ಸಂಚಾರದ ಹಾದಿಯಲ್ಲಿ ದುರ್ವಿದಿಯ ಆಟಕ್ಕೆ ಬಲಿಯಾದ ನಟ ಸಂಚಾರಿ ವಿಜಯ್
ಹೆಜ್ಜೆ ಹೆಜ್ಜೆಗೂ ದುರ್ಗಮ ಹಾದಿಯಲ್ಲಿ ಸಂಚರಿಸುತ್ತ ತಮ್ಮ ಸಹಜ ನಟನೆಯಿಂದ ಕೀರ್ತಿಯ ಉತ್ತುಂಗಕ್ಕೇರಿದ ನಟ ಸಂಚಾರಿ ವಿಜಯ್. ಇವರ ಮೂಲ ಹೆಸರು ವಿಜಯ್ ಕುಮಾರ್ ಬಿ. ತಂದೆ ಬಸವರಾಜಯ್ಯ ತಾಯಿ ಗೌರಮ್ಮ. ಜುಲೈ 17 , 1983ರಂದು ಜನಿಸಿದ ಇವರು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಗ್ರಾಮದವರು.
ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಂದೆ ತಾಯಿಯನ್ನು ಕಳೆದುಕೊಂಡು ಅನಿರೀಕ್ಷಿತವಾಗಿ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಬಂದ ಸಂಚಾರಿ. ಬಹುಶಃ ಆಗ ತಾನೊಬ್ಬ ನಾಟಕ ರಂಗದಲ್ಲಿ ಮಿಂಚುವ ಮಾಣಿಕ್ಯವಾಗುತ್ತೇನೆ ಎಂದು ಅನಿಸಿರಲಿಲ್ಲವೆನೋ…

ಸಂಚಾರಿ ವಿಜಯ್ ಆಸಕ್ತಿ ಮತ್ತು ಶ್ರದ್ಧೆ ಇದ್ದರೆ ಒಬ್ಬ ವ್ಯಕ್ತಿ ಯಾವ ಮಟ್ಟಕ್ಕೆ ಬೆಳೆಯಬಲ್ಲ ಎನ್ನುವುದಕ್ಕೆ ಉದಾಹರಣೆಯಾಗಿ ನಿಂತವರು.
ಬಿಎಂಎಸ್ ಶಿಕ್ಷಣ ಸಂಸ್ಥೆಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರುವ ಇವರು ಕೆಲ ಕಾಲ ಕೆಐಇಟಿ ಶಿಕ್ಷಣ ಸಂಸ್ಥೆಯಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಬಾಲ್ಯದಿಂದಲೇ ರಂಗಭೂಮಿಯ ಕುರಿತಾಗಿ ಅಪಾರವಾದ ಆಸಕ್ತಿಯನ್ನು ಹೊಂದಿದ್ದ ವಿಜಯ್ ನಂತರ ಉಪನ್ಯಾಸ ವೃತ್ತಿಗೆ ಗುಡ್ ಬೈ ಹೇಳಿ ರಂಗಭೂಮಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ.
ಸಂಚಾರಿ ಥಿಯೇಟರ್ ಜೊತೆ 10 ವರ್ಷಗಳ ನಂಟನ್ನು ಹೊಂದಿದ್ದ ವಿಜಯ್ ರಂಗಭೂಮಿಯಲ್ಲಿ ತಮ್ಮದೇ ಆದ ಛಾಪುನ್ನು ಮೂಡಿಸಲು ಸಫಲರಾಗುತ್ತಾರೆ. ಒಂದೆಡೆ ರಂಗಭೂಮಿಯಲ್ಲಿ ಹೆಸರು ಮಾಡುತ್ತಾ ಇನ್ನೊಂದೆಡೆ ಸಿನಿಮಾಗಳಲ್ಲೂ ನಟಿಸಲು ಪ್ರಾರಂಭಿಸುತ್ತಾರೆ.
ಅದೇ ಸಮಯದಲ್ಲಿ ಕೈಲಾಸಂ ಅವರು ಬರೆದಿದ್ದ ಕೈಲಾಸಂ ಕೀಚಕ ನಾಟಕದಲ್ಲಿ ಸಣ್ಣ ಪಾತ್ರ ಬೃಹನ್ನಳೆಯಾಗಿ ನಟಿಸಲು ಒಪ್ಪಿಕೊಳ್ಳುತ್ತಾರೆ. ಈ ಪಾತ್ರದಲ್ಲಿನ ಅವರ ಅಭಿನಯ ಜನರ ಮನಸ್ಸನ್ನು ಅದೆಷ್ಟರ ಮಟ್ಟಿಗೆ ಸೂರೆಗೊಂಡಿತು ಎಂದರೆ ಅದು ವಿಜಯ್ ಅಲ್ಲ ಬೃಹನ್ನಳೆ ಎಂದು ಭಾವಿಸುವಂತೆ ಅವರ ನಟನೆ ಇತ್ತು.

ಆ ಸಮಯದಲ್ಲಿ ಪುರುಷನೋರ್ವ ಲಿಂಗ ಬದಲಾವಣೆ ಮಾಡಿಸಿಕೊಂಡು ಮಹಿಳೆಯಾಗಿ ಬದಲಾಗಿ ಸಮಾಜದಲ್ಲಿ ಎದುರಿಸುವ ಸಮಸ್ಯೆಗಳ ಸೂಕ್ಷ್ಮ ಅಂಶಗಳ ‘ನಾನು ಅವನಲ್ಲ ಅವಳು’ ಸಿನಿಮಾದ ಪ್ರಮುಖ ಪಾತ್ರಧಾರಿಯ ಹುಡುಕಾಟದಲ್ಲಿ ತೊಡಗಿದ್ದ ಬಿ.ಎಸ್ ಲಿಂಗದೇವರು ಅವರಿಗೆ ಸಂಚಾರಿ ವಿಜಯ್ ಅಭಿನಯಿಸಿದ ಬೃಹನ್ನಳೆ ಪಾತ್ರದ ಬಗ್ಗೆ ತಿಳಿಯುತ್ತದೆ.
2015ರಲ್ಲಿ ತೆರೆಕಂಡ ‘ನಾನು ಅವನಲ್ಲ ಅವಳು’ ಸಿನಿಮಾದಲ್ಲಿನ ತೃತೀಯ ಲಿಂಗಿ ಪಾತ್ರ ವಿಜಯ್ ಅವರ ಸಿನಿಮಾ ಬದುಕಿಗೆ ದೊಡ್ಡ ಬ್ರೇಕ್ ಕೊಡುತ್ತದೆ. ಈ ಪಾತ್ರದಲ್ಲಿನ ಅವರ ನಟನೆಗೆ ರಾಷ್ಟ್ರಪ್ರಶಸ್ತಿ, ರಾಜ್ಯಪ್ರಶಸ್ತಿ ಹಾಗೂ ಫಿಲ್ಮ್ ಫೇರ್ ಕ್ರಿಟಿಕ್ಸ್ ಅವಾರ್ಡ್ನಂಥ ಪ್ರಶಸ್ತಿಗಳು ಒಲಿದುಬರುತ್ತವೆ. ಕನ್ನಡ ಸಿನಿಮಾ ಇತಿಹಾಸದಲ್ಲಿ ರಾಷ್ಟ್ರಪ್ರಶಸ್ತಿ ಪಡೆದ ಮೂರನೇ ನಟ ಎಂಬ ಖ್ಯಾತಿಗೆ ಪಾತ್ರರಾಗುತ್ತಾರೆ.

ಕನ್ನಡ ಸಿನಿಮಾ ಇತಿಹಾಸದಲ್ಲಿ ಈ ಮೊದಲು 1975 ರಲ್ಲಿ ಚೋಮನದುಡಿಯಲ್ಲಿ ಚೋಮ ಪಾತ್ರದ ಅಭಿನಯಕ್ಕಾಗಿ ಮೂಡಬಿದಿರೆ ವೆಂಕಟರಾವ್ ವಾಸುದೇವರಾವ್ ಪ್ರಥಮ ರಾಷ್ಟ್ರಪ್ರಶಸ್ತಿ ಪಡೆದಿದ್ದರೆ, ಎರಡನೇ ರಾಷ್ಟ್ರಪ್ರಶಸ್ತಿ 1986ರಲ್ಲಿ ತಬರನ ಕಥೆ ಸಿನಿಮಾದಲ್ಲಿನ ಪ್ರಮುಖ ಪಾತ್ರ ಅಭಿನಯಕ್ಕಾಗಿ ಚಾರುಹಾಸನ್ ಅವರಿಗೆ ಸಂದಿದೆ.
ಮನೋಜ್ಞ ಅಭಿನಯದ ಜೊತೆಗೆ ಸಾಮಾಜಿಕ ಕಳಕಳಿಯುಳ್ಳ ನಟನಾಗಿದ್ದ ವಿಜಯ್ ತಮ್ಮನ್ನು ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದರು. ಕೆಲವು ವರ್ಷಗಳ ಹಿಂದೆ ಕೊಡಗು ಭೀಕರ ಪ್ರವಾಹಕ್ಕೆ ಈಡಾದಾಗ ತಾವೇ ಸ್ವತಃ ಫಿಲ್ಡ್ಗಿಳಿದು ಕೆಲಸ ಮಾಡಿದ್ದರು. ಕಳೆದೆರೆಡು ವರ್ಷಗಳಿಂದ ಜನರ ಬದುಕನ್ನು ಹೈರಾಣಾಗಿಸಿರುವ ಕೊರೋನಾ ಸೋಂಕಿನಿಂದ ಸಂಕಷ್ಟಕೊಳಗಾದವರ ನೆರವಿಗೆ ನಿಂತಿದ್ದರು. ಉಸಿರು ಎಂಬ ಸಂಘ ಕಟ್ಟಿ ಕೊರೋನಾ ಸೋಂಕಿತರಿಗೆ ಅಮ್ಲಜನಕ ಸಾಂದ್ರಕವನ್ನು ಪೂರೈಸುತ್ತಿದ್ದರು.

ವಿಭಿನ್ನ ಪಾತ್ರಗಳ ಮೂಲಕ ಕನ್ನಡಿಗರ ಮನಗೆದ್ದ ನಟ ಸಂಚಾರಿ ವಿಜಯ್ ಜೂನ್ 12 ರ ರಾತ್ರಿಯಂದು ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಕಲಾ ಜೀವನಕ್ಕೆ ಶಾಶ್ವತವಾದ ತೆರೆ ಎಳೆದು ಸಂಚಾರವನ್ನು ಮುಗಿಸಿದ್ದಾರೆ.
ಜೀವಿತಾವಧಿಯಲ್ಲಿ ಇತರರಿಗೆ ಸಹಾಯ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಸಂಚಾರಿ ವಿಜಯ್ ಅಂಗಾಂಗಗಳನ್ನು ದಾನಮಾಡಿ ಹಲವಾರು ಜನರ ಬಾಳಿಗೆ ಬೆಳಕು ನೀಡಿದ್ದಾರೆ. ಜೊತೆಗೆ ಪ್ರತಿಯೊಬ್ಬ ಬೈಕ್ ಸವಾರರಿಗೆ, ಹಿಂಬದಿ ಸವಾರರಿಗೆ ಸಂಚಾರ ಮಾಡುವಾಗ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಸಂಚಾರಿ ನಿಯಮಗಳನ್ನು ಪಾಲಿಸಿ ಎಂಬ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
ಭೌತಿಕವಾಗಿ ನಮ್ಮಿಂದ ದೂರವಾದರೂ ಅಂಗದಾನ ಮಾಡಿ ಸದಾ ನಮ್ಮೊಡನೆ ಸಂಚರಿಸುವ ಸಂಚಾರಿ ವಿಜಯ್ ಅವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ.
#Kannadaactor #SanchariVijay








