ಬೆಂಗಳೂರು : ಬಿಜೆಪಿಯವರು ಎಷ್ಟು ಶಾಸಕರು ಬೇಕೋ ಅಷ್ಟು ಜನರನ್ನು ಕರೆದುಕೊಳ್ಳಲಿ. ನಾವು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಎರಡು ದಿನಗಳ ಪ್ರವಾಸಕ್ಕಾಗಿ ಆಗಮಿಸಿರುವ ಡಿಕೆಶಿ, ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಕೆಪಿಸಿಸಿ ಅಧ್ಯಕ್ಷನಾದ ಮೇಲೆ ಬುದ್ದಿವಂತರ ಜಿಲ್ಲೆ ಎನಿಸಿಕೊಂಡ ಮಂಗಳೂರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದೇನೆ. ಇಲ್ಲಿ ಉತ್ತಮ ವಿದ್ಯಾಸಂಸ್ಥೆಗಳಿವೆ. ಒಂದು ರೀತಿಯ ರೋಮಾಂಚಕ ಅನುಭವಗಳಿಗೆ, ಪ್ರವಾಸಿ ತಾಣಗಳಿವೆ. ಇಲ್ಲಿ ಪತ್ರಿಕಾಗೋಷ್ಟಿ ನಡೆಸಿ ನನ್ನ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತೇನೆ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿದ ಅವರು, ಬಿಜೆಪಿ ದೇಶಾದ್ಯಂತ ಏನು ಮಾಡುತ್ತಿದೆ ಎಂದು ಕಣ್ಣೇದುರಿಗೆ ಇದೆ. ಕಾಂಗ್ರೆಸ್ ಇದಕ್ಕೇಲ್ಲಾ ತಲೆ ಕೆಡಿಸಿಕೊಳ್ಳಲ್ಲ. ಅವರಿಗೆ ಎಷ್ಟು ಜನ ಬೇಕೋ ಅಷ್ಟು ಶಾಸಕರನ್ನು ಕರೆದುಕೊಳ್ಳಲಿ. ಕಾಂಗ್ರೆಸ್ ಪಕ್ಷ ಸಂಘಟನೆಯತ್ತ ಗಮನ ಕೊಡುತ್ತದೆ. ಇನ್ನು ಮುಂದೆ ಕೇಡರ್ ಬೇಸ್ ಆಗಿ ಪಕ್ಷ ಸಂಘಟನೆ ಮಾಡುತ್ತೇವೆ. ದೇಶಾದ್ಯಂತ ಕಾಂಗ್ರೆಸ್ ಮತ್ತೆ ಬಲಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜನಾರ್ದನಪೂಜಾರಿ ಮತ್ತು ಆಸ್ಕರ್ ಫರ್ನಾಡಿಸ್ ಅವರು ನಮ್ಮ ನಾಯಕರು ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುವುದಾಗಿಯೂ ತಿಳಿಸಿದರು.