ಶಿವಮೊಗ್ಗ: ನೀರಿದ್ದ ಗುಂಡಿಗೆ ಬಿದ್ದು ಬಾಲಕಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಕೋಟೆಗಂಗೂರಿನಲ್ಲಿ ನಡೆದಿದೆ. ರೈಲ್ವೆ (Indian Railway) ಕಾಮಗಾರಿಗಾಗಿ ರಸ್ತೆಯ ಮಧ್ಯ ಗುಂಡಿ ತೆಗೆಯಲಾಗಿದ್ದು, ಈ ಗುಂಡಿಯಲ್ಲಿ ಬಾಲಕಿ ಬಿದ್ದು ಸಾವನ್ನಪ್ಪಿದ್ದಾಳೆ.
ಚೈತ್ರಾ ಸಾವನ್ನಪ್ಪಿದ ದುರ್ದೈವ ಬಾಲಕಿ. ಈ ಬಾಲಕಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಳು. ಸಂಜೆಯ ವೇಳೆ ಶಾಲೆಯಿಂದ ಬಾಲಕಿ ಮನೆಗೆ ಬರುತ್ತಿದ್ದಳು. ಈ ಸಂದರ್ಭದಲ್ಲಿ ಪೋಷಕರು ಮನೆಗೆ ಬೀಗ ಹಾಕಿಕೊಂಡು ಹೊಲದಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಬಾಲಕಿ ಕೂಡ ಹೊಲಕ್ಕೆ ಹೋಗಿ ಮನೆಯ ಬೀಗ ತೆಗೆದುಕೊಂಡು ಬರುವುದಕ್ಕೆ ಹೋಗಿದ್ದಳು. ಹೀಗೆ ಬೀಗ ಪಡೆದು ಮರಳಿ ಬರುತ್ತಿದ್ದಾಗ ರೈಲ್ವೆ ಟರ್ಮಿನಲ್ ನಿರ್ಮಾಣಕ್ಕಾಗಿ ತೆಗೆದಿದ್ದ ಗುಂಡಿಯಲ್ಲಿ ಬಿದ್ದಿದ್ದಾಳೆ.
ಆಗ ಬಾಲಕಿಗೆ ಮೇಲೆ ಬರಲು ಸಾಧ್ಯವಾಗಿಲ್ಲ. ಹೀಗಾಗಿ ಬಾಲಕಿ ಅಲ್ಲಿಯೇ ಸಾವನ್ನಪ್ಪಿದ್ದಾಳೆ. ನಂತರ ಮನೆಗೆ ಬಂದ ಪಾಲಕರು ಬಾಲಕಿಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಚೈತ್ರಾ ಗುಂಡಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ರಸ್ತೆಯ ಮಧ್ಯೆ ಗುಂಡಿ ತೆಗೆದು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ಸ್ಥಳೀಯರು ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಂಡು, ಪರಿಹಾರ ನೀಡಬೇಕೆಂದು ಮನವಿ ಮಾಡಿದ್ದಾರೆ.