ಮನುಷ್ಯ ಜೀವನದಲ್ಲಿ ಭವಿಷ್ಯತ್ತಿಗೆಂದು ಮಾಡಿಡುವ ಆಸ್ತಿಯೆಂದರೆ,ಹಣ,ಆಸ್ತಿ,ಒಡವೆ, ಮನೆ ಇತ್ಯಾದಿ. ಯೌವನದಿಂದಲೂ ಕೂಡಿಟ್ಟು,ಇಂತಹ ಆಸ್ತಿಯನ್ನು ಎಷ್ಟು ಸಂಚಯಿಸಿದರೂ ಅದು ಅನಾರೋಗ್ಯದ ಸಮಯದಲ್ಲಾಗಲಿ, ಸಾವಿನ ಸಮಯದಲ್ಲಾಗಲಿ, ಅಥವಾ ಸಮಾಜದಲ್ಲಿ ಪ್ರಯೋಜನಕ್ಕೆ ಬಾರದು. ಆದುದರಿಂದ ನಮ್ಮ ಕಷ್ಟ ಕಾಲದಲ್ಲಿ ಸ್ಪಂದಿಸುವಂತಹ ಸಂಸ್ಕಾರ ಕೊಟ್ಟು ಮಕ್ಕಳನ್ನು ಬೆಳೆಸಿದರೆ ,ಅಂತಹ ಮಕ್ಕಳು ತಂದೆ-ತಾಯಿಗಷ್ಟೇ ಅಲ್ಲ, ಸಮಾಜದ ಆಸ್ತಿಯೂ ಆಗಬಲ್ಲರು.

ಸ್ವರ್ಗ ಎಲ್ಲಿದೆಯೆಂದರೆ,ಅದು ಮಕ್ಕಳಿರುವ ಮನೆಯಲ್ಲಿಯೇ ಇದೆ ಎಂದು ಸುಭಾಷಿತವೊಂದು ಹೇಳುತ್ತದೆ.ಮಕ್ಕಳಿದ್ದ ಮನೆಯಲ್ಲಿ
ಸಂತೋಷ, ನೆಮ್ಮದಿ ನೆಲೆಸಿರುತ್ತದೆ.ಅದಕ್ಕೇ ಹಿಂದಿನವರು ‘ಮಕ್ಕಳಿರಲವ್ವ ಮನೆತುಂಬಾ, ಮಕ್ಕಳು ಮನೆ ಒಳ ಹೊರಗ ಆಡಿದರ ಬೀಸಣಿಕೆ ಗಾಳಿ ಸುಳಿದಾವ’ಎಂದು ಜನಪದ ಹಾಡುಗಳಲ್ಲಿ ಮಕ್ಕಳು ಮನೆಯ ತಂಪು,ಮಕ್ಕಳಿದ್ದರೆ ಜೀವನ ಇಂಪು ಎಂದೆಲ್ಲಾ ಹಾಡಿದ್ದಾರೆ.ಇದು ಅವರ ಅನುಭವದ ಅನುಭಾವ.
ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ಜವಾಹರ್ ಲಾಲ್ ನೆಹರೂರವರಿಗೆ ಮಕ್ಕಳೆಂದರೆ ಪಂಚ ಪ್ರಾಣ. ಇಂದಿನ ಮಕ್ಕಳೇ ಭವ್ಯಭಾರತದ ಮುಂದಿನ ಪ್ರಜೆಗಳು.ಭವಿಷ್ಯ ಭಾರತದ ಆಸ್ತಿ. ಸ್ವಾಮಿ ವಿವೇಕಾನಂದರೂ ಸಹ ಯುವಕರಲ್ಲಿ ನಂಬಿಕೆ ಇಟ್ಟುಕೊಂಡಿದ್ದರು. ಅವರು “ ನನಗೆ ಕಬ್ಬಿಣದಂತಹ ಮಾಂಸಖಂಡವುಳ್ಳ ಬಲಿಷ್ಟವಾಗಿರುವ ಹತ್ತು ಜನ ಯುವಕರನ್ನು ಕೊಟ್ಟರೆ ಇಡೀ ದೇಶವನ್ನೇ ಅಲುಗಾಡಿಸಬಲ್ಲೆ” ಎಂದು ಗುಡುಗುವಲ್ಲಿ ಯುವಜನತೆಯ ಶಕ್ತಿ,ಸಾಮರ್ಥ್ಯದ ಅನಾವರಣವಾಗುತ್ತದೆ.
ಮಕ್ಕಳು ಸುಂದರವಾದ ತೋಟದಲ್ಲಿ ಅರಳುವ ಬಣ್ಣಬಣ್ಣದ ಹೂವುಗಳು.ಹೂ ಸುಂದರವಾಗಿ ಅರಳಬೇಕಾದರೆ,ಬಹಳಷ್ಟು ಆರೈಕೆ ಬೇಕಾಗುತ್ತದೆ. ಕಾಲಕಾಲಕ್ಕೆ ಸರಿಯಾಗಿ ನೀರು ಗೊಬ್ಬರ ಹಾಕಬೇಕು.ಸೂರ್ಯನ ಬಿಸಿಲು ಬೀಳಬೇಕು ಎಂಬಿತ್ಯಾದಿ.ಅಂತೆಯೇ ಮಕ್ಕಳೂ ಸಹ .ಮಕ್ಕಳು ಉತ್ತಮ ಚಾರಿತ್ರ್ಯವಂತ,ಶಿಸ್ತಿನ ಮಕ್ಕಳಾಗಿ ರೂಪುಗೊಳ್ಳಬೇಕಾದರೆ ಉತ್ತಮ ಆರೈಕೆಯ ಜೊತೆಗೆ ಉತ್ತಮ ಸಂಸ್ಕಾರದ ವಾತಾವರಣವೂ ಮುಖ್ಯ.’ಮಕ್ಕಳಿಗೆ ಅನ್ನ ಹಾಕದಿದ್ದರೆ ಹಸಿವು ಆದಾಗ ಅಳುತ್ತಾರೆ.ಆದರೆ ಸಂಸ್ಕಾರ ಕೊಡದಿದ್ದರೆ ಜೀವನಪೂರ್ತಿ ಅಳುತ್ತಾರೆ’ ಎನ್ನುವ ಮಾತು ಉತ್ತಮ ಜೀವನಕ್ಕೆ ಸಂಸ್ಕಾರ ಎಷ್ಟುಮುಖ್ಯ ಎಂಬುದನ್ನು ಅರ್ಥೈಸುತ್ತದೆ.
ಸಂಸ್ಕಾರ ಎನ್ನುವಂತದ್ದು ಮಕ್ಕಳಿಗೆ ನಾವು ಕೊಡುವ ಜೀವನನುಭವದಿಂದ,ಉತ್ತಮ ಶಿಕ್ಷಣದಿಂದ ಲಭಿಸುವಂತದ್ದು.
ಡಾ.ರಾಧಾಕೃಷ್ಣನ್ ಹೇಳಿರುವಂತೆ “ಶಿಕ್ಷಣವೆಂದರೆ ಮಕ್ಕಳು ಮಾನವರಾಗಿ, ನಾಗರಿಕರಾಗಿ,ಮತ್ತೊಬ್ಬರೊಡನೆ ಸ್ನೇಹ,ಗೌರವ ಆದರಗಳಿಂದ ವರ್ತಿಸುವಂತೆ ಮಾಡುವುದು.”
ಸಂಸ್ಕಾರವು ಶಿಕ್ಷಣದ ವರ್ಚಸ್ಸನ್ನು ಹೆಚ್ಚಿಸುತ್ತದೆ.ಕೇವಲ ಪುಸ್ಕದಿಂದ ಪಡೆಯುವ ಜ್ಞಾನ ಪರಿಪೂರ್ಣವಲ್ಲ.ಅದು ಪರಿಪೂರ್ಣವಾಗಬೇಕಾದರೆ ಬದುಕಿನಲ್ಲಿ ಪರಿಸರದ ಅನುಭವದಿಂದ ಪಡೆಯುವ ಅನುಭವವು ಬೆರೆಯಬೇಕು.ಪರೀಕ್ಷೆಗಾಗಿ ಓದುವುದಷ್ಟೇ ಬದುಕು ಅಲ್ಲ.ಪರೀಕ್ಷೆಯನ್ನು ಮೀರಿದ ಬದುಕೊಂದು ಇದೆ.ಅದು ಜೀವನ ಪಾಠವನ್ನು ಕಲಿಸಿಕೊಡುವಂತ ವಿಶ್ವವಿದ್ಯಾಲಯ.

ಆ ಜೀವನಪಾಠ ಮನೆಯಿಂದಲೇ ಪ್ರಾರಂಭವಾಗುತ್ತದೆ. ”ಮನೆಯೇ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು”ಎನ್ನುವಂತೆ ಬಾಲ್ಯದಲ್ಲಿಯೇ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡುವ ಹೊಣೆ ಹೆತ್ತವರದ್ದು. “ಮಕ್ಕಳಿಗಾಗಿ ಕೊಡಬಹುದಾದ ದೊಡ್ಡ ಆಸ್ತಿ ಪ್ರತಿದಿನ ಕೆಲವು ನಿಮಿಷಗಳ ಸಹವಾಸ”ಎಂಬುದು ಬಟ್ಟೀಸ್ ರ ಹೇಳಿಕೆ. ನಮ್ಮ ಮಕ್ಕಳು ನೀತಿವಂತರೂ,ಬುದ್ಧಿವಂತರೂ ಆಗಿ ಬೆಳೆಯಬೇಕಾದರೆ,ಮಕ್ಕಳ ಮಾತನ್ನು ಆಲಿಸಿ ಮನಸ್ಸನ್ನು ಅರಿತು, ಕುತೂಹಲ ಕೆರಳಿಸುವ ವ್ಯವಧಾನ ಹೆತ್ತವರಲ್ಲಿರಬೇಕು.ಪ್ರೀತಿಯ ತುತ್ತನ್ನು ಉಣಿಸಿ,ಜೀವನದ ಮಹತ್ವ ತಿಳಿಸಿ,ಉತ್ತಮ ಸಂಸ್ಕಾರದೊಂದಿಗೆ ಯೋಚಿಸಿ, ಯೋಜಿಸಿ ಶಿಸ್ತಿನ ಜೀವಾನುಭವವನ್ನು ನೀಡಬೇಕು.”ತಂದೆಯಂತೆ ಮಗ,ಗುರುವಿನಂತೆ ಶಿಷ್ಯ”ಎನ್ನುವಂತೆ ತಂದೆ-ತಾಯಿ ಹಾಗು ಶಾಲೆಯಲ್ಲಿ ಗುರುಗಳು ಉತ್ತಮ ಸಂಸ್ಕಾರವಂತರಾದರೆ ಮಕ್ಕಳು ಉತ್ತಮ ಸಂಸ್ಕಾರವಂತರಾಗಿ ಸಮಾಜದಲ್ಲಿ ಚೆನ್ನಾಗಿ ಬದುಕತ್ತಾರಲ್ಲದೆ ಸಮಾಜದ ಆಸ್ತಿಯಾಗುತ್ತಾರೆ.
ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಅಂತರ್ಜಾಲದಲ್ಲಿ ಮುಳುಗಿ ಹೋಗುತ್ತಾರೆ. ಮೊಬೈಲಿನ ದಾಸರಾಗುತ್ತಿದ್ದಾರೆ.ಫೇಸ್ಬುಕ್ಕಿಂದ ದಾರಿ ತಪ್ಪುತ್ತಿದ್ದಾರೆ.ಪೋಷಕರೂ ಕೂಡ ದುಬಾರಿ ಮೊಬೈಲ್,ಕಂಪ್ಯೂಟರ್ಗಳನ್ನುನೀಡುವುದು ನಮ್ಮ ಆದ್ಯ ಕರ್ತವ್ಯವೆಂದು ಭಾವಿಸಿ ಒದಗಿಸುತ್ತಿದ್ದಾರೆ.ಆದ್ದರಿಂದ ಮಕ್ಕಳು ಸಮಾಜ ಘಾತುಕ ಚಟುವಟಿಕೆಗಳತ್ತ ಆಕರ್ಷಿತರಾಗುತ್ತಿದ್ದಾರೆ.ಜೀವನ ಜವಾಬ್ದಾರಿಯುತವಾದುದು. ಜೀವನದಲ್ಲಿ ಸೋಲು-ಗೆಲುವು,ನೋವು-ನಲಿವು ಇದ್ದೆ ಇದೆ.ಸಿಹಿಯ ಅನುಭವವಾಗಬೇಕಾದರೆ ಕಹಿಯನ್ನು ಅನುಭವಿಸಲೇಬೇಕು.

ಪ್ರಸ್ತುತ ಪರಿಸ್ಥಿತಿಯಲ್ಲಿ ಮನೆಯಲ್ಲೂ, ಶಾಲೆಯಲ್ಲೂ ಮಕ್ಕಳ ಮೌಲಿಕ ಬೆಳವಣಿಗೆಗೆ ಪೂರಕವಾದ ವಾತಾವರಣದ ಕೊರತೆಯಿಂದ,ಕಲಿಕೆಯ ಒತ್ತಡ, ಮನಸ್ಸಿನ ಕಳವಳ,ಪ್ರೀತಿಯ ಕೊರತೆಯಿಂದ ಮಕ್ಕಳು ತಮ್ಮ ರಕ್ಷಣೆಗಾಗಿ ಇರುವ ಕಾನೂನುಗಳನ್ನು ದುರ್ಬಳಕೆ ಮಾಡುವ ಮನಸ್ಥಿತಿಗೆ ತಲುಪುತ್ತಿದ್ದಾರೆ.ಇಂತಹ ವಿಷಮ ಸ್ಥಿತಿಯಲ್ಲಿ ಮಕ್ಕಳನ್ನು ಸರಿದಾರಿಯಲ್ಲಿ ನಡೆಸುವಂತಹ ಶಿಕ್ಷಣ,ಸಂಸ್ಕಾರ ನೀಡಬೇಕಾದ ಅನಿವಾರ್ಯತೆ ಇದೆ.ಪರೀಕ್ಷೆಯಲ್ಲಿ ಗಳಿಸುವ ಅಂಕಗಳು ಬುದ್ಧಿಮತ್ತೆಯನ್ನು ಅಳೆಯುತ್ತವೆ.ಚಾರಿತ್ರ್ಯವನ್ನಲ್ಲ.ಸಚ್ಛಾರಿತ್ರ್ಯ ಜೀವನವನ್ನು ಬಲಗೊಳಿಸುತ್ತವೆ. ವಕ್ಕಳು ಸಚ್ಛಾರಿತ್ರ್ಯವಂತರಾದರೆ, ಮನೆ ಪ್ರೀತಿಯ ಸ್ವರ್ಗವಾಗುತ್ತದೆ.ಶಾಲೆ ಸಂತೋಷದ ಚಿಲುಮೆಯಾಗುತ್ತದೆ.ಸಮಾಜ ಸುಂದರ ನಿಸರ್ಗವಾಗುತ್ತದೆ.ಈ ನಿಟ್ಟಿನಲ್ಲಿ ಮನೆ , ಶಾಲೆ ಹಾಗೂ ಸಮಾಜದ ಪಾತ್ರ ಮಹತ್ತರವಾಗಿದೆ..”ಬಾಳನು ಶೋಧಿಸಿ ಶುಚಿಯನು ಬೆಳೆದರೆ ಇಹವೇ ಅರಳದೇ ಪರವಾಗಿ”
ಸುಮತಿ ಪಿ.








