ಹರ್ ಘರ್ ತಿರಂಗಾ ಅಭಿಯಾನಕ್ಕೆ ಅದ್ಭುತ ಪ್ರತಿಕ್ರಿಯೆ – ಪ್ರಧಾನಿ ಮೋದಿ ಸಂತಸ
ಹರ್ ಘರ್ ತಿರಂಗಾ ಅಭಿಯಾನಕ್ಕೆ ದೇಶಾದ್ಯಂತ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ. ತಿರಂಗಾ ಅಭಿಯಾನದಲ್ಲಿ ಎಲ್ಲ ವರ್ಗಗಳ ಜನರು ದಾಖಲೆಯ ಪ್ರಮಾಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆಜಾದಿ ಕಾ ಅಮೃತ ಮಹೋತ್ಸವವ ಆಚರಣೆಗೆ ಇದೊಂದು ಅತ್ಯುತ್ತಮ ಮಾರ್ಗವಾಗಿದೆ ಎಂದು ಟ್ವೀಟ್ ನಲ್ಲಿ ತಿಳಿಸಿದ್ದಾರೆ.
ತ್ರಿವರ್ಣ ಧ್ವಜದೊಂದಿಗಿನ ತಮ್ಮ ಛಾಯಾಚಿತ್ರಗಳನ್ನು ಹರ್ ಘರ್ ತಿರಂಗಾ ಡಾಟ್ ಕಾಮ್ ನಲ್ಲಿ ಹಂಚಿಕೊಳ್ಳಬೇಕೆಂದು ಪ್ರಧಾನಿ ಜನತೆಗೆ ಮನವಿ ಮಾಡಿದ್ದಾರೆ. ನಿನ್ನೆಯಿಂದ ಆರಂಭಗೊಂಡ ಹರ್ ಘರ್ ತಿರಂಗಾ ಅಭಿಯಾನಕ್ಕೆ ದೇಶಾದ್ಯಂತ ವಿಸ್ಮಯದ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಭಾರತ ಸ್ವಾತಂತ್ರ್ಯದ 75ನೇ ಅಮೃತ ಮಹೋತ್ಸವ ಆಚರಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪ್ರತಿಯೊಂದು ಮನೆಯಲ್ಲೂ ತ್ರಿವರ್ಣ ಧ್ವಜವನ್ನು ಹಾರಿಸುವ ಮೂಲಕ ಜನರಲ್ಲಿ ದೇಶಾಭಿಮಾನವನ್ನು ಪ್ರೇರೇಪಿಸುವ ಉದ್ದೇಶ ಈ ಅಭಿಯಾನ ಹೊಂದಿದೆ. ಆಜಾದಿ ಕಾ ಅಮೃತ ಮಹೋತ್ಸವದ ಭಾಗವಾಗಿ ಅಭಿಯಾನ ಆಗಸ್ಟ್ 15ರ ವರೆಗೂ ಮುಂದುವರೆಯಲಿದೆ.