ಬೆಳಗಾವಿ:ದೇಶದ ವಿವಿಧ ಅಭಯಾರಣ್ಯಗಳಲ್ಲಿ ಹುಲಿಗಳನ್ನು(tiger )ಬೇಟೆಯಾಡಿ ದೇಹದ ಭಾಗಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬೆಳಗಾವಿ( Belagavi) ಖಾನಾಪುರ ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಬಂಧಿಸಿದ್ದಾರೆ.
ಬಂಧಿತನನ್ನು ಮಧ್ಯಪ್ರದೇಶ ರಾಜ್ಯದ ದಾಮೋ ಜಿಲ್ಲೆಯ ಚಿಕಾ ಅಲಿಯಾಸ್ ಕೃಷ್ಣಾ ಪಟ್ಟೆ ಪವಾರ್ ಎಂದು ಗುರುತಿಸಲಾಗಿದೆ. ಈ ವ್ಯಕ್ತಿ ಶ್ರೀಗಂಧ ಮರಗಳ ಕಳ್ಳತನದಲ್ಲಿ ಸಿಕ್ಕಿಬಿದ್ದಿದ್ದ. ಆದರೆ, ಹಿಂದೆ ವನ್ಯಜೀವಿಗಳನ್ನು ಬೇಟೆಯಾಡಿದ್ದ ಪ್ರಕರಣಗಳು ಬಟಾಬಯಲಾಗಿವೆ.
ಮಹಾರಾಷ್ಟ್ರ ರಾಜ್ಯದ ಅಮರಾವತಿ ಜಿಲ್ಲೆಯ ಮೇಲಘಾಟ್ ಅರಣ್ಯದಲ್ಲಿ ಹುಲಿ, ಕರಡಿಗಳನ್ನು ಬೇಟೆಯಾಡಿರುವ ಪ್ರಕರಣಗಳು ಈತನ ಮೇಲಿವೆ. ಈಗಾಗಲೇ ಮೃತಪಟ್ಟ ಕುಖ್ಯಾತ ಹುಲಿ ಬೇಟೆಗಾರ ಸಂಸಾ ಚಂದ್ ತಂಡದ ಸದಸ್ಯನಾಗಿ ಹಲವು ಕೃತ್ಯಗಳಲ್ಲಿ ಭಾಗಿಯಾಗಿದ್ದಾನೆ ಎನ್ನಲಾಗಿದೆ.
ಕೃಷ್ಣಾ ಕಳೆದ ಜುಲೈನಲ್ಲಿ ಖಾನಾಪುರ ತಾಲೂಕಿನ ಜಳಗಾ ಗ್ರಾಮದ ಬಳಿಯ ಶ್ರೀಗಂಧ ನೆಡುತೋಪಿನಲ್ಲಿ ಇಲಾಖೆಯಿಂದ ನೆಟ್ಟಿದ್ದ ಶ್ರೀಗಂಧದ ಮರಗಳ ಕಳ್ಳತನ ಮಾಡಿದ್ದ ಎಂದು ಪ್ರಕರಣ ದಾಖಲಾಗಿತ್ತು. ಶ್ರೀಗಂಧ ಕಳ್ಳತನದ ಆರೋಪಿಗಳು ಬೆಳಗಾವಿ ತಾಲೂಕಿನ ಕಲಖಾಂಬ ಗ್ರಾಮದ ಬಳಿ ಅಡಗಿದ್ದಾರೆ ಎಂಬ ಖಚಿತ ಮಾಹಿತಿ ಇಲಾಖೆಗೆ ಲಭ್ಯವಾಗಿತ್ತು. ಸದ್ಯ ಟೆಂಟ್ ಒಂದರಲ್ಲಿ ಇಟ್ಟಿದ್ದ ಶ್ರೀಗಂಧ ತುಂಡುಗಳು ಹಾಗೂ ಹರಿತವಾದ ಆಯುಧಗಳನ್ನು ವಶಪಡಿಸಿಕೊಂಡ ಸಿಬ್ಬಂದಿ ಆರೋಪಿ ಕೃಷ್ಣಾನನ್ನು ವಶಕ್ಕೆ ಪಡೆದಿದ್ದಾರೆ.