ಕೇರಳದ ಕರಿಪ್ಪುರ್ ವಿಮಾನ ದುರಂತ -ಕೇರಳ ಸಿಎಂನಿಂದ ಮಾಹಿತಿ ಪಡೆದ ಪ್ರಧಾನಿ..! ಗೃಹ ಸಚಿವ ಅಮೀತ್ ಶಾ ಆಘಾತ..!
ದೇವರ ನಾಡು ಕೇರಳ ಮತ್ತೊಂದು ಆಘಾತವನ್ನು ಅನುಭವಿಸಿದೆ. ಒಂದು ಕಡೆ ಕೋವಿಡ್ 19 ಸೊಂಕು ಮತ್ತೊಂದೆಡೆ ವರುಣನ ಆವಾಂತರ…ಇದ್ರ ಮಧ್ಯೆ ಇಂದು ವಿಮಾನ ದುರಂತ… ಕೇರಳದಲ್ಲಿ ಆಘಾತದ ಮೇಲೆ ಆಘಾತ ನಡೆಯುತ್ತಿದೆ.
ದುಬೈ -ಕೋಯಿಕೋಡ್ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಲ್ಯಾಂಡಿಂಗ್ ವೇಳೆ ಪತನಗೊಂಡಿದೆ. ವಿಮಾನದಲ್ಲಿ 191 ಮಂದಿ ಪ್ರಯಾಣಿಕರಿದ್ರು. ಸದ್ಯದ ವರದಿ ಪ್ರಕಾರ ಪೈಲೆಟ್ ದೀಪಕ್ ವಸಂತ್ ಮತ್ತು ಇಬ್ಬರು ಮಹಿಳಾ ಪ್ರಯಾಣಿಕರು ಸೇರಿ ಮೂವರು ದುರಂತದಲ್ಲಿ ಸಾವನ್ನಪ್ಪಿದ್ದಾರೆ. 50ಕ್ಕೂ ಹೆಚ್ಚು ಮಂದಿ ತೀವ್ರ ಗಾಯಗೊಂಡಿದ್ದಾರೆ.
ವಿಮಾನದಲ್ಲಿ 174 ಮಂದಿ ಪ್ರಯಾಣಿಕರು, 10 ಮಂದಿ ಮಕ್ಕಳು ಮತ್ತು ಇಬ್ಬರು ಪೈಲೆಟ್ಗಳು ಹಾಗೂ ಐದು ಮಂದಿ ಸಿಬ್ಬಂದಿಗಳಿದ್ರು.
ಕರಿಪ್ಪುರ್ ವಿಮಾನ ನಿಲ್ದಾಣದಲ್ಲಿ ನಡೆದಿರುವ ಘಟನೆಯ ತೆರವು ಕಾರ್ಯಕ್ಕೆ ಧಾರಕಾರವಾಗಿ ಸುರಿಯುವ ಮಳೆ ಅಡ್ಡಿಯನ್ನುಂಟು ಮಾಡುತ್ತಿದೆ. ಆದ್ರೂ ತೆರವು ಕಾರ್ಯ ಭರದಿಂದ ಸಾಗುತ್ತಿದ್ದು, ಸ್ಥಳದಲ್ಲಿ ಸುಮಾರು 35ಕ್ಕೂ ಹೆಚ್ಚು ಆಂಬ್ಯುಲೆನ್ಸ್ ಗಳಲ್ಲಿ ಗಾಯಗೊಂಡಿರುವ ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿದೆ.
ಇನ್ನು ಕರಿಪ್ಪುರ್ ವಿಮಾನದ ದುರಂತದ ಬಗ್ಗೆ ಕೇಂದ್ರ ಗೃಹ ಸಚಿವ ಅಮೀತ್ ಶಾ ಆಘಾತ ವ್ಯಕ್ತಪಡಿಸಿದ್ದಾರೆ. ಸುದ್ದಿ ಕೇಳಿ ನೋವುಂಟಾಗಿದೆ ಎಂದು ಅಮಿತ್ ಶಾ ಟ್ವಿಟ್ ಮಾಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಮುಖ್ಯಮಂತ್ರಿ ಜೊತೆ ಮಾತನಾಡಿ ಘಟನೆಯ ವಿವರವನ್ನು ಪಡೆದುಕೊಂಡಿದ್ದಾರೆ.
ದುಬೈನಿಂದ ಕ್ಯಾಲಿಕಟ್ಗೆ ಆಗಮಿಸುತ್ತಿದ್ದ ವಿಮಾನ ಲ್ಯಾಂಡಿಂಗ್ ವೇಳೆ 35 ಅಡಿ ಎತ್ತರದಿಂದ ನೆಲಕ್ಕೆ ಅಪ್ಪಳಿಸಿದೆ. ಪರಿಣಾಮ ವಿಮಾನ ಎರಡು ಭಾಗಗಳಾಗಿತ್ತು. ಆದ್ರೆ ಯಾವುದೇ ಬೆಂಕಿ ಅವಘಢ ಆಗಿಲ್ಲ.
2019ರಲ್ಲೇ ಏರ್ ಪೋರ್ಟ್ ಸುರಕ್ಷತೆಯ ಬಗ್ಗೆ ಕೇಂದ್ರ ಸರ್ಕಾರ ಆತಂಕ ವ್ಯಕ್ತಪಡಿಸಿತ್ತು. ಇನ್ನೊಂದೆಡೆ ವಿಮಾನ ಲ್ಯಾಡಿಂಗ್ ವೇಳೆ ದುರಂತ ಸಂಭವಿಸಿದೆ. ಮಳೆಯಿಂದಾಗಿ ರನ್ ವೇ ಸ್ಪಷ್ಟವಾಗಿ ಗೋಚರಿಸಿಲ್ಲ. ಹೀಗಾಗಿ ದುರಂತವಾಗಿದೆ ಎಂದು ಪ್ರಾಥಮಿಕ ವರದಿಯಿಂದ ತಿಳಿದು ಬಂದಿದೆ.