7 ಜನ ಮೀನುಗಾರರು ತಮ್ಮ ಕಾರ್ಯ ಮುಗಿಸಿ ಮರಳಿ ಬರುತ್ತಿದ್ದ ಸಂದರ್ಭದಲ್ಲಿ ಆಳಸಮುದ್ರ ಬೋಟ್ ತಡೆದು ನಿಲ್ಲಿಸಿ ಬೋಟಿನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ಮೀನು, ಡೀಸೆಲ್ ನ್ನು ಅಪಹರಿಸಿರುವ ಘಟನೆಯೊಂದು ನಡೆದಿದೆ.
25 ಜನರ ತಂಡದಿಂದ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಭಟ್ಕಳದ ಮಾವಿನ ಕುರ್ವೆ ಬಂದರಿನಲ್ಲಿ ಈ ಘಟನೆ ನಡೆದಿದೆ. ಮಲ್ಪೆಯ ಚೇತನ್ ಸಾಲ್ಯಾನ್ ಎಂಬುವವರಿಗೆ ಸೇರಿದ್ದ ಕೃಷ್ಣನಂದನ ಆಳಸಮುದ್ರ ಬೋಟಿನಲ್ಲಿ ಈ ಘಟನೆ ನಡೆದಿದೆ. ಅದರಲ್ಲಿ ಮೀನುಗಾರಿಕೆಗೆ ತೆರಳಿದ್ದ ನಾಗರಾಜ್, ನಾಗರಾಜ್ ಎಚ್, ಅರುಣ್ ಹರಿಕಾಂತ, ಅಶೋಕ ಕುಮಟಾ, ಕಾರ್ತಿಕ ಹರಿಕಾಂತ ಮಂಕಿ, ಚಂದ್ರಕಾಂತ ಹರಿಕಾಂತ ಉಪ್ಪುಂದ, ಸುಬ್ರಹ್ಮಮ್ಯ ಖಾರ್ವಿ ಅಪರಹಣಕ್ಕೊಳಗಾದವರು ಎನ್ನಲಾಗಿದೆ.
ಫೆ. 26ರಂದು ರಾತ್ರಿ ವೇಳೆ ಮೀನುಗಾರಿಕೆ ಮುಗಿಸಿ ಮಲ್ಪೆ ಬಂದರು ಮಾರ್ಗವಾಗಿ ಬರುತ್ತಿದ್ದ ಸಂದರ್ಭದಲ್ಲಿ ಭಟ್ಕಳ ಹತ್ತಿರ ಬೋಟಿನ ಬಲೆ ಫ್ಯಾನಿಗೆ ಬಿದ್ದು ಎಂಜಿನ್ ಸ್ಥಗಿತಗೊಂಡು ಬೋಟು ನಿಂತಿತ್ತು. ಈ ಸಂದರ್ಭದಲ್ಲಿ 25 ಜನ ಏಕಾಏಕಿ ದಾಳಿ ನಡೆಸಿ ಬೋಟನ್ನು ತೀರ ಪ್ರದೇಶಕ್ಕೆ ಎಳೆದೊಯ್ದಿದ್ದಾರೆ ಎನ್ನಲಾಗಿದೆ. ಸದ್ಯ ಬೋಟಿನಲ್ಲಿದ್ದ 8 ಲಕ್ಷ ರೂ. ಮೌಲ್ಯದ ಮೀನು, ಸುಮಾರು 7,500 ಲೀಟರ್ ಡೀಸೆಲ್ ದೋಚಿದ್ದಾರೆ. ಇದರೊಂದಿಗೆ 7 ಜನರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡು, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದಾರೆ ಎನ್ನಲಾಗಿದೆ. ಈ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.