ರೈತರ ತ್ಯಾಗ ಅಮರ ಎಂದ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್..!
ನವದೆಹಲಿ : ದೇಶಾದ್ಯಂತ ಕೆಲ ತಿಂಗಳುಗಳಿಂದ ಸಂಚಲನ ಸೃಷ್ಟಿ ಮಾಡಿದ್ದ ಕೇಂದ್ರದ ಮೂರೂ ಕೃಷಿ ಕಾಯ್ದೆಗಳ ವಿರುದ್ಧ ಅನ್ನದಾತರನಿರಂತರ ಹೋರಾಟದ ಬಳಿಕ ಸರ್ಕಾರ ವಾಪಸ್ ಪಡೆದಿದೆ.. ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆಯುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರವನ್ನು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಸ್ವಾಗತಿಸಿದ್ದಾರೆ. ಈ ಕಾಯ್ದೆಗಳ ರದ್ದತಿಗಾಗಿ ಹೋರಾಡಿ ಮೃತಪಟ್ಟ ರೈತರ ತ್ಯಾಗ ಅಮರ ಎಂದು ಹೇಳಿದ್ದಾರೆ.
ಅಲ್ಲದೇ ಪ್ರಕಾಶ್ ದಿವಸ್ ದಂದು ಇಂಥ ಉತ್ತಮ ಸುದ್ದಿಯೊಂದು ಹೊರಬಿದ್ದಿದೆ. ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಈ ಬೇಡಿಕೆ ಈಡೇರಿಕೆಗಾಗಿ 700 ರೈತರು ಹುತಾತ್ಮರಾಗಿದ್ದಾರೆ. ಅವರ ತ್ಯಾಗ ಅಮರವಾಗಿರುತ್ತದೆ. ದೇಶದ ರೈತರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೃಷಿ ಮತ್ತು ರೈತರನ್ನು ಹೇಗೆ ಉಳಿಸಿದರು ಎಂಬುದನ್ನು ಮುಂದಿನ ಪೀಳಿಗೆ ನೆನಪಿಸಿಕೊಳ್ಳುತ್ತದೆ. ನನ್ನ ದೇಶದ ರೈತರಿಗೆ ಗೌರವ ನಮನಗಳು ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.