ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಅವರ ಪ್ರಾಥಮಿಕ ಸಂಪರ್ಕಕ್ಕೆ ಬಂದಿದ್ದವರಿಗೂ ಆತಂಕ ಶುರುವಾಗಿದೆ. ಈ ಮಧ್ಯೆ ಸಿಎಂ ಅವರು ಟ್ರವಲ್ ಹಿಸ್ಟರಿ ಬಗ್ಗೆಯೂ ಚರ್ಚೆಗಳು ಆಗುತ್ತಿದ್ದು,ಬಿಎಸ್ ವೈ ಎಲ್ಲಿಗೆಲ್ಲಾ ಭೇಟಿ ನೀಡಿದ್ದರು, ಯಾರನ್ನೆಲ್ಲಾ ಭೇಟಿಯಾಗಿದ್ದರು..? ಎಂಬ ಡಿಟೈಲ್ಸ್ ಇಲ್ಲಿದೆ.
ಮುಖ್ಯಮಂತ್ರಿ ಭೇಟಿ ವಿವರ :
ಜುಲೈ 30 ರಂದು ಸಿಎಂ ಬಿಎಸ್ ವೈ ಶಿವಾಜಿನಗರದಲ್ಲಿ ಆಯೋಜಿಸಲಾಗಿದ್ದ ಮೆಟ್ರೋ ಎರಡನೇ ಹಂತದ ಕಂಟೇನ್ಮೆಂಟ್ ರೈಲ್ವೆ ನಿಲ್ದಾಣ ಮತ್ತು ಶಿವಾಜಿನಗರ ಮೆಟ್ರೋ ನಿಲ್ದಾಣಗಳ ನಡುವೆ ಸುರಂಗ ಮಾರ್ಗ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿದರು. ಈ ವೇಳೆ ಕಂದಾಯ ಸಚಿವ ಆರ್. ಅಶೋಕ್ ನಗರಾಭಿವೃದ್ಧಿ, ಸಚಿವ ಭೈರತಿ ಬಸವರಾಜ್ ಹಾಗೂ ಹಿರಿಯ ಅಧಿಕಾರಿಗಳು ಮೆಟ್ರೋ ನಿಗಮದ ಅಧಿಕಾರಿಗಳು ಉಪಸ್ಥಿತರಿದ್ದರು.
ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ಮೀನು ಕೃಷಿಕರ ದಿನಾಚರಣೆ ಹಾಗೂ ಮೀನುಗಾರಿಕೆ ಇಲಾಖೆಯ ಐದು ವರ್ಷದ ಮಾಹಿತಿಯನ್ನೊಳಗೊಂಡ ಅಂಕಿ – ಅಂಶಗಳ ಸಂಚಿಕೆ ಬಿಡುಗಡೆ ಮಾಡಿದರು. ಈ ವೇಳೆ ಕಂದಾಯ ಸಚಿವ ಆರ್. ಅಶೋಕ್, ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ಶಾಸಕ ರಘುಪತಿ ಭಟ್ ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು
ಬಳಿಕ ಜುಲೈ 31 ರಂದು ಬಿಎಸ್ ವೈ ಕಿಯೋನಿಕ್ಸ್ ವೇರ್ ಹೌಸಿಂಗ್ ಇಂಕ್ಯೂಬೇಶನ್ ಮತ್ತು ಸ್ಟಾರ್ಟ್ ಅಪ್ ಸಂಸ್ಥೆಗಳ ಸೌಲಭ್ಯಕ್ಕಾಗಿ ಎಚ್ ಎಸ್ ಆರ್ ಲೇಔಟ್ ನಲ್ಲಿ ನಿರ್ಮಿಸಲಾಗಿರುವ ನೂತನ ಕಟ್ಟಡದ ಉದ್ಘಾಟನೆ ಮಾಡಿದ್ದರು. ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಅಧಿಕಾರಿಗಳು ಜೊತೆಗಿದ್ದರು.
ಅಂದೇ ಸಿಎಂ ರಾಜಭವನದಲ್ಲಿ ರಾಜ್ಯಪಾಲ ವಜುಭಾಯಿ ವಾಲಾರನ್ನು ಭೇಟಿಯಾಗಿ ಪ್ರಸ್ತುತ ವಿದ್ಯಮಾನಗಳ ಬಗ್ಗೆ ಚರ್ಚಿಸಿದ್ದರು. ಈ ವೇಳೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಜೊತೆಗಿದ್ದರು.
ಅಂದು ಸಂಜೆ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ ಅಧ್ಯಕ್ಷ ಹಿರಿಯ ವಿಜ್ಞಾನಿ ಕಸ್ತೂರಿರಂಗನ್ ಅವರನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿದ್ದರು. ಡಿಸಿಎಂ ಅಶ್ವತ್ಥ್ ನಾರಾಯಣ್ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಉಪಸ್ಥಿತರಿದ್ದರು.
ಇದೀಗ ಬಿಎಸ್ ವೈ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆ ಅವರ ಸಂಪರ್ಕದಲ್ಲಿದ್ದ ಸಚಿವರು ಮತ್ತು ರಾಜ್ಯಪಾಲರು ಕೂಡ ಕ್ವಾರಂಟೈನ್ ಆಗುವ ಸಾಧ್ಯತೆಗಳಿವೆ.