿಕ್ ಮಹಾಸಾಗರದಲ್ಲಿ `ಎಲ್ ನಿನಾ’ ಏರಿಳಿತದಿಂದ ಚಳಿಯೂ ಹೆಚ್ಚುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.