ಬೆಂಗಳೂರು : ರಾಜ್ಯದಲ್ಲಿ ಆಂಬ್ಯುಲೆನ್ಸ್ ಗಳ ಸಮಸ್ಯೆ ಇರುವುದು ಕೊರೊನಾ ಸಂದರ್ಭದಲ್ಲಿ ಬಟ್ಟಂ ಬಯಲಾಗಿದೆ. ಸೂಕ್ತ ರೀತಿಯಾಗಿ ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲದೇ ಕೋವಿಡ್ ನಿಂದಾಗಿ ಸಾಕಷ್ಟು ಮಂದಿ ಕೊನೆಯುಸಿರೆಳೆದಿದ್ದಾರೆ. ಈಗಲೂ ಆಂಬ್ಯುಲೆನ್ಸ್ ಗಾಗಿ ರೋಗಿಗಳ ಪರದಾಡುತ್ತಲೇ ಇದ್ದಾರೆ.
ಈ ಹಿನ್ನೆಲೆ ಖಾಸಗಿ ಕನ್ನಡ ವಾಹಿನಿ ರಾಜ್ಯ ಸರ್ಕಾರಕ್ಕೆ ಆಂಬುಲೆನ್ಸ್ ಗಳನ್ನು ಕೊಡುಗೆ ಆಗಿ ನೀಡಿದ್ದು, ಇವುಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಧಾನಸೌಧದ ಮುಂದೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಸಿಎಂ, ರಾಜ್ಯ ಸರ್ಕಾರ ನಿರಂತರವಾಗಿ ಕೋವಿಡ್ ವಿರುದ್ಧ ಹೋರಾಟ ಮಾಡುತ್ತಿದೆ. ಇದಕ್ಕೆ ಸಂಘ ಸಂಸ್ಥೆಗಳು ಕೂಡ ನೆರವಾಗಿವೆ. ಜನರಲ್ಲಿ ಜಾಗೃತಿ ಮೂಡಿಸುವ ಮಾಧ್ಯಮಗಳು ಆರೋಗ್ಯ ಕ್ಷೇತ್ರಕ್ಕೆ ವೈದ್ಯಕೀಯ ಉಪಕರಣ ನೀಡುತ್ತಿರುವುದು ಶ್ಲಾಘನೀಯ ಎಂದು ಸಿಎಂ ಹೇಳಿದರು.
ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ, ಆರೋಗ್ಯ ಸಚಿವ ಶ್ರೀರಾಮುಲು, ಕಂದಾಯ ಸಚಿವ ಆರ್. ಅಶೋಕ್, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮಾಜಿ ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧ, ಖಾಸಗಿ ವಾಹಿನಿಯ ಮುಖ್ಯಸ್ಥರು ಉಪಸ್ಥಿತರಿದ್ದರು.