ಹೈದರಾಬಾದ್ : ಸತತ ಎರಡು ಪಂದ್ಯಗಳಲ್ಲಿ ಸೋಲು ಕಂಡಿರುವ ಹೈದರಾಬಾದ್ ತಂಡವು ಇಂದು ಶಿಖರ್ ಧವನ್ ಸಾರಥ್ಯದ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಾಗಿದೆ.
ಬಲಿಷ್ಠ ಕೆಕೆಆರ್ ಹಾಗೂ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದಿರುವ ಪಂಜಾಬ್ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದೆ. ಶಿಖರ್ ಧವನ್ ಮತ್ತು ಪ್ರಭಸಿಮ್ರನ್ ಸಿಂಗ್ ಅವರ ಸ್ಫೋಟಕ ಆರಂಭದ ಬಲದಿಂದ ಆಡಿರುವ 2 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್, 190ಕ್ಕೂ ಹೆಚ್ಚು ರನ್ ಗಳಿಸಿದೆ. ಭಾನುಕ ರಾಜಪಾಕ್ಷ, ಜಿತೇಶ್ ಶರ್ಮಾ ಕೂಡ ಶ್ರೇಷ್ಠ ಲಯದಲ್ಲಿದ್ದಾರೆ. ಬೌಲಿಂಗ್ ಆಲ್ ರೌಂಡರ್ಗಳಾದ ಸ್ಯಾಮ್ ಕರನ್, ಸಿಕಂದರ್ ರಾಜಾ ಅವರ ಬ್ಯಾಟ್ ಸದ್ದು ಮಾಡುತ್ತಿಲ್ಲ. ಬೌಲಿಂಗ್ನಲ್ಲಿ ಯುವ ಬೌಲರ್ ಗಳು ಭರ್ಜರಿ ಫಾರ್ಮ್ ನಲ್ಲಿದ್ದಾರೆ.
ಲಖನೌ ಸೂಪರ್ ಜಯಂಟ್ಸ್ ಹಾಗೂ ರಾಜಸ್ಥಾನ್ ವಿರುದ್ಧದ ಪಂದ್ಯಗಳಲ್ಲಿ ಹೈದ್ರಾಬಾದ್ ತಂಡವು ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗಗಳಲ್ಲಿ ವೈಫಲ್ಯ ಅನುಭವಿಸಿದೆ. ಹೀಗಾಗಿ ಆರಂಭದ ಎರಡು ಪಂದ್ಯಗಳಲ್ಲಿಯೂ ಸೋಲು ಕಂಡಿದೆ. ಬ್ಯಾಟಿಂಗ್ನಲ್ಲಿ ಬ್ಯಾಕ್ ಟು ಬ್ಯಾಕ್ ವೈಫಲ್ಯ ಅನುಭವಿಸಿದ್ದು, ಎರಡೂ ಇನಿಂಗ್ಸ್ ನಲ್ಲಿ 131 ಮತ್ತು 121 ರನ್ ಕಲೆ ಹಾಕಲಷ್ಟೇ ಶಕ್ತವಾಗಿದೆ. ಮೊದಲ ಪಂದ್ಯದಲ್ಲಿ ಬೌಲರ್ ಗಳು ದುಬಾರಿ ಆಗಿ 200ಕ್ಕೂ ಹೆಚ್ಚು ರನ್ ಬಿಟ್ಟುಕೊಟ್ಟಿದ್ದರೂ, ಜಯಂಟ್ಸ್ ವಿರುದ್ಧದ ಪಂದ್ಯದಲ್ಲಿ ಉತ್ತಮ ಲಯ ಪ್ರದರ್ಶಿಸಿದ್ದರು.
ಪಂಜಾಬ್ ಕಿಂಗ್ಸ್ ವಿರುದ್ಧವೂ ಉತ್ತಮ ಲಯ ಕಂಡುಕೊಂಡರೆ, ಹೈದರಾಬಾದ್ ತಂಡವು ಪಂಜಾಬ್ ವಿರುದ್ಧ ಗೆಲುವು ಸಾಧಿಸಬಹುದು. ಹೈದರಾಬಾದ್ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಚೇಸಿಂಗ್ ಮಾಡಿದ ತಂಡಗಳೇ ಹೆಚ್ಚು ಯಶಸ್ಸು ಕಂಡಿವೆ. ಆದರೆ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿದ್ದು, ಮೊದಲು ಬ್ಯಾಟ್ ಮಾಡಿದ್ದ ರಾಯಲ್ಸ್ 203/5 ರನ್ ಗಳಿಸಿ 72 ರನ್ಗಳ ಜಯ ದಾಖಲಿಸಿತ್ತು. ಬ್ಯಾಟಿಂಗ್ ಸ್ನೇಹಿ ಪಿಚ್ ಇದಾಗಿದ್ದು, ಟಾಸ್ ಗೆದ್ದ ನಾಯಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿ ದೊಡ್ಡ ಮೊತ್ತ ಗಳಿಸಿದರೆ ಎದುರಾಳಿ ಬೌಲರ್ಗಳ ಮೇಲೆ ಹಿಡಿತ ಸಾಧಿಸಿ ಗೆಲುವು ದಕ್ಕಿಸಿಕೊಳ್ಳಬಹುದು ಎಂಬುವುದು ಕ್ರಿಕೆಟ್ ತಜ್ಞರ ಅಭಿಮತವಾಗಿದೆ.








