ಬೆಂಗಳೂರು: ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಕೇಸಲ್ಲಿ ಬಂಧನಕ್ಕೊಳಗಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲಾನಿ ನಾಳೆ ಪರಪ್ಪನ ಅಗ್ರಹಾರ ಜೈಲು ಸೇರುವುದು ಪಕ್ಕಾನಾ ಎಂಬ ಮಾತುಗಳು ಕೇಳಿ ಬರುತ್ತಿವೆ.
ನಾಳೆ ರಾಗಿಣಿ, ಸಂಜನಾರ ಸಿಸಿಬಿ ಪೊಲೀಸ್ ಕಸ್ಟಡಿ ಕೊನೆಗೊಳ್ಳಲಿದೆ. ರಾಗಿಣಿ ದ್ವಿವೇದಿಯನ್ನು ಸಿಸಿಬಿ ಪೊಲೀಸರು ಮೂರು ಬಾರಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಒಟ್ಟು 11 ದಿನಗಳ ಕಾಲ ರಾಗಿಣಿಯನ್ನು ಸಿಸಿಬಿ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದಾರೆ. ಆದರೆ, ಈಗಾಗಲೇ 10 ದಿನಗಳ ಕಸ್ಟಡಿ ಮುಗಿದು ಹೋಗಿದೆ. ನಾಳೆ ಕಸ್ಟಡಿ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ರಾಗಿಣಿಯನ್ನು ಮತ್ತೆ ಕೋರ್ಟ್ ಮುಂದೆ ಹಾಜರುಪಡಿಸಿ ಇನ್ನಷ್ಟು ದಿನ ವಿಚಾರಣೆಗೆ ನೀಡುವಂತೆ ಮನವಿ ಮಾಡುವ ಸಾಧ್ಯತೆ ಇದೆ.
ಮತ್ತೊಂದೆಡೆ, ಸಂಜನಾ ಗಲ್ರಾನಿಯನ್ನು ಎರಡು ಬಾರಿ ಕಸ್ಟಡಿಗೆ ಪಡೆದಿರುವ ಸಿಸಿಬಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಕಳೆದ ಮಂಗಳವಾರ ಸಂಜನಾ ಗಲ್ರಾನಿಯನ್ನು ಬಂಧಿಸಲಾಗಿತ್ತು. ಸತತ 6 ದಿನಗಳ ವಿಚಾರಣೆ ವೇಳೆ ಸಂಜನಾ ತನಿಖೆ ಸಹಕಾರ ನೀಡುತ್ತಿಲ್ಲ ಎನ್ನಲಾಗಿದೆ. ಹಾಗಾಗಿ ಮತ್ತೆ ಸಂಜನಾಳನ್ನು ಕಸ್ಟಡಿಗೆ ನೀಡುವಂತೆ ಸಿಸಿಬಿ ಪೊಲೀಸರು ನ್ಯಾಯಾಲಯವನ್ನು ಮನವಿ ಮಾಡಲಿದ್ದಾರೆ.
ರಾಗಿಣಿ, ಸಂಜನಾ ಸೇರಿದಂತೆ ಈಗಾಗಲೇ ಬಂಧಿತರಾಗಿರುವ ರವಿಶಂಕರ್, ಲೂಮ್ ಪೆಪ್ಪರ್, ರಾಹುಲ್, ವಿರೇನ್ ಖನ್ನಾ ಸಿಸಿಬಿ ಕಸ್ಟಡಿ ನಾಳೆ ಕೊನೆಗೊಳ್ಳಲಿದೆ. ಆರೋಪಿಗಳನ್ನು ಮೂರು ಬಾರಿ ಕಸ್ಟಡಿಗೆ ನೀಡಿರುವ ಕಾರಣ ನಾಳೆ ಮತ್ತೆ ಸಿಸಿಬಿ ಕಸ್ಟಡಿಗೆ ನೀಡುವುದು ಅನುಮಾನ ಎನ್ನಲಾಗಿದೆ. ಹೀಗಾಗಿ ರಾಗಿಣಿ, ಸಂಜನಾ ಸೇರಿ ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೇಲು ಸೇರುವ ಸಾಧ್ಯತೆ ಇದೆ.
ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿರುವುದರಿಂದ ರಾಗಿಣಿ ಹಾಗೂ ಸಂಜನಾ ಸೇರಿದಂತೆ ಎಲ್ಲಾ ಆರೋಪಿಗಳಿಗೂ ನಾಳೆ ಜಾಮೀನು ಸಿಗುವುದು ಅನುಮಾನ ಎನ್ನಲಾಗಿದೆ.
ರಾಗಿಣಿ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ನಾಳೆ ಬರಲಿದ್ದು, ಜಾಮೀನು ಅರ್ಜಿಗೆ ಸಿಸಿಬಿ ಪೊಲೀಸರ ಪರ ವಕೀಲರು ಆಕ್ಷೇಪಣೆ ಸಲ್ಲಿಸಬೇಕು. ಆನಂತರವೇ ಜಾಮೀನು ಅರ್ಜಿ ವಿಚಾರಣೆ ನಡೆಯುವ ಸಾಧ್ಯತೆ ಇರುವುದರಿಂದ ನಾಳೆ ಜಾಮೀನು ಸಿಗುವುದು ಅನುಮಾನ ಎನ್ನಲಾಗಿದೆ. ಹೀಗಾಗಿ ಜಾಮೀನು ಸಿಗುವವರೆಗೆ ಸ್ಯಾಂಡಲ್ವುಡ್ನ ಸ್ಟಾರ್ ನಟಿಯರಿಗೆ ಪರಪ್ಪನ ಅಗ್ರಹಾರದ ಜೈಲೂಟ ಖಾಯಂ ಎನ್ನಲಾಗಿದೆ.
ನಾಳೆ ಕಸ್ಟಡಿ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಇಂದು ಸಿಸಿಬಿ ಪೊಲೀಸರು ರಾಗಿಣಿ ಹಾಗೂ ಸಂಜನಾಳನ್ನು ವಿಚಾರಣೆಗೆ ಒಳಪಡಿಸಿದ್ದು, ಇಡೀ ದಿನ ಡ್ರಿಲ್ ನಡೆಯುವ ಸಾಧ್ಯತೆ ಇದೆ.