ದಕ್ಷಿಣ ಕನ್ನಡ: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಧರ್ಮಸ್ಥಳದ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ತಿರುವುಗಳು ಸಿಗುತ್ತಲೇ ಇವೆ. ಈ ಪ್ರಕರಣದಲ್ಲಿ ಆರಂಭದಲ್ಲಿ ಹೀರೋ ಆಗಿ ಬಿಂಬಿತವಾಗಿ, ಸ್ಫೋಟಕ ಮಾಹಿತಿದಾರ ಎಂದು ಕರೆಸಿಕೊಂಡು, ಅಂತಿಮವಾಗಿ ಪ್ರಕರಣದ ಹಾದಿ ತಪ್ಪಿಸಿದ ಆರೋಪದ ಮೇಲೆ ವಿಲನ್ ಆಗಿ ಜೈಲು ಸೇರಿದ್ದ ಕುಖ್ಯಾತ ಬುರುಡೆ ಚಿನ್ನಯ್ಯ ಇದೀಗ ಮತ್ತೆ ಸುದ್ದಿಯ ಮುಂಚೂಣಿಗೆ ಬಂದಿದ್ದಾನೆ. ಜೈಲಿನಿಂದ ಬಿಡುಗಡೆಯಾದ ಕ್ಷಣವೇ ಆತ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಒಂದು ಕಾಲದಲ್ಲಿ ತನಗೆ ಆಶ್ರಯ ನೀಡಿ ಬೆಂಬಲಿಸಿದವರ ವಿರುದ್ಧವೇ ದೂರು ದಾಖಲಿಸುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾನೆ.
ಒಂದಾನೊಂದು ಕಾಲದಲ್ಲಿ ಸೌಜನ್ಯಾ ಪರ ಹೋರಾಟಗಾರರ ಜೊತೆ ಗುರುತಿಸಿಕೊಂಡಿದ್ದ ಚಿನ್ನಯ್ಯ, ಇದೀಗ ಅವರನ್ನೇ ತನ್ನ ಪ್ರಾಣವೈರಿಗಳೆಂದು ಬಿಂಬಿಸಿ ರಕ್ಷಣೆ ಕೋರಿರುವುದು ಪ್ರಕರಣಕ್ಕೆ ವಿಚಿತ್ರ ಟ್ವಿಸ್ಟ್ ನೀಡಿದೆ.
ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಳ್ಳು ಸಾಕ್ಷ್ಯ ಹಾಗೂ ವಂಚನೆ ಆರೋಪದಡಿ ಜೈಲು ಸೇರಿದ್ದ ಸಂತೋಷ್ ರಾವ್ ಅಲಿಯಾಸ್ ಚಿನ್ನಯ್ಯ, ಡಿಸೆಂಬರ್ 18 ರಂದು ಶಿವಮೊಗ್ಗ ಜೈಲಿನಿಂದ ಬಿಡುಗಡೆಯಾಗಿದ್ದನು. ಜೈಲಿನಿಂದ ಹೊರಬಂದ ತಕ್ಷಣ ಆತ ನೇರವಾಗಿ ತೆರಳಿದ್ದು ಬೆಳ್ತಂಗಡಿ ಪೊಲೀಸ್ ಠಾಣೆಗೆ. ತನ್ನ ಪತ್ನಿ ಮಲ್ಲಿಕಾ ಹಾಗೂ ಸಹೋದರಿ ರತ್ನಾ ಅವರೊಂದಿಗೆ ಠಾಣೆಗೆ ಹಾಜರಾದ ಚಿನ್ನಯ್ಯ, ತನಗೆ ಪ್ರಾಣ ಬೆದರಿಕೆ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾನೆ.
ಆಶ್ರಯದಾತರ ವಿರುದ್ಧವೇ ತಿರುಗಿಬಿದ್ದ ಚಿನ್ನಯ್ಯ
ವಿಚಿತ್ರವೆಂದರೆ, ಚಿನ್ನಯ್ಯ ಯಾರ ವಿರುದ್ಧ ದೂರು ನೀಡಿದ್ದಾನೋ, ಅವರೆಲ್ಲರೂ ಒದೊಂದು ಕಾಲದಲ್ಲಿ ಸೌಜನ್ಯಾ ನ್ಯಾಯಕ್ಕಾಗಿ ಹೋರಾಡುತ್ತಿರುವ ಪ್ರಮುಖರು ಹಾಗೂ ಚಿನ್ನಯ್ಯನಿಗೆ ಆಶ್ರಯ ನೀಡಿದವರು ಎಂದು ಹೇಳಲಾಗಿತ್ತು. ತನ್ನ ದೂರಿನಲ್ಲಿ ಚಿನ್ನಯ್ಯ, ಸೌಜನ್ಯಾ ಪರ ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣವರ್, ಜಯಂತ್ ಟಿ., ಯೂಟ್ಯೂಬರ್ ಸಮೀರ್ ಎಂ.ಡಿ. ಹಾಗೂ ಸೌಜನ್ಯಾಳ ಮಾವ ವಿಠಲ ಗೌಡ ಅವರ ಹೆಸರುಗಳನ್ನು ಪ್ರಸ್ತಾಪಿಸಿದ್ದಾನೆ.
ಈ ವ್ಯಕ್ತಿಗಳು ಹಾಗೂ ಇವರ ಸಂಗಡಿಗರಿಂದ ತನಗೆ ಮತ್ತು ತನ್ನ ಕುಟುಂಬಕ್ಕೆ ಜೀವಬೆದರಿಕೆ ಇದೆ. ಯಾವುದೇ ಕ್ಷಣದಲ್ಲಿ ನಮ್ಮ ಮೇಲೆ ಹಲ್ಲೆ ನಡೆಯಬಹುದು ಅಥವಾ ನಮ್ಮ ಪ್ರಾಣಕ್ಕೆ ಅಪಾಯ ಎದುರಾಗಬಹುದು. ಆದ್ದರಿಂದ ತಮಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಬೇಕು ಮತ್ತು ಬೆದರಿಕೆ ಹಾಕುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚಿನ್ನಯ್ಯ ಪೊಲೀಸರನ್ನು ಒತ್ತಾಯಿಸಿದ್ದಾನೆ.
ಈ ಬೆಳವಣಿಗೆಯ ಕುರಿತು ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ. ಅರುಣ್ ಕೆ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಬೆಳ್ತಂಗಡಿ ಪೊಲೀಸರು ಚಿನ್ನಯ್ಯ ನೀಡಿದ ದೂರನ್ನು ಸ್ವೀಕರಿಸಿದ್ದಾರೆ. ದೂರಿನಲ್ಲಿ ಉಲ್ಲೇಖಿಸಲಾದ ಅಂಶಗಳ ಆಧಾರದ ಮೇಲೆ ಮುಂದಿನ ಕಾನೂನು ಕ್ರಮಗಳನ್ನು ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಧರ್ಮಸ್ಥಳ ಪ್ರಕರಣದಲ್ಲಿ ಸಾಕ್ಷಿದಾರನಾಗಲು ಬಂದು, ಬಳಿಕ ಆರೋಪಿ ಸ್ಥಾನದಲ್ಲಿ ನಿಂತು, ಇದೀಗ ದೂರುದಾರನಾಗಿ ಬದಲಾಗಿರುವ ಚಿನ್ನಯ್ಯನ ಈ ನಡೆ ಭಾರೀ ಕುತೂಹಲ ಮೂಡಿಸಿದೆ. ಹೋರಾಟಗಾರರ ಪಾಳೆಯದಲ್ಲಿ ಗುರುತಿಸಿಕೊಂಡಿದ್ದವನು ಇದೀಗ ಅವರ ವಿರುದ್ಧವೇ ತೊಡೆತಟ್ಟಿರುವುದು ಸೌಜನ್ಯಾ ಪ್ರಕರಣದ ಹೋರಾಟದ ಹಾದಿಯಲ್ಲಿ ಯಾವ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕಿದೆ.








