ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮತ್ತೆ ಲಾಕ್ ಡೌನ್ ಮಾಡುವ ಬಗ್ಗೆ ಬಿಸಿ ಬಿಸಿ ಚರ್ಚೆಗಳು ನಡೆಯುತ್ತಿವೆ. ಏತನ್ಮಧ್ಯೆ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಘೋಷಣೆ ಬಗ್ಗೆ ಆರೋಗ್ಯ ಸಚಿವ ಶ್ರೀ ರಾಮುಲು ಅವರು ಸ್ಪಷ್ಟನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡಬೇಕಾ.. ಬೇಡವೇ ಎನ್ನುವ ಬಗ್ಗೆ ನಾವು ತೀರ್ಮಾನಿಸುವುದಲ್ಲ. ಅದಕ್ಕಾಗಿ ತಜ್ಞರ ಸಮಿತಿ ಇದೆ. ಆ ಸಮಿತಿಯ ನಿರ್ದೇಶನ, ತೀರ್ಮಾನದಂತೆ ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂಬುದಾಗಿ ಸ್ಪಷ್ಟ ಪಡಿಸಿದರು.
ಇನ್ನು ಕೋವಿಡ್ ಟೆಸ್ಟ್ ಹೆಚ್ಚಾಗಬೇಕು ಎನ್ನುವ ಅಭಿಪ್ರಾಯ ಬಂದಿದೆ. ಕಾರ್ಮಿಕರು, ವ್ಯಾಪಾರಿಗಳು, ಹೀಗೆ 15 ಕೆಟೆಗೆರಿ ಮಾಡಿ ಟೆಸ್ಟ್ ಗಳು ಆಗಬೇಕು. ಇದರಿಂದ ಸೋಂಕು ಸಮುದಾಯಕ್ಕೆ ಹರಡಿದಿಯ ಇಲ್ವಾ ಅನ್ನೋದು ಗೊತ್ತಾಗುತ್ತದೆ ಎಂದು ತಿಳಿಸಿದ ರಾಮುಲು, ಸೋಮವಾರ ಟಾಸ್ಕ್ ಪೋರ್ಸ್ ಮೀಟಿಂಗ್ ಇದೆ. ಟಾಸ್ಕ್ ಪೋರ್ಸ್ ಸಭೆಯಲ್ಲಿ ಎಲ್ಲಾ ಚರ್ಚೆ ಮಾಡಿ, ಸಿಎಂ ಗಮನಕ್ಕೆ ತರುತ್ತೇವೆ ಎಂದು ಹೇಳಿದ್ದಾರೆ.
ಇನ್ನೂ ಮುಂದುವರೆದು ಮಾತನಾಡಿದ ರಾಮುಲು, ನಾಳೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯುತ್ತದೆ. ಸುಮಾರು 8,48,203 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಸೋಶಿಯಲ್ ಡಿಸ್ಟೆನ್ಸ್, ಮಾಸ್ಕ್ ಅಗತ್ಯ. ಮಕ್ಕಳು ಪೋಷಕರು ಭಯಪಡಬೇಕಿಲ್ಲ. ನಾನು ಮತ್ತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಈಗಾಗಲೇ ಸಾಕಷ್ಟು ಸಭೆ ಮಾಡಿದ್ದೇವೆ. ಮಕ್ಕಳ ಸುರಕ್ಷತೆಗೆ ಗಮನ ಕೊಟ್ಟಿದ್ದೇವೆ. ಕಂಟೋನ್ಮೆಂಟ್ ಝೋನ್ ಇಂದ ಬರುವ ವಿದ್ಯಾರ್ಥಿಗಳಿಗೆ ಹೆಚ್ಚು ಜಾಗ್ರತೆ ವಹಿಸುತ್ತೇವೆ ಎಂಬುದಾಗಿ ಸ್ಪಷ್ಟ ಪಡಿಸಿದರು.