Chikkaballapur | 14 ಗ್ರಾಮಗಳ ಕುಡಿಯುವ ನೀರಿನ ಬವಣೆ ನೀಗಿಸಿದ ಸಚಿವ ಡಾ.ಕೆ.ಸುಧಾಕರ್ chikkaballapur mla dr k sudhakar saaksha tv
ಚಿಕ್ಕಬಳ್ಳಾಪುರ : ಜಿಲ್ಲೆಯ ಮಂಡಿಕಲ್ಲು ಹಾಗೂ ಸುತ್ತಮುತ್ತಲಿನ ಗ್ರಾಮಗಳ ದಶಕಗಳ ಬೇಡಿಕೆ ಈಗ ಈಡೇರಿದೆ. ಈ ಗ್ರಾಮಗಳ ಜನರ ಕುಡಿಯುವ ನೀರಿನ ಬವಣೆ ನೀಗಿಸುವ ನಿಟ್ಟಿನಲ್ಲಿ ‘ಭಗೀರಥ ಹೆಜ್ಜೆ’ ಇರಿಸಿರುವ ಚಿಕ್ಕಬಳ್ಳಾಪುರ ಶಾಸಕ ಹಾಗೂ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಯದಾರ್ಲಹಳ್ಳಿ ಕೆರೆಯ ಮೂಲಕ ನೀರು ಹರಿಸುವ ಯೋಜನೆಗೆ ಸರ್ಕಾರದಿಂದ ಅನುಮೋದನೆ ಕೊಡಿಸಿ, ಕಾಮಗಾರಿಗೆ ಸುಗಮ ಹಾದಿ ನಿರ್ಮಿಸಿದ್ದಾರೆ.
ಮಂಡಿಕಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ 14 ಗ್ರಾಮಗಳ ಕನಸು ಈ ಮೂಲಕ ಸಾಕಾರಗೊಂಡಿದೆ. ಇದೇ ಜಿಲ್ಲೆಯಲ್ಲೇ ಹುಟ್ಟಿ ಬೆಳೆದ ಸಚಿವ ಡಾ.ಕೆ.ಸುಧಾಕರ್, ಮಂಡಿಕಲ್ಲು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರ ಕುಡಿಯುವ ನೀರಿನ ಬೇಡಿಕೆ ಕುರಿತು ಅರಿತಿದ್ದರು. ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗೆ ಕೊಳಾಯಿ ಸಂಪರ್ಕ ಕಲ್ಪಿಸಿ ನೀರೊದಗಿಸುವ ಜಲಜೀವನ್ ಮಿಷನ್ ಜಾರಿ ಮಾಡಿದ್ದಾರೆ. ಇದೇ ಯೋಜನೆಯಡಿ, 14 ಗ್ರಾಮಗಳಿಗೆ ನೀರು ಪೂರೈಸುವ ಯೋಜನೆ ಸಿದ್ಧಪಡಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ 15.48 ಕೋಟಿ ರೂ. ವೆಚ್ಚದ ಯೋಜನೆ ಕುರಿತು ಚರ್ಚೆಯಾಗಿದ್ದು, ಬಳಿಕ ಅನುಮೋದನೆ ದೊರೆತಿದೆ.
2024 ರ ವೇಳೆಗೆ ದೇಶದ ಪ್ರತಿ ಮನೆಗೆ ಕೊಳಾಯಿ ನೀರು ಸೌಲಭ್ಯ ಕಲ್ಪಿಸುವುದು ಜಲಜೀವನ್ ಯೋಜನೆಯ ಗುರಿ. ಈ ಗುರಿ ತಲುಪಲು ಸಚಿವ ಡಾ.ಕೆ.ಸುಧಾಕರ್ ಅವರು ಈ ಯೋಜನೆ ಜಾರಿ ಮಾಡಿದ್ದಾರೆ. ಈಗಾಗಲೇ ಸಚಿವರ ಶ್ರಮದಿಂದ ಎಚ್.ಎನ್. ವ್ಯಾಲಿ ಯಿಂದ ಕೆರೆಗಳನ್ನು ತುಂಬಿಸಲಾಗಿದೆ. ಇದರಿಂದಾಗಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯುವುದರೊಂದಿಗೆ, ರೈತರಿಗೆ ಕೃಷಿ ಚಟುವಟಿಕೆ ನಡೆಸಲು ನೀರಾವರಿಯ ಸಮಸ್ಯೆಯೂ ನೀಗಿದೆ. ಇದರ ಮುಂದಿನ ಭಾಗವಾಗಿ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರು ಪೂರೈಸುವ ಕಾರ್ಯದ ಕಡೆಗೆ ಸಚಿವ ಡಾ.ಕೆ.ಸುಧಾಕರ್ ಹೆಜ್ಜೆ ಇರಿಸಿದ್ದಾರೆ.
ಜಲಜೀವನ್ ಮಿಷನ್ ನಡಿ ಜಾರಿ
ಜಲಜೀವನ್ ಮಿಷನ್ ನಲ್ಲಿ ಎಲ್ಲಾ ಮನೆಗಳಲ್ಲಿ ಕೊಳಾಯಿ ಸೌಲಭ್ಯ ಕಲ್ಪಿಸಿ ಕುಡಿಯುವ ನೀರು ಪೂರೈಸಲಾಗುತ್ತದೆ. ಇದೇ ಯೋಜನೆಯಡಿ, ಯದಾರ್ಲಹಳ್ಳಿ ಕೆರೆಯಿಂದ ನೀರು ಪಡೆದು ಪೂರೈಸಲಾಗುತ್ತದೆ. ಸದ್ಯ ಈ ಗ್ರಾಮಗಳಲ್ಲಿ ಒಟ್ಟು 1,420 ಮನೆಗಳು ಹಾಗೂ 5,251 ಜನರಿದ್ದಾರೆ. 2053 ರ ವೇಳೆಗೆ ಈ ಜನಸಂಖ್ಯೆ 6,357 ಆಗಲಿದೆ. ಈ ಅಂದಾಜು ಗಮನದಲ್ಲಿರಿಸಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಈವರೆಗೆ ಇಲ್ಲಿನ ಜನರು ಕುಡಿಯುವ ನೀರಿಗಾಗಿ ಬಾವಿ, ಕೆರೆ ಹಾಗೂ ಬೋರ್ ವೆಲ್ ಆಶ್ರಯಿಸಿದ್ದರು. ಜನರು ನೀರು ಪಡೆಯಲು ಕೆರೆ, ಬಾವಿಗಳ ಬಳಿ ಹೋಗಿ ಬರಬೇಕಿತ್ತು. ಈ ಸಂಕಷ್ಟವನ್ನು ತಪ್ಪಿಸಿ ಮನೆಗಳಿಗೆ ನೇರವಾಗಿ ಕೊಳಾಯಿಯಲ್ಲಿ ನೀರು ಬರುವಂತೆ ಸೌಲಭ್ಯ ಕಲ್ಪಿಸಲಾಗುತ್ತದೆ.









