ವಿಜಯನಗರದ ಪಾರಂಪರಿಕ ದಸರಾ ಆಚರಣೆಯ ವೈಭವ ಮತ್ತು ಶೃಂಗೇರಿಯ ರಾತ್ರಿ ದರ್ಬಾರ್ ಗಣರಾಜ್ಯೋತ್ಸವ ಪೆರೆಡ್ ಮಾದರಿ:Saakshatv Naavu kelada charitre episode4
ಇಂದು ಮೈಸೂರು ದಸರಾ ವಿಶ್ವಾದ್ಯಂತ ಪ್ರಸಿದ್ಧಿ ಪಡೆದಿದ್ದು ಕರ್ನಾಟಕದ ಪರಂಪರೆಯನ್ನು ಜಗತ್ಪ್ರಸಿದ್ಧ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ. ಹಾಗಾದರೆ ದಸರಾ ಆಚರಣೆಯನ್ನು ಹುಟ್ಟು ಹಾಕಿದ್ದು ಮೈಸೂರಿನ ಒಡೆಯರ್ ಅವರೇ? ಅಲ್ಲ, ಈ ಆಚರಣೆಯನ್ನು ಕರ್ನಾಟಕದಲ್ಲಿ ವಿಜೃಂಭಣೆಯಿಂದ ಆಚರಿಸಿಕೊಂಡು ಬಂದಿದ್ದು ದಕ್ಷಿಣ ಭಾರತದ ಕೊನೆಯ ಹಿಂದು ಸಾಮ್ರಾಜ್ಯ ಎಂದು ಬಿಂಬಿಸಲ್ಪಡುವ ವಿಜಯನಗರ ಸಾಮ್ರಾಜ್ಯ. ವಿಜಯನಗರದ ಪತನಾನಂತರ ಇದನ್ನು ಮೈಸೂರಿನ ಒಡೆಯರ್ ನಡೆಸಿಕೊಂಡು ಬಂದರು ಎಂದು ಹೇಳುವವರು ಒಮ್ಮೆ ಇತಿಹಾಸದ ಪುಟಗಳನ್ನು ತಿರುವಿ ನೋಡಬೇಕಾಗುತ್ತದೆ. Saakshatv Naavu kelada charitre episode4

ಅಂದಿನ ವಿಜಯನಗರದ ದಸರಾ ಆಚರಣೆಗೂ ಮತ್ತು ಇಂದು ಮೈಸೂರಿನಲ್ಲಿ ನಡೆಯುವ ದಸರಾ ಆಚರಣೆಗೂ ಏನಾದರೂ ಸಮಾನತೆ ಇದೆಯೇ? ಇಂದು ನಮಗೆ ಹೇಳಿಕೊಡಲಾಗುವ “ವಿಜಯನಗರದ ದಸರಾ ಉತ್ಸವದ ಉತ್ತರಾಧಿಕಾರಿ ಮೈಸೂರಿನವರು” ಎನ್ನುವುದರಲ್ಲಿ ಎಷ್ಟು ಸತ್ಯ ಉಂಟು. ಇಂದು ಪ್ರತಿ ವರ್ಷ ಜನವರಿ 26ರಂದು ಭಾರತದ ರಾಜಧಾನಿ ದೆಹಲಿಯಲ್ಲಿ ನಡೆಯುವ ಗಣರಾಜ್ಯೋತ್ಸವ ಆಚರಣೆಗೂ ಈ ಹಿಂದೆ ವಿಜಯನಗರದ ರಾಜಧಾನಿ ಹಂಪಿಯಲ್ಲಿ ನಡೆಯುತ್ತಿದ್ದ ಮಹಾನವಮಿ ಆಚರಣೆಗೂ ಏನಾದರೂ ಸಂಬಂಧ ಉಂಟೆ? ಗಣರಾಜ್ಯೋತ್ಸವದಲ್ಲಿ ಭಾರತೀಯ ಸೈನ್ಯಾಧಿಕಾರಿಗಳಿಗೆ ಯುದ್ಧದಲ್ಲಿ ತೋರಿಸಿದ ಶೌರ್ಯ ಮತ್ತು ಸಾಹಸಕ್ಕಾಗಿ ಪದಕ ನೀಡುವ ಸಂಪ್ರದಾಯವನ್ನು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಹುಟ್ಟುಹಾಕಿದ ಆ ರಾಜಮನೆತನ ಯಾವುದು? ಆ ಪುಣ್ಯಭೂಮಿ ಯಾವುದು ಎಂದು ಇತಿಹಾಸದ ಪುಟಗಳಲ್ಲಿ ನೋಡಿದರೆ ಅದಕ್ಕೆ ಸಿಗುವ ಉತ್ತರ – “ವಿಜಯನಗರ”.
ಅದೇ ರೀತಿ ಶೃಂಗೇರಿಯ ದಕ್ಷಿಣಾಮ್ನಾಯ ಶ್ರೀ ಶಾರದಾ ಪೀಠದಲ್ಲಿ ಮಹಾನವಮಿಯ ಪ್ರಯುಕ್ತ ನಡೆಯುವ ರಾತ್ರಿ ದರ್ಬಾರ್ ಮತ್ತು ಅದರಲ್ಲಿ ರಾಜ ಪೋಷಾಕಿನಲ್ಲಿ ಪಾಲ್ಗೊಳ್ಳುವ ಶೃಂಗೇರಿಯ ಜಗದ್ಗುರುಗಳಿಗೂ ವಿಜಯನಗರದ ರಾಯರಿಗೆ ಏನಾದರೂ ಸಂಬಂಧ ಉಂಟೆ? ಇನ್ನೂ 1799ರ ನಂತರದಲ್ಲಿ ಶ್ರೀರಂಗಪಟ್ಟಣ ಮತ್ತು ತದನಂತರ ಮೈಸೂರಿನಲ್ಲಿ ಮುಂದುವರಿಸಿಕೊಂಡು ಬಂದ ದಸರಾ ಆಚರಣೆ ಮತ್ತು ದರ್ಬಾರ್ ಮೇಲೆ ಬ್ರಿಟೀಷ್ ಸರ್ಕಾರದ ಪ್ರಭಾವ ಇತ್ತೇ? ಇನ್ನೂ ಹಲವಾರು ಬ್ರಿಟೀಷ್ ದಾಖಲಾತಿಯಲ್ಲಿ ನಮೂದಿಸಿಲಾಗಿರುವ ಯುರೋಪಿಯನ್ ದರ್ಬಾರ್ ಎಂದರೆ ಯಾವುದು? ಈ ದರ್ಬಾರ್ ನಲ್ಲಿ ಲಾಗು ಆಗುತ್ತಿದ್ದ ಆಂಗ್ಲೋ ಇಂಡಿಯನ್ ಸಾರ್ವಜನಿಕ ಆಚರಣೆ ಕೋಡ್ (Anglo Indian Public Ritual Code) ಯಾವುದು? ಹಾಗಾದರೆ ಬ್ರಿಟೀಷ್ ಸರ್ಕಾರದ ಅಧೀನದಲ್ಲಿ ಬದಲಾವಣೆಗೊಂಡ ಈ ದಸರಾ ಆಚರಣೆ ನಿಜಕ್ಕೂ ನಮ್ಮ ರಾಜ್ಯದ ಪಾರಂಪರಿಕ ಆಚರಣೆಯೇ? ಇಂತಹ ಹತ್ತು ಹಲವಾರು ವಿಷಯಗಳಿಗೆ ಉತ್ತರ ಇತಿಹಾಸದಲ್ಲಿ ಇದ್ದರೂ ಅದನ್ನು ನಮ್ಮ ಶಾಲೆ ಪಠ್ಯಕ್ರಮದಲ್ಲಿ ಮುಚ್ಚಿ ಹಾಕಲಾಗಿದೆ. ಇನ್ನಾದರು ಈ ಮಹಾನವಮಿ ಮತ್ತು ವಿಜಯದಶಮಿ ಹಬ್ಬ ಮತ್ತು ಅದರ ಮೂಲ ಆಚರಣೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಈ ನನ್ನ ಬರವಣಿಗೆಯ ಮೂಲ ಉದ್ದೇಶ.

1336ರಲ್ಲಿ ಹರಿಹರ ಮತ್ತು ಬುಕ್ಕರು ಸ್ಥಾಪಿಸಿದ ಮಹಾನ್ ಹಿಂದು ಸಾಮ್ರಾಜ್ಯ “ವಿಜಯನಗರ” 1565ರ ವರೆಗೂ ಇಡೀ ದಕ್ಷಿಣ ಭಾರತವನ್ನು ತಮ್ಮ ಹಿಡಿತದಲ್ಲಿ ಇಟ್ಟು ಕೊಂಡಿದ್ದರು. ತನ್ನ ಉತ್ತುಂಗದ ದಿನಗಳಲ್ಲಿ ವಿಜಯನಗರದ ರಾಯರ ಅಧೀನದಲ್ಲಿ ಸರಿಸುಮಾರು 72 ಸಾಮಂತರು ಇದ್ದು ವಿಜಯನಗರ ರಾಜ್ಯದ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದರು. ವಿಜಯನಗರದಲ್ಲಿ ಹಿಂದುಗಳ ಎಲ್ಲಾ ಹಬ್ಬಗಳನ್ನು ಆಚರಿಸುತ್ತಿದ್ದು ಅದರಲ್ಲಿ ವಿಶೇಷವಾಗಿ ಮಹಾನವಮಿ ಮತ್ತು ವಿಜಯದಶಮಿ ಹಬ್ಬ ಮತ್ತು ಅದರ ಆಚರಣೆ ಬಹಳ ಪ್ರಾಮುಖ್ಯತೆ ಪಡೆದಿದ್ದು ಇದನ್ನು ವೀಕ್ಷಿಸಲು ಅಕ್ಕಪಕ್ಕದ ರಾಜರು, ಯುವರಾಜರು, ಸಾಮಂತರು, ರಾಜ್ಯಪಾಲರು ಮತ್ತು ವಿದೇಶೀ ಪ್ರವಾಸಿಗರು, ವ್ಯಾಪಾರಿಗಳು ಮತ್ತು ನಿಯೋಗಿಗಳು ಭಾಗವಹಿಸುತ್ತಿದ್ದರು.
ಮಹಾನವಮಿ ಮತ್ತು ಅದರ ಪ್ರಾಮುಖ್ಯತೆಗೆ ಸಂಬಂಧಿಸಿದಂತೆ ನಮ್ಮ ಪುರಾಣಗಳಲ್ಲಿ ಬಹಳಷ್ಟು ಉಲ್ಲೇಖ ಸಿಗುತ್ತದೆ. ಶ್ರೀ ರಾಮ ತಾಯಿ ಸೀತೆಯನ್ನು ರಾವಣನನ್ನು ಸಂಹರಿಸಿ ಬಿಡುಗಡೆ ಗೊಳಿಸಿದ್ದು ವಿಜಯ ದಶಮಿಯಂದು ಹಾಗಾಗಿ ಸ್ವಾಭಾವಿಕವಾಗಿಯೇ ನಮ್ಮ ದೇಶದಲ್ಲಿ ಈ ಹಿಂದೆ ವಿಜಯ ದಶಮಿಯಂದು ಪೂಜೆ ಸಲ್ಲಿಸಿ ದಂಡು ಯಾತ್ರೆ ಕೈಗೊಳ್ಳುತ್ತಿದ್ದರು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಅಂದಿನ ಕಾಲದಲ್ಲಿ ವಿಜಯದಶಮಿಯಲ್ಲಿ ಶುರುವಾಗುವ ಯುದ್ಧ ಮತ್ತು ದಂಡ ಯಾತ್ರೆಗಳು ಮಳೆಗಾಲದ ಪ್ರಾರಂಭದೊಂದಿಗೆ ಸಮಾಪ್ತಿ ಗೊಳ್ಳುತ್ತಿತ್ತು. ಇನ್ನೂ ವಿಜಯನಗರದಲ್ಲಿ ಆಚರಿಸಲಾಗುತ್ತಿದ್ದ ಮಹಾನವಮಿ ಮತ್ತು ವಿಜಯದಶಮಿ ಹಬ್ಬದ ವೈಭವ, ಸಡಗರ ಮತ್ತು ಸಂಭ್ರಮ ಎಂದೆಂದಿಗು ಅಜರಾಮರ ಏಕೆಂದರೆ ಅಂತಹ ಆಚರಣೆಯನ್ನು ನಡೆಸಲು ಮುಂದೆಂದು ಯಾರಿಂದಲೂ ಸಾಧ್ಯವಾಗಲಿಲ್ಲ. ಮಾರ್ಕಂಡೇಯ ಪುರಾಣದಲ್ಲಿ ಮಹಾನವಮಿ ಮತ್ತು ವಿಜಯದಶಮಿಯನ್ನು ಯಾವ ರೀತಿಯಲ್ಲಿ ಆಚರಿಸಬೇಕೆಂದು ವಿಸ್ತಾರವಾಗಿ ತಿಳಿಸಲಾಗಿದೆ.
ವಿಜಯನಗರಕ್ಕೆ ಭೇಟಿ ನೀಡಿದ ವಿದೇಶಿ ಪ್ರವಸಿಗರಲ್ಲಿ ಅಬ್ದುಲ್ ರಜಾಕ್ (Abdul Razzaq), ಡೊಮಿಂಗೊ ಪೇಸ್ (Domingo Paes), ಫಿಮಾವು ನುನಿಜ್ (Femao Nuniz) ಮತ್ತು ನಿಕೋಲೋ ಕೊಂಟಿ (Nicolo Conti) ಹಂಪಿಯಲ್ಲಿ ಆಚರಿಸಲಾಗುತ್ತಿದ್ದ ಮಹಾನವಮಿ ಮತ್ತು ವಿಜಯದಶಮಿಯ ಸಂಪೂರ್ಣ ಮಾಹಿತಿಯನ್ನು ದಾಖಲಿಸಿದ್ದಾರೆ. ಮಹಾನವಮಿ ಎಂದರೆ ಒಂಬತ್ತು ದಿನ ಮತ್ತು ರಾತ್ರಿ ವಿಜಯನಗರದ ರಾಜಧಾನಿ ಹಂಪಿ ಭವ್ಯವಾಗಿ ಅಲಂಕೃತಗೊಂಡು ಸಾಕ್ಷಾತ್ ಇಂದ್ರನ ಅಮರಾವತಿಯಂತೆ ಕಂಗೊಳಿಸುತ್ತಿತ್ತು. ಈ ಹಬ್ಬದಲ್ಲಿ ಪಾಲ್ಗೊಳ್ಳಲು ದೂರದ ದೇಶ ಮತ್ತು ವಿದೇಶಗಳಿಂದ ರಾಜರು, ಪ್ರತಿನಿಧಿಗಳು ಮತ್ತು ಪ್ರಬಲ ವ್ಯಾಪಾರಿಗಳು ಬರುತ್ತಿದ್ದರು. ಈ ಹಬ್ಬದ ಪ್ರಯುಕ್ತ ಎಲ್ಲಾ ದೇಶದ (ವಿದೇಶಿಯರು ಸೇರಿ) ವ್ಯಾಪಾರಿಗಳು ತಮ್ಮ ದೇಶದ ವಸ್ತುಗಳನ್ನು ಮಾರಾಟ ಮಾಡಲು ಹಂಪಿಗೆ ಬರುತ್ತಿದ್ದು ಅವರಿಗಾಗಿ ವಿಶೇಷವಾದ ಪ್ರದರ್ಶನ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿತ್ತು.

ಇನ್ನೂ ಅಬ್ದುಲ್ ರಜಾಕ್ ಪ್ರಕಾರ ಕೆಲವು ಮಳಿಗೆಗಳು ಎರಡು ಮತ್ತು ಐದು ಅಂತಸ್ತಿನಷ್ಟು ಎತ್ತರವಿದ್ದು ಅವುಗಳನ್ನು ಮೇಲಿಂದ ಕೆಳಗಿನ ವರೆಗೂ ಬಣ್ಣ ಬಣ್ಣದ ಮನುಷ್ಯ, ಪ್ರಾಣಿ, ಪಕ್ಷಿ ಮತ್ತು ಪ್ರಕೃತಿಯ ಚಿತ್ರಗಳಿಂದ ಅಲಂಕಾರ ಮಾಡಿದ್ದು ಇವುಗಳು ನೋಡಲು ಸುಂದರವಾಗಿದ್ದವು. ಇನ್ನೂ ಈ ಮಳಿಗೆಗಳಲ್ಲಿ ಕೆಲವು ಯಂತ್ರದ ಮುಖೇನ ಸುತ್ತಲೂ ತಿರುಗುತ್ತಿದ್ದು ಪ್ರತಿ ಕ್ಷಣ ಹೊಸ ಹೊಸ ನೋಟವನ್ನು ನೀಡುತ್ತಿತ್ತು. ನಮ್ಮ ನಾಡಿನಲ್ಲಿ ಹಿಂದಿನಿಂದಲೂ ನವರಾತ್ರಿಯ ಪ್ರಯುಕ್ತ ರಾಜರು ಮತ್ತು ಜಗದ್ಗುರುಗಳು ಉಪವಾಸವನ್ನು ಕೈಗೊಳ್ಳುವುದು ಸರ್ವೇಸಾಮಾನ್ಯ ಹಾಗಾಗಿ ಇಂದಿಗೂ ಸಹಾ ಜನರು ಮಹಾನವಮಿಯಲ್ಲಿ ರಾಜ ಮತ್ತು ಜಗದ್ಗುರುಗಳ ದರ್ಶನ ದೇವರ ದರ್ಶನ ಮಾಡಿದಷ್ಟೇ ಪ್ರಾಮುಖ್ಯತೆ ಸಿಗುತ್ತದೆ ಎಂದು ನಂಬಿದ್ದಾರೆ. ವಿಜಯನಗರದ ರಾಯರು ತಮ್ಮ ಪಟ್ಟದ ರಾಣಿಯ ಸಮೇತವಾಗಿ ಮಹಾನವಮಿಯ ಮೊದಲ ದಿನ ದೇವರ ಸಮೂಹದಲ್ಲಿ ಕಂಕಣ ತೊಟ್ಟಿ ಮಹಾನವಮಿ ಹಬ್ಬಕ್ಕೆ ತಮ್ಮನ್ನು ತಾವು ಅಣಿಮಾಡುಕೊಳ್ಳುತ್ತಿದ್ದರು. ಮಹಾನವಮಿ ಮುಗಿಯುವವರೆಗೂ ರಾಜ ಮತ್ತು ರಾಣಿ ಅರಮನೆ ಆವರಣವನ್ನು ಬಿಟ್ಟುಹೋಗುವ ಹಾಗೆ ಇರಲಿಲ್ಲ.
ಮಹಾನವಮಿಯಲ್ಲಿ ಅರಮನೆಯ ಮುಂಭಾಗದಲ್ಲಿ ಕಂಬಗಳ ಮೂಲಕ ಒಂಬತ್ತು ಅಂತಸ್ತಿನ ಬೃಹತ್ ಗಾತ್ರದ ಕಟ್ಟಡವನ್ನು ಕಟ್ಟಿ ಅದನ್ನು ಅತ್ಯಂತ ಸುಂದರವಾಗಿ ಅಲಂಕಾರ ಮಾಡಲಾಗುತ್ತಿತ್ತು ಎಂದು ವಿದೇಶೀ ಪ್ರವಾಸಿಗರು ಹೇಳಿರುವುದು ಗಮನಾರ್ಹವಾಗಿದೆ. ಒಂಬತ್ತನೇ ಮಹಡಿಯಲ್ಲಿ ರಾಜನ ಸಿಂಹಾಸನವನ್ನು ಇಡಲಾಗುತ್ತಿದ್ದು ಆ ರತ್ನಖಚಿತ ಸಿಂಹಾಸದ ಬಗ್ಗೆ ವರ್ಣನೆ ಮಾಡಲಾಗಿದೆ. ಬಂಗಾರದ ಸಿಂಹಾಸನಕ್ಕೆ ನಾಲ್ಕು ಕಡೆ ಸಿಂಹ, ಕೆಂಪು ಬಣ್ಣದ ಮಾಣಿಕ್ಯ, ಪಚ್ಚೆ, ಮುತ್ತು, ವಜ್ರ ವೈಡೂರ್ಯದಿಂದ ಅಲಂಕಾರ ಮಾಡಿದ್ದು ಸಿಂಹಾಸನದ ಮುಂಭಾಗದಲ್ಲಿ ದೇವರ ವಿಗ್ರಹ ಇರುವ ಬಗ್ಗೆ ಮಾಹಿತಿ ನೀಡಲಾಗಿದೆ. ಇನ್ನೂ ಕೃಷ್ಣದೇವರಾಯರು ಒರಿಸ್ಸಾದ ಉದಯಗಿರಿಯ ಮೇಲೆ ವಿಜಯ ಸಾಧಿಸಿದ ಪ್ರತೀಕವಾಗಿ ನಿರ್ಮಾಣವಾದ ಬೃಹತ್ ಗಾತ್ರದ ಮೂರು ಅಂತಸ್ತಿನ ಪೂರ್ವಾಭಿಮುಖ ಬಯಲು ಕಟ್ಟಡವೇ (ವೇದಿಕೆ) “ಮಹಾನವಮಿ ದಿಬ್ಬ”. ಮಹಾನವಮಿಯ ಪ್ರಯುಕ್ತ ಈ ದಿಬ್ಬದ ಮೇಲೆ ಹಂಪಿಯ ಊರು ದೇವತೆ ” ಪಂಪ” ವನ್ನು ಪ್ರತಿಷ್ಠಾಪಿಸಿ ಅದರ ನಾಲ್ಕು ಸುತ್ತಲೂ ವಜ್ರ ವೈಡೂರ್ಯದಿಂದ ಹೆಣೆದ ಬಟ್ಟೆಗಳಿಂದ ಮುಚ್ಚುತ್ತಿದ್ದು ರಾಜ ಮತ್ತು ರಾಣಿ ಪ್ರತಿದಿನ ಬೆಳಗ್ಗೆ ಬಂದು ಬ್ರಾಹ್ಮಣರ ಸಮ್ಮುಖದಲ್ಲಿ ಪೂಜೆಯನ್ನು ಸಲ್ಲಿಸಿ ಹೊರ ಬಂದಾಗ ಮೊದಲನೆಯ ದಿನ ಒಂಬತ್ತು ಎಮ್ಮೆ, ಒಂಬತ್ತು ಕುರಿಗಳು ಮತ್ತು ಒಂಬತ್ತು ಆಡುಗಳನ್ನು ಬಲಿ ನೀಡಲಾಗುತ್ತಿತ್ತು (ಈ ಸಂಖ್ಯೆಯನ್ನು ದಿನದಿಂದ ದಿನಕ್ಕೆ ಏರಿಸುತ್ತ ಕೊನೆಯ ದಿನ ಅಂದರೆ ಮಹಾನವಮಿಯ ದಿನದಂದು 250 ಎಮ್ಮೆ, ಮತ್ತು 4000 ಕುರಿ ಹಾಗೂ ಆಡುಗಳನ್ನು ಬಲಿ ನೀಡುತ್ತಿದ್ದರು).
ತದನಂತರ ಕುದುರೆ ಮತ್ತು ಆನೆಗಳಿಗೆ ಪೂಜೆ ಸಲ್ಲಿಸಿ ರಾಜ ಮತ್ತು ರಾಣಿ ಅರಮನೆ ಸೇರುತ್ತಿದ್ದರು. ಇನ್ನೂ ಮಹಾನವಮಿಯ ಪ್ರಯುಕ್ತ ಪ್ರತಿದಿನ ಮಧ್ಯಾಹ್ನ ಮೂರು ಗಂಟೆಗೆ ರಾಜ ಮತ್ತು ರಾಣಿ ಬಿಳಿ ಬಣ್ಣದ ರೇಷ್ಮೆ ಬಟ್ಟೆ ಧರಿಸಿ ಮತ್ತು ಕಿರೀಟಧಾರಿಯಾಗಿ ಮಹಾನವಮಿ ದಿಬ್ಬದ ಮೇಲೆ ಇರುವ ಸಿಂಹಾಸನವನ್ನು ಅಲಂಕರಿಸುತ್ತಿದ್ದರು. ವಿಜಯನಗರದ ರಾಯರ ಆದೇಶದಂತೆ ಎಲ್ಲಾ 72 ಸಾಮಂತರು ಮತ್ತು ರಾಜ್ಯಪಾಲರು ಕಡ್ಡಾಯವಾಗಿ ತಮ್ಮ ಪರಿವಾರದ ಸಮೇತ ಹಂಪಿಗೆ ಬರಬೇಕಾಗಿತ್ತು. ಇನ್ನೂ ವಿಜಯನಗರದ ರಾಯರನ್ನು ನೋಡಲು ಬರಬೇಕಾದರೆ ಕೆಲವು ಶಿಷ್ಟಾಚಾರವನ್ನು ಪಾಲಿಸಬೇಕಾಗುತ್ತಿತ್ತು ಹಾಗಾಗಿ ಈ ಸಾಮಂತರು ಆ ವರ್ಷದ ಕರ ವಸೂಲಿ ಮಾಡಿದ ನಿರ್ದಿಷ್ಟ ಭಾಗವನ್ನು ರಾಜನಿಗೆ ಉಡುಗೊರೆ ಯೊಂದಿಗೆ ಸಮರ್ಪಣೆ ಮಾಡ ಬೇಕಿತ್ತು. ಇನ್ನೂ ಅದೇ ರೀತಿ ಪ್ರತಿ ಸಾಮಂತರು ತಮ್ಮ ಶಿಷ್ಟಾಚಾರದ ನಿಮಿತ್ತ ನಿರ್ದಿಷ್ಟ ಸಂಖ್ಯೆಯ ಸೈನ್ಯ ತುಕಡಿ, ಕುದುರೆ, ಆನೆ, ಒಂಟೆ, ರಥ, ಬಂದೂಕು, ರಾಕೆಟ್ ಮತ್ತು ತೋಪುಗಳ ಜೊತೆಗೆ ಬರ ಬೇಕಿತ್ತು. ರಾಣಿ ಮತ್ತು ಅವರ ಸಹಸ್ರಾರು ಪರಿಚಾರಕಿಯರು ಎಷ್ಟೊಂದು ಒಡವೆಗಳನ್ನು ಧರಿಸುತ್ತಿದ್ದರು ಎಂದರೆ ಅವರನ್ನು ಸಹಕರಿಸಲು ಮತ್ತೊಂದಿಷ್ಟು ಜನಗಳು ಬೇಕಿತ್ತು. ವಿಜಯನಗರದ ಕೃಷ್ಣದೇವರಾಯನ ಕಾಲದಲ್ಲಿ ಅವನಿಗೆ ಬಹಳ ನಿಷ್ಠೆ ಇರುವ ಮೂರು ಸಾಮಂತರು ರಾಜನಿಗೆ ಬಹಳ ಪ್ರಿಯವಾದ ಮೂರು ವಸ್ತುಗಳನ್ನು ಹಿಡಿಯುತ್ತಿದ್ದರು.

ಜಿಂಜಿಯ ನಾಯಕರು ಎಲೆ ಅಡಿಕೆ ಪೆಟ್ಟಿಗೆ, ತಂಜಾವೂರಿನ ನಾಯಕರು ಪೀಕಾದಾನಿ ಮತ್ತು ಇಕ್ಕೇರಿಯ ನಾಯಕರು ಪಟ್ಟದ ಕತ್ತಿಯನ್ನು ಹಿಡಿದು ರಾಜನ ಹಿಂದೆ ಮಹಾನವಮಿ ದಿಬ್ಬದಲ್ಲಿ ನಿಲ್ಲುತ್ತಿದ್ದರು. ಪ್ರತಿ ದಿನ ಮೂರು ಗಂಟೆಯ ನಂತರ ಜೆಟ್ಟಿಗಳ ಕಾಳಗ, ಕತ್ತಿ ವರಸೆ ಹೀಗೆ ಹತ್ತು ಹಲವಾರು ಆಯುಧಗಳ ಕಾಳಗ ನಡೆಯುತ್ತಿತ್ತು. ಸೂರ್ಯಾಸ್ತದ ನಂತರ ಇಡೀ ಮಹಾನವಮಿ ದಿಬ್ಬ ಮತ್ತು ಅದರ ಸುತ್ತಮುತ್ತಲಿನ ಪರಿಸರ ಬೆಳಕಿನಲ್ಲಿ ಕಂಗೊಳಿಸುತ್ತಿತ್ತು. ಕುಸ್ತಿ ಮತ್ತು ಇತರೆ ಕ್ರೀಡೆಯ ನಂತರ ಜಾನಪದ ಸಂಗೀತ, ನೃತ್ಯ ಮತ್ತು ನಾಟಕದ ಸರದಿ. ಇದಾದ ನಂತರ ರಾಯರ ಸಾಮಂತರು ಸಿಡಿಮದ್ದಿನ ಪ್ರದರ್ಶನ, ರಾಕೆಟ್ ಉಡಾವಣೆ, ಬಂದೂಕು ಹಾಗೂ ತೋಪು ಚಲಾಯಿಸಿ ತಮ್ಮ ಸಾಮರ್ಥ್ಯವನ್ನು ರಾಯರಿಗೆ ತೋರಿಸ ಬೇಕಿತ್ತು. ಅದೇ ರೀತಿ ಕುದುರೆ ಸಾರೋಟಿ, ವಿವಿಧ ಆಕಾರದ ರಥಗಳು, ಕುದುರೆ, ಆನೆ, ಒಂಟೆ ಮತ್ತು ಸೈನಿಕರ ಪಥಸಂಚಲನ ಹಾಗೂ ಸ್ತಬ್ಧ ಚಿತ್ರಗಳ ರಥವನ್ನು ರಾಯರ ಮುಂದೆ ಪ್ರದರ್ಶಸಿ ಅವರ ಮೆಚ್ಚುಗೆಗೆ ಪಾತ್ರವಾಗಬೇಕಿತ್ತು. 72 ಸಾಮಂತರು ಮಹಾನವಮಿಯ ನಿರ್ದಿಷ್ಟವಾದ ದಿನದಂದು ರಾಯರಿಗೆ ಉಡುಗೊರೆ, ಕಪ್ಪಾ ಮತ್ತು ಕರ ವಸೂಲಿಯನ್ನು ಸಮರ್ಪಿಸಿ ತಮ್ಮ ನಿಷ್ಠೆಯನ್ನು ತೋರಿದರೆ ಅಕ್ಕಪಕ್ಕದ ರಾಜರು ಹಾಗೂ ಪ್ರತಿನಿಧಿಗಳು ಉಡುಗೊರೆಯನ್ನು ನೀಡಿ ರಾಯರ ಮಿತ್ರತ್ವವನ್ನು ಅಪೇಕ್ಷಸುತ್ತಿದ್ದರು. ಅದೇ ರೀತಿ ವಿದೇಶಿ ವ್ಯಾಪಾರಿಗಳು ರಾಯರ ಆಶ್ರಯ ಬಯಸಿ ಅಮೂಲ್ಯವಾದ ಉಡುಗೊರೆಯನ್ನು ನೀಡುತ್ತಿದ್ದರು.
ಇನ್ನೂ ಕೊನೆಯ ದಿನದಂದು ಅಂದರೆ ವಿಜಯದಶಮಿಯಂದು ಇಂದು ದೆಹಲಿಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ನಡೆಯುವ ಸೈನ್ಯ ಪಡೆಯ ಶಕ್ತಿ ಪ್ರದರ್ಶನವನ್ನು ವಿಜಯನಗರದಲ್ಲಿ ಅಂದೆ ನಡೆಯುತ್ತಿತ್ತು. ಇದಕ್ಕೆ ಪ್ರಮುಖ ಕಾರಣ ಅಂದಿನ ಕಾಲದಲ್ಲಿ ಯುದ್ಧ ಮತ್ತು ದಂಡ ಯಾತ್ರೆಗಳು ಪ್ರಾರಂಭವಾಗುತ್ತಿದ್ದಿದ್ದು ವಿಜಯದಶಮಿ ನಂತರ ಹಾಗಾಗಿ ಈ ಶಕ್ತಿ ಪ್ರದರ್ಶನ ಶತ್ರುಗಳಲ್ಲಿ ನಡುಕ ಹುಟ್ಟಿಸಿದರೆ ಮಿತ್ರ ರಾಜರಲ್ಲಿ ವಿಶ್ವಾಸ ಮೂಡಿಸುತ್ತಿತ್ತು. ಇನ್ನೂ ಈ ಮಹಾನವಮಿಯ ಪ್ರಯುಕ್ತ ವಿಜಯನಗರದ ಪರವಾಗಿ ಯುದ್ಧದಲ್ಲಿ ಶೌರ್ಯ ಮತ್ತು ಸಾಹಸಗಳನ್ನು ಪ್ರದರ್ಶಿಸಿದ ಯೋಧರಿಗೆ ಮಹಾನವಮಿ ದಿಬ್ಬದಲ್ಲಿ ಇಂದಿನ ಗಣರಾಜ್ಯೋತ್ಸವದಲ್ಲಿ ಪದಕ ನೀಡಿ ಸನ್ಮಾನ ಮಾಡುವ ರೀತಿಯಲ್ಲೇ ಅಂದು ರಾಯರು ಇಂತಹ ಯೋಧರಿಗೆ ಎರಡು ಬಂಗಾರ ಮತ್ತು ಅಮೂಲ್ಯ ಮಾಣಿಕ್ಯದಿಂದ ತಯಾರಿಸಿದ ಬೀಸಣಿಗೆಯನ್ನು ನೀಡುತ್ತಿದ್ದರು. ಈ ಬೀಸಣಿಗೆಗೆ ಆಯ್ದ ಹಸುವಿನ ಬಾಲದ ಬಿಳಿ ಬಣ್ಣದ ಪೂಚಿನಿಂದ ಅಲಂಕರಿಸಿ ಅದನ್ನು ರಾಯರ ಮುಂಭಾಗದಲ್ಲಿ ನೆಲದ ಮೇಲೆ ಇಡಲಾಗಿದ್ದು ಆ ಯೋಧ ರಾಯರಿಗೆ ನಮಸ್ಕರಿಸಿ ಅದನ್ನು ಸ್ವಿಕರಿಸ ಬೇಕಿತ್ತು. ಇನ್ನೂ 72 ಸಾಮಂತರಲ್ಲಿ ಯಾರಾದರೂ ಯುದ್ಧದಲ್ಲಿ ಪರಾಕ್ರಮವನ್ನು ಪ್ರದರ್ಶಿಸಿದರೆ ಅಂತಹವರಿಗೆ ಈ ಮಹಾನವಮಿ ದಿಬ್ಬದಲ್ಲಿ “ನಾಯಕ” ಎಂಬ ಬಿರುದನ್ನು ನೀಡಿ ಅದನ್ನು ವಂಶಪಾರಂಪರ್ಯವಾಗಿ ಉಪಯೋಗಿಸಲು ರಾಯರು ಆದೇಶಿಸುತ್ತಿದ್ದರು. ರಾಯರಿಗೆ ಬಹಳ ಇಷ್ಟವಾದ ಸಾಮಂತರಿಗೆ, ಮಂತ್ರಿಗಳಿಗೆ, ಯೋಧರಿಗೆ ಮತ್ತು ಕಲಾವಿದರಿಗೆ ಅವರ ಸಾಧನೆ ಮೆಚ್ಚಿ ರಾಯರು ಮಹಾನವಮಿ ಆಚರಣೆಯ ಸಂದರ್ಭದಲ್ಲಿ ಅವರ ಪಾದವನ್ನು ಮುಟ್ಟಿ, ನಮಸ್ಕರಿಸಿ ಅದಕ್ಕೆ ಮುತ್ತು ನೀಡಲು ಅವಕಾಶ ಕಲ್ಪಿಸುತ್ತಿದ್ದರು.

ಇನ್ನೂ ನವರಾತ್ರಿಯ ನಂತರ ಶಕ್ತಿ ದೇವತೆ ದುರ್ಗೆಗೆ ಕಾಡು ಕೋಣ ಬಲಿ ನೀಡುವ ಪದ್ದತಿ ಇದ್ದು ರಾಯರು ಸೂಚಿಸಿದ ಸಾಮಂತ ಅಥವಾ ಅಧಿಕಾರಿ ಒಂದೆ ಏಟಿಗೆ ಕೋಣವನ್ನು ಕಡಿಯ ಬೇಕಿತ್ತು. ಒಟ್ಟಾರೆ ಹೇಳುವುದಾದರೆ ವಿಜಯನಗರದ ಮಹಾನವಮಿ ಮತ್ತು ವಿಜಯದಶಮಿ ಆಚರಣೆ ಧಾರ್ಮಿಕ ಮತ್ತು ರಾಜಕೀಯ ದೃಷ್ಟಿಕೋನದಿಂದ ಬಹಳ ಮುಖ್ಯವಾಗಿತ್ತು. 1565ರ ಐತಿಹಾಸಿಕ ರಕ್ಕಸಗಿ ತಂಗಡಿ (ತಾಳಿಕೋಟೆ) ಯುದ್ಧದಲ್ಲಿ ಐದು ವೈರಿಗಳು ಇಸ್ಲಾಂ ಧರ್ಮದ ಹೆಸರಿನಲ್ಲಿ ಒಂದಾಗಿ ವಿಜಯನಗರದ ಪತನಕ್ಕೆ ನಾಂದಿ ಹಾಡುತ್ತಾರೆ. ಆದರೆ ಎಲ್ಲರಿಗೂ ಗೊತ್ತಿರುವ ಹಾಗೆ ಈ ಯುದ್ಧದ ತರುವಾಯ ಅಳಿಯ ರಾಮರಾಯರ ಕಿರಿಯ ಸಹೋದರ ತಿರುಮಲರಾಯ ವಿಜಯನಗರದ ರಾಜಧಾನಿಯನ್ನು ಮೊದಲು ಇಂದಿನ ಆಂದ್ರಪ್ರದೇಶದ ಪೆನುಕೊಂಡು ತದನಂತರ ಚಂದ್ರಗಿರಿಗೆ ಸ್ಥಳಾಂತರಿಸಿ ಆಂದ್ರಪ್ರದೇಶ ಮತ್ತು ತಮಿಳುನಾಡಿನ ಪ್ರಾಂತ್ಯದಲ್ಲಿ ತಮ್ಮ ರಾಜ್ಯಭಾರವನ್ನು ಮುಂದುವರೆಸುತ್ತಾ ಶತಮಾನಗಳಿಂದ ನಡೆದುಕೊಂಡು ಬಂದಿದ್ದ ಮಹಾನವಮಿ ಮತ್ತು ವಿಜಯದಶಮಿ ಆಚರಣೆಯನ್ನು ತಮ್ಮ ಶಕ್ತಿಗೆ ಅನುಗುಣವಾಗಿ ನಡೆಸಿಕೊಂಡು ಹೋಗುತ್ತಾರೆ. ಇನ್ನೂ 1565ರ ನಂತರ ವಿಜಯನಗರದ ಹಲವಾರು ಸಾಮಂತರು ಸ್ವತಂತ್ರವಾಗಿ ರಾಜ್ಯಭಾರ ಮಾಡಿದರೆ ಅದರಲ್ಲಿ ನಾಲ್ಕು ಜನ ಮಾತ್ರ ವಿಜಯನಗರದ ಪರಂಪರೆ, ಸಂಸ್ಕೃತಿ ಮತ್ತು ಧಾರ್ಮಿಕ ಆಚರಣೆಗಳಿಗೆ ನಿಜವಾದ ಉತ್ತರಾಧಿಕಾರಿಯಾಗಿ ಅದನ್ನು ಮುಂದೆ ನಡೆಸಿಕೊಂಡು ಹೋಗುತ್ತಾರೆ ಅವರೇ ಮದುರೈ, ತಂಜಾವೂರು, ಜಿಂಜೀ ಮತ್ತು ಇಕ್ಕೇರಿಯ ನಾಯಕರು. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಈ ಎಲ್ಲಾ ನಾಯಕರನ್ನು ಆ ಪ್ರದೇಶಗಳಲ್ಲಿ ನೇಮಿಸಿದ್ದು ವಿಜಯನಗರದ ರಾಯರೇ (1565ಕ್ಕು ಮುಂಚೆಯೇ). ಹಾಗಾಗಿಯೇ 1565ರ ನಂತರ ವಿಜಯನಗರದ ದಸರಾ ಆಚರಣೆಯನ್ನು ಅದರ ಉತ್ತರಾಧಿಕಾರಿಯಾಗಿ ನಡೆಸಿಕೊಂಡು ಹೋಗಿದ್ದು ವಿಜಯನಗರದ ಅರವಿಡು ವಂಶ, ಮದುರೈ ನಾಯಕರು, ತಂಜಾವೂರಿನ ನಾಯಕರು, ಜಿಂಜೀಯ ನಾಯಕರು ಮತ್ತು ಇಕ್ಕೇರಿಯ ನಾಯಕರು ಹೊರೆತು ಮೈಸೂರಿನ ಒಡೆಯರ್ ಖಂಡಿತ ಅಲ್ಲವೇ ಅಲ್ಲ.
ಶ್ರೀ ವಿದ್ಯಾರಣ್ಯರು ಮತಂಗ ಪರ್ವತದಲ್ಲಿ ತಪಸ್ಸು ಮಾಡುತ್ತಿದ್ದಾಗ ಸಂಗಮ ವಂಶದ ವೀರಯೋಧರಾದ ಹಕ್ಕ ಬುಕ್ಕರು ಶ್ರೀಗಳ ಮಾರ್ಗದರ್ಶನ ಮತ್ತು ಆಶೀರ್ವಾದಗಳನ್ನು ಪಡೆದು ತುಂಗಭದ್ರಾ ನದಿಯ ಎಡದಡದಲ್ಲಿ ರಾಜಧಾನಿಯನ್ನು ಕಟ್ಟಿ ತಮ್ಮದೇ ಆದ ಸ್ವತಂತ್ರ ರಾಜ್ಯವನ್ನು ಸ್ಥಾಪಿಸಿದರು. ಶ್ರೀ ವಿದ್ಯಾರಣ್ಯರ ಸಲಹೆಯಂತೆ ತಮ್ಮ ರಾಜಧಾನಿಯನ್ನು ಬಲದಂಡೆಗೆ ಬದಲಿಸಿದರು. ಆ ಹೊಸ ರಾಜಧಾನಿಗೆ ತಾವು ದೇವರೂ, ರಕ್ಷಕರೂ, ಗುರುಗಳೂ ಎಂದು ಭಾವಿಸುತ್ತಿದ್ದ ಶ್ರೀ ವಿದ್ಯಾರಣ್ಯ ಗುರುಗಳಿಗೆ ಗೌರವ ಕೃತಜ್ಞತೆಗಳ ದ್ಯೋತಕವಾಗಿ ವಿದ್ಯಾನಗರ ಎಂದು ಹೆಸರಿಟ್ಟರು. ಮುಂದೆ ವಿಜಯನಗರ ಎಂದು ಹೆಸರು ಪಡೆದ ಈ ನಗರವನ್ನು ಶ್ರೀ ವಿದ್ಯಾರಣ್ಯಯತಿವರ್ಯರ ನಿರ್ದೇಶನದಂತೆ, ಸುತ್ತಲೂ ಒಂಬತ್ತು ಬಾಗಿಲುಗಳಿದ್ದು ಮಧ್ಯದಲ್ಲಿ ಶ್ರೀ ವಿರೂಪಾಕ್ಷ ದೇವಾಲಯವಿರುವಂತೆ, ಶ್ರೀಚಕ್ರದ ಆಕಾರದಲ್ಲಿ ನಿರ್ಮಾಣ ಮಾಡಿದರು. ಅಂದಿನಿಂದ ಮೊದಲ್ಗೊಂಡು ಶೃಂಗೇರಿಯ ಜಗದ್ಗುರುಗಳು “ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ” ಎಂದು ಸಂಬೋಧಿಸಲ್ಪಡುತ್ತಿದ್ದು ಇದು ಇಂದಿಗೂ ಅವರ ಬಿರುದಾವಳಿಗಳಲ್ಲಿ ಸೇರಿದೆ. ಅಂದಿನ ಶೃಂಗೇರಿಯ ಶಾರದಾ ಪೀಠದ ಜಗದ್ಗುರುಗಳಾಗಿದ್ದ ಶ್ರೀಭಾರತೀತೀರ್ಥರ ಅಪೇಕ್ಷೆಯ ಮೇರೆಗೆ ಕಾಶಿಯಲ್ಲಿ ಇದ್ದ ಶ್ರೀ ವಿದ್ಯಾರಣ್ಯರು ಶೃಂಗೇರಿಗೆ ಹೋಗಲು ಹಂಪಿಯ ಮಾರ್ಗವಾಗಿ ಬಂದಾಗ ವಿರೂಪಾಕ್ಷ ದೇವಾಲಯದ ಸಮೀಪದಲ್ಲಿ ಶ್ರೀ ವಿದ್ಯಾರಣ್ಯರ ವಾಸ್ತವ್ಯಕ್ಕೆಂದು ಬುಕ್ಕರಾಯರು ಮಠವೊಂದನ್ನು ಕಟ್ಟಿಸುತ್ತಾರೆ. ಬುಕ್ಕರಾಯ ನನ್ನೂ ಜೊತೆಗೆ ಕರೆದುಕೊಂಡು ಶೃಂಗೇರಿ ತಲುಪಿದ ವಿದ್ಯಾರಣ್ಯರು ಕೆಲವು ದಿನಗಳ ನಂತರ ಶ್ರೀಭಾರತೀತೀರ್ಥರು ವಿದೇಹ ಮುಕ್ತಿಯನ್ನು ಪಡೆದ ನಂತರ ಶ್ರೀ ವಿದ್ಯಾರಣ್ಯರು ಕ್ರಿ ಶ. 1380 ರಿಂದ 1386ರ ವರೆಗೂ ಪೀಠಾಧಿಪತಿಗಳಾಗುತ್ತಾರೆ.
ಇನ್ನೂ ಬುಕ್ಕರಾಯರ ಅಪೇಕ್ಷೆ ಮತ್ತು ಮನವಿಯ ಮೇರೆಗೆ ಶ್ರೀ ವಿದ್ಯಾರಣ್ಯರು ನವರಾತ್ರಿಯ ಪ್ರಯುಕ್ತ ಮಠದಲ್ಲಿ ನಡೆಸುವ ರಾತ್ರಿ ದರ್ಬಾರ್ ನಲ್ಲಿ ವಿಜಯನಗರದ ರಾಯರ ರಾಜ ಪೋಷಾಕಿನಂತೆ ಬಟ್ಟೆ, ಒಡವೆ, ಬಂಗಾರ ಹಾಗು ವಜ್ರ ವೈಡೂರ್ಯದಿಂದ ಅಲಂಕಾರಗೊಂಡ ಶಂಖುವಿನಾಕಾರದ ಕಿರೀಟವನ್ನು (Conical Crown) ಧರಿಸಲು ಒಪ್ಪುತ್ತಾರೆ. ಇಲ್ಲಿ ಗಮನಿಸಬೇಕಾದ ಅಂಶವೇನೆಂದರೆ ಈ ತರಹದ ಕಿರೀಟವನ್ನು ವಿಜಯನಗರದ ರಾಯರು ಬಿಟ್ಟರೆ ಶೃಂಗೇರಿಯ ಜಗದ್ಗುರುಗಳಿಗೆ ಮಾತ್ರ ಅವಕಾಶ ಇರುತ್ತದೆ. ಅಂದಿನಿಂದ ಇಂದಿನವರೆಗೂ ಈ ಪರಂಪರೆ ಶೃಂಗೇರಿ ಮಠದಲ್ಲಿ ನಡೆದುಕೊಂಡು ಬಂದಿದ್ದು ವಿಜಯನಗರ ಮತ್ತು ಮಠದ ಸಂಬಂಧಕ್ಕೆ ಸಾಕ್ಷಿಯಾಗಿದೆ.

1565ರ ನಂತರದಲ್ಲಿ ಆರಂಭಗೊಂಡ ಅರವಿಡು ವಂಶದ ಆಳ್ವಿಕೆಯಲ್ಲಿ ಕರ್ನಾಟಕ ಪ್ರದೇಶವನ್ನು 17ನೇ ಶತಮಾನದ ಆರಂಭದಲ್ಲಿ ಶ್ರೀರಂಗಪಟ್ಟಣದಿಂದ ಆಳ್ವಿಕೆ ನಡೆಸುತ್ತಿದ್ದಿದ್ದು ತಿರುಮಲರಾಯರು. ಅಂದು ರಾಜಾ ಒಡೆಯರ್ (1578 – 1617) ಇಂದಿನ ಮೈಸೂರು ಪೇಟೆಯ ಸೀಮೆಗೆ ಸೀಮಿತವಾಗಿದ್ದವರು 1610ರಲ್ಲಿ ಶ್ರೀರಂಗಪಟ್ಟಣ ಮತ್ತು ವಿಜಯನಗರದ ಸಿಂಹಾಸನವನ್ನು ಹೇಗೆ ಪಡೆದರು ಎಂದು ಎಲ್ಲರಿಗೂ ತಿಳಿದಿರುವ ಸಂಗತಿ. 1612ರಲ್ಲಿ ತಿರುಮಲರಾಯರ ಪಟ್ಟದರಾಣಿ ಆಲಮೇಲಮ್ಮ ಅವರ ಅಧೀನದಲ್ಲಿ ಇರುವ ಅಮೂಲ್ಯ ಒಡವೆಗಳನ್ನು ಪಡೆಯಲು ಹೋಗಿ ಅವಳಿಂದ ಶಾಪಕ್ಕೆ (ತಲಕಾಡು ಮರಳಾಗಲಿ, ಮಾಲಂಗಿ ಮಡುವಾಗಲಿ, ಮೈಸೂರು ದೊರೆಗಳಿಗೆ ಮಕ್ಕಳಿಲ್ಲದೆ ಹೋಗಲಿ) ಗುರಿಯಾದ ವಿಷಯ ಎಲ್ಲರಿಗೂ ತಿಳಿದಿದೆ. ಇನ್ನೂ 1610ರಲ್ಲಿ ಶ್ರೀರಂಗಪಟ್ಟಣ ಮತ್ತು ವಿಜಯನಗರದ ಸಿಂಹಾಸನವನ್ನು ಸ್ವಾಧೀನ ಪಡಿಸಿಕೊಂಡ ರಾಜಾ ಒಡೆಯರ್ ಪ್ರಾರಂಭಿಸಿದ ಮಹಾನವಮಿ ಮತ್ತು ವಿಜಯದಶಮಿ ಹಬ್ಬ ಯಾವುದೇ ದೃಷ್ಟಿಕೋನದಿಂದ ವಿಜಯನಗರದ ಪಾರಂಪರಿಕ ದಸರಾ ಆಚರಣೆಯ ಮುಂದುವರೆದ ಭಾಗ ಖಂಡಿತ ಅಲ್ಲವೇ ಅಲ್ಲ.
ಇನ್ನೂ ಹೈದರ್ ಮತ್ತು ಟಿಪ್ಪು ಸುಲ್ತಾನ್ ಅವರ ಆಳ್ವಿಕೆಯ ಕಾಲದಲ್ಲಿ (1762- 1799) ದಸರಾ ಆಚರಣೆ ಅರಮನೆಯ ನಾಲ್ಕು ಗೋಡೆಗಳ ಮಧ್ಯದಲ್ಲಿ ಮಾತ್ರ ಆಚರಿಸಲಾಗುತ್ತಿತ್ತು. 1799ರಲ್ಲಿ ಮರಳಿ ಅಧಿಕಾರ ಪಡೆದ ಮೂರನೇ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ಅಂದಿನ ಬ್ರಿಟೀಷ್ ರೆಸಿಡೆಂಟ್ ಅಧಿಕಾರಿಯ ಕಣ್ಗಾವಲಿನಲ್ಲಿ ಕೆಲವು ಮಾರ್ಪಾಡುಗಳೊಂದಿಗೆ ದಸರಾ ದರ್ಬಾರ್ ಮತ್ತು ಆಚರಣೆ ಪ್ರಾರಂಭಗೊಳ್ಳುತ್ತದೆ. 1805ರಲ್ಲಿ ಪ್ರಥಮ ಭಾರಿಗೆ ಬ್ರಿಟೀಷ್ ಅಧಿಕಾರಿಗಳು ಮತ್ತು ಅವರ ಪರಿವಾರ ಮೈಸೂರಿನ ಒಡೆಯರ್ ಅವರ ದಸರಾ ದರ್ಬಾರ್ ನಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ಕಾಲಕ್ರಮೇಣ ಈ ದರ್ಬಾರ್ ಗೆ “ಯುರೋಪಿನ ದರ್ಬಾರ್” ಎಂದು ಸಂಭೋದಿಸಲಾಗುತ್ತದೆ. ಇನ್ನೂ ಕಮಿಷನರ್ ಅವಧಿಯಲ್ಲಿ (1831- 1881) ದಸರಾ ಆಚರಣೆ ಮತ್ತೆ ಒಡೆಯರ್ ಅವರ ಅರಮನೆಗೆ ಸೀಮಿತ ವಾಗುತ್ತದೆ. ಇನ್ನೂ 1881ರಲ್ಲಿ ಮತ್ತೆ ಅಧಿಕಾರ ವಹಿಸಿಕೊಂಡ ಹತ್ತನೇ ಚಾಮರಾಜ ಒಡೆಯರ (1881 – 1894) ಅವರ ಕಾಲದಲ್ಲಿ ಅಂದಿನ ಬ್ರಿಟೀಷ್ ರೆಸಿಡೆಂಟ್ ಅಧಿಕಾರಿ ಒಲಿವರ್ ಸೇಂಟ್ ಜಾನ್ 1884ರಲ್ಲಿ ಮೈಸೂರಿನ ಮಹಾರಾಜರ ದಸರಾ ದರ್ಬಾರ್ನಲ್ಲಿ ಪಾಲ್ಗೊಳ್ಳಲು ನೀಡಿದ ಆಮಂತ್ರಣವನ್ನು ನಿರಾಕರಿಸುತ್ತಾರೆ ಇದರಿಂದ ಅಂದಿನ ಒಡೆಯರ್ ಬಹಳ ಆತಂಕಗೊಂಡು ತಮ್ಮ ದಿವಾನರನ್ನು ಅವರ ಬಳಿ ಕಳಿಸುತ್ತಾರೆ. ಬ್ರಿಟೀಷ್ ಭಾರತದ ಅಂದಿನ ರಾಜಧಾನಿ ಕಲ್ಕತ್ತಾದಲ್ಲಿ ಇದ್ದಾ ಗವರ್ನರ್ ಜನರಲ್ ಅವರ ಅಪ್ಪಣೆ ಪಡೆದು ಆಂಗ್ಲೋ ಇಂಡಿಯನ್ ಸಾರ್ವಜನಿಕ ಆಚರಣೆ ಕೋಡ್ (Anglo Indian Public Ritual Code) ಅನ್ನು ಒಲಿವರ್ ಸೇಂಟ್ ಜಾನ್ ಲಾಗು ಮಾಡುತ್ತಾರೆ. ಈ ಹೊಸ ಕೋಡ್ ಪ್ರಕಾರ ಮೈಸೂರಿನ ಬ್ರಿಟೀಷ್ ರೆಸಿಡೆಂಟ್ ಅಧಿಕಾರಿ ರಾಜನ ಬಲಭಾಗದಲ್ಲಿ ಕುಳಿತು ಕೊಳ್ಳುಲು ಆಸನ ವ್ಯವಸ್ಥೆ ಮತ್ತು ಮುಖ್ಯವಾಗಿ ರಾಜನ ಜೊತೆಗೆ ಏಕಕಾಲದಲ್ಲಿ ಕೂಡಲು ಅವಕಾಶ ನೀಡಿತ್ತು.

ಇನ್ನೂ ಕಾಲಕ್ರಮೇಣ ಈ ಮೈಸೂರಿನ ಯುರೋಪಿನ ದರ್ಬಾರ್ ನಲ್ಲಿ ಬ್ರಿಟೀಷ್ ಸಂಪ್ರದಾಯಗಳು ಹೆಚ್ಚಾಗಿ ಕಂಡುಬರುತ್ತದೆ. ಇನ್ನೂ 1916ರಲ್ಲಿ ಅಂದಿನ ರೆಸಿಡೆಂಟ್ ಅಧಿಕಾರಿ ಕೋಬ್ (H. V. Cobb) ಅವರಿಗೆ ಅಂದಿನ ಮೈಸೂರಿನ ಯುವರಾಜ ಜಯಚಾಮರಾಜೇಂದ್ರ ಒಡೆಯರ್ ಆಸನದಿಂದ ಎದ್ದು ನಮಸ್ಕರಿಸಲ್ಲಿಲ್ಲ ಎಂದು ಸಿಡಿಮಿಡಿಗೊಂಡು ಕೋಬ್ ಇದರ ಬಗ್ಗೆ ಅಂದಿನ ಗವರ್ನರ್ ಜನರಲ್ ಅವರಲ್ಲಿ ದೂರು ನೀಡುತ್ತಾನೆ. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಬ್ರಿಟೀಷ್ ಸರ್ಕಾರ ಮೈಸೂರಿನ ಒಡೆಯರ್ ಅವರಿಗೆ ಎಚ್ಚರಿಕೆ ನೀಡುತ್ತದೆ. ಒಟ್ಟಾರೆ ಹೇಳುವುದಾದರೆ 1799 ರಿಂದ 1950ರ ವರೆಗೂ ಮೈಸೂರಿನ ದಸರಾ ಬ್ರಿಟೀಷ್ ಸರ್ಕಾರದ ಆಸೆಯಂತೆ ಹಲವಾರು ಬದಲಾವಣೆ ಮಾಡಿಕೊಂಡು ಬಂದರೆ, ಇಂದು ಅದರ ಆಚರಣೆಯಲ್ಲಿ ಮತ್ತಷ್ಟು ಬದಲಾವಣೆ ಕಂಡು ಬರುತ್ತದೆ.
ಅಂದು ಆನೆಯ ಅಂಬಾರಿಯಲ್ಲಿ ಕೂರುತ್ತಿದ್ದ ರಾಜ ಮತ್ತು ಯುವರಾಜರ ಬದಲಿಗೆ ಚಾಮುಂಡೇಶ್ವರಿ ಅಂಬಾರಿಯನ್ನು ಅಲಂಕರಿಸುತ್ತಾಳೆ. ಆದರೆ ಇಂದಿಗೂ ಸಹಾ ನಮಗೆ ಕಾಡುವ ಪ್ರಶ್ನೆ ಏನೆಂದರೆ ಮೈಸೂರಿನ ದಸರಾ ಯಾವ ದೃಷ್ಟಿಕೋನದಿಂದ ವಿಜಯನಗರದ ದಸರಾ ಪರಂಪರೆಯನ್ನು ಮುಂದುವರೆಸಿಕೊಂಡು ಬರುತ್ತಿದೆ ಮತ್ತು ಯಾವ ಆಧಾರದಲ್ಲಿ ಮೈಸೂರಿನ ಒಡೆಯರ್ ಅವರು ವಿಜಯನಗರದ ಪಾರಂಪರಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಉತ್ತರಾಧಿಕಾರಿ ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಾರೆ.
ಸಾಕ್ಷಾ ಟಿವಿಯ ‘ನಾವು ಕೇಳದ ಚರಿತ್ರೆ’ ಅಂಕಣಕಾರ ಅಜಯ್ ಕುಮಾರ್ ಶರ್ಮಾ ಅವರ ಕಿರು ಪರಿಚಯ
ಲೇಖನ ಮತ್ತು ಚಿತ್ರಗಳು :-
ಅಜಯ್ ಕುಮಾರ್ ಶರ್ಮಾ
ಇತಿಹಾಸ ಅಧ್ಯಯನಕಾರರು ಮತ್ತು ಪರಿಸರ ಹೋರಾಟಗಾರ
ಶಿವಮೊಗ್ಗ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
https://twitter.com/SaakshaTv








