ಕೊಪ್ಪಳ: ಬೈಕ್ ವೀಲಿಂಗ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಪೊಲೀಸರ ಮೇಲೆ ನಡು ರಸ್ತೆಯಲ್ಲೇ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಈ ಘಟನೆ ಗಂಗಾವತಿ (Gangavathi) ತಾಲೂಕಿನ ದಾಸನಾಳ ಗ್ರಾಮದ ಹತ್ತಿರ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲ್ಲೆ ಮಾಡಿರುವ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಗಂಗಾವತಿ ನಗರದ ನಿವಾಸಿಗಳಾದ ಅರ್ಭಾಜ್, ಪಂಪನಗೌಡ, ವೆಂಕಟೇಶ ಬಂಧಿತರು. ಆರೋಪಿಗಳು ಗಂಗಾವತಿ ಗ್ರಾಮೀಣ ಪೊಲೀಸ್ ಮುಖ್ಯಪೇದೆ ಬಸವರಾಜ, ಚಾಲಕ ಕನಕಪ್ಪ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಗಂಗಾವತಿ ತಾಲೂಕಿನ ಹೇಮಗುಡ್ಡದ ದುರ್ಗಾದೇವಿ ದಸರಾ ಮಹೋತ್ಸದ ಪಾರ್ಕಿಂಗ್ ವ್ಯವಸ್ಥೆ ನೋಡಿಕೊಂಡು, ಪೊಲೀಸರು ಗಂಗಾವತಿ ಕಡೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಬೈಕ್ನ್ನು ವೀಲಿಂಗ್ ಮಾಡಿಕೊಂಡು ಪೊಲೀಸರ ವಾಹನದ ಬಲ ಭಾಗದಿಂದ ಓವರ್ ಟೇಕ್ ಮಾಡಿದ್ದಾರೆ. ಆಗ ಪೊಲೀಸರು ಗದರಿಸಿದ್ದಾರೆ. ಬೈಕ್ ಎತ್ತಿಕೊಳ್ಳಲು ಮುಂದಾಗಿದ್ದಾರೆ.
ಇದರಿಂದ ಆಕ್ರೋಶಗೊಂಡ ಅರ್ಭಾಜ್, ಪಂಪನಗೌಡ ಮತ್ತು ವೆಂಕಟೇಶ ಏಕಾಏಕಿ ಹಲ್ಲೆ ಮಾಡಲು ಮುಂದಾಗಿದ್ದಾರೆ. ಮುಖ್ಯಪೇದೆ ಬಸವರಾಜ ಮೊಬೈಲ್ ಕಿತ್ತುಕೊಂಡು ಕಾಲುವೆಗೆ ಎಸೆದಿದ್ದಾರೆ. ಇಬ್ಬರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ. ಕೂಡಲೇ ಮತ್ತಷ್ಟು ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿಕೊಂಡು, ಆರೋಪಿಗಳನ್ನು ಬೈಕ್ ಸಮೇತ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಹಲ್ಲೆಗೊಳಗಾದ ಪೊಲೀಸರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.