ಅರಮನೆಕೊಪ್ಪ – ಮರಾಠಾ ಮತ್ತು ಮಲೆನಾಡಿನ ಬಾಂಧವ್ಯಕ್ಕೆ ಸಂಪರ್ಕವಾದ ಐತಿಹಾಸಿಕ ಸ್ಮಾರಕ ಮಾತ್ರವಲ್ಲ ಒಂದು ಕಾಲದ ಮರಾಠರ ಶಕ್ತಿ ಕೇಂದ್ರ: Saakshatv Naavu kelada charitre episode3
ಮೊಗಲ್ ದೊರೆ “ಔರಂಗಜೇಬ” ಬಹುಶಃ ಭಾರತ ಕಂಡ ಅತಿ ನೀಚ, ಸ್ವಮತಾಂಧಿ ದೊರೆ. ತನ್ನ ತಂದೆ ಮೊಘಲ್ ಚಕ್ರವರ್ತಿ ಶಾಹ ಜಹಾನ್ ಜೀವಂತವಾಗಿದ್ದಾಗಲೆ ತನ್ನ ಇಬ್ಬರು ಅಣ್ಣಂದಿರು ಮತ್ತು ಒಬ್ಬ ತಮ್ಮನನ್ನು ಕೊಂದು, ತನ್ನ ತಂದೆಯನ್ನು ಸೆರೆಮನೆಗೆ ಅಟ್ಟಿದ್ದ ಮಹಾನ್ ಕ್ರೂರಿ. ಇವನು ಮೊದಲ ಸರಿ ಮೊಗಲ್ ರಾಜಪ್ರತಿನಿಧಿಯಾಗಿ ದಖ್ಖನ್ ಗೆ 1636ರಲ್ಲಿ ಬಂದಾಗ ಇಡೀ ದಖ್ಖನ್ ಅನ್ನು ಗೆಲ್ಲುವ ಕನಸು ಕಂಡಿದ್ದ. ಇವನು ಮತ್ತೆ 1652ರಲ್ಲಿ ದಖ್ಖನ್ ಗೆ ಬಂದಾಗ ಅವನು ತನ್ನ ಮುಂದಿನ ಸಂಚನ್ನು ಅನಾವರಣ ಮಾಡಲು ಶುರುಮಾಡಿದ. ಅದುವೇ ದಖ್ಖನ್ ಅನ್ನು ಇಸ್ಲಾಮಿ ದೇಶ ಮಾಡುವುದು. Saakshatv Naavu kelada charitre episode3
ಔರಂಗಜೇಬ ಅಷ್ಟೋತ್ತಿಗಾಗಲೆ ಗುಜರಾತಿನಲ್ಲಿ ಹಲವಾರು ಪುರಾಣ ಪ್ರಸಿದ್ಧ ಹಿಂದು ದೇವಾಲಯಗಳನ್ನು ಕೆಡವಿದ್ದ, ಕೆಲವನ್ನು ವಿರೂಪಗೊಳಿಸಿದ ಮತ್ತು ಕೆಲವನ್ನು ಮಸೀದಿ ಆಗಿ ಮಾರ್ಪಡಿಸಿದ್ದ. ಇನ್ನೂ 1658ರಲ್ಲಿ ಮೊಗಲ್ ಗಾಧಿ ಏರಿದಾಗ ಪೂರ್ವ, ಪಶ್ಚಿಮ ಮತ್ತು ಉತ್ತರ ಅವನ ಅಧೀನದಲ್ಲಿ ಇದ್ದರೆ ಕೇವಲ ದಕ್ಷಿಣ ಭಾರತ ಅವನಿಗೆ ಕಗ್ಗಂಟಾಗಿತ್ತು. ಇವನಿಗೆ 1680ರ ವರೆಗೂ ಬಂಡೆ ಅಂತೆ ಎದೆ ಒಡ್ಡಿ ನಿಂತ್ತಿದ್ದು ಹಿಂದು ಸಾಮ್ರಾಜ್ಯ ಮತ್ತು ಸ್ವರಾಜ್ಯದ ಪ್ರತಿಪಾದಕ ಶಿವಾಜಿ ರಾಜೇ ಮಹಾರಾಜರು. ಆದರೆ ಹದಿನೇಳನೇ ಶತಮಾನದ ಕೊನೆಯ ಕಾಲಘಟ್ಟದಲ್ಲಿ ಅಂದರೆ ಛತ್ರಪತಿ ಶಿವಾಜಿ ಮಹಾರಾಜರ ನಿಧನದ (1680) ನಂತರದಲ್ಲಿ ಇಡೀ ದಕ್ಷಿಣ ಭಾರತವನ್ನು ಇಸ್ಲಾಂಮೀಕರಣ ಮಾಡಲು ಮೊಘಲ್ ಚಕ್ರವರ್ತಿ ಔರಂಗಜೇಬ 1681ರಲ್ಲಿ ದಖ್ಖನ್ ಕಡೆ ಮುಖ ಮಾಡುತ್ತಾನೆ. ದಖ್ಖನ್ ಗೆ ಬಂದು ಔರಂಗಾಬಾದ್ ಅನ್ನು ತನ್ನ ತಾತ್ಕಾಲಿಕ ರಾಜಧಾನಿಯಾಗಿ ಮಾಡಿಕೊಳ್ಳುತ್ತಾನೆ. ಔರಂಗಜೇಬ್ ತನ್ನ ಕನಸನ್ನು ನನಸು ಮಾಡಲು ಅಂದು ಇದ್ದ ಮೂರು ಅಡಚಣೆ ಎಂದರೆ ವಿಜಯಪುರದ ಆದಿಲ್ ಶಾಹಿ, ಗೋಲ್ಕೊಂಡದ ಕುತುಬ್ ಶಾಹಿ ಮತ್ತು ಮರಾಠರ ಛತ್ರಪತಿ ಶಂಭಾಜಿ.
1686ರಲ್ಲಿ ವಿಜಯಪುರ ಮತ್ತು 1687ರಲ್ಲಿ ಗೋಲ್ಕೊಂಡ ಅನ್ನು ಸ್ವಾಧೀನ ಪಡಿಸಿಕೊಂಡ ನಂತರ ಮಹಾರಾಷ್ಟ್ರದ ಎರಡನೇ ಛತ್ರಪತಿ ಆದ ಶಂಭಾಜಿ ರಾಜೇಯನ್ನು ಮೋಸದಿಂದ 1689ರಲ್ಲಿ ಸೆರೆ ಹಿಡಿದು, ಇಸ್ಲಾಂ ಧರ್ಮಕ್ಕೆ ಮತಾಂತರ ಆಗಲು ಒಪ್ಪದಿದ್ದಕ್ಕೆ ಅವನನ್ನು ಚಿತ್ರಹಿಂಸೆ ಮಾಡಿ ಕೊಂದು, ಇಡೀ ದಖ್ಖನ್ ತನ್ನ ತೆಕ್ಕೆಗೆ ಬಿತ್ತು ಅಂತ ಆನಂದಿಸುವಷ್ಟರಲ್ಲೇ ಅವನಿಗೆ ಎದುರಾಗಿದ್ದು “ರಾಮ ರಾಜೇ”.
ಅಂದು ಇಡೀ ಮಹಾರಾಷ್ಟ್ರ ಅನಾಥವಾಗಿ ಇಸ್ಲಾಂಮೀಕರಣಕ್ಕೆ ತುತ್ತಾಗುವ ಸಂದರ್ಭದಲ್ಲಿ ಜನರು ಮುಂದೇನು ಎಂದು ಯೋಚಿಸುತ್ತಿರುವಾಗ, ಹಿಂದೂ ಧರ್ಮದ ಉಳಿವಿಗಾಗಿ ಪಣತೊಟ್ಟಿ ಧರ್ಮ ಯುದ್ಧ ಸಾರಲು ಔರಂಗಜೇಬ ಮತ್ತು ದಕ್ಷಿಣ ಭಾರತದ ಮಧ್ಯ ನಿಂತಿದ್ದು ರಾಮ ರಾಜೇ, ಇವನನ್ನು ಜನರು ಪ್ರೀತಿಯಿಂದ ” ರಾಜರಾಮ” ಎಂದು ಕರೆದರು. ಔರಂಗಜೇಬ ರಾಜರಾಮ, ಮಹಾರಾಷ್ಟ್ರ ಮತ್ತು ಹಿಂದೂಗಳಿಗೆ ಮರಣಶಾಸನ ಬರೆಯಲು ದೊಡ್ಡ ಸೈನ್ಯವನ್ನು ತನ್ನ ಮಗನ ನೇತೃತ್ವದಲ್ಲಿ ನಿಷ್ಠಾವಂತ ಸೇನಾಪತಿಗಳ ಜೊತೆಗೆ ಕಳುಹಿಸಿದ. ರಾಜರಾಮ ತನ್ನ ಎಲ್ಲಾ ಮರಾಠ ನಾಯಕರಿಗೆ ಸ್ವತಂತ್ರವಾಗಿ ಹೋರಾಡಲು ಪ್ರೇರೇಪಿಸಿ ಗೆದ್ದ ಪ್ರದೇಶವನ್ನು ಜಾಗಿರ್ ಆಗಿ ಕೊಡಲು ತೀರ್ಮಾನಿಸಿ, ಧರ್ಮ ಯುದ್ಧಕ್ಕೆ ಮುಂದಾಗುತ್ತಾನೆ. ಆದರೆ ಔರಂಗಜೇಬಿನ ಬಲಿಷ್ಠ ಸೇನೆಯು ಒಂದಾದ ಮೇಲೊಂದರಂತೆ ಕೋಟೆಗಳನ್ನು ಗೆಲ್ಲುತ್ತಾ ವಿಶಾಲಗಡ್ ಅನ್ನು ಸುತ್ತುವರಿದಾಗ, ರಾಜರಾಮ 26 ಸೆಪ್ಟೆಂಬರ್ 1689ರಲ್ಲಿ ವೀರಶೈವ ವ್ಯಾಪಾರಿಯ ವೇಷದಲ್ಲಿ ಅಲ್ಲಿಂದ ತಪ್ಪಿಸಿಕೊಂಡು ಆಶ್ರಯಕ್ಕಾಗಿ ಅರಸುತ್ತಾ ಬಂದು ನಿಂತಿದ್ದು ಕೆಳದಿ ರಾಜ್ಯದ ಹೊಸಲಿನಲ್ಲಿ.
ರಾಜರಾಮ ಜಂಗಮರ ವೇಷದಲ್ಲಿ ಹೊನ್ನಾಳಿಗೆ ಬಂದು ಬಿದನೂರಿನಿಂದ ಆಳ್ವಿಕೆ ಮಾಡುತ್ತಿದ್ದ ಕೆಳದಿಯ ವೀರರಾಣಿ ಚೆನ್ನಮ್ಮನಿಂದ ಆಶ್ರಯ ಮತ್ತು ಜಿಂಜಿಗೆ ಹೋಗಲು ಸಹಕರಿಸಲು ಮನವಿ ಮಾಡುತ್ತಾನೆ. ರಾಣಿ ಚೆನ್ನಮ್ಮ ತನ್ನ ಆಪ್ತ ಅಧಿಕಾರಿಗಳನ್ನು ಸಮಾಲೋಚಿಸಿದಾಗ ಎಲ್ಲರೂ ರಾಜರಾಮ ನನ್ನು ಬೆನ್ನು ಹತ್ತಿ ಬರುತ್ತಿರುವ ಔರಂಗಜೇಬಿನ ಸಿಟ್ಟಿಗೆ ತಲೆ ಕೊಡಬೇಕಾಗುತ್ತದೆ ಎಂದು ಹೇಳಿದರು ಸಹ ರಾಣಿ ಚೆನ್ನಮ್ಮಾಜಿ ರಾಜಧರ್ಮವನ್ನು ಪಾಲಿಸಲು ಮುಂದಾಗುತ್ತಾಳೆ. ಮರಾಠರು ಮತ್ತು ಕೆಳದಿಯ ನಡುವೆ ಹೇಳಿಕೊಳ್ಳುವಷ್ಟು ಪ್ರೀತಿ ವಿಶ್ವಾಸ ಇಲ್ಲದಿದ್ದರೂ ಸಹ ಚೆನ್ನಮ್ಮಗೆ, ಮುಂದಿನ ದಿನಗಳಲ್ಲಿ ಔರಂಗಜೇಬಿನ ಮುಷ್ಠಿಯಿಂದ ಮಲೆನಾಡು ಉಳಿಯ ಬೇಕೆಂದರೆ ಮರಾಠರು ಮಹಾರಾಷ್ಟ್ರದಲ್ಲಿ ನೆಲೆ ಊರಬೇಕು ಅನ್ನುವ ದೂರದೃಷ್ಟಿ ಹೊಂದಿದ್ದ ಪರಿಣಾಮವಾಗಿ ಅವಳು ಮರಾಠರ ಛತ್ರಪತಿ ರಾಜರಾಮರಿಗೆ ಆಶ್ರಯ ನೀಡುತ್ತಾಳೆ. ಅಂದು ರಾಣಿ ಚೆನ್ನಮ್ಮಾಜಿ 19 ವರ್ಷದ ತರುಣ ಛತ್ರಪತಿ ರಾಜಾರಾಮನಿಗೆ ಆಶ್ರಯ ನಿಮಿತ್ತ ಅವನನ್ನು ಸುರಕ್ಷಿತವಾಗಿ ತಂಗಿಸಲು ಆಯ್ಕೆ ಮಾಡಿದ ಸ್ಥಳವೇ “ಅರಮನೆಕೊಪ್ಪ”. ಮಲೆನಾಡಿನ ಅರಮನೆಕೊಪ್ಪದ ಅರಮನೆ ಮತ್ತು ತಮಿಳುನಾಡಿನ ಜಿಂಜಿ ಮುಂದಿನ 9 ವರ್ಷಗಳ ಕಾಲ ಬಲಿಷ್ಠ ಮರಾಠಾ ಸಾಮ್ರಾಜ್ಯದ ರಾಜಧಾನಿಯಾಗಿರುತ್ತದೆ.
ಅರಮನೆಕೊಪ್ಪ ಮತ್ತು ಅದರ ಪರಿಸರ:-
ಕೆಳದಿಯ ರಾಜರು ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ತಮ್ಮ ಅನುಕೂಲಕ್ಕಾಗಿ ಹಲವಾರು ಅರಮನೆಗಳನ್ನು ಕಟ್ಟಿಕೊಂಡಿದ್ದು ಅದರಲ್ಲಿ ಅರಮನೆಕೊಪ್ಪ ಸಹಾ ಒಂದು. ರಾಜಧಾನಿ ಬಿದನೂರು ಇಂದ ಸರಿಸುಮಾರು 10 ಕಿಲೋಮೀಟರ್ ದೂರದಲ್ಲಿದ್ದ ಅರಮನೆಕೊಪ್ಪದ ಅರಮನೆ ಒಂದು ವಿಶಿಷ್ಠವಾದ ಮಲೆನಾಡಿನ ಮನೆಯಾಗಿದ್ದು ನಮ್ಮ ಮಲೆನಾಡಿನ ರಾಜರ ಅಂದಿನ ಕಾಲದ ಸುರಕ್ಷಿತ ವ್ಯವಸ್ಥೆಯ ಕೈಕನ್ನಡಿಯಾಗಿತ್ತು. ಅಂದು ಅರಮನೆಕೊಪ್ಪ ಇದ್ದ ಪ್ರದೇಶ ಸಮತಟ್ಟವಾಗಿದ್ದು ಪೂರ್ವ, ಪಶ್ಚಿಮ ಮತ್ತು ಉತ್ತರದಲ್ಲಿ ಶರಾವತಿ ನದಿಯ ಉಪನದಿಗಳು ಹರಿಯುತ್ತಿದ್ದರೆ, ದಕ್ಷಿಣದಲ್ಲಿ ಎತ್ತರದ ಗುಡ್ಡ, ದಟ್ಟವಾದ ಕಾನು, ಅದರ ಹಿಂದೆ ವೊತನಾಡ (ವತನ್ನಡಿ) ಎಂಬ ಹಳ್ಳಿ ಮತ್ತು ಬಿದನೂರಿನ ಮೂರನೇ ಸುತ್ತಿನ ಕೋಟೆಯ ಗೋಡೆ ಮತ್ತು ಅದರ ಅಂಗಳ ಇತ್ತು.
ಪೂರ್ವದಲ್ಲಿ ಕಿರುಗುಲಿಗೆ ಇಂದ ಹರಿಯುವ ಹಳ್ಳ ಪಶ್ಚಿಮದಲ್ಲಿ ಹರಿಯುವ ಕಬ್ಬಿಣಮಕ್ಕಿ ಹೊಳೆ ಅರಮನೆಕೊಪ್ಪದ ಉತ್ತರದಲ್ಲಿ ಸೇರಿ ಸ್ವಲ್ಪ ಮುಂದೆ ಹೋಗಿ ಬಿದನೂರು ನಗರವನ್ನು ಸುತ್ತುವರಿದು ಕೊಡಸೆಯಲ್ಲಿ ಸೇರುವ ಕಲಾವತಿ ಮತ್ತು ಇಳಾವತಿ ನದಿಯನ್ನು ಬೆಕ್ಕೋಡು ಹತ್ತಿರ ಸೇರುತ್ತಿತ್ತು. ಮಲೆನಾಡಿಗರ ಪಾಲಿಗೆ ಮರಣಶಾಸನವಾಗಿರುವ ಲಿಂಗನಮಕ್ಕಿ ಆಣೆಕಟ್ಟು 1962ರಲ್ಲಿ ಅರಮನೆಕೊಪ್ಪದ ಈಶಾನ್ಯ, ಉತ್ತರ ಮತ್ತು ವಾಯುವ್ಯ ದಿಕ್ಕಿನಲ್ಲಿ ಇದ್ದ ಪ್ರದೇಶವನ್ನು ಕಿರುಗುಲಿಗೆ ಹಳ್ಳ ಮತ್ತು ಕಬ್ಬಿಣಮಕ್ಕಿ ಹೊಳೆ ಸೇರುವ ಸಂಗಮ ಕ್ಷೇತ್ರದ ಜೊತೆಗೆ ಆಪೋಷಣೆ ಮಾಡಿಕೊಳ್ಳುತ್ತದೆ.
1799ರಲ್ಲಿ ಟಿಪ್ಪುವಿನ ಮರಣದ ನಂತರ ಬ್ರಿಟೀಷ್ ಸರ್ಕಾರ ಕೈಗೊಂಡ ಮೊದಲ ಕೃಷಿ ಮತ್ತು ಮಿಲಿಟರಿ ಸರ್ವೇಯ ನಿಮಿತ್ತ ಬಿದನೂರಿಗೆ ಬಂದಿದ್ದ ಪ್ರಾನ್ಸಿಸ್ ಬುಕಾನನ್ ಮತ್ತು ಕೊಲಿನ್ ಮೆಕೆಂಜಿ ಇಬ್ಬರೂ ಈ ಅರಮನೆಕೊಪ್ಪಕ್ಕೆ ಭೇಟಿ ನೀಡಿರುತ್ತಾರೆ. ಕೊಲಿನ್ ಮೆಕೆಂಜಿ 1807ರಲ್ಲಿ ತಯಾರಿಸಿದ ಬಿದನೂರು ಮತ್ತು ಅದರ ಸುತ್ತಲಿನ ಪರಿಸರದ ನಕ್ಷೆಯಲ್ಲಿ ಅರಮನೆಕೊಪ್ಪದ ಅರಮನೆಯ ಅಂದಿನ ಕಟ್ಟಡದ ಮಾದರಿ ಮತ್ತು ಇತರೆ ಮಾಹಿತಿ ನೀಡುತ್ತದೆ.
ಅರಮನೆಕೊಪ್ಪದ ಅರಮನೆಯ ವಿಶಿಷ್ಟತೆ:-
ಈ ಮನೆಯನ್ನು ಇಂದು ಹೊರಗಿನಿಂದ ನೋಡಿದರೆ ಇದು ಒಂದು ಕಾಲದಲ್ಲಿ ಮರಾಠಾ ಸಾಮ್ರಾಜ್ಯದ ಕೇಂದ್ರ ಬಿಂದು ಆಗಿತ್ತು ಅಂದರೆ ನಂಬಲು ಸಾದ್ಯವಿಲ್ಲ, ಆದರೆ ಈ ಮನೆಯ ಒಳಗೆ ಹೋಗಿ ಬಂದು ಬ್ರಿಟೀಷ್ ದಾಖಲಾತಿಯಲ್ಲಿ ನಮೂದಿಸಿದ ಈ ಅರಮನೆಯ ಮೂಲ ಸ್ವರೂಪವನ್ನು ಒಮ್ಮೆ ಓದಿದರೆ ಈ ಅರಮನೆಯ ಮೇಲೆ ಅಭಿಮಾನ ಮೂಡುತ್ತದೆ. ಈ ಅರಮನೆಯನ್ನು ಅಂದಿನ ಕಾಲದ ಮಲೆನಾಡು ಪರಂಪರೆಯ ಅನುಸಾರ ಸ್ಥಳೀಯವಾಗಿ ಸಿಗುವ ಜಂಬಿಟ್ಟಿಗೆ ಇಂದ ಗೋಡೆಯನ್ನು ಕಟ್ಟಿದ್ದು ಇದಕ್ಕೆ ಮಲೆನಾಡಿನ ಪಾರಂಪರಿಕ ಶೈಲಿಯಲ್ಲಿ ಗಾರೆ ಮಾಡಲಾಗಿದೆ. ಕರಡ (ಹುಲ್ಲು), ಬೆಲ್ಲ, ಸುಣ್ಣ ಮತ್ತು ಕೆಂಪು ಮಣ್ಣನ್ನು ಬಳಸಿ ಸಿದ್ಧಪಡಿಸಿದ ಲೇಪನದಿಂದ ಗೋಡೆಯ ಗಾರೆ ಕೆಲಸವನ್ನು ಮಾಡಲಾಗಿದೆ. ಇನ್ನೂ ಮನೆಯ ಒಳಗೆ ನೆಲ ಹಾಸಿಗೆಗೆ ಮತ್ತಿಗುಳ ಮಾಡಿ ಕಾಟ್ ಕಲ್ಲಲ್ಲಿ ಒರೆಯಲಾಗಿದೆ. ಮೂಲ ಅರಮನೆ ಒಂದು ಎಕರೆ ಪ್ರದೇಶದಲ್ಲಿ ವಿಶಾಲವಾಗಿದ್ದು ಇದನ್ನು ಭಾವಂತಿ ಮನೆಯಂದು ಕರೆಯಲ್ಪಡುತ್ತಿತ್ತು. ಈ ಅರಮನೆಯ ಒಳಗೆ ಅತ್ಯುತ್ತಮ ಮರದ ಬಾಗಿಲು, ಬೋದಿಗೆ, ತೊಲೆ, ಜಾಲಂಧ್ರಗಳು, ಕಿಟಕಿ, ಉಪ್ಪರಿಗೆ, ದೇವರ ರಥ ಮಂಟಪ ಮತ್ತು ಏಣಿಯನ್ನು ನೋಡಬಹುದು. ಮೂಲ ಅರಮನೆ ಉತ್ತರಾಭಿಮುಖವಾಗಿದ್ದು ಮೆತ್ತು (ಉಪ್ಪರಿಗೆ) ಮತ್ತು ಮೇಲೆಮ್ಮೆತ್ತು ಅನ್ನು ಹೊಂದಿತ್ತು.
ಸ್ಥಳೀಯ ಕರಿ ಹಂಚಿನ ಮಾಡು ಹೊಂದಿದ್ದು ಈ ಅರಮನೆಯ ಒಳಗೆ ಅದ್ಭುತವಾದ ರಕ್ಷಣಾತ್ಮಕ ವ್ಯವಸ್ಥೆಯನ್ನು ಹೊಂದಿತ್ತು. ಈಗಿನ ಮನೆಗೆ ಉತ್ತರಾಭಿಮುಖವಾಗಿ ಎರಡು ಬಾಗಿಲು ಇದ್ದು ಸಹಜವಾಗಿ ಮಲೆನಾಡಿನ ಅಂದಿನ ಶೈಲಿಯ ಪ್ರಕಾರ ಇಡಲಾಗಿದೆ. ಈ ಮನೆಯ ಗೋಡೆ ಆರು ಅಡಿ ದಪ್ಪವಾಗಿದ್ದು ಇದರ ಮಧ್ಯಭಾಗದಲ್ಲಿ ಇರುವ ವಿಶಾಲ ಕೋಣೆಯಲ್ಲಿ ಸುಂದರವಾದ ಮರದ ಕೆತ್ತನೆಯ ಕಂಬಗಳನ್ನು ನೋಡಬಹುದು. ಈಶಾನ್ಯ ದಿಕ್ಕಿನಲ್ಲಿ ಇರುವ ದೇವರ ಮನೆಯ ಮರದ ಬಾಗಿಲು ಅದರಲ್ಲಿ ಇರುವ ಜಾಲಂಧ್ರಗಳು ಅದ್ಭುತವಾಗಿದೆ. ಇನ್ನೂ ಈ ದೇವರ ಮನೆಯಲ್ಲಿ ಇರುವ ಪುರಾತನ ಮರದ ಮಂಟಪಕ್ಕೆ ನಾಲ್ಕು ಚಕ್ರ ಇದ್ದು, ಇದು ದೇವರ ರಥ. ಉಪ್ಪರಿಗೆಗೆ ಹೋಗಲು ಮಣ್ಣಿನ ಮೆಟ್ಟಿಲುಗಳ ಇದ್ದು ಇದರ ಕೆಳ ಭಾಗದಲ್ಲಿ ಒಂದು ಗುಪ್ತ ಉಗ್ರಾಣ ಉಂಟು. ಮೂರು ಅಡಿ ಅಗಲ ಮತ್ತು ಒಂದೂವರೆ ಅಡಿ ಎತ್ತರದ ಮೆಟ್ಟಿಲುಗಳ ಮೂಲಕ ಮೇಲೆ ಹೋದರೆ ಒಂದು ವಿಶಾಲವಾದ ಕೋಣೆ ಮತ್ತು ಅದಕ್ಕೆ ಲಗತ್ತಾಗಿರುವ ಮೂರು ಕೋಣೆಗಳು ಉತ್ತರದಲ್ಲಿ ಇದ್ದರೆ ಒಂದು ಕೋಣೆ ಪೂರ್ವಕ್ಕೆ ಇದೆ. ಇನ್ನೂ ಉತ್ತರ ಈಶಾನ್ಯದಲ್ಲಿ ಇರುವ ಕೋಣೆ ಈ ಮನೆಯ ರಕ್ಷಣಾತ್ಮಕ ವ್ಯವಸ್ಥೆಯ ಕೇಂದ್ರ ಬಿಂದು. ಇದರಲ್ಲಿ ಇರುವ ಕಿಟಕಿಯನ್ನು ಎಷ್ಟು ಅದ್ಭುತವಾಗಿ ಮಾಡಿದ್ದಾರೆ ಅಂದರೆ ಇದನ್ನು ಸಂಕಷ್ಟದ ಸಮಯದಲ್ಲಿ ಸುರಕ್ಷತಾ ನಿರ್ಗಮನ ಬಾಗಿಲಾಗಿ ಉಪಯೋಗಿಸುವ ಮೂಲಕ ಮನೆಯಿಂದ ಹೊರ ಹೋಗಬಹುದು.
ಇನ್ನೂ ಈ ಕೋಣೆಯಲ್ಲಿ ಇರುವ ಮರದ ಅಟ್ಟದಲ್ಲಿ ಒಂದು ಸಣ್ಣ ಮರದ ಹಲಗೆಯನ್ನು ಸರಿಸಿದರೆ ಅದರ ಒಳಗೆ ಸರಿಸುಮಾರು 15 ಕೆಜಿಯಷ್ಟು ಬೆಲೆಬಾಳುವ ವಸ್ತುಗಳನ್ನು ಇಡಬಹುದು. ಇದೇ ಕೋಣೆಯಲ್ಲಿ ಇರುವ ಮರದ ಬೀರುವಿನ ಒಳಭಾಗದ ಮರದ ಹಲಗೆಯನ್ನು ಸರಿಸಿದರೆ ಗೋಡೆಗಳ ಮಧ್ಯದಲ್ಲಿ ಸಾಗುವ ಒಂದುವರೆ ಅಡಿ ಅಗಲದ ಗುಪ್ತ ಸುರಂಗ ಮಾರ್ಗ ತೆರೆದುಕೊಳ್ಳುತ್ತದೆ. ಇದರಲ್ಲಿ ಇರುವ ತಳಭಾಗದ ಬಾಗಿಲು ತೆರೆದರೆ ಮರದ ಚೌಕಟ್ಟಿನ ಇನ್ನೊಂದು ಗುಪ್ತ ಸುರಂಗ ಮಾರ್ಗಗೋಚರಿಸುತ್ತದೆ, ಇದರ ಮೂಲಕ ತಳಭಾಗದ ಮಾಳಿಗೆಗೆ ಇಳಿಯಬಹುದು. ಇನ್ನೂ ಮಧ್ಯ ಭಾಗದ ಕೋಣೆ ಮತ್ತು ನೈರುತ್ಯ ಭಾಗದಲ್ಲಿ ಇರುವ ಕೋಣೆಯ ಮಧ್ಯದಲ್ಲಿ ಒಂದು ಬಾಗಿಲು ಇದ್ದು ಅಟ್ಟದಲ್ಲಿ ಗುಪ್ತ ಉಗ್ರಾಣಗಳನ್ನು ಗಮನಿಸ ಬಹುದು. ಮೇಲೆಮ್ಮೆತ್ತು ಹೋಗಲು ಇರುವ ಮರದ ಏಣಿಯ ಹತ್ತಿರ ಗೋಡೆಯಲ್ಲಿ ಶೌಚಾಲಯವನ್ನು ನಿರ್ಮಿಸಿದ್ದು ಇದು ಅಂದಿನ ಕಾಲದ ಕೆಳದಿಯ ಉನ್ನತ ಮಟ್ಟದ ತಂತ್ರಜ್ಞಾನವನ್ನು ತೋರಿಸುತ್ತದೆ. ಮರದ ಮುಚ್ಚಿಗೆಯನ್ನು (ಬಾಚಿದ್ದು ಮತ್ತು ಕೆತ್ತಿದ್ದು)
ಮೇಲೆಮ್ಮೆತ್ತಲ್ಲಿ ನೋಡಬಹುದು. ಈ ಅರಮನೆಯ ಒಳಗೆ ಬಾವಿ ಇದ್ದು ಇದಕ್ಕೆ ಪಶ್ಚಿಮದಲ್ಲಿ ಹರಿಯುವ ಕಬ್ಬಿಣಮಕ್ಕಿ ಹೊಳೆಯಿಂದ ಸುರಂಗ ಕೊಳಾಯಿಗಳ ವ್ಯವಸ್ಥೆಯ ಮೂಲಕ ನೀರನ್ನು ಸರಬರಾಜು ಮಾಡಲಾಗುತ್ತಿದೆ. ಕೆಲವು ವರ್ಷಗಳ ಇಂದೆ ಸಂಭವಿಸಿದ ಆಕಸ್ಮಿಕ ಆಗ್ನಿಯ ದುರ್ಘಟನೆಯಲ್ಲಿ ಇಂದಿನ ಮನೆಯ ಪೂರ್ವ ದಿಕ್ಕಿನ ಗೋಡೆಗೆ ಸಾಕಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ.
ಅರಮನೆಕೊಪ್ಪದ ಸುತ್ತಲಿನ ಪರಿಸರದಲ್ಲಿ ಕ್ಷೇತ್ರ ಕಾರ್ಯಚರಣೆ ನಡೆಸಿದಾಗ ಅಕ್ಕಪಕ್ಕದ ಹೊಳೆಯ ಹತ್ತಿರ ಮತ್ತು ಹಿಂಭಾಗದಲ್ಲಿ ಇರುವ ಗುಡ್ಡದಲ್ಲಿ ನಿರ್ಮಿಸಿದ ರಕ್ಷಣಾತ್ಮಕ ಕಂದಕವನ್ನು ಗಮನಿಸ ಬಹುದು. ದಕ್ಷಿಣದಲ್ಲಿ ಇರುವ ಗುಡ್ಡದಲ್ಲಿ ಫಿರಂಗಿಗಳನ್ನು ಇಡಲು ಮಾಡಲಾಗಿರುವ ವ್ಯವಸ್ಥೆಯನ್ನು ನೋಡ ಬಹುದು. ಅಂದಿನ ಕಾಲದಲ್ಲಿ ಅರಮನೆಕೊಪ್ಪದಿಂದ ಬಿದನೂರಿನ ಅರಮನೆಗೆ ಗುಪ್ತ ರಾಜ ಮಾರ್ಗ ಇದ್ದು ಈಗಲೂ ಸಹಾ ದಟ್ಟವಾದ ಕಾಡಿನಲ್ಲಿ ಇದರ ಅವಶೇಷಗಳನ್ನು ಕಾಣಬಹುದು.
ನೀರಿನ ಕಾರಂಜಿ ಮತ್ತು ಹೂವಿನ ತೋಟ:-
ಮೂಲ ಅರಮನೆಯ ಉತ್ತರದಲ್ಲಿ ದೇವಗಂಗೆಯ ಮಾದರಿಯಲ್ಲಿ ಪುಷ್ಕರಣಿ ಮತ್ತು ಕಾರಂಜಿಯ ವ್ಯವಸ್ಥೆ ಇತ್ತು. ಅಂದಿನ ಕಾಲದಲ್ಲಿ ಇಡೀ ಕರ್ನಾಟಕದಲ್ಲಿ ಕೊಳಗಳ ಮೂಲಕ ನೀರು ಕಾರಂಜಿಯಾಗಿ ಚಿಮ್ಮುತ್ತಿದ್ದು ಕೇವಲ ನಮ್ಮ ಮಲೆನಾಡಿನಲ್ಲಿ ಮಾತ್ರ. ಅಂದು ಈ ಅರಮನೆಯ ಮುಂಭಾಗದಲ್ಲಿ ಸಮಯವನ್ನು ನೋಡುವ ಘಳಿಗೆ ಬಟ್ಟಲು ಮತ್ತು ಸುಂದರವಾದ ಹೂವಿನ ತೋಟ ಇತ್ತು. ಸರ್ ಎಮ್ ವಿಶ್ವೇಶ್ವರಯ್ಯ ಅವರು ಬಿದನೂರಿಗೆ ಭೇಟಿ ನೀಡಿದಾಗ ಇಲ್ಲಿಯ ಕಾರಂಜಿ (ದೇವಗಂಗೆಯ) ತಂತ್ರಜ್ಞಾನ ಮತ್ತು ಹೂವಿನ ತೋಟ ಅವರನ್ನು ಬಹಳ ಸೆಳೆದು ಅದರ ಪರಿಣಾಮವಾಗಿ ನಿರ್ಮಾಣವಾಗಿದ್ದು ಮೈಸೂರಿನ ಬೃಂದಾವನ. ಆದರೆ ಇಂದು ಲಿಂಗನಮಕ್ಕಿ ಆಣೆಕಟ್ಟಿನ ಹಿನ್ನೀರಿನಲ್ಲಿ ಈ ಐತಿಹಾಸಿಕ ಕಾರಂಜಿ ಮತ್ತು ಹೂವಿನ ತೋಟ ಮುಳುಗಿದರೆ ದೂರದ ಬೃಂದಾವನದಲ್ಲಿ ಇದರ ನಕಲು ಕಂಗೊಳಿಸುತ್ತಿದೆ. ಇನ್ನೂ ಅಂದಿನ ಕಪ್ಪು ಕಲ್ಲಿನ ಘಳಿಗೆ ಬಟ್ಟಲು ಇಂದು ತುಳಸಿ ಕಟ್ಟೆಯಾಗಿ ಮಾರ್ಪಾಡಾಗಿದೆ. ಘಳಿಗೆ ಎಂದರೆ ಇಪ್ಪತ್ತು ನಾಲ್ಕು ನಿಮಿಷ ಅಂದರೆ ಒಂದು ದಿನದ ಹದಿನಾರನೇ ಒಂದು (1/16) ಭಾಗ, ಹೀಗಾಗಿ ನಮ್ಮ ಪೂರ್ವಜರು ಘಳಿಗೆ ಬಟ್ಟಲಿನ ಕಮಲದಲ್ಲಿ ಹದಿನಾರು ದಳಗಳನ್ನು ಕೆತ್ತಿದ್ದಾರೆ (ಅರಮನೆಕೊಪ್ಪದ ತುಳಸಿ ಕಟ್ಟೆಯಲ್ಲಿ ಕಾಣಬಹುದು). ಎರಡು ಘಳಿಗೆ ಒಂದು ಮುಹೂರ್ತವಾದರೆ, ಒಂದು ದಿನದಲ್ಲಿ ಮೂವತ್ತು ಮುಹೂರ್ತಗಳಿರುತ್ತವೆ. ಅಂದಿನ ಕಾಲದ ನೀರಿನ ಮರಿಗೆ ಮತ್ತು ಇತರೆ ಪಾತ್ರೆಗಳು ಇಂದಿಗೂ ಅರಮನೆಕೊಪ್ಪದಲ್ಲಿ ಇದ್ದು ನಮ್ಮನ್ನು ಆಕರ್ಷಿಸುತ್ತದೆ.
ರೋಟರ್ಡ್ಯಾಮ್ ಫಿರಂಗಿ:-
ಅರಮನೆಕೊಪ್ಪದ ದಕ್ಷಿಣದ ಗುಡ್ಡದಲ್ಲಿ ಎರಡು ಅತ್ಯುತ್ತಮ ಫಿರಂಗಿಗಳನ್ನು ಇಡಲಾಗಿದ್ದು ಇದರ ಬಗ್ಗೆ ಕೊಲಿನ್ ಮೆಕೆಂಜಿ ದಾಖಲೆಮಾಡಿದ್ದಾರೆ. ಐರೋಪ್ಯ ದೇಶಗಳಲ್ಲಿ (ಇಂಗ್ಲಿಷ್, ಡಚ್, ಸ್ವೀಡನ್ ಮತ್ತು ಪೋರ್ಚುಗೀಸ್) ಅಂದು ತಯಾರಿಸುತ್ತಿದ್ದ ಫಿರಂಗಿಗಳ ಮೇಲೆ ಕೆಲವು ಮಹತ್ತರ ಗುರುತುಗಳನ್ನು ಮಾಡುತ್ತಿದ್ದರು. ಈ ಗುರುತುಗಳು ಕೆಲವೊಮ್ಮೆ ಫಿರಂಗಿಯ ತೂಕ ಸೂಚಿಸಿದರೆ ಕೆಲವೊಮ್ಮೆ ಅದನ್ನು ನಿರ್ಮಾಣ ಮಾಡಿದ ಕಾರ್ಖಾನೆ ಸೂಚಿಸುತ್ತದೆ ಮತ್ತೆ ಕೆಲವು ಸರಿ ಇದರ ಸಾಮರ್ಥ್ಯವನ್ನು ಸೂಚಿಸುತ್ತದೆ. ಅರಮನೆಕೊಪ್ಪದಲ್ಲಿ ಇರುವ ಫಿರಂಗಿಯ ಮೇಲೆ ರೋಮನ್ ಅಂಕೆಗಳು VIII ಇದ್ದು ಇದರ ಕೆಳಭಾಗದಲ್ಲಿ ಆರ್ಮ್ಸ್ ಕೋಟ್ (Arms Coat) ಅನ್ನು ಕಾಣಬಹುದು. 1640ರ ವರೆಗೆ ಡಚ್ ದೇಶದ ಹೆಸರಾಂತ ಬಂದರೂ ಊರು ರೋಟರ್ಡ್ಯಾಮ್ ಫಿರಂಗಿಗಳನ್ನು ನಿರ್ಮಾಣ ಮಾಡುವ ಘೌಂಡ್ರಿಗೆ ಹೆಸರುವಾಸಿಯಾಗಿತ್ತು. 1640ರ ನಂತರದಲ್ಲಿ ನಿರ್ಮಾಣವಾದ ಫಿರಂಗಿಗಳ ಮೇಲೆ ರೋಮನ್ ಅಂಕಗಳ ಜೊತೆಗೆ ಆಂಗ್ಲ ಭಾಷೆಯ ”A” ಅನ್ನು ಕೆತ್ತಲಾಗುತ್ತಿತ್ತು. ಅರಮನೆಕೊಪ್ಪದ ಈ ಫಿರಂಗಿ 32 ಪೌಂಡ್ ಕ್ಯಾಲಿಬರ್ ಸಾಮರ್ಥ್ಯ ಹೊಂದಿರುವ ನೌಕೆಯಲ್ಲಿ ಉಪಯೋಗಿಸುವ ಫಿರಂಗಿಯಾಗಿದೆ. ಇದೇ ತರಹದ ಇನ್ನೊಂದು ಫಿರಂಗಿ ಅರಮನೆಯ ಮುಂದೆ ಇದ್ದು ಅದನ್ನು ಕೆಲವು ವರ್ಷಗಳ ಹಿಂದೆ ಧರ್ಮಸ್ಥಳದ ವಸ್ತು ಸಂಗ್ರಹಾಲಯಕ್ಕೆ ನೀಡಲಾಗಿದೆ. ಇದರ ಜೊತೆಗೆ ಪುರಾತನ ಕುದುರೆ ಸಾರೋಟಿಯನ್ನು ಸಹಾ ನೀಡಲಾಗಿದೆ. ಅರಮನೆಕೊಪ್ಪ ಇಂದ ಸರಿಸುಮಾರು 9111 ಕಿಲೋಮೀಟರ್ ದೂರದಲ್ಲಿರುವ ರೋಟರ್ಡ್ಯಾಮ್ ಇಂದ ಇಲ್ಲಿಗೆ ಈ ಫಿರಂಗಿ ಹೇಗೆ ಬಂತು ಎಂಬುವ ಸ್ವಾರಸ್ಯಕರ ವಿಷಯಗಳನ್ನು ನನ್ನ ಮುಂದಿನ ಬರವಣಿಗೆಯಲ್ಲಿ ವಿವರಿಸುವೆ. ಇಂದು ಈ ಮುನ್ನೂರು ವರ್ಷಗಳಷ್ಟು ಹಳೆಯ ಫಿರಂಗಿ ಅರಮನೆಕೊಪ್ಪದ ಸರ್ಕಾರಿ ಶಾಲೆಯ ಆವರಣದಲ್ಲಿ ಇಡಲಾಗಿದೆ.
ಸ್ಥಳೀಯ ಪುರಾಣದಲ್ಲಿ ರಾಜಾರಾಮ ಮತ್ತು ಬಿದನೂರು:-
ಸ್ಥಳೀಯರ ಪ್ರಕಾರ ತರುಣ ರಾಜಾರಾಮ ತನ್ನ ತಂದೆಯ ತರಹವೇ ಚಾಣಕ್ಯ. ಇವನು ಮರಾಠಾವಾಡ ಇಂದ ಪೂರ್ವಕ್ಕೆ ಸಂಚರಿಸಿ ನಂತರ ದಕ್ಷಿಣಕ್ಕೆ ಬರುತ್ತಾನೆ. ರಾಜಾರಾಮ ನನ್ನು ಹೋಲುವ ಹಲವಾರು ನಕಲುಗಳನ್ನು ರಾಜ್ ಫೋಷಾಕಿನಲ್ಲಿ ಬೇರೆ ಬೇರೆ ಮಾರ್ಗದಲ್ಲಿ ಕಳಿಸಿ ಶತ್ರುಗಳಿಗೆ ಚಳ್ಳೆಹಣ್ಣು ತಿನ್ನಿಸುತ್ತಾರೆ. ಇಂತಹ ಹಲವಾರು ಜನರು ರಾಜಾರಾಮನಿಗಾಗಿ ಬಲಿದಾನವನ್ನು ನೀಡುತ್ತಾರೆ. ಔರಂಗಜೇಬಿನ ಸೈನ್ಯ ಬಿದನೂರನ್ನು ಒತ್ತುವರಿದಾಗ ಇದೇ ನೀತಿಯನ್ನು ಅನುಸರಿಸಿ ರಾಜಾರಾಮ ಬಿದನೂರಿನಿಂದ ಶಿವಮೊಗ್ಗ, ಗಾಜನೂರು, ಖಾಂಡ್ಯ, ಕಳಸ, ವಸುದಾರೆ ಮುಖಾಂತರ ಸುರಕ್ಷಿತವಾಗಿ ಜಿಂಜಿ ಕೋಟೆಯನ್ನು 1689ರ ನವೆಂಬರ್ ನಲ್ಲಿ ಸೇರಿದ ಎಂದು ಸುದ್ದಿ ಹಬ್ಬಿಸುತ್ತಾರೆ. ಆದರೆ ವಾಸ್ತವವಾಗಿ ರಾಜಾರಾಮ ಮತ್ತು ಅವನ ಪರಿವಾರ ಮತ್ತು ಅವನ ನಿಕಟವರ್ತಿಗಳು ಅರಮನೆಕೊಪ್ಪದ ಅರಮನೆಯಲ್ಲಿ ಸುರಕ್ಷಿತವಾಗಿದ್ದರು. ಸ್ಥಳೀಯರ ಪ್ರಕಾರ ಶಾಲಿವಾಹನ ಶಕೆ ವರ್ಷ 1612 – ಶುಕ್ಲ ಸಂವತ್ಸರದ ವೈಶಾಖ ಬಹುಳದೊಂದು (ಅಂದರೆ 1690ರ ಎಪ್ರಿಲ್) ನಡೆದ ಐತಿಹಾಸಿಕ ಧರ್ಮ ಯುದ್ಧದಲ್ಲಿ ಮೊಘಲ್ ಸೈನ್ಯದ ಉಸ್ತುವಾರಿ ವಹಿಸಿದ ಔರಂಗಜೇಬಿನ ಮಗ ಮೊಹಮ್ಮದ್ ಅಜಮ್ ಶಾಹ್ ಮತ್ತು ದಂಡಾಧಿಕಾರಿ ಅಬ್ದುಲ್ ಖಾನ್ ಹಾಗೂ ಸರ್ ನಿಸಾರ್ ಖಾನ್ ಅವರ ಜೊತೆಗೆ ದೊಡ್ಡ ಬಲಿಷ್ಠ ಸೈನ್ಯವನ್ನು ನೆಲಸಮ ಮಾಡಿದ ರಾಣಿ ಚೆನ್ನಮ್ಮಾಜಿಯ ಸೈನ್ಯದ ಜೊತೆಗೆ ಛತ್ರಪತಿ ರಾಜಾರಾಮನು ಪಾಲ್ಗೊಳ್ಳುತ್ತಾನೆ. Saakshatv Naavu kelada charitre episode3
ಇದಕ್ಕೆ ಪುಷ್ಟಿ ನೀಡುವಂತೆ ಸ್ಥಳೀಯ ಒಂದು ವೀರಶೈವ ಮಠದಲ್ಲಿ ಆ ಯುದ್ಧದ ತೈಲ ಚಿತ್ರದಲ್ಲಿ ರಾಣಿ ಚೆನ್ನಮ್ಮಾಜಿಯ ಜೊತೆಗೆ ರಾಜಾರಾಮ ನನ್ನು ಕಾಣಬಹುದು. ಔರಂಗಜೇಬಿನ ಸೈನ್ಯ ಯುದ್ಧದಲ್ಲಿ ಸೋತು ಧೂಳಿಪಟ ಆಗಿ ಮಲೆನಾಡಿನಿಂದ ಕಾಲುಕಿತ್ತಿದ ಮೇಲೆ ಕೆಲವು ತಿಂಗಳ ನಂತರ ರಾಜಾರಾಮ ಮತ್ತು ಅವನ ಪರಿವಾರ ಜಿಂಜಿಗೆ ಹೋಗುತ್ತದೆ. ಛತ್ರಪತಿ ರಾಜರಾಮನ ಜೊತೆಗೆ ಬಂದ ಮರಾಠಾ ಬ್ರಾಹ್ಮಣರು ನೆಲಸಿದ ಪ್ರದೇಶಕ್ಕೆ ಬ್ರಾಹ್ಮಣವಾಡ ಎಂದು ಇಂದಿಗೂ ಸಹಾ ಹೇಳುತ್ತಾರೆ.
ಅರಮನೆಕೊಪ್ಪದಲ್ಲಿ ಇರುವಾಗ ರಾಜಾರಾಮ ರಾಣಿ ಚೆನ್ನಮ್ಮಾಜಿಯ ಮಗನಾಗಿ ವಾಸಿಸುತ್ತಾನೆ. ಛತ್ರಪತಿ ರಾಜಾರಾಮ ಬಿದನೂರಿನಲ್ಲಿ ಪಾರ್ವತಿ ದೇವಾಲಯ ಮತ್ತು ಕಂಬದ ನರಸಿಂಹ ದೇವಾಲಯಗಳನ್ನು ನಿರ್ಮಾಣ ಮಾಡುತ್ತಾನೆ. 1689 ಇಂದ 1690ರ ವರೆಗೆ ಅರಮನೆಕೊಪ್ಪ ಮರಾಠಾ ಸಾಮ್ರಾಜ್ಯದ ಶಕ್ತಿ ಕೇಂದ್ರವಾಗಿದ್ದು ನಮ್ಮೆಲ್ಲರ ಹೆಮ್ಮೆಯ ಸಂಗತಿ. ಛತ್ರಪತಿ ರಾಜರಾಮ ರಾಜೇ ಜಿಂಜಿಯಿಂದ 1698ರಲ್ಲಿ ಮತ್ತೆ ಮಹಾರಾಷ್ಟ್ರಕ್ಕೆ ಬಂದು ಔರಂಗಜೇಬಿನ ವಿರುದ್ಧ ಧರ್ಮ ಯುದ್ಧವನ್ನು 1700ರ ವರೆಗೂ ನಡೆಸಿಕೊಂಡು ಹೋಗುತ್ತಾನೆ.
1881ರ ನಂತರದಲ್ಲಿ ಅರಮನೆಕೊಪ್ಪದ ಅರಮನೆ ಮತ್ತು ಅದರ ಸುತ್ತಲಿನ ಪ್ರದೇಶಗಳನ್ನು (600 ಎಕರೆ) ಮೈಸೂರಿನ ರಾಜರಿಗೆ ನಿಷ್ಠರಾಗಿದ್ದ ಬ್ರಾಹ್ಮಣ ಕುಟುಂಬಕ್ಕೆ ಇನಾಂ ಆಗಿ ನೀಡಲಾಗುತ್ತದೆ. ಈ ಕುಟುಂಬದ ಹಿರಿಯರಾಗಿದ್ದ ಶ್ರೀ ರಾಮಪ್ಪ ಅಂದಿನ ಕಾಲದಲ್ಲಿ ಮೈಸೂರಿನ ಶಾಸಕಾಂಗ ಪರಿಷತ್ತಿನಲ್ಲಿ ನಾಮನಿರ್ದೇಶಿತ ಸದಸ್ಯರಾಗಿರುತ್ತಾರೆ. ಕೆಳದಿಯ ಕಾಲದಲ್ಲಿ ಇದ್ದ 60 ಅಂಕಣದ ಅರಮನೆ ಇಂದು ಕೇವಲ 20 ಅಂಕಣದ ಮನೆಯಾಗಿ ಮಾರ್ಪಾಡಾಗಿದೆ. ಮಲೆನಾಡು ಮತ್ತು ಮರಾಠರ ಮಧ್ಯದಲ್ಲಿ ಬೆಸುಗೆ ಹಾಕಿದ ಅರಮನೆಕೊಪ್ಪ, ಒಂದು ಕಾಲದಲ್ಲಿ ಮರಾಠಾ ಸಾಮ್ರಾಜ್ಯದ ಕೇಂದ್ರ ಬಿಂದು ಆಗಿದ್ದ ಅರಮನೆಕೊಪ್ಪ, ಛತ್ರಪತಿ ಶಿವಾಜಿಯ ಸ್ವರಾಜ್ಯ ಕನಸನ್ನು ಜೀವಂತವಾಗಿ ಇಟ್ಟು ಮರಾಠರಿಗೆ ಮರುಜನ್ಮ ನೀಡಿದ ಐತಿಹಾಸಿಕ ಅರಮನೆಕೊಪ್ಪ ಇಂದು ತನ್ನ ಕೊನೆಯ ಕ್ಷಣವನ್ನು ಎಣಿಸುತ್ತಿದೆ.
ಲೇಖನ ಮತ್ತು ಚಿತ್ರಗಳು:-
ಅಜಯ್ ಕುಮಾರ್ ಶರ್ಮಾ
ಇತಿಹಾಸ ಅಧ್ಯಯನಕಾರರು ಮತ್ತು ಪರಿಸರ ಹೋರಾಟಗಾರ
ಶಿವಮೊಗ್ಗ
Saakshatv Naavu kelada charitre episode3
ಸಾಕ್ಷಾ ಟಿವಿಯ ‘ನಾವು ಕೇಳದ ಚರಿತ್ರೆ’ ಅಂಕಣಕಾರ ಅಜಯ್ ಕುಮಾರ್ ಶರ್ಮಾ ಅವರ ಕಿರು ಪರಿಚಯ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel
ಟ್ವಿಟರ್ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ