ರಾಜ್ಯ ರಾಜಕಾರಣದಲ್ಲಿ ಈಗ ವಾಗ್ಯುದ್ಧದ ಪರ್ವ ಶುರುವಾಗಿದೆ. ಉಮರ್ ಖಾಲಿದ್ ವಿಚಾರವಾಗಿ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮತ್ತು ಕಾಂಗ್ರೆಸ್ ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ನಡುವಿನ ಜಟಾಪಟಿ ಈಗ ತಾರಕಕ್ಕೇರಿದೆ. ಹರಿಪ್ರಸಾದ್ ಅವರನ್ನು ಹುಚ್ಚ ಎಂದು ಕರೆದಿದ್ದ ರೆಡ್ಡಿ ಅವರಿಗೆ, ಹರಿಪ್ರಸಾದ್ ಈಗ ಅತ್ಯಂತ ತೀಕ್ಷ್ಣವಾದ ಶಬ್ದಗಳಿಂದಲೇ ತಿರುಗೇಟು ನೀಡಿದ್ದಾರೆ. ಈ ಮೂಲಕ ಗಣಿ ಧಣಿ ಮತ್ತು ಹಿರಿಯ ರಾಜಕಾರಣಿಯ ನಡುವಿನ ಕಿತ್ತಾಟ ಬೀದಿಗೆ ಬಂದಿದೆ.
ವಂದೇ ಮಾತರಂ ಹಾಡಲು ಬರುತ್ತಾ?
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಬಿ ಕೆ ಹರಿಪ್ರಸಾದ್, ಜನಾರ್ದನ ರೆಡ್ಡಿ ಅವರ ದೇಶಭಕ್ತಿಯನ್ನೇ ಪ್ರಶ್ನಿಸಿದ್ದಾರೆ. ಅಷ್ಟು ದೊಡ್ಡ ದೇಶಪ್ರೇಮಿ ಎಂದು ಹೇಳಿಕೊಳ್ಳುವ ಜನಾರ್ದನ ರೆಡ್ಡಿಗೆ ವಂದೇ ಮಾತರಂ ಗೀತೆಯ ಎರಡು ಪ್ಯಾರಾ ಆದ್ರೂ ಹಾಡೋಕೆ ಬರುತ್ತಾ ಎಂದು ಸವಾಲು ಹಾಕಿದ್ದಾರೆ. ನಾವು ಹುಚ್ಚರಿಗೆಲ್ಲ ಉತ್ತರ ಕೊಡುತ್ತಾ ಕೂರುವುದಿಲ್ಲ. ದೇಶದ ಆಸ್ತಿಯನ್ನು ಲೂಟಿ ಮಾಡಿ, ಜೈಲಿಗೆ ಹೋಗಿ ಬಂದವರಿಂದ ನಾನು ಪಾಠ ಕಲಿಯಬೇಕಿಲ್ಲ ಎಂದು ಅತ್ಯಂತ ಕಠೋರವಾಗಿ ನುಡಿದಿದ್ದಾರೆ.
ಗಣಿ ಕಳ್ಳನಿಗೆ ನನ್ನ ಉತ್ತರ ಇಲ್ಲ
ತಮ್ಮ ರಾಜಕೀಯ ಜೀವನದ ಹೋರಾಟವನ್ನು ನೆನಪಿಸಿಕೊಂಡ ಹರಿಪ್ರಸಾದ್, ನಾನು ಜನಾರ್ದನ ರೆಡ್ಡಿ ತರಹ ಸರ್ಕಾರದ ಗಣಿಯನ್ನು ಲೂಟಿ ಮಾಡಿ ಜೈಲು ಪಾಲಾದವನಲ್ಲ. ಕಷ್ಟಪಟ್ಟು ರಾಜಕೀಯ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಇವರಿಗೆಲ್ಲ ಉತ್ತರ ಕೊಟ್ಟರೆ ನಾವೂ ಹುಚ್ಚರಾಗುತ್ತೇವೆ. ಇವರಿಗೆ ಅಷ್ಟೊಂದು ದೇಶಪ್ರೇಮವಿದ್ದರೆ ಖಾಕಿ ಚಡ್ಡಿ ಮತ್ತು ಕರಿ ಟೋಪಿ ಹಾಕಿಕೊಂಡು ಶಾಖೆಯಲ್ಲಿ ರಾಷ್ಟ್ರಗೀತೆ ಹೇಳಲಿ ಎಂದು ಆರ್ಎಸ್ಎಸ್ ಉಲ್ಲೇಖಿಸಿ ಟಾಂಗ್ ನೀಡಿದ್ದಾರೆ.
ಕಾಂಗ್ರೆಸ್ ಪೊಲಿಟಿಕಲ್ ಅಫೇರ್ಸ್ ಕಮಿಟಿ ಶೀಘ್ರ ರಚನೆ ಇದೇ ಸಂದರ್ಭದಲ್ಲಿ ಪಕ್ಷದ ಸಂಘಟನೆಯ ಬಗ್ಗೆಯೂ ಮಾತನಾಡಿದ ಹರಿಪ್ರಸಾದ್, ಸರ್ಕಾರ ಮತ್ತು ಕಾಂಗ್ರೆಸ್ ಪಕ್ಷದ ನಡುವೆ ಉತ್ತಮ ಸಮನ್ವಯ ಸಾಧಿಸಲು ಪೊಲಿಟಿಕಲ್ ಅಫೇರ್ಸ್ ಕಮಿಟಿಯನ್ನು ಶೀಘ್ರದಲ್ಲೇ ರಚಿಸಲಾಗುವುದು ಎಂದು ತಿಳಿಸಿದರು. ಹೈಕಮಾಂಡ್ ನಾಯಕರಾದ ಕೆ ಸಿ ವೇಣುಗೋಪಾಲ್ ಮತ್ತು ಸುರ್ಜೇವಾಲಾ ಅವರು ಈ ಬಗ್ಗೆ ಸೂಚನೆ ನೀಡಿದ್ದಾರೆ. ಈಗಾಗಲೇ ರಾಜ್ಯದ ಎಲ್ಲಾ ಹಿರಿಯ ನಾಯಕರ ಸಲಹೆಗಳನ್ನು ಪಡೆಯಲಾಗುತ್ತಿದ್ದು, ಶೀಘ್ರದಲ್ಲೇ ಸಮಿತಿ ಅಸ್ತಿತ್ವಕ್ಕೆ ಬರಲಿದೆ ಎಂದು ಅವರು ಮಾಹಿತಿ ನೀಡಿದರು.








