ಬೆಂಗಳೂರು ಬಂಟರ ಸಂಘದಿಂದ ಉಚಿತ ಆಕ್ಸಿಜನ್ ಅಭಿಯಾನಕ್ಕೆ ಡಿಸಿಎಂ ಅಶ್ವಥನಾರಾಯಣ ಚಾಲನೆ
ಬೆಂಗಳೂರು ಬಂಟರ ಸಂಘದ ವತಿಯಿಂದ ಕೋವಿಡ್ ಆರೈಕೆಗಾಗಿ ಆಕ್ಸಿಜನ್ ಕಾನ್ಸಂಟ್ರೇಟರ್ ಪೂರೈಕೆಯ ಉಚಿತ ಆಕ್ಸಿಜನ್ ಅಭಿಯಾನವನ್ನು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವಥನಾರಾಯಣ ಅವರು ಉದ್ಘಾಟಿಸಿದ್ರು.
ಬೆಂಗಳೂರು ಬಂಟರ ಸಂಘದ ಆವರಣದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಡಿಸಿಎಂ ಅಶ್ವಥ ನಾರಾಯಣ್ ಅವರು, ಬೆಂಗಳೂರು ಬಂಟರ ಸಂಘದ ವತಿಯಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿರುವವರಿಗೆ 20 ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಪೂರೈಕೆ ಮಾಡಲಾಗುತ್ತದೆ. ಹಾಗೇ ವೈದ್ಯಕೀಯ ಆರೈಕೆಯನ್ನು ಸಹ ಮಾಡಲಾಗುತ್ತದೆ ಎಂದು ಹೇಳಿದ್ರು.
ಇನ್ನು ಬೆಂಗಳೂರು ಬಂಟರ ಸಂಘ ಹಲವು ವರ್ಷಗಳಿಂದ ಶೈಕ್ಷಣಿಕವಾಗಿ ಮತ್ತು ಸಾಮಾಜಿಕ ಜನಪರ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಆಕ್ಸಿಜನ್ ಕಾನ್ಸಂಟ್ರೇಟರ್ ಗಳ ಕೊರತೆಯ ಸಮಯದಲ್ಲಿ ಬೆಂಗಳೂರು ಬಂಟರ ಸಂಘ ನೆರವಿನ ಹಸ್ತ ನೀಡಿದೆ ಎಂದು ಹೇಳಿದ್ರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೆಂಗಳೂರು ಬಂಟರ ಸಂಘದ ಅಧ್ಯಕ್ಷರಾದ ಉಪೇಂದ್ರ ಶೆಟ್ಟಿ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ ಶೆಟ್ಟಿಯವರು, ಸದ್ಯ ಬಂಟರ ಸಂಘದಿಂದ 20 ಅಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಪೂರೈಕೆ ಮಾಡಲಾಗುವುದು. ಮುಂದಿನ ದಿನಗಳಲ್ಲಿ ಒಟ್ಟು 100 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ನೀಡುವ ಉದ್ದೇಶವನ್ನು ಹೊಂದಿದೆ ಎಂದು ತಿಳಿಸಿದ್ರು.
ಬೆಂಗಳೂರು ಬಂಟರ ಸಂಘದ ವೈದ್ಯಕೀಯ ವಿಭಾಗದಿಂದ ನೂರು ಮಂದಿ ವೈದ್ಯರ ತಂಡವನ್ನು ರಚಿಸಲಾಗಿದೆ. ಈ ತಂಡದಿಂದ ಸೋಂಕಿತರಿಗೆ ಸೂಕ್ತ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಲಾಗುತ್ತದೆ. ಹಾಗೇ,ಪ್ಲಾಸ್ಮಾ ದಾನ ಮಾಡುವವರಿಗೂ ಸೂಕ್ತ ಸಹಾಯವನ್ನು ಮಾಡಲಾಗುತ್ತದೆ ಎಂದು ಹೇಳಿದ್ರು.
ಬೆಂಗಳೂರು ಬಂಟರ ಸಂಘದ ಸದಸ್ಯರು, ಸಮುದಾಯದವರು, ಆರ್ ಎನ್.ಎಸ್ ವಿದ್ಯಾಸಂಸ್ಥೆಯ ಶಾಲಾ ಶಿಕ್ಷಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಸುಮಾರು ಎಂಟು ಸಾವಿರ ಪೋಷಕರು ಈ ಉಚಿತ ಆಕ್ಸಿಜನ್ ಅಭಿಯಾನದ ನೆರವನ್ನು ಪಡೆದುಕೊಳ್ಳಬಹುದಾಗಿದೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ದಿ ನಿಗಮದ ಅಧ್ಯಕ್ಷರಾದ ಡಾ. ಬೇಳೂರು ರಾಘವೇಂದ್ರ ಶೆಟ್ಟಿ, ಗೋವಿಂದ ರಾಜನಗರದ ಮಾಜಿ ಕಾರ್ಪೋರೇಟರ್ ಉಮೇಶ್ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಗೌರವ ಕಾರ್ಯದರ್ಶಿ ಮಧುಕರ ಎಂ. ಶೆಟ್ಟಿ, ವೈದ್ಯಕೀಯ ವಿಭಾಗದ ಚೇರ್ ಮೆನ್ ಡಾ. ಬಿ. ನಿಶಾಕಾಂತ್ ಶೆಟ್ಟಿ,ಜತೆ ಕಾರ್ಯದರ್ಶಿ ಸೌಮ್ಯಾ ಪ್ರಿಯ ಹೆಗ್ಡೆ, ಉಪಾಧ್ಯಕ್ಷೆ ಅಮೃತಾ ಶೆಟ್ಟಿ ಉಪಸ್ಥಿತರಿದ್ರು.