ಸಂಪುಟ ವಿಸ್ತರಣೆಯೋ.. ಸಂಕಟ ವಿಸ್ತರಣೆವೋ!
ಸಂಪುಟ ವಿಸ್ತರಣೆ ಓಕೆ, ಸಂಕಟ ವಿಸ್ತರಣೆ ಏಕೆ?
ರಾಜ್ಯ ಸಂಪುಟ ವಿಸ್ತರಣೆ ಸರ್ಕಸ್ ಗೆ ಕೊನೆಗೂ ಬ್ರೇಕ್ ಬಿದ್ದಿದ್ದು, ನೂತನ ಸಚಿವರು ಇಂದು ಪ್ರಮಾಣವಚನ ಸ್ವೀಕರಿಸಿದ್ದಾರೆ. ಇಷ್ಟುದಿನ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ನಾನಾ ಪ್ರಯತ್ನಗಳನ್ನು ಮಾಡಿದ್ದ ಸಿಎಂ,, ಅಂತು ಇಂತು ಇಂದು ತಮ್ಮ ಮಾತನ್ನು ಸ್ವಲ್ಪತಡವಾದ್ರೂ ಉಳಿಸಿಕೊಂಡಿದ್ದಾರೆ. ಆದ್ರೆ ಈಗ ಬಿಎಸ್ ವೈ ಅವರಿಗೆ ಖಾತೆ ಹಂಚಿಕೆ ಸಂಕಟ ಎದುರಾಗುವ ಎಲ್ಲಾ ಲಕ್ಷಗಳಿವೆ. ಏಕೆಂದ್ರೆ ಬೃಹತ್ ನೀರಾವರಿ ಖಾತೆ ಮೇಲೆ ರಮೇಶ್ ಜಾರಕಿಹೊಳಿ ಕಣ್ಣಿಟ್ಟಿದ್ದರೆ ಗೃಹ ಖಾತೆಯನ್ನು ತಮಗೆ ನೀಡಬೇಕೆಂದು ಬಿ.ಸಿ.ಪಾಟೀಲ್ ಬೇಡಿಕೆ ಇಟ್ಟಿದ್ದಾರೆ.
ಮತ್ತೊಂದೆಡೆ ಲೋಕೋಪಯೋಗಿ ಇಲ್ಲವೇ ಇಂಧನ ಖಾತೆ ನೀಡುವಂತೆ ಆನಂದ್ ಸಿಂಗ್. ಚಿಕ್ಕಬಳ್ಳಾಪುರದಿಂದ ಗೆದ್ದು ಮೊದಲ ಬಾರಿಗೆ ಸಚಿವರಾಗಿರುವ ಡಾ.ಕೆ.ಸುಧಾಕರ್, ವೈದ್ಯಕೀಯ ಶಿಕ್ಷಣ ಖಾತೆ. ಯಶವಂತಪುರದ ಎಸ್.ಟಿ.ಸೋಮಶೇಖರ್ ಬೆಂಗಳೂರು ನಗರಾಭಿವೃದ್ದಿ, ಕೆ.ಆರ್.ಪೇಟೆಯ ಕೆ.ಸಿ.ನಾರಾಯಣಗೌಡ ಸಣ್ಣ ನೀರಾವರಿ, ಯಲ್ಲಾಪುರದ ಶಿವರಾಮ್ ಹೆಬ್ಬಾರ್ ಕೃಷಿ, ಕೆ.ಗೋಪಾಲಯ್ಯ ಕೂಡ ಬಿಡಿಎ ಮೇಲೆ ಕಣ್ಣಿಟ್ಟಿದ್ದಾರೆ. ಹೀಗಾಗಿ ಅವರ ಮನವೊಲಿಸಿ ಖಾತೆ ಹಂಚಿಕೆ ಮಾಡಬೇಕಾದ ಅನಿವಾರ್ಯತೆ ಸಿಎಂ ಅವರದ್ದಾಗಿದೆ. ಇದು ಬಿಎಸ್ ವೈ ಅವರಿಗೆ ಕಬ್ಬಿಣದ ಕಡಲೆ ಆಗುವ ಸಾಧ್ಯತೆಗಳಿವೆ..
ಮೂಲಗಳ ಪ್ರಕಾರ ರಮೇಶ್ ಜಾರಕಿಹೊಳಿಗೆ ನೀರಾವರಿ ಖಾತೆ ನೀಡಲು ಬಿಜೆಪಿ ವರಿಷ್ಠರಿಗೆ ಸುತಾರಾಂ ಇಷ್ಟವಿಲ್ಲವಂತೆ. ಇದೊಂದು ಪ್ರಮುಖ ಖಾತೆಯಾಗಿದ್ದು, ನೀರಾವರಿ ಇಲಾಖೆ ನಿಭಾಯಿಸಲು ವೈಯಕ್ತಿಕವಾಗಿ ಸಾಕಷ್ಟು ಜ್ಞಾನ ಸಂಪಾದಿಸಿರಬೇಕು. ರಮೇಶ್ ಜಾರಕಿಹೊಳಿಗೆ ಇದನ್ನು ನಿರ್ವಹಣೆ ಮಾಡಲು ಸಾದ್ಯವಿಲ್ಲ ಎಂಬ ಮಾತು ಕೇಳಿಬರುತ್ತಿದ್ದು, ನೀರಾವರಿ ಖಾತೆ ಸಿಗುವುದು ಕೊನೆ ಕ್ಷಣದವರೆಗೂ ಖಚಿತವಾಗಿಲ್ಲ ಎನ್ನಲಾಗುತ್ತಿದೆ.
ಇದೇ ರೀತಿ ಮೊದಲ ಬಾರಿಗೆ ಸಚಿವರಾಗಿರುವ ಬಿ.ಸಿ.ಪಾಟೀಲ್ಗೆ ಗೃಹ ಖಾತೆ ನೀಡಲು ಯಡಿಯೂರಪ್ಪ ಒಪ್ಪುತ್ತಿಲ್ಲ. ಸರ್ಕಾರದಲ್ಲಿ ಅತ್ಯಂತ ಮಹತ್ವದ ಹುದ್ದೆ ಎನಿಸಿದ ಗೃಹ ಖಾತೆಯನ್ನು ನಿರ್ವಹಿಸಲು ಸಾಕಷ್ಟು ಅನುಭವಿಗಳಾಗಿರಬೇಕು. ಬಿ.ಸಿ.ಪಾಟೀಲ್ ಮೊದಲ ಬಾರಿಗೆ ಸಚಿವರಾಗಿದ್ದು ಅವರಿಗೆ ಆ ಖಾತೆ ನಿರ್ವಹಿಸಲು ಸಾದ್ಯವಿಲ್ಲ ಹೀಗಾಗಿ ಬೇರೊಂದು ಖಾತೆಯನ್ನು ನೀಡುವಂತೆ ವರಿಷ್ಠರು ನಿರ್ದೇಶಿಸಿದ್ದಾರೆ.
ಇನ್ನು ಇದೇ ವಿಚಾರವಾಗಿ ಸಿಎಂ ಯಡಿಯೂರಪ್ಪ ಮುಂದಿನ ವಾರ ದೆಹಲಿಗೆ ತೆರಳಿದ್ದು, ವರಿಷ್ಠರ ಜೊತೆ ಚರ್ಚಿಸಿದ ನಂತರವೇ ಖಾತೆ ಕ್ಯಾತೆ ಬಗೆಹರಿಯಲಿದೆ.
ಮಹೇಶ್ ಎಂ ದಂಡು