ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಗ್ಗೆ 11 ಗಂಟೆಗೆ ದೇಶ ಮತ್ತು ವಿದೇಶಗಳಲ್ಲಿರುವ ಭಾರತೀಯರನ್ನು ಉದ್ದೇಶಿಸಿ 64ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿ ದೇಶದ ಪ್ರತಿಯೊಬ್ಬ ಪ್ರಜೆಯೂ ಕೊರೊನಾ ವೈರಸ್ ತೊಲಗಿಸಲು ದೇಶ ಸಾರಿರುವ ಯುದ್ಧದಲ್ಲಿ ಸೈನಿಕ ಎಂದು ಹೇಳಿದರು.
ದೇಶದ ಜನತೆ ಕೊರೊನಾ ವೈರಸ್ ವಿರುದ್ಧ ಸರ್ಕಾರದ ಜೊತೆ ಕೈಜೋಡಿಸಿ ಹೋರಾಡುತ್ತಿರುವುದನ್ನು ಶ್ಲಾಘಿಸಿದ ಪ್ರಧಾನಿ ಮೋದಿ ದೇಶದ ಪ್ರತಿಯೊಬ್ಬರೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದಾರೆ. ಹಾಗಾಗಿ ಕೊರೊನಾ ವಿರುದ್ಧ ಸಾರಿರುವ ಯುದ್ಧದಲ್ಲಿ ಹೋರಾಡುತ್ತಿರುವ ಪ್ರತಿಯೊಬ್ಬ ನಾಗರಿಕನೂ ಸೈನಿಕನೇ ಎಂದು ಪ್ರಧಾನಿ ಹೇಳಿದರು.
ರೈಲ್ವೆ ಸಂಸ್ಥೆಗಳು, ವಿಮಾನ ಸಂಸ್ಥೆಗಳು ಔಷಧಗಳನ್ನು ದೇಶದ ಮೂಲೆ ಮೂಲೆಗೆ ತಲುಪಿಸುವ ಕೆಲಸ ಮಾಡುತ್ತಿವೆ. ಮಾಸ್ಕ್ ಧರಿಸಿದ್ದಾರೆ ಎಂದರೆ ಅವರು ಅಸ್ವಸ್ಥರು ಎಂದು ಅರ್ಥವಲ್ಲ. ಸೋಂಕಿನಿಂದ ದೂರ ಉಳಿಯಲು ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯದ ಹಿತ ದೃಷ್ಟಿಯಿಂದ ಮಾಸ್ಕ್ ಧರಿಸುವುದು ಒಳ್ಳೆಯದು ಎಂದು ಮೋದಿ ಹೇಳಿದರು. ಹಾಗೆಯೇ ಎಲ್ಲೆಂದರಲ್ಲಿ ಉಗುಳಬೇಡಿ, ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದು ತಪ್ಪು ಎಂದು ಗೊತ್ತಿದ್ದರು ಕೆಲವರು ಅದೇ ತಪ್ಪನ್ನು ಮಾಡುತ್ತಿದ್ದಾರೆ. ದಯವಿಟ್ಟು ಎಲ್ಲೆಂದರಲ್ಲಿ ಉಗುಳಬೇಡಿ, ಸ್ವಚ್ಛತೆ ಕಾಪಾಡಿಕೊಳ್ಳಿ. ಈ ಮೂಲಕ ಸೋಂಕು ಹರಡುವುದನ್ನು ನಾವು ತಡೆಗಟ್ಟೋಣ ಎಂದು ಜನರಲ್ಲಿ ಮನವಿ ಮಾಡಿದರು.
ಇಂದು ಸಮಾಜ ಬದಲಾಗುತ್ತಿದೆ. ಪೊಲೀಸರ ಬಗ್ಗೆ ನಮಗೆ ಇದ್ದ ಅಭಿಪ್ರಾಯ ಕೂಡ ಬದಲಾಗುತ್ತಿದೆ. ಕೊರೊನಾ ವಾರಿರ್ಯಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಬಹಳಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈ ಬದಲಾವಣೆ ದೊಡ್ಡ ಪ್ರಮಾಣದಲ್ಲಿ ಪ್ರಭಾವ ಬೀರಲಿದೆ ಎಂದ ಅವರು ದೇಶದ ಹಲವೆಡೆ ಪೌರ ಕಾರ್ಮಿಕರ ಮೇಲೆ ಹೂವಿನ ಮಳೆಗೈದು ಜನರು ಧನ್ಯವಾದ ಸಲ್ಲಿಸಿದ್ದಾರೆ. ಈ ಮೊದಲು ಅವರ ಶ್ರಮವನ್ನು ಗಮನಿಸಿದ ಜನರು ಈಗ ಅವರ ಶ್ರಮ ಮತ್ತು ಕೆಲಸಕ್ಕೆ ಮೆಚ್ಚುಗೆ ಸೂಚಿಸಿ, ಈ ಸಂಕಷ್ಟದ ಪರಿಸ್ಥಿತಿಯಲ್ಲೂ ಸಾರ್ವಜನಿಕರಿಗಾಗಿ ಕೆಲಸ ಮಾಡುತ್ತಿರುವುದಕ್ಕೆ ಧನ್ಯವಾದ ಅರ್ಪಿಸುತ್ತಿದ್ದಾರೆ ಎಂದು ಹೇಳಿದರು.
ದೇಶ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ನರ್ಸ್ ಗಳು, ವೈದ್ಯರು, ಇತರ ವೈದ್ಯಕೀಯ ಸಿಬ್ಬಂದಿಗಳು, ಪೊಲೀಸರು ನಮಗಾಗಿ ಸೇವೆಸಲ್ಲಿಸುತ್ತಿದ್ದಾರೆ. ನಾವು ಕೂಡ ಅವರನ್ನು ಗೌರವಿಸಬೇಕು. ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ. ಹಾಗೆ ನಮ್ಮ ರೈತರನ್ನು ಉಪವಾಸವಿರಲು ನಮ್ಮ ದೇಶದ ಜನರು ಯಾವತ್ತೂ ಬಿಡುವುದಿಲ್ಲ ಎಂಬ ನಂಬಿಕೆ ನನಗಿದೆ ಎಂದು ಪ್ರಧಾನಿ ಹೇಳಿದರು. ಬಹಳಷ್ಟು ಮಂದಿ ಹಿರಿಯ ನಾಗರಿಕರು ತಮ್ಮ ಸಂಪೂರ್ಣ ಪಿಂಚಣಿ ಹಣವನ್ನು ಪಿಎಂ ಪರಿಹಾರ ನಿಧಿಗೆ ನೀಡಿ ಕೊರೊನಾ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಬಡವರಿಗೆ ಹಂಚಲು ಬಹಳಷ್ಟು ಮಂದಿ ರೈತರು ಸರ್ಕಾರಕ್ಕೆ ಉಚಿತ ತರಕಾರಿಗಳನ್ನು ನೀಡುತ್ತಿದ್ದಾರೆ. ಹಲವಾರು ಮಂದಿ ಉಚಿತ ಮಾಸ್ಕ್ ಗಳನ್ನು ಬಡಜನರಿಗೆ ವಿತರಿಸುತ್ತಿದ್ದಾರೆ. ಈ ರೀತಿಯಲ್ಲಿ ಎಲ್ಲರೂ ಕೊರೊನಾ ತಡೆಗಟ್ಟಲು ಸರ್ಕಾರದ ಜೊತೆ ಕೈಜೋಡಿಸಿ ಹೋರಾಡುತ್ತಿದ್ದಾರೆ ಎಂದು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಬೇರೆ ಬೇರೆ ದೇಶಗಳಿಗೆ ಅಗತ್ಯವಿದ್ದ ಔಷಧಗಳನ್ನು ಭಾರತ ಪೂರೈಕೆ ಮಾಡಿರುವುದನ್ನು ಮನ್ ಕಿ ಬಾತ್ ನಲ್ಲಿ ಉಲ್ಲೇಖಿಸಿದ ಪ್ರಧಾನಿ ಸಾಕಷ್ಟು ರಾಷ್ಟ್ರಗಳು ನಮ್ಮ ಸಹಾಯಕ್ಕೆ ಧನ್ಯವಾದ ಅರ್ಪಿಸಿವೆ ಎಂದರು. ಬೇರೆ ರಾಷ್ಟ್ರಗಳು ಭಾರತಕ್ಕೆ, ಭಾರತೀಯರಿಗೆ ಧನ್ಯವಾದ ಹೇಳಿದಾಗ ನನಗೆ ಹೆಮ್ಮೆ ಆಗುತ್ತದೆ ಎಂದ ಮೋದಿ ಭಾರತ ತನ್ನ ಜನತೆಯ ಹಿತಕ್ಕಾಗಿ ಭೂಮಿಯನ್ನು ಆರೋಗ್ಯಕರವಾಗಿಸಲು ಶ್ರಮಿಸುತ್ತಿರುವುದು ಹೆಮ್ಮೆಯ ವಿಚಾರ ಎಂದು ಸಂತೋಷವನ್ನು ವ್ಯಕ್ತಪಡಿಸಿದರು.
ಇತ್ತೀಚೆಗೆ ಆರಂಭಗೊಂಡಿರುವ coronawarriors.gov.in ಎಂಬ ಪೋರ್ಟಲ್ ಮೂಲಕ ಈಗಾಗಲೇ 1.25 ಕೋಟಿ ಜನರು ಸಂಪರ್ಕ ಹೊಂದಿದ್ದು, ಸಾಮಾಜಿಕ ಸಂಘಟನೆಯ ಕಾರ್ಯಕರ್ತರು, ನಾಗರಿಕ ಸಮಾಜ ಮತ್ತು ಸ್ಥಳೀಯ ಆಡಳಿತ ಅಧಿಕಾರಿಗಳು ಇದರ ಮೂಲಕ ಸಂಪರ್ಕಿಸಬಹುದು. ಈ ಮೂಲಕ ನೀವು ಕೊರೋನಾ ವಾರಿಯರ್ಸ್ ಆಗಬಹುದು ಎಂದು ಮೋದಿ ಹೇಳಿದರು.
ಕೊರೋನಾ ಸೋಂಕಿನಿಂದ ಈ ವರ್ಷ ಅಕ್ಷಯ ತೃತೀಯವನ್ನು ಆಚರಿಸಲು ಸಾಧ್ಯವಾಗದಿದ್ದರೂ ನಮಗೆ ವಿಶೇಷ ಮಹತ್ವವನ್ನು ಹೊಂದಿದೆ. ಹಾಗೆಯೇ ಮುಸ್ಲಿಂ ಬಾಂಧವರ ರಂಜಾನ್ ಆಚರಣೆ ಸಮಯದಲ್ಲಿ ಇಷ್ಟೊಂದು ತೊಂದರೆಗಳು ಬರಬಹುದು ಎಂದು ಯಾರೂ ಕೂಡ ಭಾವಿಸಿರಲಿಲ್ಲ. ಈದ್ ಆಚರಣೆ ಸಮಯದ ವೇಳೆ ನಾವು ಕೊರೊನಾ ಮುಕ್ತರಾಗೋಣ ಎಂದು ಪ್ರಾರ್ಥಿಸೋಣ ಎಂದು ಪ್ರಧಾನಿ ಮೋದಿ ಹೇಳಿದರು.








