ತುಮಕೂರು: ರಾಮಕೃಷ್ಣ ಸೇವಾಶ್ರಮ ಪಾವಗಡ, ಇನ್ಫೋಸಿಸ್ ಫೌಂಡೇಷನ್ ಸಹಕಾರದೊಂದಿಗೆ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ `ಸ್ಮಾರ್ಟ್ ಕ್ಲಾಸ್’ ಅಥವಾ ದೂರ ತರಂಗ ಶಿಕ್ಷಣ ಯೋಜನೆಗೆ ಚಾಲನೆ ನೀಡಲಾಯಿತು.

ಈ ವಿನೂತನ ಕಾರ್ಯಕ್ರಮಕ್ಕೆ ಇನ್ಪೋಸಿಸ್ ಸಂಸ್ಥಾಪಕ ಎನ್.ಆರ್.ನಾರಾಯಣ ಮೂರ್ತಿ ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟನೆ ನೆರವೇರಿಸಿದರು.
ಬಹುಶಃ ದೇಶದಲ್ಲಿಯೇ ಪ್ರಪ್ರಥಮವಾಗಿ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ವಿನೂತನ ಕ್ರಾಂತಿಯನ್ನು ಉಂಟು ಮಾಡುವಂತಹ ಕಾರ್ಯಕ್ರಮದ ರೂವಾರಿಯಾದ ಹಾಗೂ ಕಾರ್ಯಕ್ರಮವನ್ನು ರೂಪಿಸಿದ ಮಧುಗಿರಿಯ ರಾಮಕೃಷ್ಣ ಆಶ್ರಮದ ಜಪಾನಂದಜೀ ಅವರು ಮಧುಗಿರಿಯ ಸರ್ಕಾರಿ ಪ್ರೌಢಶಾಲೆಯನ್ನು ವಿನೂತನ ಯೋಜನೆಯ ಚಾಲನೆಗೆ ಆರಿಸಿಕೊಂಡಿದ್ದು ನಿಜಕ್ಕೂ ಒಂದು ಐತಿಹಾಸಿಕ ಕಾರ್ಯಕ್ರಮಕ್ಕೆ ನಾಂದಿಯಾಯಿತು.
ಈ ಕಾರ್ಯಕ್ರಮದ ಹೆಸರನ್ನು ಜಪಾನಂದಜೀ ಸ್ವಾಮೀಜಿ ಅವರೇ ನೀಡಿದಂತೆ `ದೂರ ತರಂಗ ಶಿಕ್ಷಣ’ ಎಂದು ಹೆಸರು ನೀಡಲಾಗಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದರು.

ಇನ್ಪೋಸಿಸ್ ಸಂಸ್ಥಾಪಕ ಎನ್.ಆರ್ ನಾರಾಯಣ ಮೂರ್ತಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿ, ಜಪಾನಂದಜೀ ಸ್ವಾಮೀಜಿ ಕಳೆದ 30 ವರ್ಷಗಳಿಂದ ಗ್ರಾಮಾಂತರ ಪ್ರದೇಶಗಳಲ್ಲಿ, ಅದರಲ್ಲಿಯೂ ನಂಜುಂಡಪ್ಪ ವರದಿಯ ಪ್ರಕಾರ ಅತ್ಯಂತ ಹಿಂದುಳಿದ ಪಾವಗಡ, ಮಧುಗಿರಿ, ಶಿರಾ ಮತ್ತು ಕೊರಟಗೆರೆ ಪ್ರಾಂತ್ಯಗಳಲ್ಲಿ ನಾನಾ ರೀತಿಯ ಸಾಮಾಜಿಕ ಕಾರ್ಯ ಯೋಜನೆಗಳನ್ನು ನಡೆಸುತ್ತಾ ಬರುತ್ತಿರುವುದು ಸುಧಾಮೂರ್ತಿ ಮೂಲಕ ಕೇಳಿದ್ದೇನೆ. ಸ್ವಾಮೀಜಿ ಅವರು ಸಮಾಜಮುಖಿ ಕಾರ್ಯಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿರುವುದು ಸಂತೋಷ ತಂದಿದೆ. ಈ ಯೋಜನೆಯಿಂದ ಸಹಸ್ರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಉಪಯೋಗವಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಇದೇ ಸಂದರ್ಭದಲ್ಲಿ ತಮ್ಮ 62 ವರ್ಷದ ಹಿಂದಿನ ಸಹಪಾಠಿಯಾಗಿದ್ದ ಹಿರಿಯ ಸಾಹಿತಿ ಡಾ.ದೊಡ್ಡರಂಗೇಗೌಡರೊಂದಿಗೆ ಕಳೆದ ದಿನಗಳನ್ನು ನೆನಪಿಸಿಕೊಂಡು ನಾರಾಯಣಮೂರ್ತಿ ಭಾವುಕರಾದರು.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿ, ಶಿಕ್ಷಣ ಇಲಾಖೆಯ ಮಂತ್ರಿ ಎಂದು ತಿಳಿಯದೆ ಈ ರಾಜ್ಯದ ಮಕ್ಕಳ ಪೋಷಕ ಎಂದು ಭಾವಿಸಿದ್ದೇನೆ. ಎನ್,ಆರ್ ನಾರಾಯಣ ಮೂರ್ತಿ ಅವರು ತಮ್ಮ ಪ್ರೌಢಶಿಕ್ಷಣವನ್ನು ಪಡೆದ ಶಾಲೆಯಿಂದಲೇ ದೂರ ತರಂಗ ಶಿಕ್ಷಣಕ್ಕೆ ಚಾಲನೆಗೆ ಆರಿಸಿಕೊಂಡಿರುವುದು ನಿಜಕ್ಕೂ ಮಧುಗಿರಿಯ ಇತಿಹಾಸದಲ್ಲಿಯೇ ಒಂದು ಐತಿಹಾಸಿಕ ಹಾಗೂ ಸ್ಮರಣೀಯ ಕಾರ್ಯಕ್ರಮ ಎನ್ನಬಹುದು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








