ಜಮ್ಮು ಕಾಶ್ಮೀರದ 87ರ ವೃದ್ಧೆ ಖಲೀದಾ ಬೇಗಂ ತನ್ನ ಅಂತ್ಯಕಾಲದಲ್ಲಿ ಹಜ್ ಯಾತ್ರೆಗೆಂದು ಕೂಡಿಟ್ಟುಕೊಂಡಿದ್ದ ಬರೋಬ್ಬರಿ 5 ಲಕ್ಷ ರೂಪಾಯಿಗಳನ್ನು ಕರೋನಾ ಸಂಕಷ್ಟಕ್ಕೆ ದೇಣಿಗೆಯನ್ನಾಗಿ ನೀಡಿದ್ದಾರೆ. ಧಾರ್ಮಿಕ ಪ್ರವೃತ್ತಿಯ ಖಲಿದಾ ಬೇಗಂ ಪ್ರತೀ ವರ್ಷ ಹಜ್ ಯಾತ್ರೆ ಮಾಡುವ ಶ್ರದ್ಧಾವಂತ ಮುಸ್ಲೀಂ ಮಹಿಳೆ, ಈ ಬಾರಿ ಕರೋನಾ ಸಂಕಷ್ಟದ ಕಾರಣ ತನ್ನ ಹಜ್ ಯಾತ್ರೆಯನ್ನು ನಿಲ್ಲಿಸಿ ಆ ಹಣವನ್ನು ಕರೋನಾ ಕಾರಣದಿಂದ ಲಾಕ್ ಡೌನ್ ಆದ ದೇಶದ ಸಂಕಷ್ಟಿತರಿಗೆ ಸಹಾಯ ಮಾಡಲು ನೀಡಿದ್ದಾರೆ.
ಇಲ್ಲಿ ಇಂಟರೆಸ್ಟಿಂಗ್ ಸಂಗತಿ ಅಂದ್ರೆ ಅನಕ್ಷರಸ್ಥೆ ಅಲ್ಲದ ಕಾನ್ವೆಂಟ್ ಕಲಿತ ಸುಶಿಕ್ಷಿತ ಖಲಿದಾ ಬೇಗಂ, ಈ ದೇಣಿಗೆಯನ್ನು ನೀಡಿರುವುದು ಆರ್ ಎಸ್ ಎಸ್ ನ ಅಂಗಸಂಸ್ಥೆಯಾದ ಸೇವಾ ಭಾರತಿಗೆ. ಜಮ್ಮು ಕಾಶ್ಮೀರದ ಮುಸ್ಲೀಂ ಮಹಿಳೆಯರ ಶಿಕ್ಷಣ, ಜೀವನ ಮಟ್ಟ ಸುಧಾರಣೆ ಮತ್ತು ಹಕ್ಕುಗಳಿಗಾಗಿ ಈ ಇಳಿವಯಸ್ಸಿನಲ್ಲಿಯೂ ಹೋರಾಡುವ ಈ ಹಿರಿಜೀವ ಈ ಮೂಲಕ ಅಲ್ಲಾ ಎಲ್ಲೆಡೆ ಇದ್ದಾನೆ. ಬಡವರ ನಿರ್ಗತಿಕರ ಹಾರೈಕೆಯೆ ಅಲ್ಲಾನ ನಿಜವಾದ ಪ್ರಾರ್ಥನೆ ಎಂದು ನಿರೂಪಿಸಿದ್ದಾರೆ.
ಎಲ್ಲಿದೆ ಇಲ್ಲಿ ಧರ್ಮ ಕರ್ಮಟತನ? ಎಲ್ಲಿದೆ ಇಲ್ಲಿ ಡಂಬಾಚಾರದ ಸೈದ್ಧಾಂತಿಕ ಅಂದತ್ವ? ಎಲ್ಲಿದೆ ಇಲ್ಲಿ ಪಂಥ ಭಿನ್ನಾಭಿಪ್ರಾಯ? ಇದಲ್ಲವೇ ಭಾರತೀಯತೆ! ದಯೆಯೇ ಧರ್ಮದ ಮೂಲನೆಲೆ, ತಾಯಿಬೇರು, ಸ್ಥಾಯಿಗುಣ ಅನ್ನೋದನ್ನು ಬರೀ ಮಾತಿನಲ್ಲಿ ಹೇಳುವುದಲ್ಲ ಕಾರ್ಯರೂಪಕ್ಕಿಳಿಸುವುದು ಮುಖ್ಯ. ಆ ತಾಯಿ ಆರ್ ಎಸ್ ಎಸ್ ಗೆ ಯಾಕೆ ದೇಣಿಗೆ ಕೊಟ್ಟರು? ಪಿಎಂ ನಿಧಿಗೋ ಸಿಎಂ ಫಂಡಿಗೋ ಕೊಡಬೇಕಿತ್ತು ಅಂತ ಈಗ ಕ್ಯಾತೆ ತೆಗೆಯೋರ ಬಳಿ ನಾನು ವಾದ ಮಾಡಲಾರೆ.
ನನ್ನ ಅಭಿಪ್ರಾಯ ಇಷ್ಟೆ. ನೀವು ಎಡವೋ ಬಲವೋ ಕಮ್ಯುನಿಷ್ಟರೋ ನೀಲಿಯವರೋ ಹಸಿರಿನವರೋ ಕೆಂಪಿನವರೋ ಕೇಸರಿಯೋ ಮತ್ತೊಂದೋ ಅದು ನಿಮ್ಮ ವೈಯಕ್ತಿಕ ವಿಚಾರ. ನಿಮಗೆಲ್ಲರಿಗೂ ಒಂದು ಸಾಮಾಜಿಕ ರಾಜಕೀಯ ನಿಲುವುಗಳಿರುತ್ತವೆ. ಆದರೆ ಒಂದು ಹಂತದಲ್ಲಿ ಈ ಎಲ್ಲ ಭಿನ್ನಾಭಿಪ್ರಾಯಗಳನ್ನು ಸೈದ್ಧಾಂತಿಕ ವೈರುಧ್ಯಗಳನ್ನು ದಾಟಿ ನಾವೆಲ್ಲ ಮನುಷ್ಯರಾಗಬಹುದಾದ ಅವಕಾಶವನ್ನು ಪ್ರಕೃತಿ ನಮಗೆ ಕರುಣಿಸುತ್ತದೆ. ಈ ಕರೋನಾ ಸಂಕಷ್ಟ ಅಂತದ್ದೇ ಒಂದು ಅವಕಾಶ. ಮೊದಲು ಮಾನವರಾಗೋಣ. ಸಮಾಜ ನಾಡು ದೇಶ ಮತ್ತು ವಿಶ್ವದ ಒಳಿತಿಗಾಗಿ ಎಲ್ಲರೂ ಒಂದಾಗಿ ಪ್ರಾರ್ಥಿಸೋಣ ಸಹಕರಿಸೋಣ ಸಹಭಾಗಿಗಳಾಗೋಣ. ಮನುಷ್ಯನಿಗೆ ಮನುಷ್ಯನೇ ನೆರವಾಗಬೇಕೇ ವಿನಃ ಪರಮಾತ್ಮ ಮತ್ತೊಂದು ಅವತಾರ ಎತ್ತಿ ಬರಲ್ಲ.
ಲಾಸ್ಟ್ ಸಿಪ್: ಎಲ್ಲೋ ಕೆಲವು ಅಂಡೇಪಿರ್ಕಿಗಳು ಧರ್ಮಬ್ರಾಂತಿಯಿಂದ ಕುರುಡಾದವರು ಮಾಡುವ ತಪ್ಪಿಗೆ ನಾವು ಒಂದಿಡೀ ಸಮುದಾಯವನ್ನೇ ದ್ವೇಷಿಸುವ ಹಂತ ತಲುಪುವುದು ಬೇಡ. ನಮ್ಮದು ಸರ್ವಧರ್ಮ ಪೋಷಿತ ಅವಲಂಭಿತ ಪುಣ್ಯ ನೆಲ. ಇಲ್ಲಿ ಎಲ್ಲಾ ಧರ್ಮ ಜಾತಿ ಪಥ ಪಂಥ ಸಿದ್ಧಾಂತ ನಂಬಿಕೆಗಳ ಒಗ್ಗೂಡುವಿಕೆಯಿಂದ ಸಹಬಾಳ್ವೆಯಿಂದ ಸಹಜೀವನ ನಡೆಸಿದ ದೊಡ್ಡ ಇತಿಹಾಸವಿದೆ. ನಾವದಕ್ಕೆ ಚ್ಯುತಿ ತರುವುದು ಬೇಡ. ರಾಜಕಾರಣ ಮರೆತು ಮಾನವರಾಗೋಣ.
-ವಿಭಾ
***








