ದಾವಣಗೆರೆ: ಕಲ್ಲು ತೂರಾಟ ನಡೆಸಿದವರು ಯಾರು ಎಂಬುವುದೇ ಗೊತ್ತಿಲ್ಲ ಎಂದು ಆದಿಲ್ ತಂದೆ ಕಲೀಂವುಲ್ಲಾ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮಗ ಆದಿಲ್ ಗೆ ಯಾವುದೇ ರೀತಿಯ ಮೂರ್ಛೆ ರೋಗ ಇರಲಿಲ್ಲ. ಆತ ಕಾರ್ಪೆಂಟರ್ ಕೆಲಸ ಮಾಡಿಕೊಂಡಿದ್ದ. ಯಾವುದೇ ಮಟ್ಕಾ ಆಡುತ್ತಿರಲಿಲ್ಲ. ಮಗ ಸಾವನ್ನಪ್ಪಿದ್ದಕ್ಕೆ ನ್ಯಾಯ ಕೇಳಲು ಬಂದಾಗ, ಕಲ್ಲು ಯಾರು ಹೊಡೆದಿದ್ದಾರೆ ಎಂಬುವುದು ನಮಗೂ ಗೊತ್ತಿಲ್ಲ. ಈ ವಯಸ್ಸಲ್ಲಿ ಮಗ ಸತ್ತಿದ್ದಕ್ಕೆ ತುಂಬಾ ನೋವಾಗಿದೆ. ನಮಗೆ ದುಡಿಯಲು ಆಗುವುದಿಲ್ಲ. ನಮಗೆ ಸರ್ಕಾರ ಆಸರೆಯಾಗಿ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.
ಮಟ್ಕಾ ಆಡಿಸುತ್ತಿದ್ದ ಆದಿಲ್ ಎಂಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಠಾಣೆಗೆ ಬರುತ್ತಿದ್ದಂತೆ ಆದಿಲ್ ಬಿಪಿ ಲೋ ಆಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಪೊಲೀಸರ ಕಸ್ಟಡಿಯಲ್ಲಿ ಇರುವಾಗಲೇ ಆದಿಲ್ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಕುಟುಂಬಸ್ಥರು ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಹಿಂಸಾಚಾರ ನಡೆದಿತ್ತು. ಪೊಲೀಸರು ಕೂಡ ಘಟನೆಯಲ್ಲಿ ಗಾಯಗೊಂಡಿದ್ದಾರೆ.