ಬೆಂಗಳೂರು: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಸಿಎಂ ಬಿ.ಎಸ್ ಯಡಿಯೂರಪ್ಪ, ರಾಜ್ಯದ ಎಲ್ಲಾ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಬಹಿರಂಗ ಪತ್ರ ಬರೆದು ಸಹಕಾರ ಕೋರಿದ್ದಾರೆ. ಮಾತ್ರವಲ್ಲದೆ ಸೋಂಕು ನಿಯಂತ್ರಿಸಲು ಸರ್ಕಾರ ಕೈಗೊಂಡಿರುವ ಹಾಗೂ ಲಾಕ್ಡೌನ್ ಸಂದರ್ಭದಲ್ಲಿ ಜನರ ಸಂಕಷ್ಟ ನೀಗಿಸಲು ಮಾಡಿರುವ ಕೆಲಸ ಕಾರ್ಯಗಳ ಸುದೀರ್ಘ ಪಟ್ಟಿಯನ್ನು ಸಹ ಅವರಿಗೆ ಕಳುಹಿಸಿಕೊಟ್ಟಿದ್ದಾರೆ.
‘ಕೊರೋನಾ ವೈರಾಣು ಇಡೀ ಜಗತ್ತಿನ ಜನ ಸಮೂಹಕ್ಕೆ ಇಂದು ದೊಡ್ಡ ಕುತ್ತಾಗಿ ಪರಿಣಮಿಸಿದೆ. ಜಗತ್ತಿನ ಇತಿಹಾಸದಲ್ಲಿ ನಮ್ಮ ಪೂರ್ವಿಕರೂ ಸಹ ಇಂತಹ ಸೋಂಕನ್ನು ಪರಿಸ್ಥಿತಿಯನ್ನು ಎದುರಿಸಿದ್ದಿಲ್ಲ. ಈ ಸೋಂಕಿನ ಬಗ್ಗೆ ಚೀನಾದಿಂದ ಬಂದ ಸುದ್ದಿಗಳನ್ನು ಕೇಳಿದಾಗ ಜಗತ್ತಿನ ಯಾವುದೇ ದೇಶ ಮತ್ತು ಯಾರೂ ಸಹ ಈ ವೈರಾಣು ನಮ್ಮನ್ನು ಕಂಡು ಕೇಳರಿಯದ ದುರಂತ ಪರಿಸ್ಥಿತಿಗೆ ತಳ್ಳುತ್ತದೆ ಎಂದು ಭಾವಿಸಿರಲಿಲ್ಲ. ಈ ರೋಗದ ಗಂಭೀರತೆ ಬಗ್ಗೆ ಮಾತನಾಡಿದರೆ ಯಾವುದೇ ಪ್ರಯೋಜನವಿಲ್ಲ. ಇದನ್ನು ಅರಿತೇ ನಾವು ಸೋಂಕನ್ನು ತಡೆಗಟ್ಟಲು ಸಮರೋಪಾದಿಯಲ್ಲಿ ಸಜ್ಜಾಗಿ ಕಾರ್ಯಪ್ರವೃತ್ತರಾದೆವು. ದೇಶದಲ್ಲಿ ನಾವೇ ಮೊದಲ ಬಾರಿಗೆ ಲಾಕ್ಡೌನ್ ಮಾಡಲು ನಿರ್ಧರಿಸಿ, ಅದನ್ನು ಜಾರಿ ಮಾಡಿದೆವು. ಅಂದರೆ ಒಂದು ತಿಂಗಳ ಹಿಂದೆ ತೆಗೆದುಕೊಂಡ ನಮ್ಮ ಅಚಲ ನಿರ್ಧಾರ ಇಂದು ನಮಗೆ ರಾಜ್ಯದಲ್ಲಿ ಸೋಂಕನ್ನು ನಿಯಂತ್ರಣದಲ್ಲಿ ಇಡಲು ಸಹಾಯಕವಾಗಿದೆ. ನಮ್ಮ ರಾಜ್ಯವು ತೆಗೆದುಕೊಂಡ ಮುಂಜಾಗೃತಾ ಕ್ರಮಗಳನ್ನು ಬೇರೆ ರಾಜ್ಯಗಳು ಅನುಸರಿಸುತ್ತಿವೆ. ನಾವು ನಮ್ಮ ಕ್ರಮಗಳಬಗ್ಗೆ ಸಮಾಧಾನಪಡದೆ ರೋಗ ನಿರ್ವಹಿಸಲು ಇನ್ನಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ ಎಲ್ಲಾ ನಿಯಮಗಳನ್ನು ಗಮನದಲ್ಲಿಟ್ಟುಕೊಂಡು ಮುಂದುವರಿದಿದ್ದೇವೆ ಎಂದು ಪತ್ರದಲ್ಲಿ ಮುಖ್ಯಮಂತ್ರಿ ತಿಳಿಸಿದ್ದಾರೆ.
ಅಲ್ಲದೆ ಇದೇ ವೇಳೆ ಕೊರೊನಾ ವಾರಿಯರ್ಸ್ ಗೆ ಸಿಎಂ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಈ ಕೆಲಸದಲ್ಲಿ ಸಚಿವರು, ರಾಜ್ಯಮಟ್ಟದ ಅಧಿಕಾರಿಗಳು, ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ವಿಶೇಷವಾಗಿ ವೈದ್ಯಕೀಯ ಇಲಾಖೆಯ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿಗಳು ಮತ್ತು ಪೌರಕಾರ್ಮಿಕರು ಹಗಳಿರುಳು ಕೊರೋನಾ ಸೋಂಕು ಹರಡದಂತೆ ಶ್ರಮಿಸುತ್ತಿದ್ದಾರೆ. ಅವರೆಲ್ಲರಿಗೂ ಈ ಸಂದರ್ಭದಲ್ಲಿ ನಾನು ವಿಶೇಷ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.








