ಸದ್ದು ಮಾಡುತ್ತಿದೆ ಸೈಬರ್ ಅಪಾಯಗಳ ಕುರಿತಾದ ವಿಭಾ ಭಾಷಾಂತರಿಸಿದ ಪುಸ್ತಕ; ಅಗೋಚರ ಜಾಲ ಪುಸ್ತಕದ ಚುಟುಕು ವಿಮರ್ಷೆಗಳ ಸಂಗ್ರಹ Agochara jaala review
ಇತ್ತೀಚೆಗೆ ಬಿಡುಗಡೆಯಾದ ಪತ್ರಕರ್ತ ಹಾಗೂ ಸಾಕ್ಷಾ ಟಿವಿ.ಕಾಮ್ ನ ಸುದ್ದಿ ಸಂಪಾದಕರಾಗಿರುವ ವಿಶ್ವಾಸ್ ಭಾರದ್ವಾಜ್ ಕನ್ನಡಕ್ಕೆ ಭಾವಾನುವಾದ ಮಾಡಿರುವ ಸೈಬರ್ ಅಪಾಯಗಳ ಕುರಿತಾದ ಪುಸ್ತಕ ಅಗೋಚರ ಜಾಲದ ಕುರಿತು ಸಾಕಷ್ಟು ಉತ್ತಮ ಮಾತುಗಳು ಕೇಳಿಬಂದಿವೆ. ಮೂಲ ಲೇಖಕಿ ಶ್ರೀಮತಿ ಜ್ಯೋತ್ಸ್ನಾ ಕಾಸು ಇಂಗ್ಲೀಷ್ ನಲ್ಲಿ ಬರೆದಿರುವ ದಿ ಆರ್ಟ್ ಆಫ್ ಬೀಯಿಂಗ್ ಇನ್ವಿಸಿಬಲ್ ಕೃತಿಯನ್ನು ವಿಶ್ವಾಸ್ ಭಾರದ್ವಾಜ್ ಕನ್ನಡಕ್ಕೆ ಭಾಷಾಂತರ ಮಾಡಿದ್ದಾರೆ. ವಂಶಿ ಪ್ರಕಾಶನ ಸಂಸ್ಥೆ ಪ್ರಕಟಿಸಿರುವ ಈ ಪುಸ್ತಕದ ಕುರಿತಾಗಿ ಮೂಡಿ ಬಂದ ಅಭಿಪ್ರಾಯಗಳು ಹೀಗಿವೆ.
Agochara jaala review
ಗೆಳೆಯ ವಿಶ್ವಾಸ್ ಅನುವಾದಿಸಿರುವ “ಅಗೋಚರ ಜಾಲ” ಎಂಬ ಸೈಬರ್ ಅಪಾಯಗಳ ಕುರಿತಾದ ಪುಸ್ತಕ ಒಂದೇ ಹದದಲ್ಲಿ ಓದಿಸಿಕೊಂಡು ಹೋಯಿತು. ನಮಗೆ ಈಗ ಅಪ್ಯಾಯಮಾನವಾಗಿರುವ ಇಂಟರ್ನೆಟ್ ಜಗತ್ತಿನಲ್ಲಿ ಎಷ್ಟೊಂದು ಅಪಾಯಗಳಿವೆ ಅನ್ನುವ ಕುತೂಹಲ ಇದಕ್ಕೆ ಕಾರಣ. ಅಮೇರಿಕ ನಿವಾಸಿ ಶ್ರೀಮತಿ ಜ್ಯೋತ್ಸ್ನಾ ಅವರ ಮೂಲಕೃತಿಯ “ದಿ ಆರ್ಟ್ ಆಫ್ ಬೀಯಿಂಗ್ ಇನ್ವಿಸಿಬಲ್” ಅನ್ನು ಎಲ್ಲಿಯೂ ಬೇಸರವಾಗದಂತೆ ಕನ್ನಡಕ್ಕೆ ತಂದಿದ್ದಾರೆ ವಿಶ್ವಾಸ್. ಸೈಬರ್ ಜಗತ್ತಿನಲ್ಲಿ ನಮಗೆ ಗೊತ್ತೇ ಇರದ ಎಷ್ಟೋ ಅಭದ್ರತೆಗಳ ಬಗ್ಗೆ ಪುಸ್ತಕ ಮಾತಾಡುತ್ತದೆ. ಇದು ನಿಜಕ್ಕೂ ಸಂಗ್ರಹ ಯೋಗ್ಯ ಪುಸ್ತಕ. ನಾವು ಪ್ರತಿನಿತ್ಯ ಇಂಟರ್ನೆಟ್ ಬಳಸುವವರು ಖಂಡಿತಾ ಓದಲೇಬೇಕಿರುವ ಪುಸ್ತಕ.
–ಸನತ್ ರೈ, ಪ್ರಧಾನ ಸಂಪಾದಕರು, ಸಾಕ್ಷಾಟಿವಿ.ಕಾಮ್
***
“ಅಗೋಚರ ಜಾಲ” ಪುಸ್ತಕವನ್ನು ವಿಶ್ವಾಸ್ ಓದಲು ಕೊಟ್ಟ ದಿನವೇ ಅರ್ಧ ಭಾಗ ಮುಗಿಸಿದೆ. ವಿಶ್ವಾಸ್ ಭಾರದ್ವಾಜ್ ಅವರ ಬರವಣಿಗೆಯ ಪರಿಚಯವಿರುವ ನನಗೆ, ಅವರು ಕಾಟಾಚಾರಕ್ಕೆ ಬರೆಯುವುದಿಲ್ಲ ಅನ್ನುವ ನಂಬಿಕೆಯಿದೆ. ಅವರು ಆ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ. ಇವತ್ತಿನ ಸ್ಥಿತಿಗೆ ಅತ್ಯಂತ ಅಗತ್ಯವಿರುವ ವಸ್ತುವನ್ನು ಪುಸ್ತಕದ ರೂಪದಲ್ಲಿ ತಂದಿದ್ದಾರೆ. ಇದೊಂದು ಅನುವಾದ ಕೃತಿಯಾದರೂ ನಾವೆಲ್ಲರೂ ಓದಲೇಬೇಕಾದ ಪುಸ್ತಕವಿದು. ನಮ್ಮ ದೈನಂದಿನ ಜೀವನದಲ್ಲಿ ಡಿಜಿಟಲ್ ಶತ್ರು ಹೇಗೆ ಆಕ್ರಮಣ ಮಾಡುತ್ತಾನೆ ಎನ್ನುವ ಮುನ್ಸೂಚನೆ ನಮಗೆ ಇರಲೇಬೇಕು. ಮುಂದೆ ಎದುರಾಗಬಹುದಾದ ಅಪಾಯಗಳಿಗೆ ಸಿದ್ಧರಾಗಲು ನಾವು ಪೂರ್ವಭಾವಿ ತಯಾರಿಗಾಗಿ ಈ ಪುಸ್ತಕ ಓದಿಕೊಳ್ಳುವುದು ಅತ್ಯಗತ್ಯ ಅನ್ನುವುದು ನನ್ನ ಭಾವನೆ.
–ಮಂಜುನಾಥ್ ಪಿ, ಪತ್ರಕರ್ತರು, ಅದಿತಿ ಲಿಂಕ್ ಮೀಡಿಯಾ, ಬೆಂಗಳೂರು
***

ಕನ್ನಡ ಬರವಣಿಗೆ ಕ್ಷೇತ್ರದಲ್ಲಿ ಇತ್ತೀಚೆಗೆ ಭರವಸೆ ಮೂಡಿಸುತ್ತಿರುವ ಯುವ ಬರಹಗಾರ ವಿಶ್ವಾಸ್ ಭಾರದ್ವಾಜ್ ಅವರ “ಅಗೋಚರ ಜಾಲ” ಪುಸ್ತಕ ಅವರೇ ಹೇಳುವ ಹಾಗೆ ಇಂಟರ್ನೆಟ್ ಬಳಕೆದಾರರ ಕೈಪಿಡಿಯಾಗಬೇಕಿದೆ. ಡಿಜಿಟಲ್ ಜೀವನ ಪದ್ಧತಿ ಅನುಸರಿಸುವ ಪ್ರತಿಯೊಬ್ಬರ ಮನೆಯ ಗ್ರಂಥಾಲಯದಲ್ಲಿ ಈ ಪುಸ್ತಕ ಇರಲೇಬೇಕು. ಕಣ್ಣಿಗೆ ಕಾಣದ ಶತ್ರು ನಮ್ಮ ಇಡಿ ಜೀವನ ನಾಶ ಮಾಡಿಬಿಡಬಹುದು. ನಮಗೆ ಅಪಾಯ ಎಲ್ಲಿಂದ ಬರುತ್ತದೆ ಎನ್ನುವುದನ್ನು ಅರ್ಥಮಾಡಿಕೊಳ್ಳಲು ಈ ಪುಸ್ತಕ ನೆರವಾಗುತ್ತದೆ. ಓದದೇ ಇದ್ದವರು ಮಿಸ್ ಮಾಡಿಕೊಳ್ಳದೇ ತಪ್ಪದೇ ಓದಿ.
–ಶ್ರೀಮತಿ ಅರಕಲಗೋಡು, ಹಿರಿಯ ಪೋಷಕ ನಟಿ, ಕಿರುತೆರೆ ಕಲಾವಿದೆ, ಬೆಂಗಳೂರು
***
ವಿಶ್ವಾಸ್ ಈ ಪುಸ್ತಕವನ್ನು ಕಳಿಸಿಕೊಡುವಾಗ, ಇದು ವಿದ್ಯಾರ್ಥಿಗಳಿಗೆ ಡಿಜಿಟಲ್ ಮಾರ್ಗದರ್ಶಿ ಹಾಗೂ ಸೈಬರ್ ಥ್ರೆಟ್ಗಳ ಬಗ್ಗೆ ಸಾಕಷ್ಟು ಬೆಳಕು ಚೆಲ್ಲುತ್ತದೆ ಎಂದು ಮೊದಲೇ ಹೇಳಿದ್ದರು. ಹೀಗಾಗಿ “ಅಗೋಚರ ಜಾಲ” ಎಂಬ ಡಿಜಿಟಲ್ ಅಪಾಯಗಳ ಕುರಿತು ಎಚ್ಚರಿಸುವ ವಿಷಯ ಹೊಂದಿರುವ ಪುಸ್ತಕವನ್ನು ನಾನೂ ಓದಿದೆ ಮತ್ತು ನನ್ನ ಕೆಲವು ವಿದ್ಯಾರ್ಥಿಗಳಿಂದಲೂ ಓದಿಸಿದೆ. ಅವರಿಂದ ಬಂದ ಅಭಿಪ್ರಾಯ ನನ್ನದೂ ಸಹ ಆಗಿತ್ತು. ಈ ಪುಸ್ತಕ ಖಂಡಿತಾ ನಮ್ಮ ಕನ್ನಡ ನಾಡಿನ ಯುವ ಕಾಲೇಜು ವಿದ್ಯಾರ್ಥಿಗಳು ಓದಲೇಬೇಕು. ನಮಗೆ ತಿಳಿಯದ ಅದೆಷ್ಟೋ ಸಂಗತಿಗಳನ್ನು ಈ ಪುಸ್ತಕ ಒಳಗೊಂಡಿದೆ. ಮೂಲ ಲೇಖಕಿ ಜ್ಯೋತ್ಸ್ನಾ ಕಾಸು ಮತ್ತು ನಮ್ಮ ವಿಶ್ವಾಸ್ ಭಾರದ್ವಾಜ್ ಅವರ ಈ ಪ್ರಯತ್ನ ಅಭಿನಂದನೀಯ.
–ಪ್ರಕಾಶ್, ಉಪನ್ಯಾಸಕರು, ಆಳ್ವಾಸ್ ವಿದ್ಯಾಸಂಸ್ಥೆ, ಮೂಡಬಿದ್ರಿ.
***
ನಾನೊಬ್ಬ ಸಾಫ್ಟ್ವೇರ್ ಡೆವಲಪರ್ ಆದ ಕಾರಣ, ನನ್ನ ಬ್ಯುಸಿ ವರ್ಕ್ ಶೆಡ್ಯೂಲ್ ನಡುವೆ, ಸಾಮಾನ್ಯವಾಗಿ ನಾನು ಪುಸ್ತಕಗಳನ್ನು ಓದುವುದು ಕಡಿಮೆ. ಆದರೆ ಸ್ನೇಹಿತ ವಿಶ್ವಾಸ್ “ಅಗೋಚರ ಜಾಲ” ಪುಸ್ತಕ ಡಿಜಿಟಲ್ ಲೈಫ್ ಗೆ ಸಂಬಂಧಿಸಿದ್ದು ಅಂದಿದ್ದರಿಂದ ಓದಲು ಶುರು ಮಾಡಿದೆ. ಇದರಲ್ಲಿರುವ ಎಷ್ಟೊ ವಿಚಾರಗಳು ಸಾಫ್ಟ್ವೇರ್ ಲೋಕದಲ್ಲಿ ಕೆಲಸ ಮಾಡುವ ನನ್ನಲ್ಲೂ ಅಚ್ಚರಿ ಮೂಡಿಸಿತು. ಇದು ಪೊಲೀಸ್ ಇಲಾಖೆಗೆ ಸೈಬರ್ ಕ್ರೈಮ್ ವಿಚಾರದಲ್ಲಿ ನೆರವಾಗುತ್ತದೆ. ಈ ರೀತಿಯ ಹೊಸ ವಿಚಾರಗಳನ್ನು ಒಳಗೊಂಡ ಪುಸ್ತಕಗಳು ಕನ್ನಡಕ್ಕೆ ಇನ್ನೂ ಹೆಚ್ಚಾಗಿ ಬರಲಿ.
–ವಿಶ್ವನಾಥ್ ವಿ ಶೇಟ್, ಸಾಫ್ಟ್ವೇರ್ ಎಂಜಿನಿಯರ್, ತ್ಯಾಗರ್ತಿ
***
ಇವತ್ತಿನ ಕೋವಿಡ್ ಪ್ಯಾಂಡಮಿಕ್ ಸ್ಥಿತಿಯಲ್ಲಿ ಕಾಲೇಜು ಪಾಠ ಆನ್ಲೈನ್ ನಲ್ಲಿ ಕಲಿಸುತ್ತಿರುವ ಸ್ಥಿತಿಯಲ್ಲಿ, ಸಾಕಷ್ಟು ಬಿಡುವು ಹೊಂದಿರುವ ನಾನು, ಈ ಪುಸ್ತಕವನ್ನು ಓದಲೇಬೇಕು ಎಂದು ಕೈಗೆತ್ತಿಕೊಂಡೆ. ವಿಶ್ವಾಸಣ್ಣನ ರೈಟಿಂಗ್ ನಂಗೆ ಮೊದಲಿನಿಂದ ಇಷ್ಟ. ಸೂಕ್ಷ್ಮ ವಿಷಯಗಳನ್ನು ಲಾಜಿಕಲ್ ಆಗಿ ಸರಳವಾಗಿ ಹೇಳಿಬಿಡುತ್ತಾರೆ. ಸೈಬರ್ ಕ್ರೈಂ ತರಹದ ಟೆಕ್ನಿಕಲ್ ವಸ್ತುವನ್ನೂ ವಿಶ್ವಾಸಣ್ಣ ಸುಲಭವಾಗಿ ಬರೆದು ಓದಿಸಿದ್ದಾರೆ. ಕನ್ನಡ ಮಾತೃಭಾಷೆಯ ವಿದ್ಯಾರ್ಥಿಗಳು, ಅದರಲ್ಲೂ ಹಳ್ಳಿಯಿಂದ ಬಂದವರಿಗೆ ಈ ಪುಸ್ತಕ ಒಬ್ಬ ನಿಜವಾದ ಗೈಡ್. ಇಂಗ್ಲೀಷ್ನಲ್ಲಿ ಈ ಪುಸ್ತಕ ಬರೆದ ಜ್ಯೋತ್ಸ್ನಾ ಮೇಡಂ ಮತ್ತು ವಿಶ್ವಾಸಣ್ಣ ಇಬ್ಬರಿಗೂ ಧನ್ಯವಾದ.
–ವೈಷ್ಣವಿ ಸಿ.ಎಸ್, ಬಿಸಿಎ ವಿದ್ಯಾರ್ಥಿ, ಸುರಾನಾ ಕಾಲೇಜು, ಜಯನಗರ-ಬೆಂಗಳೂರು
***

“ಅಗೋಚರ ಜಾಲ” ಪುಸ್ತಕದ ಓದು ಹಲವು ವಿಷಯಗಳ ಕುರಿತು ಸರಳವಾಗಿ ತಿಳಿಸಿಕೊಡುತ್ತಾ ಸಾಗುತ್ತದೆ. ನಮಗೆ ಅರಿವಿಲ್ಲದೇ ನಾವು ಸಿಲುಕಿರುವ ವೆಬ್ ಜಾಲ ಎಂಥದ್ದು ಎಂಬುದರ ಮೇಲೆ ಬೆಳಕು ಚೆಲ್ಲುತ್ತದೆ. ಓದುತ್ತಾ ಹೋದಂತೆಲ್ಲಾ ನಾವೆಷ್ಟು ಅಸುರಕ್ಷಿತರಿದ್ದೇವೆ ಎಂಬ ಭಾವ ಕಾಡಿ ಭೀತರಾಗಿಸುತ್ತದೆ. ನಮ್ಮ ದೈನಂದಿನ ಅವಶ್ಯಕತೆಗಳೇ ಆಗಿರುವ ಮೊಬೈಲ್, ಲ್ಯಾಪ್ಟಾಪ್ ಗಳು ನಮ್ಮ ಎಲ್ಲಾ ರಹಸ್ಯಗಳನ್ನೂ ಬಿಟ್ಟುಕೊಡುತ್ತಿವೆ ಎಂಬ ಸತ್ಯ ಘೋರ ಎನ್ನಿಸಲಾರಂಭಿಸುತ್ತದೆ. ಹಾಗೋ ಹೀಗೋ ಕಷ್ಟಪಟ್ಟು ಕೂಡಿಡುವ ಅಷ್ಟೋ ಇಷ್ಟೋ ದುಡ್ಡು ಕೂಡ ಯಾವಾಗ ಬೇಕಾದರೂ ಇಲ್ಲವಾಗಬಹುದಾದ ಅಪಾಯದ ಸುಳಿವೂ ಸಿಗುವಂತಾಗಿದೆ. ಇಂಥದ್ದೊಂದು ಪುಸ್ತಕವನ್ನು ಬರೆದ ಮೂಲ ಲೇಖಕಿ ಜ್ಯೋತ್ಸ್ನಾ ಕಾಸು ಅವರಿಗೂ, ಉಪಯುಕ್ತ ಪುಸ್ತಕವೊಂದನ್ನು ಕನ್ನಡಕ್ಕೆ ಭಾಷಾಂತರಿಸಿದ ವಿಶ್ವಾಸ್ ಭಾರದ್ವಾಜ್ ಅವರಿಗೂ ಧನ್ಯವಾದಗಳು.
–ಕೃಷ್ಣಮೂರ್ತಿ ಆಚಾರ್, ಸೀತೂರು, ಕೊಪ್ಪ
***
ನಮ್ಮ ಸುತ್ತ ನಮಗರಿವಿಲ್ಲದೇ ಹೆಣೆದುಕೊಳ್ಳುವ ಜೇಡರಬಲೆಯಂತಹ ಅಪಾಯದ ಕುರಿತು “ಅಗೋಚರ ಜಾಲ” ಎಂಬ ಪುಸ್ತಕ ಅರಿವು ಮೂಡಿಸುತ್ತದೆ. ಹೆಸರೇ ಹೇಳುವಂತೆ ಇದು ನಮ್ಮ ಸ್ವಂತ ಎಂದುಕೊಳ್ಳುವ ನಮ್ಮದೇ ಖಾಸಗಿ ಲ್ಯಾಪ್ ಟಾಪ್ ಗಳು, ಮೊಬೈಲ್ ಫೋನ್ ಗಳಲ್ಲಿನ ಮಾಹಿತಿಗಳು ಸೋರಿಕೆಯಾಗುವ ಭಯದ ಕುರಿತು ತಿಳಿಸಿಕೊಡುತ್ತದೆ. ಬೇರೆಲ್ಲಾ ಒತ್ತಟ್ಟಿಗಿರಲಿ ನಮ್ಮದೇ ಫೋಟೋಗಳೂ ಕೂಡ ಸುರಕ್ಷಿತವಾಗಿ ಉಳಿಯುತ್ತಿಲ್ಲ ಎಂಬ ವಿಷಯಗಳು ನಿಜಕ್ಕೂ ಗಾಬರಿ ಹುಟ್ಟಿಸುತ್ತವೆ. ನಮ್ಮದೇನೋ ಸಣ್ಣ ಪುಟ್ಟ ಮಾಹಿತಿಗಳು ಅಂಥದ್ದೇನೂ ಅಲ್ಲ ಎಂದೇ ಅಂದುಕೊಳ್ಳೋಣ. ಆದ್ರೆ ಇದೇ ಮಾಹಿತಿಗಳು ದೊಡ್ಡ ಮಟ್ಟದಲ್ಲಿ ಸೋರಿಕೆಯಾದರೆ ಅದರಿಂದ ಉಂಟಾಗುವ ಅಪಾಯಗಳ ಸಾಧ್ಯತೆಗಳು ಸಹ ದೊಡ್ಡದೇ ಆಗಿರುತ್ತದೆ. ಇದರಿಂದ ಒಂದು ರಾಷ್ಟ್ರವೇ ಪರಿತಪಿಸುವಂತಾದರೂ ಯಾವುದೇ ಅಚ್ಚರಿಯಿಲ್ಲ.
–ಪುಷ್ಪಲತಾ, ಗೃಹಿಣಿ, ಕುದುರೆಗುಂಡಿ, ಚಿಕ್ಕಮಗಳೂರು ಜಿಲ್ಲೆ
***








