ವಿಜಯನಗರ: ಇತ್ತೀಚೆಗೆ ರಾಜ್ಯದಲ್ಲಿ ಚಿರತೆಗಳ ಹಾವಳಿ ಹೆಚ್ಚಾಗುತ್ತಿದ್ದು, ಆಹಾರಕ್ಕಾಗಿ ಕಾಡು ಬಿಟ್ಟು ನಾಡಿಗೆ ಬಂದು ಜನ – ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಇಂತಹುದೇ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ಹೊಸಪೇಟೆ ತಾಲೂಕಿನ ರಾಯರಕೇರೆ ಎಂಬ ಪ್ರದೇಶದಲ್ಲಿ ದನಕರುಗಳ ಮೇಲೆ ಚಿರತೆ ದಾಳಿ ನಡೆಸಿದೆ. ಹೊಲದಲ್ಲಿ ದನಕರುಗಳು ಮೇಯುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕಟಗಿ ವಸಂತಪ್ಪ ಎಂಬುವವರಿಗೆ ಸೇರಿದ ಹಸುಗಳ ಮೇಲೆಯೇ ಚಿರತೆ ದಾಳಿ ನಡೆಸಿದೆ ಎನ್ನಲಾಗಿದೆ.
ಈ ಚಿರತೆ ಕಳೆದ ಕೆಲವು ದಿನಗಳಿಂದಲೂ ಈ ಭಾಗದ ಜನರ ನಿದ್ದೆಗೆಡಿಸಿ ಆತಂಕಕ್ಕೆ ಕಾರಣವಾಗಿತ್ತು. ಕಳೆದ ಕೆಲವು ದಿನಗಳಿಂದ ಕುರಿ, ನಾಯಿಗಳನ್ನು ಕೂಡ ಇದು ಹೊತ್ತೊಯ್ದಿತ್ತು. ಹೀಗಾಗಿ ಜನರು ಆತಂಕದಲ್ಲಿಯೇ ದಿನಗಳನ್ನು ದೂಡುತ್ತಿದ್ದರು. ಆದರೆ, ಈಗ ಮತ್ತೆ ದಾಳಿ ನಡೆಸಿದ್ದು, ಜನರು ಭಯಭೀತರಾಗಿ, ಹೊಲಕ್ಕೆ ಹೋಗಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಕೂಡಲೇ ಚಿರತೆಯನ್ನು ಸೆರೆ ಹಿಡಿಯಬೇಕು ಎಂದು ಸಾರ್ವಜನಿಕರು, ಅರಣ್ಯ ಇಲಾಖೆ ಸಿಬ್ಬಂದಿಗೆ ಮನವಿ ಮಾಡುತ್ತಿದ್ದಾರೆ.