ನವದೆಹಲಿ: ಕೊರೊನಾ ಸೋಂಕನ್ನು ನಿಯಂತ್ರಿಸಲು ಮೇ ಮೂರರ ವರೆಗೆ ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಏಪ್ರಿಲ್ 27 ಸೋಮವಾರದಂದು ದೇಶದ ಎಲ್ಲ ಸಿಎಂಗಳ ಜೊತೆ ನಾಲ್ಕನೇ ಬಾರಿಗೆ ಮಹತ್ವದ ಚರ್ಚೆ ನಡೆಸಲಿದ್ದಾರೆ.
ಇದು ನಾಲ್ಕನೇ ಸುತ್ತಿನ ಮಾತುಕತೆ..!
ಪ್ರಧಾನಿ ನರೇಂದ್ರ ಮೋದಿ ಲಾಕ್ ಡೌನ್ ಆದೇಶ ನೀಡುವುದಕ್ಕಿಂತ ಮೊದಲು ಹಾಗೂ ಲಾಕ್ ಡೌನ್ ವಿಸ್ತರಿಸುವುದಕ್ಕಿಂತ ಮುನ್ನ ವಿಡಿಯೋ ಕಾನ್ಫರೆನ್ಸ್ ನಲ್ಲಿ ದೇಶದ ಎಲ್ಲಾ ಮುಖ್ಯಮಂತ್ರಿಗಳ ಅಭಿಪ್ರಾಯ ಪಡೆದಿದ್ದರು. ಮಾರ್ಚ್ 20ರಂದು ಮೊದಲ ಸುತ್ತಿನ ವಿಡಿಯೋ ಕಾನ್ಫರೆನ್ಸ್ ಮೋದಿ ನಡೆಸಿದ್ದರು. ಇದಾದ ಎರಡೇ ದಿನದಲ್ಲಿ ಜನತಾ ಕರ್ಫ್ಯೂ ಘೋಷಿಸಿದ್ದರು. ಬಳಿಕ ಲಾಕ್ ಡೌನ್ ವಿಧಿಸಿದ ನಂತರ ರಾಜ್ಯಗಳಲ್ಲಿ ಏನಾಗ್ತಿದೆ ಅನ್ನೋದನ್ನ ಚರ್ಚಿಸುವ ಸಲುವಾಗಿ ಏಪ್ರಿಲ್ 2ರಂದು ಮತ್ತೊಮ್ಮೆ ಎಲ್ಲಾ ರಾಜ್ಯಗಳ ಸಿಎಂ ಜೊತೆ ಮೋದಿ ಚರ್ಚೆ ನಡೆಸಿದ್ದರು. ಇನ್ನು, ಎರಡನೇ ಹಂತದ ಲಾಕ್ ಡೌನ್ ವಿಧಿಸೋದಕ್ಕೂ ಮುನ್ನ ಏಪ್ರಿಲ್ 11 ರಂದು ಎಲ್ಲಾ ರಾಜ್ಯಗಳ ಸಿಎಂ ಜೊತೆಗೆ ವಿಡಿಯೋ ಸಂವಾದ ನಡೆಸಿದ್ದರು.
ಮೇ 3ರಂದು ಎರಡನೇ ಹಂತದ ಲಾಕ್ ಡೌನ್ ಅವಧಿ ಅಂತ್ಯವಾಗಲಿದೆ. ಈ ಅವಧಿ ಮುಕ್ತಾಯಗೊಳ್ಳುವ ಸರಿಯಾಗಿ ಒಂದು ವಾರದ ಮುನ್ನ ಎಲ್ಲಾ ರಾಜ್ಯದ ಸಿಎಂಗಳೊಂದಿಗೆ ಪ್ರಧಾನಿ ಮೋದಿ ನಡೆಸುತ್ತಿರುವ ಈ ವಿಡಿಯೋ ಕಾನ್ಫರೆನ್ಸ್ ಮಹತ್ವ ಪಡೆದುಕೊಂಡಿದೆ.








