ತಂಬಾಕು, ಗುಟ್ಕಾ, ಪಾನ್ ಮಸಾಲವನ್ನು ನಿಷೇಧಿಸಿ: ಸರ್ಕಾರಕ್ಕೆ ಸಲಹೆ ನೀಡಿದ ರಾಜ್ಯಪಾಲ ವಜುಭಾಯ್
ಬೆಂಗಳೂರು, ಅಗಸ್ಟ್ 2: ತಂಬಾಕು, ಗುಟ್ಕಾ, ಪಾನ್ ಮಸಾಲಾ ಮತ್ತು ಔಷಧಿಗಳಿಗಾಗಿ ಬಳಸಲಾಗುವ ಎಲ್ಲಾ ರೀತಿಯ ಮಾದಕ ವಸ್ತುಗಳ ಮಾರಾಟ ಮತ್ತು ವಿತರಣೆಯನ್ನು ನಿಷೇಧಿಸಲು ಪರಿಗಣಿಸುವಂತೆ ಕರ್ನಾಟಕ ರಾಜ್ಯಪಾಲ ವಜುಭಾಯ್ ಆರ್ ವಾಲಾ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಶುಕ್ರವಾರ ಸಲಹೆ ನೀಡಿದರು.
ಒಂದು ಹೇಳಿಕೆಯ ಪ್ರಕಾರ, ಮಾದಕ ಔಷಧಿಗಳ ಬಳಕೆಯನ್ನು ತಡೆಯಲು ನಿಷೇಧವನ್ನು ಹೇರುವಂತೆ ವಜುಭಾಯ್ ಸೂಚಿಸಿದರು. ಗುಟ್ಕಾ ಹೆಸರಿನಲ್ಲಿ, ರಾಜ್ಯದಲ್ಲಿ ಮಾದಕ ವಸ್ತುಗಳ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಯುವಕರು ಮತ್ತು ವಿದ್ಯಾರ್ಥಿಗಳು ವ್ಯಸನಿಯಾಗುತ್ತಿದ್ದಾರೆ ಮತ್ತು ಅವರು ಅಪಾಯದಲ್ಲಿದ್ದಾರೆ ಎಂದು ಹೇಳಿರುವುದಾಗಿ ವರದಿಗಳು ತಿಳಿಸಿದೆ.
ಈ ಕುರಿತು ಚರ್ಚಿಸಲಾಗುವುದು ಮತ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳಿದ್ದು, ಅಗತ್ಯವಿದ್ದರೆ ಈ ಬಗ್ಗೆ ಸುಗ್ರೀವಾಜ್ಞೆಯನ್ನು ತರಲಾಗುವುದು ಎಂದು ಮುಖ್ಯಮಂತ್ರಿ ಹೇಳಿರುವುದಾಗಿ ವರದಿಗಳು ತಿಳಿಸಿವೆ. ಎರಡು ವಾರಗಳಲ್ಲಿ ಯಡಿಯೂರಪ್ಪ ಅವರು ರಾಜ್ಯಪಾಲರನ್ನು ಭೇಟಿ ಮಾಡುವುದು ಇದು ಎರಡನೇ ಬಾರಿಯಾಗಿದ್ದು, ವಿಸ್ತರಣೆ ಕುರಿತು ಯಾವುದೇ ರೀತಿಯ ಮಾತುಕತೆಗಳು ನಡೆಸಿಲ್ಲ ಎಂದು ಯಡಿಯೂರಪ್ಪ ಅವರೊಂದಿಗೆ ರಾಜ ಭವನಕ್ಕೆ ಬಂದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಕೆಲವು ವಿಷಯಗಳನ್ನು ಚರ್ಚಿಸಲು ರಾಜ್ಯಪಾಲರು ಸಿಎಂ ಮತ್ತು ನನ್ನನ್ನು ಕರೆದರು. ಕೋವಿಡ್ -19 ಕುರಿತು ಸರ್ಕಾರದ ಪ್ರಯತ್ನವನ್ನು ಅವರು ಶ್ಲಾಘಿಸಿದರು. ಇನ್ನಷ್ಟು ಹೆಚ್ಚಿನ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯತೆಯ ಬಗ್ಗೆಯೂ ನಾವು ಚರ್ಚಿಸಿದ್ದೇವೆ ಎಂದು ಬೊಮ್ಮಾಯಿ ಹೇಳಿದರು. ಮಾದಕ ವಸ್ತುಗಳ ವಿರುದ್ಧ ಹೋರಾಡುತ್ತಿರುವ ನಮ್ಮ ಪ್ರಯತ್ನಗಳನ್ನೂ ಅವರು ಶ್ಲಾಘಿಸಿದರು. ನಮ್ಮ ಸೈಬರ್ ಅಪರಾಧ ಮತ್ತು ಮಾದಕವಸ್ತು ವಿರೋಧಿ ಕಾರ್ಯಾಚರಣೆಗಳು ಮತ್ತಷ್ಟು ವಿಸ್ತರಣೆಯಾಗಬೇಕು ಎಂದು ಅವರು ಹೇಳಿದರು.
ಕೋವಿಡ್ -19 ಚಿಕಿತ್ಸೆಗಾಗಿ ಆಯುರ್ವೇದ ಮತ್ತು ಹೋಮಿಯೋಪತಿ ಔಷಧಿಯನ್ನು ಬಳಸುವಂತೆ ವಾಲಾ ಸರ್ಕಾರವನ್ನು ಕೇಳಿದರು. ಆಯುರ್ವೇದವು ಜನರನ್ನು ದೊಡ್ಡ ಪ್ರಮಾಣದಲ್ಲಿ ತಲುಪಬೇಕು, ಇದರಿಂದ ಪ್ರತಿರೋಧ ಶಕ್ತಿ ಹೆಚ್ಚಾಗುತ್ತದೆ ಎಂದು ರಾಜ್ಯಪಾಲರು ಹೇಳಿದರು ಎಂದು ಬೊಮ್ಮಾಯಿ ಹೇಳಿದರು.
ಯಡಿಯೂರಪ್ಪ ಕೊನೆಯ ಬಾರಿಗೆ ಜುಲೈ 22 ರಂದು ವಾಲಾ ಅವರನ್ನು ಭೇಟಿಯಾಗಿದ್ದರು. ಇದರ ನಂತರ ವಾಲಾ ಅವರು ಐದು ಜನರನ್ನು ಶಾಸಕಾಂಗ ಪರಿಷತ್ತಿಗೆ ನಾಮನಿರ್ದೇಶನ ಮಾಡಿದರು.