ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬುಲ್ಡೋಜರ್ ರಾಜಕೀಯ ಸಂಚಲನ ಮೂಡಿಸಿದೆ. ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ಅವರು ಸ್ವತಃ ತಾವೇ ಜೆಸಿಬಿ ಚಲಾಯಿಸಿ ಖಾಸಗಿ ಕಟ್ಟಡಗಳನ್ನು ನೆಲಸಮಗೊಳಿಸಿರುವ ಘಟನೆ ಕರಾವಳಿಯಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಉತ್ತರ ಪ್ರದೇಶದ ಮಾದರಿಯಲ್ಲಿ ಬುಲ್ಡೋಜರ್ ಕಾರ್ಯಾಚರಣೆ ನಡೆಸಿದ ಶಾಸಕರ ನಡೆ ಈಗ ಕಾನೂನು ಸಂಘರ್ಷಕ್ಕೆ ನಾಂದಿ ಹಾಡಿದೆ.
ಘಟನೆಯ ಹಿನ್ನೆಲೆ ಮತ್ತು ವಿವಾದ
ಪುತ್ತೂರಿನ ಸುಪ್ರಸಿದ್ಧ ಮಹಾಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಖಾಸಗಿ ಜಾಗದ ವಿಷಯವಾಗಿ ಈ ವಿವಾದ ಉಂಟಾಗಿದೆ. ದೇವಸ್ಥಾನದ ವಾರ್ಷಿಕ ಜಾತ್ರೆಯ ಸಂದರ್ಭದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಭಕ್ತರು ಮತ್ತು ದೈವ ದೇವರ ಸಮಾಗಮದ ಆಚರಣೆ ನಡೆಯುತ್ತದೆ. ಈ ವೇಳೆ ಭಕ್ತರಿಗೆ ಜಾಗದ ಕೊರತೆಯಾಗುತ್ತಿದೆ ಎಂಬ ಕಾರಣವನ್ನು ನೀಡಿರುವ ಶಾಸಕ ಅಶೋಕ್ ರೈ, ಅಲ್ಲಿನ ಖಾಸಗಿ ಕಟ್ಟಡಗಳನ್ನು ತೆರವುಗೊಳಿಸಲು ಮುಂದಾಗಿದ್ದಾರೆ. ಶಾಸಕರು ತಾವೇ ಜೆಸಿಬಿ ಏರಿ ಕಟ್ಟಡ ಧ್ವಂಸಗೊಳಿಸುತ್ತಿರುವ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಕೋರ್ಟ್ ಸುಪರ್ದಿಯಲ್ಲಿದ್ದ ಜಾಗಕ್ಕೆ JCB ನುಗ್ಗಿಸಿದ ಶಾಸಕರು
ಈ ಜಾಗದ ಮಾಲೀಕತ್ವಕ್ಕೆ ಸಂಬಂಧಿಸಿದಂತೆ ಕುಟುಂಬದ ಸದಸ್ಯರ ನಡುವೆ ನ್ಯಾಯಾಲಯದಲ್ಲಿ ದೀರ್ಘಕಾಲದ ವ್ಯಾಜ್ಯ ನಡೆಯುತ್ತಿದೆ. ಈ ಕಾರಣದಿಂದಾಗಿ ನ್ಯಾಯಾಲಯವು ಡಾ. ಕೇದಿಗೆ ಅರವಿಂದ ರಾವ್ ಅವರನ್ನು ಕೋರ್ಟ್ ರಿಸೀವರ್ ಆಗಿ ನೇಮಿಸಿತ್ತು. ಅಂದರೆ ಆಸ್ತಿಯ ಸಂಪೂರ್ಣ ಜವಾಬ್ದಾರಿ ನ್ಯಾಯಾಲಯದ ಅಧೀನದಲ್ಲಿತ್ತು. ಇಂತಹ ವಿವಾದಿತ ಮತ್ತು ನ್ಯಾಯಾಲಯದ ಸುಪರ್ದಿಯಲ್ಲಿದ್ದ ಜಾಗಕ್ಕೆ ಕಾನೂನುಬಾಹಿರವಾಗಿ ಪ್ರವೇಶಿಸಿ, ಕಟ್ಟಡಗಳನ್ನು ನೆಲಸಮಗೊಳಿಸಿರುವುದು ಈಗ ಶಾಸಕರಿಗೆ ಸಂಕಷ್ಟ ತಂದೊಡ್ಡಿದೆ.
ಕಾನೂನು ಕ್ರಮಕ್ಕೆ ಮುಂದಾದ ಕೋರ್ಟ್ ರಿಸೀವರ್
ಕಟ್ಟಡ ನೆಲಸಮ ಮಾಡಲು ನ್ಯಾಯಾಲಯದ ಅನುಮತಿ ಇದೆ ಎಂದು ಶಾಸಕರು ಹೇಳಿಕೊಂಡಿದ್ದರೂ, ವಾಸ್ತವದಲ್ಲಿ ಅಂತಹ ಯಾವುದೇ ಆದೇಶ ಹೊರಬಿದ್ದಿರಲಿಲ್ಲ ಎಂದು ಹೇಳಲಾಗುತ್ತಿದೆ. ನ್ಯಾಯಾಲಯದ ಆದೇಶ ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ಕೋರ್ಟ್ ರಿಸೀವರ್ ಡಾ. ಕೇದಿಗೆ ಅರವಿಂದ ರಾವ್ ಅವರು ಪುತ್ತೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದ ಮೇಲೆ ದೇವಸ್ಥಾನದ ಆಡಳಿತ ಮಂಡಳಿಯ ಮೋಕ್ತೇಸರ ಈಶ್ವರ ಭಟ್ ವಿರುದ್ಧ ಈಗಾಗಲೇ ಎಫ್ ಐಆರ್ ದಾಖಲಾಗಿದೆ.
ಶಾಸಕ ಅಶೋಕ್ ರೈ ವಿರುದ್ಧ ಕಾನೂನು ಕುಣಿಕೆ
ಘಟನಾ ಸ್ಥಳದಲ್ಲಿ ಶಾಸಕರೇ ಖುದ್ದಾಗಿ ಭಾಗಿಯಾಗಿ ಕಟ್ಟಡ ಧ್ವಂಸಗೊಳಿಸಿರುವುದರಿಂದ, ಪ್ರಕರಣದಲ್ಲಿ ಶಾಸಕ ಅಶೋಕ್ ರೈ ಅವರ ಹೆಸರನ್ನು ಎಫ್ ಐಆರ್ ನಲ್ಲಿ ಸೇರಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಅನುಮತಿ ಕೋರಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ. ಒಟ್ಟಾರೆಯಾಗಿ ಭಕ್ತರ ಹಿತದೃಷ್ಟಿಯಿಂದ ಜಾಗ ಮಾಡಿಕೊಡುವ ಉದ್ದೇಶದಿಂದ ಶಾಸಕರು ಮಾಡಿದ ಈ ಸಾಹಸ ಈಗ ಅವರನ್ನು ಕಾನೂನು ಸಂಕಷ್ಟಕ್ಕೆ ಗುರಿಪಡಿಸಿದೆ. ಕರಾವಳಿ ಭಾಗದಲ್ಲಿ ಈ ಘಟನೆ ರಾಜಕೀಯವಾಗಿಯೂ ದೊಡ್ಡ ಮಟ್ಟದ ಚರ್ಚೆ ಹುಟ್ಟುಹಾಕಿದೆ.







