ಮಂಗಳೂರು: ಕೊರೊನಾ ಮೆಡಿಕಲ್ ಕಿಟ್ ಖರೀದಿಗೆ 4 ಸಾವಿರ ಕೋಟಿ ರೂ. ಖರ್ಚು ಮಾಡಿ 2 ಸಾವಿರ ಕೋಟಿ ರೂ.ಗಳಷ್ಟು ಲೂಟಿ ಮಾಡಲಾಗಿದೆ. ಕೊರೊನಾದಲ್ಲಿ ಭ್ರಷ್ಟಾಚಾರ-ಬಿಜೆಪಿ ಸರ್ಕಾರದ ಸಂಸ್ಕಾರ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟಾಂಗ್ ನೀಡಿದ್ದಾರೆ.
ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಡಿ.ಕೆ ಶಿವಕುಮಾರ್, ಕೊರೊನಾ ಸಾಮಗ್ರಿ ಖರೀದಿ ವಿಚಾರವಾಗಿ ಪಬ್ಲಿಕ್ ಅಕೌಂಟ್ಸ್ ಕಮಿಟಿ ಮೀಟಿಂಗ್ಗೆ ಅವಕಾಶ ಮಾಡಿಕೊಡಲಿ. ಅವ್ಯವಹಾರದ ಹಿನ್ನೆಲೆಯಲ್ಲಿ ಸಾರ್ವಜನಿಕರ ದುಡ್ಡಿನ ಬಗ್ಗೆ ಪಾರದರ್ಶಕ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.
ಕೋವಿಡ್ ವಿಚಾರದಲ್ಲಿ ಪ್ರತಿ ಪಕ್ಷವಾಗಿ ಸರ್ಕಾರದ ಜೊತೆ ಕೈ ಜೋಡಿಸಿದ್ದೇವೆ. ಕೊರೊನಾ ವಿಚಾರದಲ್ಲಿ ಸರ್ಕಾರದ ಭ್ರಷ್ಟಾಚಾರಕ್ಕೆ ನಾವು ಬೆಂಬಲ ನೀಡೋದಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸವನ್ನು ನಿಲ್ಲಿಸಲಾಗಿದೆ. ಸರ್ಕಾರಕ್ಕೆ ಬೇಕಾದ ಕೆಲಸ ಮಾಡುತ್ತಿದ್ದಾರೆ. ಬೇಕಾದ ಬಿಲ್ಗಳನ್ನು ಕೊಡುತ್ತಿದ್ದಾರೆ. ನಾಲ್ಕು ಲಕ್ಷದ ವೆಂಟಿಲೇಟರ್ ಕಿಟ್ನ್ನು 18 ಲಕ್ಷ ಕೊಟ್ಟು ತೆಗೆದುಕೊಂಡಿದ್ದಾರೆ. 1050 ರೂ.ಗೆ ಥರ್ಮಲ್ ಸ್ಕ್ಯಾನರ್ ಖರೀದಿ ಮಾಡಿದ್ದೇನೆ. 100 ರೂ.ಗೆ ಸ್ಯಾನಿಟೈಸರ್ ಖರೀದಿ ಮಾಡಿದ್ದೇನೆ. ನೀವು ಸಾವಿರಾರು ರೂಪಾಯಿ ಖರ್ಚು ಮಾಡಿ ಖರೀದಿ ಮಾಡಿದ್ದೀರಿ. ನೀವು ನನ್ನ ಮೇಲೆ ಕೇಸ್ ಮಾಡಿ, ಮಾನನಷ್ಟ ಮೊಕದ್ದಮೆ ಹಾಕಿ. ನನ್ನನ್ನು ಬೇಕಾದರೆ ಅರೆಸ್ಟ್ ಮಾಡಿಸಲಿ. ಹಗರಣದ ಬಗ್ಗೆ ತನಿಖೆ ಮಾಡಲು ಅವಕಾಶ ಕೊಡಿ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಗಾಂಧಿಲೆಕ್ಕ, ಕೃಷ್ಣಲೆಕ್ಕ ಬೇರೆ, ಸರ್ಕಾರದ ಲೆಕ್ಕ ಬೇರೆ..!
ಲಾಕ್ಡೌನ್ ವೇಳೆ ಸರ್ಕಾರದ ಕಿಟ್ಗಳಿಗೆ ಮೋದಿ ಚಿಹ್ನೆ, ಪಕ್ಷದ ಚಿಹ್ನೆ ಹಾಕಿ ಹಂಚಿದ್ದಾರೆ. ಕಿಟ್ಗಳಿಗೆ ಪಕ್ಷದ ಚಿಹ್ನೆ ಹಾಕಿದವರನ್ನು ಬಂಧಿಸಲು ಆಗಿಲ್ಲ. ಕೇಸ್ ಹಾಕಿ ಬಂಧನ ಮಾಡೋಕೆ ಆಗಿಲ್ಲ. ಮತ್ತೆ ಯಾವ ರೀತಿ ನಮ್ಮ ಸಹಕಾರ ಬಯಸುತ್ತಿದ್ದೀರಿ ಎಂದು ಸಿಎಂ ಯಡಿಯೂರಪ್ಪ ಅವರನ್ನು ಡಿಕೆಶಿ ಪ್ರಶ್ನಿಸಿದ್ದಾರೆ.
ಆಟೋ/ಕ್ಯಾಬ್ ಚಾಲಕರಿಗೆ ಇವತ್ತಿನ ತನಕವೂ ಸಹಾಯಧನ ಸಿಕ್ಕಿಲ್ಲ. ಚಾಲಕರು ಸತ್ತ ಮೇಲೆ ಸಹಾಯಧನ ನೀಡುತ್ತೀರಾ, ವಲಸೆ ಕಾರ್ಮಿಕರಿಗೆ ಸರ್ಕಾರ ರಕ್ಷಣೆ ನೀಡಿಲ್ಲ. ಸರ್ಕಾರ ಕೊರೊನಾ ಹೆಣಗಳ ಮೇಲೆ ಹಣ ಮಾಡಲು ಹೊರಟಿದೆ. ಬಿಜೆಪಿ ಮಂತ್ರಿಗಳು ಕೊರೊನಾ ಆಸ್ಪತ್ರೆಗಳಿಗೆ ಭೇಟಿ ನೀಡಿಲ್ಲ. ಹೊರ ರಾಜ್ಯ/ಹೊರ ದೇಶಗಳಿಂದ ಬಂದವರಿಗೆ ಬೀಗ ಹಾಕಿದ್ರಿ. ನಾಡು ಕಟ್ಟಲು ಸಹಾಯ ಮಾಡಿದವರನ್ನು ನೀಚವಾಗಿ ನಡೆದುಕೊಂಡಿದ್ದೀರಿ ಎಂದು ಸರ್ಕಾರದ ವಿರುದ್ದ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.