ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿರುವ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಹಾಗೂ ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹಿಸಿ ದೆಹಲಿಯ ಜಂತರ್ ಮಂತರ್ ನಲ್ಲಿ ಹೋರಾಟ ನಡೆಸುತ್ತಿದ್ದ ಖ್ಯಾತ ಶಿಕ್ಷಣ ತಜ್ಞ, ಲಡಾಖ್ ನ ಹಿತರಕ್ಷಕ ಸೋನಮ್ ವಾಂಗ್ ಚುಕ್ ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಕಳೆದ 21 ದಿನಗಳಿಂದ ಕೇವಲ ನೀರು ಕುಡಿದು ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸಾಮಾಜಿಕ ಹೋರಾಟಗಾರನನ್ನು ದೆಹಲಿ ಪೊಲೀಸರು ತಕ್ಷಣವೇ ಸಫ್ದರ್ ಜಂಗ್ ಆಸ್ಪತ್ರೆಗೆ ದಾಖಲಿಸಿ ತುರ್ತು ಚಿಕಿತ್ಸೆ ನೀಡುತ್ತಿದ್ದಾರೆ.
ಸತ್ಯಾಗ್ರಹಿಯ ತಾಳ್ಮೆ ಪರೀಕ್ಷಿಸಬೇಡಿ: ಕೇಂದ್ರಕ್ಕೆ ಅಣ್ಣಾ ಹಜಾರೆ ನೇರ ವಾರ್ನಿಂಗ್!
ಸೋನಮ್ ವಾಂಗ್ಚುಕ್ ಅವರ ಈ ಜೀವನ್ಮರಣ ಹೋರಾಟಕ್ಕೆ ಈಗ ದೇಶದ ಅಪ್ರತಿಮ ಭ್ರಷ್ಟಾಚಾರ ವಿರೋಧಿ ಹೋರಾಟಗಾರ, ಹಿರಿಯ ಗಾಂಧಿವಾದಿ ಅಣ್ಣಾ ಹಜಾರೆ ಅವರ ಶಕ್ತಿಶಾಲಿ ಬೆಂಬಲ ವ್ಯಕ್ತವಾಗಿದೆ. ವಾಂಗ್ಚುಕ್ ಅವರ ಪರವಾಗಿ ಧ್ವನಿ ಎತ್ತಿರುವ ಅಣ್ಣಾ ಹಜಾರೆ, ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ಕಟುವಾದ ಆಕ್ರೋಶ ಹೊರಹಾಕಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರಿಂದ ಆಯ್ಕೆಯಾದ ಸರ್ಕಾರವೊಂದು ಸತ್ಯಕ್ಕಾಗಿ ಹೋರಾಡುತ್ತಿರುವ ಸತ್ಯಾಗ್ರಹಿಯ ತಾಳ್ಮೆಯನ್ನು ಪರೀಕ್ಷಿಸುವುದು ಅತ್ಯಂತ ಅಪಾಯಕಾರಿ ನಡೆ. ಕೂಡಲೇ ಅವರ ಬೇಡಿಕೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ, ತಕ್ಷಣವೇ ಮಾತುಕತೆಯ ಮೂಲಕ ಈ ಜ್ವಲಂತ ಸಮಸ್ಯೆಯನ್ನು ಬಗೆಹರಿಸಿ ಎಂದು ಹಜಾರೆ ಎಚ್ಚರಿಸಿದ್ದಾರೆ.
ಈ ಕುರಿತು ವಿಶೇಷ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿರುವ ಅಣ್ಣಾ ಹಜಾರೆ, ಸೋನಮ್ ವಾಂಗ್ ಚುಕ್ ಅವರು ಕೇವಲ ವೈಯಕ್ತಿಕ ಸ್ವಾರ್ಥಕ್ಕಾಗಿ ಹೋರಾಡುತ್ತಿಲ್ಲ ದೇಶಕ್ಕಾಗಿ ಗಾಂಧಿ ಮಾರ್ಗದಲ್ಲಿ ಶಾಂತಿಯುತ ಸತ್ಯಾಗ್ರಹ ನಡೆಸುತ್ತಿದ್ದಾರೆ ಎಂದು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಕಳೆದ 2011 ರಲ್ಲಿ ದೇಶಾದ್ಯಂತ ಭ್ರಷ್ಟಾಚಾರದ ವಿರುದ್ಧ ಬೃಹತ್ ಜನ ಕ್ರಾಂತಿ ಸೃಷ್ಟಿಸಿ, ಅಂದಿನ ಯುಪಿಎ ಸರ್ಕಾರವನ್ನೇ ನಡುಗಿಸಿ ಲೋಕಪಾಲ್ ಕಾಯ್ದೆ ಜಾರಿಗೆ ಕಾರಣವಾಗಿದ್ದ ಅಣ್ಣಾ ಹಜಾರೆ, ಈಗ ದಶಕದ ನಂತರ ಮತ್ತೆ ಸಾಮಾಜಿಕ ಹೋರಾಟದ ಪರವಾಗಿ ಧ್ವನಿ ಎತ್ತಿರುವುದು ಕೇಂದ್ರ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಅಣ್ಣಾ ಹಜಾರೆ ಅವರ ಈ ಅನಿರೀಕ್ಷಿತ ಪ್ರವೇಶದಿಂದಾಗಿ ನೀಟ್ ಹಗರಣದ ವಿರುದ್ಧದ ಹೋರಾಟಕ್ಕೆ ಮತ್ತಷ್ಟು ಆನೆಬಲ ಬಂದಂತಾಗಿದೆ. ಗಾಂಧಿವಾದಿ ನಾಯಕರ ಎಚ್ಚರಿಕೆಗೆ ಕೇಂದ್ರ ಸರ್ಕಾರ ಮಣಿಯುತ್ತಾ ಅಥವಾ ವಾಂಗ್ಚುಕ್ ಅವರ ಹೋರಾಟ ದೇಶವ್ಯಾಪಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಾ ಎಂಬುದನ್ನು ಇಡೀ ದೇಶ ಅತ್ಯಂತ ಕುತೂಹಲದಿಂದ ಗಮನಿಸುತ್ತಿದೆ.







