ಸೋಲು ಮತ್ತು ಯಶಸ್ಸನ್ನು ಸಮಾನ ವಾಗಿ ಸ್ವೀಕರಿಸಿದ ಒಬ್ಬ ವಿಜ್ಞಾನಿಯ ಯಶೋಗಾಥೆ ಯೇ ” ಅಗ್ನಿಯ ರೆಕ್ಕೆಗಳು “.
ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ರವರು ತನ್ನವರಿಗೋಸ್ಕರ ನೆರವು ನೀಡಲು ದಿನಪತ್ರಿಕೆ ಹಂಚಿದ ಓರ್ವ ಪುಟ್ಟ ಬಾಲಕ. ಇವರು ತಮಿಳುನಾಡಿನ ರಾಮೇಶ್ವರಂ ನ ಲ್ಲಿ 15 ಅಕ್ಟೋಬರ್ 1931 ರಂದು ಜನಿಸಿದರು. ಬಡ ಹಿನ್ನಲೆಯಿಂದಾಗಿ ತನ್ನ ಕುಟುಂಬಕ್ಕೆ ಅರ್ಥಿಕವಾಗಿ ಬೆಂಬಲಿಸುವ ಸಲುವಾಗಿ ಕಿರಿಯ ವಯಸ್ಸಿನಲ್ಲೇ ಕೆಲಸ ಆರಂಭಿಸಿದರು. ಪರಿಶ್ರಮದ ಜೊತೆಗೆ ವಿದ್ಯಾಭ್ಯಾಸ ಪೂರೈಸಿದರು.
ಇವರ ಆತ್ಮಕಥನವನ್ನು ವಿಮರ್ಶೆ ಮಾಡಲು ಹರ್ಷವಾಗುತ್ತಿದೆ. ಬಡವನಾದರೇನು, ಶ್ರೀಮಂತ ಆದರೇನು ಹೊಟ್ಟೆಗಾಗಿಯೇ ತಿನ್ನುವುದು.. ಎಷ್ಟೇ ಕಷ್ಟ ಇದ್ರೂ ತಾನೂ ಕೂಡ ಶ್ರದ್ದೆ, ಪರಿಶ್ರಮ, ವಿನಯತೆ, ಕನಸುಗಳಿಂದ ಗುರಿಯತ್ತ ನಡೆದರೆ ಯಾವುದೇ ಅಡೆತಡೆಗಳಿಲ್ಲದೇ ಯಶಸ್ಸು ಕಾಣಲು ಸಾಧ್ಯ ಎಂದು ನಿರೂಪಿಸಿದ್ದು ಅಬ್ದುಲ್ ಕಲಾಂ ರವರು.
ಬಡತನ ಎನ್ನುವುದು ಶಿಕ್ಷೆ ಅಲ್ಲ, ದೌರ್ಬಲ್ಯ ಅಲ್ಲ. ನಮ್ಮ ಜೀವನವನ್ನು ರೂಪಿಸುವ ಅಪರೂಪದ ಯಶಸ್ಸಿನ ಅಂಗ ಎಂದು ನನಗೆ ಅರಿವಾಗಿದ್ದು ಕಲಾಂ ರಿಂದ.
ಇವರು ಕಷ್ಟವನ್ನು ತೊರೆದು ಕನಸಿನಲ್ಲಿ ತಲ್ಲೀನರಾಗಿ ಯಶಸ್ಸಿನ ಸೂತ್ರವನ್ನು ಅರಿತು ಸಾಧಿಸಿ ಜಗತ್ತಿಗೆ ಮಾದರಿಯಾಗಿ ಬದುಕಿದವರು.. ಜಾತಿ, ಬೇಧ ಭಾವಗಳಿಲ್ಲದೆ ಸಂಯಮದ ಸ್ನೇಹ ಕೊಟ್ಟವರಲ್ಲಿ ಅಗ್ರರು. ಒಂದು ದಿನ ಸಾಗರದ ಬಳಿ ಕೆಲವು ಹಕ್ಕಿಗಳು ಎತ್ತರಕ್ಕೆ ಹಾರುತ್ತ ಪಟಪಟನೆ ರೆಕ್ಕೆ ಬಡಿದು ಆನಂದದಿಂದ ತೇಲುತ್ತ ಮತ್ತೆ ಕೆಳಗೆ ಬಂದವು.ಆ ಸುಂದರ ದೃಶ್ಯವೇ ಕಲಾಂರವರ ಮನದಲ್ಲಿ ತಾನೂ ಮುಂದೊಂದು ದಿನ ಕಂಡಿತಾ ಆಕಾಶಕ್ಕೇರುತ್ತೇನೆ ಎಂಬ ಕನಸು ಕಾಣಲು ನಾಂದಿಯಾಗಿದ್ದು.
ಮಾನವ ಎಲ್ಲಿದ್ದರು ಈ ವಿಶ್ವದ ಅವಿಭಾಜ್ಯ ಅಂಗ. ಹೀಗಾಗಿ ಕಷ್ಟ ಕೋಟಲೆಗಳ ಭಯ ಬಿಟ್ಟು, ಸಾಧನೆ ಮಾಡಲು ಬೇಕಾಗಿರುವ ಆತ್ಮಶಕ್ತಿಯನ್ನು ಪಡೆಯಿರಿ ಎಂದು ಮನವರಿಕೆ ಮಾಡಿದ್ದೂ ಕಲಾಂರವರೇ.
“ಯಾವ ವಿಷಯಗಳು ನೋವು ಕೊಡುತ್ತವೋ, ಅವು ಮುಂದೆ ನಮಗೆ ಶಿಕ್ಷಣ ನೀಡುತ್ತವೆ ” ಎಂದು ಮೊದಲಿಗೆ ಅರಿತುಕೊಂಡ ಮಹಾನ್ ಶಕ್ತಿ ಅಬ್ದುಲ್ ಕಲಾಂ.
ನಾನು ಶಾಲಾ ದಿನಗಳಲ್ಲಿ ನಿಷ್ಠೆಯಿಂದ ಓದಿದ ಮೊದಲ ಪುಸ್ತಕ “ಅಗ್ನಿಯ ರೆಕ್ಕೆಗಳು “. ಅವರು ಶಿಕ್ಷಕನಾಗಿ, ದೇಶಪ್ರೇಮದ ಜೊತೆಗೆ ಪ್ರಜೆಗಳಿಗೆ ಅತ್ಯುತ್ತಮ ರಾಷ್ಟ್ರಪತಿಯಾಗಿ ಸರ್ವರನ್ನು ಮಕ್ಕಳಂತೆ ಪ್ರೀತಿಸಿದ ಕರುಣಾಮಯಿ. ಇವರೇ ನನ್ನ ಬದುಕಿನ ಆದರ್ಶವಾಗಲು ಕಾರಣವಾಗಿದ್ದು ಈ ಸಂಗತಿಗಳು ಎಂದರೆ ತಪ್ಪಲ್ಲ. ತಮ್ಮ ಬದುಕಲ್ಲಿ ಸಾವಿರಾರು ಯೋಜನೆಗಳನ್ನು ಕೈಗೊಂಡು ಪ್ರತಿ ನಿಮಿಷವೂ ಕೆಲಸ ದಲ್ಲಿ ತಲ್ಲೀನರಾಗಿ ರಾಷ್ಟ್ರಪತಿ ಹುದ್ದೆಯನ್ನು ಅಲಂಕರಿಸಿ, ನಂತರ ಮಕ್ಕಳಿಗೆ ಜೀವನದ ಸಾರವನ್ನು ಹೇಳಿಕೊಟ್ಟು ಸನ್ಮಾರ್ಗದಲ್ಲಿ ನಡೆಸಿದ ಮಹಾತ್ಮ ಇವರು. ಇಸ್ರೋ, ಡಿ. ಆರ್. ಡಿ. ಒ. ಗಳಲ್ಲಿ ಕಾರ್ಯನಿರ್ವಹಿಸಿ ” ಭಾರತದ ಕ್ಷಿಪಣಿ ಮತ್ತು ಅಣುಬಾಂಬ್ ಗಳ ಜನಕ ” ಎಂದು ಖ್ಯಾತಿಗೊಂಡು 1998 ರಲ್ಲಿ ನ್ಯೂಕ್ಲಿಯರ್ ಪರೀಕ್ಷೆಯಲ್ಲಿ ಪ್ರಧಾನ ಪಾತ್ರ ವಹಿಸುತ್ತಾರೆ. ಇಂಜಿನೀಯರ್ ಆಗಿ, ವಿಜ್ಞಾನಿಯಾಗಿ, ಗುರುವಾಗಿ, ಕವಿಯಾಗಿ, ಸಾಹಿತಿಯಾಗಿ ಸಾಧನೆಯ ಶಿಖರ ಏರುತ್ತಾ ರಾಮಾನುಜನ್ ಪ್ರಶಸ್ತಿ, ವೀರ ಸಾವರ್ಕರ್ ಪ್ರಶಸ್ತಿ, ಭಾರತ ರತ್ನ, ಪದ್ಮವಿಭೂಷಣ ಪ್ರಶಸ್ತಿ ಗಳಿಗೆ ಭಾಜನರು ನಮ್ಮ ಕಲಾಂ..
ಜನಸಾಮಾನ್ಯರ ರಾಷ್ಟ್ರಪತಿಗೆ ಮಕ್ಕಳೆಂದರೆ ಅಕ್ಕರೆ. ಮಕ್ಕಳೊಂದಿಗೆ ಮಗುವಂತೆ ಬೆರೆತು ಅರ್ಹ ಮಾಹಿತಿ ನೀಡುವುದೇ ಇವರ ಕನಸು. ಮಕ್ಕಳಿಗೆ ಪಾಠ ಮಾಡುತ್ತ ಗುರುವಾಗಿ ತಾಯ್ನಾಡಿನಲ್ಲೇ ಮಡಿದ ಸಾಧಕ “ಡಾ. ಅಬ್ದುಲ್ ಕಲಾಂ “.
“ಕನಸು ಕಾಣಿರಿ ” ಎಂದಿದ್ದು ರಾತ್ರಿ ಕನಸು ಕಂಡು ಬೆಳಿಗ್ಗೆ ಮರೆಯುವುದಕ್ಕಲ್ಲ. ನಿರಂತರವಾದ ಕನಸಿನ ಜೊತೆಗೆ ಛಲ ಬಿಡದ ಪರಿಶ್ರಮದಿಂದ ಯಶಸ್ಸು ಕಾಣಿರಿ ಎನ್ನುವುದು ಕಲಾಂ ರವರ ನಿಲುವು ಎಂಬುದು ನನಗೆ ಅರಿವಾಗಿದ್ದೆ ಬಹುಶ “ಅಗ್ನಿಯ ರೆಕ್ಕೆಗಳು ‘ಆತ್ಮಕಥನ ವನ್ನು ಓದಿದ ಮೇಲೆ. ಪ್ರತಿಯೊಬ್ಬ ಸಾಧಕನ ಬದುಕನ್ನು ಆಳವಾಗಿ ನೋಡಿದ್ರೆ ಒಂದಲ್ಲ ಒಂದು ಅಘಾಧ ನೋವೇ ಅವರ ಯಶಸ್ಸಿಗೆ ಕಾರಣವಾಗಿತ್ತೆ.
ನಮ್ಮಲ್ಲಿ ಸಾಧಿಸುವ ಇಚ್ಛಾಶಕ್ತಿ, ತಾಳ್ಮೆ, ಗುರಿ, ಪ್ರಯತ್ನ ಇದ್ರೆ ಜಗತ್ತನ್ನೇ ಗೆಲ್ಲಬಹುದು. ಕಲಾಂ ರಂತೆ ಬಡತನದಲ್ಲಿ ಬೆಳೆದು ಮುಂದೆ ಯಶಸ್ಸು ಕಂಡವರು ಸಾವಿರಾರು ಮಂದಿ ಇದ್ದಾರೆ. ಆದರೆ ನನ್ನ ಬದುಕಿಗೆ ಆದರ್ಶವಾಗಿದ್ದು ಡಾ. ಅಬ್ದುಲ್ ಕಲಾಂ ರವರ ಆತ್ಮಕಥನ ” ಅಗ್ನಿಯ ರೆಕ್ಕೆಗಳು “.
-ಚೈತ್ರ ಕಬ್ಬಿನಾಲೆ








