ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹಗಳನ್ನು ಪ್ರತಿಷ್ಠಾಪಿಸದಂತೆ ಅಭಿಯಾನ
ಮಂಡ್ಯ: ರಾಜ್ಯದಲ್ಲಿ ಹಿಜಾಬ್ ನಿಂದ ಪ್ರಾರಂಭವಾದ ಧರ್ಮ ಯುದ್ಧ ವಿವಿಧ ಆಯಾಮಗಳನ್ನು ಪಡೆದುಕೊಂಡಿದ್ದು, ಈಗ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹಗಳನ್ನು ಪ್ರತಿಷ್ಠಾಪಿಸದಂತೆ ಅಭಿಯಾನ ಶುರುವಾಗಿದೆ.
ಈ ಅಭಿಯಾನವನ್ನುಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯದ ಸ್ಥಾನಿಕ ಶ್ರೀನಿವಾಸನ್ ಪ್ರಾರಂಭಿಸಿದ್ದಾರೆ. ಈ ಕುರತಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಮುಸ್ಲಿಮರು ದೇವರ ವಿಗ್ರಹಗಳನ್ನು ಕೆತ್ತನೆ ಮಾಡುವುದು ಸರಿಯಲ್ಲ. ಅದನ್ನು ಶಾಸ್ತ್ರವು ಕೂಡ ಒಪ್ಪಲ್ಲ. ಶಾಸ್ತ್ರದ ಪ್ರಕಾರ ವಿಶ್ವಕರ್ಮ ಜನಾಂಗದವರು ಮೂರ್ತಿ ಕೆತ್ತಬೇಕು. ಹೀಗಾಗಿ ಮುಸ್ಲಿಮರು ಕೆತ್ತನೆ ಮಾಡಿದ ವಿಗ್ರಹ ಪ್ರತಿಷ್ಠಾಪಿಸಬಾರದು ಎಂದು ಹೇಳಿದ್ದಾರೆ.
ಅಲ್ಲದೇ ಮುಸ್ಲಿಮರು ಕೆತ್ತಿದ ವಿಗ್ರಹ ಪ್ರತಿಷ್ಠಾಪಿಸದಂತೆ ಅಭಿಯಾನ ಮಾಡುವೆ. ರಾಜ್ಯದ ದೇವಾಲಯಗಳಿಗೆ ಭೇಟಿ ನೀಡಿ ಅಭಿಯಾನ ಮಾಡುತ್ತೇನೆ ಎಂದು ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇಗುಲದ ಸ್ಥಾನಿಕ ಶ್ರೀನಿವಾಸನ್ ತಿಳಿಸಿದ್ದಾರೆ.
ಇನ್ನು ಚೆಲುವನಾರಾಯಣಸ್ವಾಮಿಗೆ ದೀವಟಿಗೆ ಸಲಾಂ ವಿವಾದದ ಕುರಿತು ಮಾತನಾಡಿದ ಅವರು ಈ ವಿಚಾರಕ್ಕೆ ಸಂಬಂಧಿಸಿ ಮಂಡ್ಯ ಜಿಲ್ಲಾಡಳಿತ ದೀವಟಿಗೆ ಸಲಾಂ ವಿಚಾರವಾಗಿ ದೇವಾಲಯ ಆಡಳಿತ ಮಂಡಳಿಯಿಂದ ವರದಿ ಕೇಳಿತ್ತು. ಚೆಲುವನಾರಾಯಣಸ್ವಾಮಿ ದೇಗುಲದ ಕಾರ್ಯನಿರ್ವಾಹಕ ಅಧಿಕಾರಿ, ಪಾಂಡವಪುರ ಉಪವಿಭಾಗಾಧಿಕಾರಿ ಬಳಿ ಜಿಲ್ಲಾಧಿಕಾರಿ ವರದಿ ಕೇಳಿದರು.
ದೀವಟಿಗೆ ಸಲಾಂ ಎಂಬ ಹೆಸರಿನಲ್ಲಿ ದೇಗುಲದಲ್ಲಿ ಆರತಿ ನಡೆಯುತ್ತಿದೆ. ‘ಸಲಾಂ’ ಪದ ಬದಲಿಸಲು ಜಿಲ್ಲಾ ಧಾರ್ಮಿಕ ಪರಿಷತ್ ಮನವಿ ಸಲ್ಲಿಸಿತ್ತು. ಮನವಿಯನ್ನ ಪರಿಶೀಲಿಸಿ ಸ್ಪಷ್ಟವಾದ ಅಭಿಪ್ರಾಯ ತಿಳಿಸುವಂತೆ ಸೂಚನೆ ನೀಡಲಾಗಿತ್ತು. ಈ ಸಂಬಂಧ ಸಲಾಂ ಪದ ಕೈಬಿಡಬೇಕೆಂಬುದು ದೇಗುಲದ ಸ್ಥಾನಿಕರ ಅಭಿಪ್ರಾಯ. ‘ಸಲಾಂ’ ತೆಗೆದು ಸಂಧ್ಯಾರತಿ ಎಂದು ಹೆಸರಿಡಲು ಸ್ಥಾನಿಕರ ಅಭಿಪ್ರಾಯ ಪಟ್ಟಿದ್ದಾರೆ. ಈಓ, ಎಸಿಯವರಿಗೆ ಲಿಖಿತರೂಪದಲ್ಲಿ ಅರ್ಚಕರು ಅಭಿಪ್ರಾಯ ತಿಳಿಸಿದ್ದಾರೆ.