ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸಾವು
ಬೆಂಗಳೂರು: ರಸ್ತೆ ದಾಟುತ್ತಿದ್ದ ಬಾಲಕಿ ಮೇಲೆ ಬಿಬಿಎಂಪಿ ವಾಹನ ಹರಿದು ಬಾಲಕಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳದಲ್ಲಿ ನಡೆದಿದೆ.
13 ವರ್ಷದ ಅಕ್ಷಯಾ ಮೃತ ದುರ್ದೈವಿ. ಇವರು ಡಿವೈಡರ್ ಮೂಲಕ ರಸ್ತೆ ದಾಟುತ್ತಿದ್ದ ವೇಳೆ ಬಿಬಿಎಂಪಿ ಕಸದ ಲಾರಿ ಹರಿದು ಬಾಲಕಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಸುಮಾರು 6ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೃತ್ಯವೆಸಗಿದ ಲಾರಿ ಚಾಲಕ ನಾಪತ್ತೆಯಾಗಿದ್ದು, ಘಟನೆ ಸಂಬಂಧ ಆರ್.ಟಿ.ನಗರ ಟ್ರಾಫಿಕ್ ಪೊಲೀಸರು ಪ್ರಕರಣ ದಾಖಲಾಗಿದೆ.
ನಿನ್ನೆ ಭಾನುವಾರ ರಾತ್ರಿ ಮಳೆಯಾಗಿದ್ದರಿಂದ ಹೆಬ್ಬಾಳ ಪೊಲೀಸ್ ಠಾಣೆ ಮುಂಭಾಗದಲ್ಲಿರುವ ಅಂಡರ್ ಪಾಸ್ನಲ್ಲಿ ನೀರು ತುಂಬಿಕೊಂಡಿದ್ದು, ಪಾದಚಾರಿಗಳು ಹೋಗಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ಡಿವೈಡರ್ ದಾಟಿ ರೋಡ್ ಕ್ರಾಸ್ ಮಾಡಲು ಅಕ್ಷಯಾ ಮುಂದಾಗಿದ್ದರು. ಈ ವೇಳೆ ವೇಗವಾಗಿ ಬಂದ ಬಿಬಿಎಂಪಿ ಕಸದ ಲಾರಿ ಬಾಲಕಿಗೆ ಡಿಕ್ಕಿ ಹೊಡೆದ ಪರಿಣಾಮ ರಕ್ತಸ್ರಾವಗೊಂಡು ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಅಲ್ಲದೇ ಮುಂದೆ ಹೋಗುತ್ತಿದ್ದ ಬೈಕ್, ಕಾರ್ಗಳಿಗೂ ಗುದ್ದಿದ ಪರಿಣಾಮ ಸರಣಿ ಅಪಘಾತ ನಡೆದಿದೆ. ಬೈಕ್ ಹಾಗೂ ಕಾರುಗಳು ಹಾನಿಗೊಳಗಾಗಿವೆ.