ಹನಿಟ್ರ್ಯಾಪ್ ಸುಳಿಗೆ ಸಿಲುಕಿದ ಉದ್ಯಮಿ – 50 ಲಕ್ಷ ಕಳೆದುಕೊಂಡ ಚಿನ್ನದ ವ್ಯಾಪಾರಿ…
ಮಂಡ್ಯ: ಹನಿಟ್ರ್ಯಾಪ್ ಸುಳಿಯಲ್ಲಿ ಸಿಲುಕಿದ ಪ್ರತಿಷ್ಠಿತ ಚಿನ್ನದ ವ್ಯಾಪಾರಿಯೊಬ್ಬರು 50 ಲಕ್ಷ ರುಪಾಯಿ ಕಳೆದುಕೊಂಡಿದ್ದಾರೆ. ಈ ಸಂಬಂಧ ಚಿನ್ನದ ವ್ಯಾಪಾರಿ ಜಗನ್ನಾಥ್ ಶೆಟ್ಟಿ ಅವರು ಪೊಲೀಸ್ ಠಾಣೇಗೆ ದೂರು ನೀಡಿದ್ದಾರೆ. ಫೆಬ್ರವರಿ 26 ರಂದು ಮೈಸೂರಿನಲ್ಲಿ ಈ ಕೃತ್ಯ ನಡೆದಿದೆ 6 ತಿಂಗಳ ಬಳಿಕ ಉದ್ಯಮಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಮಂಗಳೂರಿಗೆ ತೆರಳಲು ಆ ದಿನ ರಾತ್ರಿ ಮಂಡ್ಯದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ಜಗನ್ನಾಥ್ ಶೆಟ್ಟಿ ಅವರನ್ನ ಮೈಸೂರಿಗೆ ಡ್ರಾಪ್ ಕೊಡೋದಾಗಿ ನಾಲ್ವರು ಕಾರಿನಲ್ಲಿ ಕರೆದೊಯ್ದಿದ್ದಾರೆ. ಡ್ರಾಪ್ ಕೊಡುವ ನೆಪದಲ್ಲಿ ಕಿಡ್ನಾಪ್ ಮಾಡಿ ಲಾಡ್ಜ್ ಗೆ ಕರೆದೋಯ್ದು ಯುವತಿ ಬಿಟ್ಟು ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಬಳಿಕ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಖತರ್ನಾಕ್ ಗ್ಯಾಂಗ್ ಆರಂಭದಲ್ಲಿ 4 ಕೋಟಿಗೆ ಬೇಡಿಕೆ ಇಟ್ಟಿದೆ. ಆನಂತರ 50 ಲಕ್ಷ ವಸೂಲಿ ಮಾಡಿದೆ. 50 ಲಕ್ಷ ಹಣ ಕೊಟ್ಟು ಹೊರ ಬಂದ ಬಳಿಕ ಹಣಕ್ಕಾಗಿ ಗ್ಯಾಂಗ್ ಮತ್ತೆ ಬೇಡಿಕೆ ಇಟ್ಟಿದ್ದಲ್ಲದೇ, ಕೊಲೆ ಮಾಡುವುದಾಗಿ ಬೆದರಿಕೆಯೊಡ್ಡಿದೆ. ಇದರಿಂದ ಬೇಸತ್ತ ಜಗನ್ನಾಥ್ ಶೆಟ್ಟಿ ಅವರು 6 ತಿಂಗಳ ಬಳಿಕ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಆರೋಪಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. ದೂರಿನ ಆಧಾರದ ಮೇರೆಗೆ ಸಮಾಜ ಸೇವೆ, ಮಾನವ ಹಕ್ಕು ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಸಲ್ಮಾಬಾನು ಎಂಬಾಕಯನ್ನು ಪಶ್ಚಿಮ ಠಾಣೆ ಪೊಲೀಸರು ಬಂಧಿಸಿದ್ದಾರೆ.