ಬ್ರಾಹ್ಮಣರು ವರ್ಸಸ್ ಬ್ರಾಹ್ಮಣ್ಯ, ಜಾತಿನಾಶವೆಂದರೇ ಬ್ರಾಹ್ಮಣರ ನಾಶವಲ್ಲ ಬ್ರಾಹ್ಮಣತ್ವವೆಂಬ ಶ್ರೇಷ್ಟತಾ ವ್ಯಸನದ ನಾಶವಾಗಬೇಕು:
ಅಸಲಿಗೆ ಹೀಗೊಂದು ಕನಿಷ್ಟ ಪ್ರಯತ್ನ ನಡೆದಿದ್ದರೂ ನಾವೆಲ್ಲರೂ ಖುಷಿ ಪಟ್ಟುಕೊಳ್ಳಬಹುದಾಗಿತ್ತು. ಬ್ರಾಹ್ಮಣರೇ ಬೇರೆ ಬ್ರಾಹ್ಮಣ್ಯವೇ ಬೇರೆ ಅನ್ನುವ ಮಾತನ್ನು ಅಂಬೇಡ್ಕರ್ ರಿಂದ ಪೆರಿಯಾರ್ ನಾರಾಯಣ ಗುರುಗಳ ಕಾಲದ ವರೆಗೂ ಹೇಳುತ್ತಲೇ ಬರಲಾಗಿದೆ. ಆದರೂ ಇವತ್ತಿಗೂ ಈ ಮಾತಿನ ತಾತ್ಪರ್ಯ ಬಹುತೇಕರಿಗೆ ಅರ್ಥವಾದಂತಿಲ್ಲ. ಅದ್ಯಾವುದೋ ಸ್ವಚ್ಛ ಬ್ರಾಹ್ಮಣರ ವೇದಿಕೆಯಲ್ಲಿ ಕೇವಲ ಕೋವಿಡ್ ಸೋಂಕಿತ ಬ್ರಾಹ್ಮಣರಿಗೆ ಮಾತ್ರ ಊಟ ಕೊಡ್ತೀವಿ ಅನ್ನುವ ಪೋಸ್ಟ್ ಕುರಿತಾದ ಚರ್ಚೆ ಒಟ್ಟು ಬ್ರಾಹ್ಮಣ ವರ್ಗದ ವಿರುದ್ಧ ಚರ್ಚೆಯಾಗುವಂತಿದೆ. ಆ ಪೋಸ್ಟ್ ಹಾಕಿದವನೊಬ್ಬ ಶುದ್ಧ ಅವಿವೇಕಿ. ಅನ್ನದಾನ ಶ್ರೇಷ್ಠದಾನವೇ ಹೌದಾದರೇ ಅದು ಬ್ರಾಹ್ಮಣರಿಗಾದರೇ ಮಾತ್ರ ಶ್ರೇಷ್ಠ ಬ್ರಾಹ್ಮಣೇತರರಿಗೆ ಅಲ್ಲ ಅನ್ನುವುದೇ? ಬ್ರಾಹ್ಮಣ್ಯದ ಭೂತ ತಲೆಗೇರಿಸಿಕೊಂಡವರು ಮಾಡುವ ಉಪದ್ವ್ಯಾಪಗಳಿವು. ತಾವು ಬ್ರಾಹ್ಮಣರು ತಾವು ಹುಟ್ಟಿನಿಂದ ಕುಲೀನರು, ಪರಮ ಪವಿತ್ರರು, ಪೂಜ್ಯನೀಯರು ಎಂಬ ಶ್ರೇಷ್ಟತಾ ವ್ಯಸನವೇ ಒಂದು ದರಿದ್ರ ರೋಗ. ದುರದೃಷ್ಟವಶಾತ್ ಈ ರೋಗಕ್ಕೆ ಮದ್ದಿಲ್ಲ. ಆದರೆ ನಾನಿಲ್ಲ ಬರೆಯಲು ಹೊರಟ ವಿಚಾರಕ್ಕೆ ಅನೇಕ ಆಯಾಮಗಳಿವೆ.
ಜಾತಿ ನಾಶದ ಚಳುವಳಿ ಎಂದಾಗ ಕೇವಲ ಬ್ರಾಹ್ಮಣರ ವಿರುದ್ಧ ಎಂದು ಬಾವಿಸುವ ಅನೇಕ ಜ್ಯಾತ್ಯಾತೀತ ಗೆಳೆಯರ ಆಂತರ್ಯದಲ್ಲಿ ಜಾತಿಯ ಮೋಹ ಕಂಡಿದ್ದೇನೆ. ಇವರಿಗೆ ಜಾತಿನಾಶದ ಚಳುವಳಿ ಮಾಡುವ ನೈತಿಕತೆಯೇ ಇಲ್ಲ. ಇನ್ನು ಬ್ರಾಹ್ಮಣರು ಮಾತ್ರ ಜಾತಿ ಪದ್ಧತಿಯನ್ನು ಪೋಷಿಸುತ್ತಿದ್ದಾರೆ ಅನ್ನುವ ವಾದವೇ ಬಯಾಸ್ಡ್. ಹಾಗೆ ನೋಡಿದರೆ ಪ್ರಬಲ ಜಾತಿವಾದಿಗಳು ವೀರಶೈವ ಲಿಂಗಯಿತರು, ಒಕ್ಕಲಿಗರು ಮತ್ತು ಸ್ವಲ್ಪ ಮಟ್ಟಿಗೆ ಕುರುಬ ಸಮುದಾಯದವರೂ ಹೌದು. ಬ್ರಾಹ್ಮಣರ ಜಾತಿ ಪ್ರೇಮ ಸುಪ್ತವಾಗಿರತ್ತೆ ಅದು ಪ್ರಕಟವಾಗುವುದು ಅಪರೂಪ. ಇನ್ ಫ್ಯಾಕ್ಟ್ ನಾನು ನೋಡಿದಂತೆ ಬಹಳಷ್ಟು ಬ್ರಾಹ್ಮಣರು ತಮ್ಮ ಜಾತಿಯನ್ನು ತಮ್ಮವರಿದ್ದಾಗ ಮಾತ್ರ ಸ್ವಚ್ಛಂದವಾಗಿ ಆಚರಿಸುತ್ತಾರೆ. ಈ ಜಾತಿ ಪ್ರಜ್ಞೆ ದಲಿತರಲ್ಲಿ ಪೂರ್ಣವಾಗಿ ಬಂದಾಗ ಒಂದು ಅವರ ಸಾಮಾಜಿಕ ಸ್ಥಾನಮಾನ ಬದಲಾಗುತ್ತದೆ, ಎರಡು ಜಾತಿನಾಶದ ಚಳುವಳಿ ಸಂಪೂರ್ಣವಾಗಿ ಹಳ್ಳ ಹಿಡಿಯುತ್ತದೆ. (ಇದನ್ನು ಪ್ರಜ್ಞಾಪೂರ್ವಕವಾಗಿ ಹೇಳುತ್ತೇನೆ. ಬ್ರಾಹ್ಮಣರು, ಲಿಂಗಾಯಿತರು, ಒಕ್ಕಲಿಗರು ಮತ್ತು ಅದರ್ಸ್ ಮಾತ್ರ ಆಚರಣೆ ಮಾಡುವ ಜಾತಿ ಪದ್ಧತಿಯನ್ನು ಬಹುಸಂಖ್ಯಾತ ದಲಿತರೂ ಮಾಡಿದರೇ ಜಾತಿ ನಾಶ ಹೇಗಾಗುತ್ತದೆ? ಬದಲಿಗೆ ರಾಜಕಾರಣಿಗಳ ಪಾಲಿಗೆ ಅದೂ ಒಂದು ಓಟ್ ಬ್ಯಾಂಕ್ ಆಗುತ್ತದೆ ಅಷ್ಟೆ)
ದಲಿತ ಪ್ರಜ್ಞೆಯ ಪರವಾಗಿ, ದಲಿತರ ಸಂಪೂರ್ಣ ಅಭಿವೃದ್ಧಿಯ ಪರವಾಗಿ, ದಲಿತರ ಸಾಮಾಜಿಕ ಔನ್ನತ್ಯದ ಪರವಾಗಿ ಧ್ವನಿ ಎತ್ತಿದ ಅನೇಕರಲ್ಲಿ ಬ್ರಾಹ್ಮಣ ವರ್ಗದವರೂ ಬಹಳಷ್ಟು ಮಂದಿ ಮುಂದಿನ ಸಾಲಿನಲ್ಲಿದ್ದರು. ಯೂ ಆರ್ ಅನಂತ ಮೂರ್ತಿ, ಗಿರೀಶ್ ಕಾರ್ನಾಡ್, ಜಿ ಕೆ ಗೋವಿಂದ ರಾವ್ ಮುಂತಾದವರನ್ನು ಕೇವಲ ಬ್ರಾಹ್ಮಣರು ಅನ್ನುವ ದೃಷ್ಟಿಯಲ್ಲಿ ಮಾತ್ರ ನೋಡ್ತೀರಾ? ಇನ್ನು ಕಮ್ಯೂನಿಸ್ಟ್ ನಾಯಕರಲ್ಲಿ ಬ್ರಾಹ್ಮಣರು ಯಾರು ಅನ್ನುವ ವಿಚಾರ ನಮ್ಮ ಸೋ ಕಾಲ್ಡ್ (ನಕಲಿ) ಜ್ಯಾತ್ಯಾತೀತರಿಗೆ ಗೊತ್ತೇ ಇರುತ್ತದೆ. ಯಾಕಂದರೆ ಇವರು ಮೊದಲು ನೋಡುವುದೇ ಜಾತಿ. ಜಾತ್ಯಾತೀತರೆಂಬ ಹಣೆ ಪಟ್ಟಿ ಹಾಕಿಕೊಂಡ ಅನೇಕರು ಅಂದರಿಕೂ ಮಂಚಿವಾಡು. ಅತ್ತ ದಲಿತರ ಹಿತಾಸಕ್ತಿ ಪರವಾಗಿ ಮಾತಾಡತ್ತಲೇ ಇತ್ತ ಬ್ರಾಹ್ಮಣರ ಜೊತೆಯಲ್ಲಿ ಕಾಫಿ ಹೀರುತ್ತಾ ನೀವೇ ಸರಿ ಎಂದು ಲೋಕಾಭಿರಾಮ ಹರಟುತ್ತಿರುತ್ತಾರೆ. ಇವರಲ್ಲಿ ದಲಿತರ ಕಾಳಜಿಯೂ ಸುಳ್ಳು ಜಾತಿನಾಶದ ಉದ್ದೇಶವೂ ಪೊಳ್ಳು. ಸುಲಭಕ್ಕೆ ಸಿಗುವ ಬ್ರಾಹ್ಮಣರನ್ನು ಜನರಲೈಸ್ ಮಾಡಿ ಬಯ್ದರಷ್ಟೇ ಸಮಾಧಾನ.
ಹಿಂದೆ ನನ್ನ ಅಜ್ಜನ ಕಾಲದಲ್ಲಿ ಬ್ರಾಹ್ಮಣರ ಮನೆಗಳಲ್ಲಿ ದಲಿತರಿಗೆ ತೆಂಗಿನ ಕರಟದ ಚಿಪ್ಪಿನಲ್ಲಿ ಕಾಫಿ ಕೊಡುತ್ತಿದ್ದರಂತೆ. ಅಪ್ಪನ ಕಾಲದಲ್ಲಿ ಸಿಲಾವರ್ ತಾಟು ಲೋಟ ಬಂತು. ಅದನ್ನೂ ಎಲ್ಲೋ ಮೂಲೆಯಲ್ಲಿ ಇಡುತ್ತಿದ್ದರಂತೆ. ಅದರಲ್ಲಿ ಕುಡಿದವರು ತಿಂದವರು ಕೊನೆಗೆ ತೊಳೆದು ಅಲ್ಲೇ ಇಟ್ಟು ಹೋಗಬೇಕಿತ್ತಂತೆ. ಈಗ ನಮ್ಮ ಕಾಲದಲ್ಲಿ ನಾವು ಇದೆಲ್ಲವನ್ನು ದಾಟಿ ಮುಂದೆ ಬಂದಿದ್ದೇವೆ. ಉಳಿದವರ ಸಂಗತಿ ನಂಗೆ ಬೇಡ. ಹುಟ್ಟಿನಿಂದ ಬ್ರಾಹ್ಮಣನಾಗಿರುವ ನಾನು ಮನೆಯಲ್ಲೂ ಸಹ ಜಾತಿ ಆಚರಿಸುವುದಿಲ್ಲ. ಸಾಗರದಲ್ಲಿದ್ದಾಗ ನನ್ನ ಪರಮಾತ್ಮ ಸ್ನೇಹಿತನಾಗಿದ್ದವನು ಮಾದಿಗರ ಸಮುದಾಯದವನು. ಒಟ್ಟಿಗೆ ಉಣ್ಣುತ್ತಿದ್ದೆವು, ತಿರುಗುತ್ತಿದ್ದೆವು. ನಾನು ಅವನ ಜಾತಿಯನ್ನು ನೋಡಲಿಲ್ಲ ಅವನೂ ನನ್ನ ಜಾತಿಯನ್ನು ಪ್ರಶ್ನಿಸಲಿಲ್ಲ. ದಲಿತರೊಟ್ಟಿಗೆ ಸಹಪಂಕ್ತಿ ಭೋಜನ ಅನ್ನುವುದು ಒಂದು ಪ್ಯಾಶನ್ ಆಗಿ, ತಾವೂ ಜ್ಯಾತ್ಯಾತೀತರು ಎಂದು ಪೋಸು ಕೊಟ್ಟು, ಮನೆಗೆ ಹೋಗಿ ಸ್ನಾನ ಮಾಡಿ ಜನಿವಾರ ಬದಲಾಯಿಸಿಕೊಂಡ ಬ್ರಾಹ್ಮಣರನ್ನೂ ನೋಡಿದ್ದೇನೆ. ಅವರು ಅಪಾಯಕಾರಿಗಳು ಆದರೆ ಅವರ ಸಂಖ್ಯೆ ಕಡಿಮೆ.
ನಾನು ಓದುವಾಗ ನಮ್ಮ ಮನೆಗೆ ಒಬ್ಬರು ಲಂಬಾಣಿ ಸಮುದಾಯದ ಮಾಸ್ಟರ್ ಬರುತ್ತಿದ್ದರು. ಅವರು ನಮ್ಮ ಅಪ್ಪನ ಆಪ್ತ ಗೆಳೆಯರು. ಅವರ ಪತ್ನಿ ನಮ್ಮಮ್ಮನ ಸಂತೆ ಪಾರ್ಟನರ್. ನಮ್ಮ ಮನೆಯಲ್ಲಿ ಅಪ್ಪನಾಗಲೀ ಅಮ್ಮನಾಗಲೀ ಜಾತಿಪ್ರಜ್ಞೆಯನ್ನು ಪೋಷಿಸಲಿಲ್ಲ. ಅಪ್ಪ ಬೆಳೆದಿದ್ದೇ ಕುರುಬರ ಹಟ್ಟಿಗಳಲ್ಲಿ. ಅಪ್ಪನ ಆಡು ಭಾಷೆಯೂ ಅಬ್ರಾಹ್ಮಣರದ್ದೇ. ಆ ಲಂಬಾಣಿ ಮಾಸ್ಟರ್ ನಮ್ಮ ಮನೆಗೆ ಬಂದರೆ ಮಾತಿಗೆ ಒಳ್ಳೆ ಜನ ಆದರು ಎನ್ನುವ ಹಿಗ್ಗು ನನಗೆ. ಅವರ ಜೊತೆ ವೈಚಾರಿಕ ಸಂಗತಿಗಳನ್ನು ಮಾತಾಡಿಯೇ ನನ್ನೊಳಗೆ ವೈಚಾರಿಕತೆ ಬೆಳೆಯಿತೇನೊ. ನನ್ನನ್ನು ಕರ್ಮಠನಾಗಿಸದೇ ಉಳಿಸಿದ್ದು ರವಿ ಬೆಳಗೆರೆ ಮತ್ತವರ ಬರಹ. ನನ್ನ ಹೆಸರಿನ ತುದಿಗಿರುವ ಭಾರದ್ವಾಜ್ ಎಂಬ ಸರ್ ನೇಮ್ ಬದಲಾಯಿಸಿಕೋ. ಜಾತಿ ಸೂಚಕವಾಗಿರುವ ಸಂಗತಿಗಳನ್ನು ಪ್ರಮೋಟ್ ಮಾಡಬೇಡ ಅಂತ ಯಾವಾಗಲೂ ಬೆಳಗೆರೆ ಬಯ್ಯುತ್ತಿದ್ದರು. ಅವರು ಸತ್ತ ನಂತರ ಅವರೂ ಬ್ರಾಹ್ಮಣ ವಾದಿಯಾಗಿದ್ದರು ಎಂದು ಗಂಟಲು ಹರಿದುಕೊಂಡ ಅನೇಕ ಬರಹಗಳನ್ನು ಇದೇ ಫೇಸ್ ಬುಕ್ ನಲ್ಲಿ ಓದಿದೆ. ಇನ್ನು ನನ್ನ ಬಿಟ್ಟಾರೆಯೇ? ಸಾಗರದ ಒಬ್ಬ ಪತ್ರಕರ್ತ ಮಿತ್ರ (ಆತನ ಪತ್ರಿಕೆಯಲ್ಲಿ ಹಲವು ಲೇಖನಗಳನ್ನು ಬರೆದಿದ್ದೆ) ಒಂದು ಚರ್ಚೆಗೆ ಕರೆಯಲಿಲ್ಲ ಅನ್ನುವ ಯಕಃಶ್ಚಿತ್ ಕಾರಣಕ್ಕೆ ನನ್ನನ್ನು ಬ್ರಾಹ್ಮಣಶಾಹಿಯನ್ನಾಗಿಸಿದ. ಇನ್ನೊಬ್ಬರು ಮಿತ್ರರು ತೀರಾ ಮೊನ್ನೆ ಮೊನ್ನೆ “ನೀನೂ ಜಾತಿವಾದಿ, ನಿನ್ನ ಬರಹಗಳೇ ಬೇರೆ, ನೀನೇ ಬೇರೆ” ಎಂದು ಸರ್ಟಿಫಿಕೇಟ್ ಕೊಟ್ಟು, ವಾಟ್ಸ್ ಆಪ್ ನಲ್ಲಿ ಸಂದೇಶ ಕಳಿಸಿ ತೃಪ್ತಿಪಟ್ಟುಕೊಂಡರು. ಇರಲಿ ಅಂತಹ ಯಾವುದೇ ಸಂಗತಿಗಳು ನನ್ನ ಪ್ರಜ್ಞೆಯೊಳಗೆ ದಾಖಲಾಗುವುದಿಲ್ಲ.
ಬ್ರಾಹ್ಮಣರು 10% ಮೀಸಲಾತಿ ಕಿತ್ತುಕೊಂಡರು ಎನ್ನುವ ವಿಚಾರಕ್ಕೆ ಬರುವುದಾದರೇ, ಆ ಮೀಸಲಾತಿಯಿಂದ ಯಾವ ಬ್ರಾಹ್ಮಣನಿಗೆ ಲಾಭವಾಗಿದೆ ಎಂದು ಹುಡುಕುವುದು ಉತ್ತಮ. ಒಬ್ಬ ಬಡ ಬ್ರಾಹ್ಮಣ ಆ ಮೀಸಲಾತಿಯಿಂದ ತನ್ನ ಬಡಕಲು ಜನಿವಾರ ಮುಚ್ಚಿದ ಹೊಟ್ಟೆ ಪಾಡಿಗೊಂದು ಸರ್ಕಾರಿ ಕೆಲಸ ಗಿಟ್ಟಿಸಿಕೊಂಡರೇ ಹೊಟ್ಟೆ ಕಿಚ್ಚುಪಡಬೇಕೇಕೆ? ಆದರೆ ಭರ್ಜರಿ ಅಡಿಕೆ ತೋಟ ಉಳ್ಳವನು ತನ್ನ ಮಗನಿಗೋ ಮಗಳಿಗೋ ಮೀಸಲಾತಿ ಕೋಟಾದಡಿ ಅರ್ಜಿ ಗುಜಾಯಿಸಿದರೇ ಖಂಡಿತಾ ಖಂಡಿಸಲೇಬೇಕು. ತಟ್ಟೇಕಾಸಿನ ವಿಚಾರ ಮಾತಾಡೋಣವಾ, ಯಾವುದೋ ದೇವಸ್ಥಾನದಲ್ಲಿ ಅರ್ಚಕನ ಮುಂದಿರುವ ತಟ್ಟೆ ಕಾಸು ನಿಮಗೆ ಕಾಣುತ್ತದೆ ಆದರೆ ಅವನ ಹರಿದು ತೇಪೆ ಹಚ್ಚಿದ ಉತ್ತರೀಯ ಯಾಕೆ ಕಾಣುವುದಿಲ್ಲ? ಅವ ಆ ತಟ್ಟೆ ಕಾಸಿನಿಂದ ಕೋಟಿ ದುಡಿಯುವುದಿಲ್ಲ. ಮಹಲು ಕಟ್ಟುವುದಿಲ್ಲ. ರಾಜಕೀಯ ಪಕ್ಷ ಸ್ಥಾಪಿಸುವುದಿಲ್ಲ. ಅವತ್ತಿನ ತಟ್ಟೇ ಕಾಸು ಅವತ್ತಿನ ಅವನ ಹೊಟ್ಟೇ ಪಾಡು. ಬಹುತೇಕ ಬಡವರ್ಗದ ಬ್ರಾಹ್ಮಣರಿಗೆ ಆತ್ಮಾಭಿಮಾನ ಹೆಚ್ಚು. ಅವರು ಯಾರನ್ನೂ ದೇಹಿ ಎಂದು ಬೇಡುವುದಿಲ್ಲ, ಕೂಲಿ ಮಾಡಿ ಬದುಕಲು ಮೊಸರನ್ನ ತಿನ್ನುವ ದೇಹದ ರಟ್ಟೆಯಲ್ಲಿ ಕಸುವಿಲ್ಲ. ಆಯಿತು ಅವರ ತಟ್ಟೆಗೆ ಕಾಸು ಹಾಕಬೇಡಿ ಎಂದು ಬ್ರಾಹ್ಮಣೇತರ ಭಕ್ತರಿಗೆ ಹೇಳಿ. ಜಾತಕ ಜ್ಯೋತಿಷ್ಯ ಕೇಳಬೇಡಿ ಎನ್ನಿ. ದೇವಸ್ಥಾನಗಳಿಗೆ ಹೋಗಬೇಡಿ, ಹೋದರೂ ಚಿಲ್ಲರೆ ಕಾಸುಗಳನ್ನು ಹುಂಡಿಗೆ ಮಾತ್ರ ಹಾಕಿ. ಅದು ಸರ್ಕಾರಕ್ಕೆ ಹೋಗಲಿ ಬಡ ಬ್ರಾಹ್ಮಣನ ಹೊಟ್ಟೆ ಸೇರುವುದು ಬೇಡ ಅನ್ನಿ. ಊಹೂಂ ನೀವದನ್ನು ಮಾಡುವದಿಲ್ಲ. ಮಾಡಿದರೂ ನಿಮ್ಮ ಮಾತು ನಡೆಯುವುದಿಲ್ಲ. ಯಾಕಂದರೆ ಸಮಾಜದ ದೇಹಕ್ಕೆ ಕಣ್ಣುಗಳಿವೆ. ಅದಕ್ಕೆ ಪ್ರತ್ಯಕ್ಷ ಸತ್ಯದರ್ಶನವಾಗುತ್ತದೆ. ಸರ್ವೇಜನ ಸುಖಿನೋ ಭವಂತು ಎಂದು ಬೇಡುವ ಬ್ರಾಹ್ಮಣನ ಮೇಲೆ ಸಿಟ್ಟುಮಾಡಿಕೊಂಡು ನೀವು ಸಾಧಿಸುವುದಾದರೂ ಏನು?
ಇಷ್ಟು ಹೇಳುವ ಹಿಂದೆ ಬ್ರಾಹ್ಮಣಿಕೆಯ ಸಮರ್ಥನೆ ಖಂಡಿತಾ ಇಲ್ಲ. ಕಳೆದ ವರ್ಷ ಕೋವಿಡ್ ಸಂಕಷ್ಟದಲ್ಲಿ ಹಸಿವಿನಿಂದ ಬಳಲಿ ಅತ್ತ ಸಾಯಲೂ ಆಗದೇ ಇತ್ತ ಬದಕಲೂ ಆಗದೇ ಪರಿತಪಿಸಿದ ಕೆಲವು ಬಡ ಬ್ರಾಹ್ಮಣರ ಪಾಡು ನೋಡಿದ್ದರಿಂದಲೇ ಈ ಮಾತು ಹೇಳುತ್ತಿದ್ದೇನೆ. ಬದುಕು ಎಲ್ಲರದ್ದೂ ಹಕ್ಕೂ; ಬ್ರಾಹ್ಮಣರದ್ದೂ. ವಿರೋಧಿಸಬೇಕಾಗಿರುವುದು ಕೇವಲ ಬ್ರಾಹ್ಮಣ್ಯವೆಂಬ ಬ್ರಹ್ಮರಾಕ್ಷಸನನ್ನು ಮಾತ್ರ. ಬ್ರಾಹ್ಮಣರೆಂಬ ಸಮುದಾಯವನ್ನಲ್ಲ. ಬ್ರಾಹ್ಮಣನಾಗಿ ಆಗಲಿ, ದಲಿತನಾಗಿ ಆಗಲಿ, ಅಥವಾ ಸಾಬರಾಗಿ ಆಗಲಿ ಹುಟ್ಟಿದ್ದು ಅವರ ತಪ್ಪಲ್ಲ. ಯಾರೂ ಅರ್ಜಿ ಲಗಾಯಿಸಿ ಆಯಾ ಜಾತಿಗಳಲ್ಲಿ ಹುಟ್ಟುವುದಿಲ್ಲ. ನಾನು ಕಂಡ ಮಟ್ಟಿಗೆ ಬಹಳಷ್ಟು ಬ್ರಾಹ್ಮಣರು ತಮ್ಮ ಜಾತಿಯನ್ನು ಮನೆಯಲ್ಲಿ ಮಾತ್ರ ಆಚರಿಸುತ್ತಿದ್ದಾರೆ. ಈ ಸ್ವಚ್ಛ ಬ್ರಾಹ್ಮಣರ ವೇದಿಕೆಯಲ್ಲಿರುವ ಕೆಲವು ಅಂಡೇಪಿರ್ಕಿಗಳು ಮಾತ್ರ ಪೂರ್ತಿ ಸಮುದಾಯದ ಮರ್ಯಾದೆ ತೆಗೆಯುತ್ತಿವೆ.
ದಲಿತರು ಅಕ್ಷರ ಕಲಿಯಬೇಕು. ಬ್ರಾಹ್ಮಣರಂತೆ ವೇದ ಕಲಿಯಬೇಕು. ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯಗಳನ್ನೂ ಕಲಿಯಬೇಕು. ಅದಕ್ಕೆ ಪ್ರೋತ್ಸಾಹಿಸಿ. ಅದರ ಬದಲು ಯಾರೊ ಒಬ್ಬ ಬ್ರಾಹ್ಮಣನ ತಟ್ಟೆ ಕಾಸು ಕಿತ್ತು ಜಾತಿ ನಾಶ ಮಾಡುತ್ತೇವೆ ಅನ್ನುವುದೇ ದೊಡ್ಡ ಮೂರ್ಖತನದ ಮಾತು. ಇನ್ನು ಜಾತಿ ನಾಶದ ಮಾತಾಡುವವರು ರಾಜಕೀಯವಾಗಿ ಪ್ರಭಾವ ಹೊಂದಿರುವ ವೀರಶೈವ ಲಿಂಗಾಯಿತರ, ಒಕ್ಕಲಿಗರ ಮತ್ತು ಉಳಿದ ಸಮುದಾಯಗಳ ಕರ್ಮಠತನದ ಬಗ್ಗೆಯೂ ಮಾತಾಡುವ ಧೈರ್ಯ ತೋರಲಿ. ಬ್ರಾಹ್ಮಣರಿಗೆ ಬಾಯಿಲ್ಲ, ತೋಳಿಲ್ಲ, ಬಲವಿಲ್ಲ ಬ್ರಾಹ್ಮಣರಲ್ಲಿ ಒಗ್ಗಟ್ಟಿಲ್ಲ ಹಾಗಾಗಿ ಟೇಕನ್ ಫರ್ ಗ್ರಾಂಟೆಡ್ ಅಲ್ಲವೇ?
ಎಂಡ್ ಆಫ್ ಆರ್ಗ್ಯುಮೆಂಟ್, ಜಾತಿ ಪ್ರಜ್ಞೆಯನ್ನು ತಲೆ ಮೇಲೆ ಹೊರುವುದೇ ಅತ್ಯಂತ ಹೀನಾಯ, ನೀಚತನದ ಪರಮಾವಧಿ ಮತ್ತು ಬೌದ್ಧಿಕ ದಿವಾಳಿತನದ ಸಾಕ್ಷಿ. ಇದು ಬ್ರಾಹ್ಮಣರಿಗಾದರೂ ಸರಿ, ಉಳಿದವರಿಗಾದರೂ ಸರಿ. ನಿಮ್ಮ ಜಾತಿ, ಆಚರಣೆ, ಸಂಪ್ರದಾಯ ಎಲ್ಲಾ ಮನೆಯೊಳಗಿಟ್ಟು ಹೊಸ್ತಿಲು ದಾಟಿ ಆಗ ಬಹಿರಂಗ ಸಮಾಜದಲ್ಲಿ ಜಾತಿಯೆಂಬ ವಿಷವರ್ತುಲವೇ ಉಳಿಯುವುದಿಲ್ಲ. ಇನ್ನು ಅಂತರ್ಜಾತಿ ವಿವಾಹ ಜಾತಿಯನ್ನು ಮೀರಿದ್ದು. ಅದು ಎರಡು ಮನಸುಗಳ ನಿರ್ಧಾರ, ಎರಡು ಕುಟುಂಬಗಳ ತೀರ್ಮಾನ. ಅದನ್ನು ಚಳುವಳೀಕರಿಸಿದ ಮಾತ್ರಕ್ಕೆ ಜಾತಿ ನಾಶವಾಗುತ್ತದೆ ಎಂಬ ನಂಬಿಕೆ ನನಗಿಲ್ಲ. ಬ್ರಾಹ್ಮಿನಿಸಂ ಅಳಿಯಬೇಕೇ ಹೊರತು ಬ್ರಾಹ್ಮಿನ್ ಕಮ್ಯೂನಿಟಿ ಅಲ್ಲ. ನಾನೊಬ್ಬ ಬ್ರಾಹ್ಮಣನಾಗಲ್ಲದೇ ಈ ಎಲ್ಲಾ ಮಾತುಗಳನ್ನು ಆಡಿದ್ದೇನೆ. ಸಾಮಾನ್ಯವಾಗಿ ಮನಸಿಗೆ ತೋಚಿದ್ದು ಗೀಚುವ ಪ್ರವೃತ್ತಿಯ ನನಗೆ ಈ ತರದ ಸೀರಿಯಸ್ ವೈಚಾರಿಕ ಬರಹ ಬರೆಯುವಷ್ಟು ಪ್ರಬುದ್ಧತೆ ಇಲ್ಲ. ಎಲ್ಲಾದರೂ ತಪ್ಪಾದರೇ ಹೊಟ್ಟೆಗೆ ಹಾಕಿಕೊಳ್ಳಿ.
-ವಿಭಾ (ವಿಶ್ವಾಸ್ ಭಾರದ್ವಾಜ್)