ಹಲವು ಧಾರಾವಾಹಿಗಳನ್ನು ನಿರ್ದೇಶಿಸಿದ್ದ ಹಾಗೂ ಬಾಲ ನಟರಾಗಿ ಹೆಸರು ಮಾಡಿದ್ದ ಚಂದನವನದ ನಿತಿನ್ ಗೋಪಿ (Nithin Gopi) ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ನಿತಿನ್ ಗೋಪಿ ಬೆಂಗಳೂರಿನ ಇಟ್ಟುಮಡುವಿನ ಅಪಾರ್ಟ್ ಮೆಂಟ್ ನಲ್ಲಿ ಜೀವನ ಸಾಗಿಸುತ್ತಿದ್ದರು. ಇಂದು ಬೆಳಿಗ್ಗೆ ಅವರಿಗೆ ಹೃದಯಾಘಾತವಾಗಿದೆ (Heart Attack) ಎನ್ನಲಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಲಾಗಿದೆ. ಆದರೆ, ಮಾರ್ಗ ಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ವಿಷ್ಣು ವರ್ಧನ್ ಅಭಿನಯದ ಹಲೋ ಡ್ಯಾಡಿ, ಚಿರಬಾಂಧವ್ಯ, ನಿಶಬ್ಧ, ಕೆರಳಿದ ಕೇಸರಿ ಸೇರಿದಂತೆ ಹಲವು ಚಿತ್ರಗಳಲ್ಲಿ ಅವರು ಬಾಲ ಕಲಾವಿದರಾಗಿ ನಟಿಸಿದ್ದಾರೆ. ಶ್ರುತಿ ನಾಯ್ಡು (Shruti Naidu) ಪ್ರೊಡಕ್ಷನ್ ನಲ್ಲಿ ಹಾಗೂ ಬಾಲಾಜಿ ಟೆಲಿಫಿಲಮ್ಸ್ ಅಡಿಯಲ್ಲಿ ಮೂಡಿ ಬಂದ ಧಾರಾವಾಹಿಗಳಿಗೆ ನಿರ್ದೇಶಕರಾಗಿಯೂ ಇವರು ಕೆಲಸ ಮಾಡಿದ್ದಾರೆ. ಕನ್ನಡದಲ್ಲಿ ಮಾತ್ರವಲ್ಲ ತಮಿಳು ಧಾರಾವಾಹಿ ನಿರ್ದೇಶನ ಮಾಡಿದ್ದಾರೆ.
ಕೇವಲ 39ರ ವಯಸ್ಸಿನ ನಿತಿನ್, ಹೊಸ ಧಾರಾವಾಹಿಯನ್ನು ನಿರ್ದೇಶನ ಮಾಡಲು ಸಿದ್ಧತೆ ನಡೆಸಿದ್ದರು. ಆದರೆ, ಈ ಸಂದರ್ಭದಲ್ಲಿಯೇ ವಿಧಿ ಅವರನ್ನು ಕರೆಯಿಸಿಕೊಂಡಿದ್ದು, ಚಿತ್ರರಂಗ ಕಂಬನಿ ಮಿಡಿಯುತ್ತಿದೆ.








